ಅನಂತಪದ್ಮನಾಭವ್ರತವನ್ನು ಭಾದ್ರಪದ ಶುದ್ಧ ಚತುರ್ದಶಿಯಂದು ಆಚರಿಸಲಾಗುತ್ತದೆ. ಅನಂತ – ಎನ್ನುವುದಕ್ಕೆ ಹಲವು ಅರ್ಥಗಳಿವೆ. ಆದಿಶೇಷ ಎಂದೂ ಅರ್ಥಮಾಡಬಹುದು, ಆದಿನಾರಾಯಣ – ಎಂದರೆ ಮಹಾವಿಷ್ಣು ಎಂದೂ ಅರ್ಥಮಾಡಬಹುದು.
ಅನಂತ ಎಂಬ ಮಹಾಸರ್ಪದ ಮೇಲೆ ಯೋಗನಿದ್ರೆಯಲ್ಲಿರುವ ವಿಷ್ಣುವಿನ ರೂಪವೇ ಅನಂತಪದ್ಮನಾಭ.
ಅನಂತಪದ್ಮನಾಭವ್ರತ ಸಂಕಲ್ಪಪೂರ್ವಕವಾಗಿ ಮಾಡಬೇಕಾದ ವ್ರತ. ಯಮುನಾಪೂಜೆ ಇದರಲ್ಲಿ ಮುಖ್ಯವಾದ ಅಂಗ. ತೀರ್ಥತುಂಬಿದ ಕಳಶವನ್ನು ಪೂಜೆ ಮಾಡಿ, ಆ ತೀರ್ಥವನ್ನು ಅನಂತಪದ್ಮನಾಭನ ಕಳಶದೊಂದಿಗೆ ಒಂದಾಗಿಸಿ ವ್ರತವನ್ನು ಮುಂದುವರೆಸುತ್ತಾರೆ. ಕಳಶದ ಮೇಲಿಡುವ ದರ್ಭೆಯ ಗ್ರಂಥಿಯು ಮಹಾಸರ್ಪದ ಹೆಡೆಯನ್ನು ಸಂಕೇತಿಸುತ್ತದೆ.
ಅನಂತಪದ್ಮನಾಭ ವ್ರತದಲ್ಲಿ ಹದಿನಾಲ್ಕು ಎನ್ನುವುದಕ್ಕೆ ಮಹತ್ವವಿದೆ. ವ್ರತ ನಡೆಯುವ ದಿನ ಚತುರ್ದಶಿ; ಅಂದು ಪೂಜೆ ಮಾಡಿ ಕಟ್ಟಿಕೊಳ್ಳುವ ದಾರಕ್ಕೆ – ದೋರಕ್ಕೆ – ಹದಿನಾಲ್ಕು ಗ್ರಂಥಿಗಳು, ಎಂದರೆ ಗಂಟುಗಳು ಇರಬೇಕು. ಮಹಾನೈವೇದ್ಯದಲ್ಲಿ ಹದಿನಾಲ್ಕು ಬಗೆಯ ಭಕ್ಷಣಗಳನ್ನು ಸಮರ್ಪಿಸಬೇಕು.
ಮಹಾವಿಷ್ಣುವಿನ ಒಂದು ರೂಪವನ್ನು ಈ ವ್ರತದಲ್ಲಿ ಪೂಜಿಸಲಾಗುತ್ತದೆ. ಅನಂತ ಎಂದರೆ ಭಗವಂತನ ತತ್ತ್ವಕ್ಕೂ ಸಂಕೇತವಾಗುತ್ತದೆ. ಅವನು ಏಳು ಹೆಡೆಗಳ ಹವಿನ ಮೇಲೆ ಮಲಗಿದ್ದಾನೆ ಎನ್ನುವುದನ್ನೂ ಸೂಚಿಸುತ್ತದೆ. ವಿಷ್ಣು, ಅಗ್ನಿ, ಸೂರ್ಯ, ಇಂದ್ರ, ಬ್ರಹ್ಮ, ವಾಯು, ಶಿವ, ಗಣೇಶ, ಸುಬ್ರಹ್ಮಣ್ಯ, ಚಂದ್ರ, ಆಕಾಶ, ವರುಣ, ಪೃಥ್ವಿ ಮತ್ತು ವಸುಗಳು – ಈ ತತ್ತ್ವಗಳನ್ನು ಆಹ್ವಾನಿಸಿ ದೋರಗ್ರಂಥಗಳನ್ನು ಪೂಜಿಸಲಾಗುತ್ತದೆ. ಇದು ವಿಷ್ಣುವಿನ ಅನಂತತತ್ತ್ವಕ್ಕೂ ವಿಶ್ವರೂಪತತ್ತ್ವಕ್ಕೂ ಸಂಕೇತ. ಕೇರಳದ ತಿರುವನಂತಪುರದಲ್ಲಿ ಅನಂತಪದ್ಮನಾಭನ ಮೂರ್ತಿಯನ್ನು ನೋಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.