ADVERTISEMENT

ಚುನಾವಣೆಯಲ್ಲಿ ಒಂದೇ ಒಂದು ಮತ: ಸ್ಪಷ್ಟನೆ ನೀಡಿದ ಬಿಜೆಪಿ ಕಾರ್ಯಕರ್ತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2021, 6:43 IST
Last Updated 13 ಅಕ್ಟೋಬರ್ 2021, 6:43 IST
ಡಿ ಕಾರ್ತಿಕ್
ಡಿ ಕಾರ್ತಿಕ್   

ಚೆನ್ನೈ:ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು, ತನ್ನ ಕುಟುಂಬದಲ್ಲಿ ಐವರು ಸದಸ್ಯರಿದ್ದರೂ ತನ್ನದೇ ಒಂದೇ ಒಂದು ಮತ ಪಡೆಯುವ ಮೂಲಕ ಗಮನ ಸೆಳೆದಿದ್ದರು. ನಿನ್ನೆ ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಇತ್ತೀಚೆಗೆ ನಡೆದ ಕೊಯಮತ್ತೂರು ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪೇರಿನಾಯಕನ್‌ಪಾಳ್ಯಂ ಪಂಚಾಯತ್ ಕ್ಷೇತ್ರದ 9 ನೇ ವಾರ್ಡ್‌ಗೆ ಸ್ಪರ್ಧಿಸಿದ್ದ ಡಿ ಕಾರ್ತಿಕ್ ಎನ್ನುವರು ಈ ಬಗ್ಗೆ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದಾರೆ.

‘ನಾನುಕೊಯಮತ್ತೂರು ಜಿಲ್ಲಾ ಬಿಜೆಪಿ ಕಾರ್ಯಕರ್ತ ಹೌದು. ಆದರೆ, ನಾನು ಬಿಜೆಪಿ ಚಿನ್ಹೆ ಅಡಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಕಾರ್ ಚಿನ್ಹೆ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಒಂದು ಮತ ಪಡೆದಿರುವುದು ನಿಜ‘ ಎಂದು ಹೇಳಿದ್ದಾರೆ.

ADVERTISEMENT

ಚುನಾವಣೆಯಲ್ಲಿ ಕಾರ್ತಿಕ್ ಒಂದೇ ಒಂದು ಮತ ಗಳಿಸಿದ್ದರು. ಗಮನಾರ್ಹವೆಂದರೆ ಕಾರ್ತಿಕ್ ಕುಟುಂಬದಲ್ಲಿ ಅವರ ಹೆಂಡತಿಯೂ ಸೇರಿದಂತೆ ಆರು ಜನ ಇದ್ದಾರೆ.

ಚುನಾವಣೆಯಲ್ಲಿ ಅರುಳ್‌ರಾಜ್ ಡಿಎಂಕೆಯಿಂದ, ವೈಥಿಯಾಲಿಂಗಂ ಎಐಎಡಿಎಂಕೆಯಿಂದ, ರವಿ ಕುಮಾರ್ ತೇಮುಜಿನ್ ಪಕ್ಷದಿಂದ, ಡಿ ಕಾರ್ತಿಕ್ ಅವರು ಸ್ಪರ್ಧಿಸಿದ್ದರು. ಕಣದಲ್ಲಿ ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಜಯರಾಜ್ ಸೇರಿದಂತೆ ವಿವಿಧ ಪಕ್ಷಗಳ 6 ಅಭ್ಯರ್ಥಿಗಳಿದ್ದರು.

1,551 ಮತಗಳಲ್ಲಿ 991 ಮತಗಳು ಚಲಾವಣೆಗೊಂಡಿದ್ದವು. ಇದರಲ್ಲಿ ಡಿಎಂಕೆಯ ಅರುಳ್‌ರಾಜ್ 387 ಮತ, ಪಕ್ಷೇತರ ಅಭ್ಯರ್ಥಿ ಜಯರಾಜ್ 240 ಮತ ಪಡೆದಿದ್ದಾರೆ.ವೈಥಿಯಾಲಿಂಗಂ 198 ಮತ ಪಡೆದಿದ್ದರೆ, 3 ಮತಗಳು ತೀರಸ್ಕೃತಗೊಂಡಿವೆ. ಕಾಂಗ್ರೆಸ್ ಅಭ್ಯರ್ಥಿ 84 ಮತ ಪಡೆದಿದ್ದರು. ಕಾರ್ತಿಕ್ 1 ಮತ ಪಡೆದಿದ್ದಾರೆ.

ಕಾರ್ತಿಕ್ ಅವರು ಕೊಯಮತ್ತೂರು ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರು ಕೂಡ ಹೌದು. ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದಲ್ಲಿದ್ದರೂ ಕೇವಲ ಒಂದು ಮತ ಪಡೆದ ಕಾರ್ತಿಕ್ ಅವರನ್ನು ಹಾಗೂ ಬಿಜೆಪಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಟ್ರೋಲ್ ಮಾಡುತ್ತಿದ್ದಾರೆ. ಅವರ ಮನೆಯವರೇ ಅವರಿಗೆ ಮತ ಹಾಕಿಲ್ಲ ಎಂದು ಅಣಕವಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.