ADVERTISEMENT

ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ, ಬಿಜೆಪಿಯ ಅಮಾನವೀಯ ಮುಖ ಪ್ರದರ್ಶನ: ಶಿವಸೇನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 9:37 IST
Last Updated 18 ಅಕ್ಟೋಬರ್ 2021, 9:37 IST
ಶಿವಸೇನೆ
ಶಿವಸೇನೆ    

ಮುಂಬೈ: ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ನಾಯಕರ ಕುಟುಂಬದ ಸದಸ್ಯರಿಗೆ ನೀಡಿರುವ ಕಿರುಕುಳ ಬಿಜೆಪಿಯ ಅಮಾನವೀಯ ಮುಖವನ್ನು ತೆರೆದಿಡುತ್ತದೆ ಎಂದು ಶಿವಸೇನೆ ಸೋಮವಾರ ವ್ಯಂಗ್ಯವಾಡಿದೆ.

ಸಾಮಾನ್ಯವಾಗಿ ಜನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ಇದು ತದ್ವಿರುದ್ಧವಾಗಿದ್ದು ಬಿಜೆಪಿ ಹಾಸ್ಯದ ಸರಕಾಗಿ ಮಾರ್ಪಟ್ಟಿದೆ ಎಂದು ಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಬಿಜೆಪಿಯು ತನ್ನ ಸ್ವಂತ ಕಾರ್ಯಸೂಚಿಗಾಗಿಯೇ ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ), ಐಟಿ (ಆದಾಯ ತೆರಿಗೆ ಇಲಾಖೆ) ಮತ್ತು ಎನ್‌ಸಿಬಿ (ಮಾದಕ ವಸ್ತುಗಳ ನಿಯಂತ್ರಣ ದಳ) ಬಳಸುತ್ತದೆ. ಇ.ಡಿ ಮತ್ತು ಸಿಬಿಐ ಬಳಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಠಾಕ್ರೆ ಬಹಿರಂಗಪಡಿಸಿದ್ದಾರೆ. ಇವು ಶಿಖಂಡಿಯನ್ನು ಗುರಾಣಿಯಾಗಿ ಬಳಸಿದಂತಿದೆ’ ಎಂದು ಶಿವಸೇನೆ ಅಣಕವಾಡಿದೆ.

ADVERTISEMENT

ಪ್ರಶ್ನೆಗಳನ್ನು ಎದುರಿಸುವುದಿಲ್ಲ. ತಮ್ಮನ್ನು ಪಶ್ನಿಸುವವರನ್ನೂ ಮುಗಿಸುತ್ತಾರೆ ಎಂದು ಶಿವಸೇನೆಯು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಮೇಲೆ ತೀಕ್ಷ್ಣವಾಗಿ ಕಿಡಿಕಾರಿದೆ.

‘ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ, ಸಂವಿಧಾನ, ಕಾನೂನು ಮತ್ತು ಸುವ್ಯವಸ್ಥೆ ಯಾವುದರಲ್ಲಿಯೂ ನಂಬಿಕೆ ಇಟ್ಟಿಲ್ಲ. ವಿರೋಧ ‍ಪಕ್ಷಗಳ ಮುಖ್ಯಮಂತ್ರಿಗಳನ್ನೂ ಅವರು ಒಪ್ಪುವುದಿಲ್ಲ. ರಾಜಕೀಯದಲ್ಲಿನ ಈ ಹೊಸ ವಿದ್ಯಮಾನವು ಅವರ ಮನಸ್ಥಿತಿಯ ಬಗ್ಗೆ ಹೇಳುತ್ತದೆ’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.