ADVERTISEMENT

ಕಾಶ್ಮೀರದಲ್ಲಿ ಸುರಿದ ಅಮಾಯಕರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ: ಮನೋಜ್‌ ಸಿನ್ಹಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2021, 5:40 IST
Last Updated 18 ಅಕ್ಟೋಬರ್ 2021, 5:40 IST
ಮನೋಜ್‌ ಸಿನ್ಹಾ
ಮನೋಜ್‌ ಸಿನ್ಹಾ    

ಶ್ರೀನಗರ: ಕಣಿವೆ ರಾಜ್ಯದಲ್ಲಿ ನಾಗರಿಕರನ್ನು ಗುರಿಯಾಗಿರಿಸಿ ಉಗ್ರರ ದಾಳಿ ಮುಂದುವರಿದಿರುವ ಬೆನ್ನಲ್ಲೇ, ʼಅಮಾಯಕ ನಾಗರಿಕರ ಪ್ರತಿ ಹನಿ ರಕ್ತಕ್ಕೂ ಸೇಡು ತೀರಿಸಿಕೊಳ್ಳಲಾಗುವುದುʼ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಗುಡುಗಿದ್ದಾರೆ.

ಭಾನುವಾರ ಕುಲ್ಗಾಂನಲ್ಲಿ ಅಪರಿಚಿತ ಉಗ್ರರು ಬಿಹಾರ ಮೂಲದ ಇಬ್ಬರು ವಲಸೆ ಕಾರ್ಮಿಕರನ್ನು ಗುಂಡಿಕ್ಕಿ ಕೊಂದಿದ್ದಾರೆ. ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿ ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಉಗ್ರರು ನಡೆಸಿರುವ ದಾಳಿಯಿಂದ ಅಕ್ಟೋಬರ್‌ನಲ್ಲೇ ಒಟ್ಟು 11 ಮಂದಿ ಮೃತಪಟ್ಟಿದ್ದಾರೆ.

ಸಿನ್ಹಾ ಅವರು ಭಾನುವಾರ ʼಅವಾಂ ಕಿ ಅವಾಜ್‌ʼ ರೇಡಿಯೊ ಕಾರ್ಯಕ್ರಮದ ಮೂಲಕ ಮೃತ ನಾಗರಿಕರಿಗೆ ಸಂತಾಪ ಸೂಚಿಸಿದ್ದಾರೆ.

ADVERTISEMENT

ʼಮೃತ ನಾಗರಿಕರಿಗಾಗಿ ನಾನು ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬದವರಿಗಾಗಿ ಸಂತಾಪ ಸೂಚಿಸುತ್ತೇನೆ. ಉಗ್ರರನ್ನು ಬೇಟೆಯಾಡುತ್ತೇವೆ. ನಾಗರಿಕರ ರಕ್ತದ ಪ್ರತಿ ಹನಿಗೂ ಪ್ರತೀಕಾರ ತೀರಿಸುತ್ತೇವೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ಮುಂದಿನ ತಿಂಗಳು ದೀಪಾವಳಿ ಆಚರಣೆ ವೇಳೆ ಜನರು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮತ್ತು ಮಾನವೀಯತೆಯ ವೈರಿಗಳಿಂದ ಪ್ರಾಣ ಕಳೆದುಕೊಂಡ ಯೋಧರಿಗಾಗಿ ಒಂದು ದೀಪ ಬೆಳಗಬೇಕು ಎಂದು ಕರೆ ನೀಡಿದ್ದಾರೆ. ʼಭಯೋತ್ಪಾದನೆ ಮತ್ತು ಅದರ ಸಂಪೂರ್ಣ ವ್ಯವಸ್ಥೆಯನ್ನು ಕಿತ್ತುಹಾಕಲಾಗುವುದೆಂದು ನಾನು ನಿಮಗೆ ಭರವಸೆ ನೀಡುತ್ತೇನೆʼ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.