ADVERTISEMENT

ಪತ್ರಿಕೆ ಪ್ರೀತಿಯ ಕಲ್ಯಾಣಕುಮಾರ

ಟಿ.ಶಿವಕುಮಾರ
Published 14 ಅಕ್ಟೋಬರ್ 2019, 19:30 IST
Last Updated 14 ಅಕ್ಟೋಬರ್ 2019, 19:30 IST
ಕಲ್ಯಾಣಕುಮಾರ್‌
ಕಲ್ಯಾಣಕುಮಾರ್‌   

ಬೆಳಿಗ್ಗೆ ಬಂದ ಪತ್ರಿಕೆ ಮಧ್ಯಾಹ್ನವಾಗುವಷ್ಟರಲ್ಲಿ ಹಳತಾಗಿ ಹೋಗಿರುತ್ತದೆ. ಈಗ ಬೆಳಿಗ್ಗೆ ಸಂಜೆ ಎಲ್ಲ ಸಮಯದಲ್ಲಿ ಪತ್ರಿಕೆಗಳು ಬರುವುದರಿಂದ ಜನ ನೆನಪಿನಲ್ಲಿಡುವುದಿಲ್ಲ. ಆದರೆ ಇದಕ್ಕೆಲ್ಲಾ ವಿರುದ್ಧವಾಗಿ ಇಲ್ಲೊಬ್ಬರಿದ್ದಾರೆ. ಅವರ ಕಣ್ಣಿಗೆ ಯಾವುದೇ ಪತ್ರಿಕೆ, ನಿಯತಕಾಲಿಕೆಗಳನ್ನು ಕಂಡರೂ ಅದನ್ನು ಸಂಗ್ರಹಿಸಿಡುತ್ತಾರೆ. ಅವುಗಳಿಗೊಂದು ದಾಖಲೆಗಳನ್ನು ಇಡುತ್ತಾರೆ. ಇವರ ಸಂಗ್ರಹದಲ್ಲಿ 15000 ಸಾವಿರಕ್ಕೂ ಹೆಚ್ಚು ಸ್ಥಳೀಯ, ರಾಜ್ಯ, ದೇಶ, ವಿದೇಶ ಪತ್ರಿಕೆಗಳಿವೆ. ನಿಯತಕಾಲಿಕೆಗಳ ಸಂಗ್ರಹವಿದೆ. ಇವರ ಮನೆಯೇ ‘ಪತ್ರಿಕೆಗಳ ಭಂಡಾರ’. ಅವರೇ ಕಲ್ಯಾಣಕುಮಾರ.

ಓದಿನಿಂದ ಸಂಗ್ರಹದವರೆಗೆ..

ಇವರು ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೀರೇಕಟ್ಟಿಗೇನಹಳ್ಳಿಯವರು. ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಲ್ಲಿ ಇವರು ಕನ್ನಡ ಪತ್ರಿಕೆಗಳ ಜೊತೆಗೆ ವಿಶ್ವದ ಅನೇಕ ಭಾಷಾ ಪತ್ರಿಕೆಗಳ ಸಂಗ್ರಹಗಾರರು. ಚಿಂತಾಮಣಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. 20 ವರ್ಷಗಳಿಂದ ನಾಡಿನ ನಾನಾ ಭಾಗಗಳಿಂದ ಪ್ರಕಟವಾಗುವ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ.

ADVERTISEMENT

ಮೊದಲು ಚಿಂತಾಮಣಿ ತಾಲ್ಲೂಕಿನ ನಿಮ್ಕಾಯನಹಳ್ಳಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಶಾಲೆಗೆ ಹೋಗುವಾಗ ಬಸ್ಸಿಗಾಗಿ ಕಾಯಬೇಕಿತ್ತು. ಬೇಜಾರು ಕಳೆಯಲೆಂದು ಪತ್ರಿಕೆ ಕೊಂಡು ಓದುತ್ತಿದ್ದರು. ‘ಈ ಹವ್ಯಾಸ ಮುಂದೆ ಪತ್ರಿಕೆಗಳ ಸಂಗ್ರಹಕ್ಕೂ ಪ್ರೇರೇಪಣೆಯಾಯಿತು’ ಎಂದು ಹೇಳುತ್ತಾರೆ ಕಲ್ಯಾಣಕುಮಾರ.

ಕಲ್ಯಾಣಕುಮಾರ ಯಾವುದೇ ಊರಿಗೆ ಪ್ರಯಾಣ ಮಾಡಲಿ ಅಲ್ಲಿನ ಸ್ಥಳೀಯ ಪತ್ರಿಕೆಗಳನ್ನು ಕೊಂಡು ತಮ್ಮ ಸಂಗ್ರಹದಲ್ಲಿ ಸೇರಿಸುತ್ತಾರೆ.ಇಂದಿನ ಸುದ್ದಿ ನಾಳಿನ ರದ್ದಿ ಎಂದು ಹೇಳಿದರೂ, ಇವರು ಮಾತ್ರ, ‘ಓಲ್ಡ್ ಈಸ್ ಗೋಲ್ಡ್’ ಎಂದು ಉದ್ಗರಿಸುತ್ತಾರೆ.

1913ರಿಂದ 1952ರವರೆಗೆ..

ಇವರ ಸಂಗ್ರಹದಲ್ಲಿ 1913 ರಲ್ಲಿ ಪ್ರಕಟಗೊಳ್ಳುತ್ತಿದ್ದ ಒಕ್ಕಲಿಗರ ಪತ್ರಿಕೆ, ದಿ ಟ್ರುತ್‌, ಕನ್ನಡತಿ, ಸಾಧ್ವಿ, ಜನವಾಣಿ, ಭಕ್ತಬಂಧು, ಚಿತ್ರಗುಪ್ತ ಎಂಬ ಹಳೆಯ ಪತ್ರಿಕೆಗಳ ಜೊತೆ ಇಂದಿನ ರಾಜ್ಯ ಮಟ್ಟದ ದಿನಪತ್ರಿಕೆಗಳು ಇವರ ಸಂಗ್ರಹದಲ್ಲಿವೆ. ತಾಯಿನಾಡು ಎನ್ನುವ ಪತ್ರಿಕೆ ಜನವರಿ 1957ರಲ್ಲಿ 1 ಆಣೆ, ಸಂಪದಭ್ಯುದಯ ಪತ್ರಿಕೆ ಆಗಸ್ಟ್‌ 1912 ರಲ್ಲಿ ತಿಂಗಳಿಗೆ 1 ರೂಪಾಯಿ 9 ಆಣೆ, ದಿ ಟ್ರುತ್ ಪ್ರತಿ ಶನಿವಾರ ವರ್ಷಕ್ಕೆ ₹4 , ಜನವಾಣಿ ಸೆಪ್ಟಂಬರ್ 1938 ರಲ್ಲಿ 9 ಕಾಸು, ವೀರ ಕೇಸರಿ ಆಕ್ಟೋಬರ್ 1928 ರಲ್ಲಿ 6 ಕಾಸು, ನವಭಾರತ ಜನವರಿ 1952 ರಲ್ಲಿ 4 ಆಣೆ ಹೀಗೆ ಸುಮಾರು ಪತ್ರಿಕೆಗಳ ದರಗಳು ಇವರ ಬಳಿ ಇವೆ. ವಾರಪತ್ರಿಕೆ, ಮಾಸಪತ್ರಿಕೆ, ತ್ರೈಮಾಸಿಕಪತ್ರಿಕೆ, ಪಂಚಮಾಸಿಕಪತ್ರಿಕೆ ಸೇರಿದಂತೆ ಹೆಸರಾಂತ ದಿನಪತ್ರಿಕೆಗಳು ಇವರು ಸಂಗ್ರಹಿಸಿದ ಬುತ್ತಿಯಲ್ಲಿವೆ. ಇಷ್ಟೇ ಅಲ್ಲ, ದೇಶದ ನಾನಾ ರಾಜ್ಯಗಳ ವಿವಿಧ ಚಿತ್ರಗಳಿರುವ ಬೆಂಕಿ ಪಟ್ಟಣಗಳನ್ನೂ ಸಂಗ್ರಹಿಸಿದ್ದಾರೆ.

ಹೊರ ರಾಜ್ಯ, ದೇಶ-ವಿದೇಶದ ಪತ್ರಿಕೆಗಳು

ತಮಿಳುನಾಡು, ಒಡಿಶಾ, ಕೇರಳ, ಗೋವಾ, ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಪಂಜಾಬ್ ಹೀಗೆ 25 ಕ್ಕೂ ಹೆಚ್ಚು ರಾಜ್ಯಗಳ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ. ರಷ್ಯಾ, ಚೀನಾ, ಅಮೆರಿಕ, ಇಂಡೋನೇಷ್ಯಾ, ಸೌದಿ ದೇಶಗಳು, ಇಂಗ್ಲೆಡ್, ಜರ್ಮನಿ, ಬರ್ಮಾ, ಸಿಂಗಪುರ, ಶ್ರೀಲಂಕಾದಂತಹ ರಾಷ್ಟ್ರಗಳ ನಿಯತಕಾಲಿಕೆಗಳನ್ನು ಇಟ್ಟುಕೊಂಡಿದ್ದಾರೆ.

20 ವರ್ಷಗಳಿಂದ ಕನ್ನಡಸಾಹಿತ್ಯ ಸಮ್ಮೇಳನ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಾದ ಬಾದಾಮಿ, ಕೊಡಗು ಚಿಕ್ಕಬಳ್ಳಾಪುರ, ಬೆಂಗಳೂರು, ವಿಜಯಪುರ, ಧಾರವಾಡ, ದಾವಣಗೆರೆ ಇನ್ನು ಮುಂತಾದ ಕಡೆ ಈ ಎಲ್ಲ ಭಾಷೆ, ರಾಜ್ಯ, ದೇಶ, ವಿದೇಶಗಳ ಪತ್ರಿಕೆಗಳನ್ನು ಪ್ರದರ್ಶಿಸಿದ್ದಾರೆ.

ಹಿರಿಯ ಕವಿಗಳ ಕೃತಿಗಳು

ಪತ್ರಿಕೆಗಳ ಜತೆಗೆ ಕನ್ನಡದ ಕವಿಗಳಾದ ರನ್ನ, ಪೊನ್ನ, ಪಂಪ, ಹರಿಹರ, ರಾಘವಾಂಕ ಇನ್ನೂ ಅನೇಕ ಕವಿಗಳ ಪುಸ್ತಕಗಳು ಇವರ ಸಂಗ್ರಹದಲ್ಲಿವೆ. ಸ್ವಾತ್ರಂತ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ನಂತರದ ಅಂಚೆ ಚೀಟಿಗಳು ಮತ್ತು ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವಾತಂತ್ರ್ಯ ನಂತರದ ನಾಣ್ಯಗಳು ಇವರ ಬಳಿ ಇವೆ. ಪತ್ರಿಕೆಗಳಲ್ಲಿ ಬಂದ ವಿಶೇಷ ಲೇಖನಗಳನ್ನು ಸಹ ಸಂಗ್ರಹಿಸಿ ಅಂತಹ ವಿಶೇಷವಿರುವ ಲೇಖನಗಳನ್ನು ಮಕ್ಕಳಿಗೆ ತೋರಿಸುತ್ತಾ ಮಕ್ಕಳಲ್ಲಿಯೂ ಪತ್ರಿಕೆಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸುತ್ತಿದ್ದಾರೆ.

ಇವರಲ್ಲಿರುವ ಆಸಕ್ತಿ ಗುರುತಿಸಿರುವ ಕೆಲವರು, ತಮಗೆ ಸಿಕ್ಕಿದ ವಿಶಿಷ್ಟ ಪತ್ರಿಕೆಗಳನ್ನು ನೋಡಿ ಕೆಲವರು ಅನೇಕ ಪತ್ರಿಕೆಗಳನ್ನು ಇವರಿಗೆ ಕಳುಹಿಸಿದ್ದಾರೆ. ತನ್ನ ಆಸಕ್ತಿ ನೆರವಾದವರನ್ನು ಅವರು ಸದಾ ನೆನೆಯುತ್ತಾರೆ. ಪತ್ರಿಕಾ ಸಂಗ್ರಹಣೆಯ ಹವ್ಯಾಸವನ್ನು ಗುರುತಿಸಿರುವ ಇಲಾಖೆಯಿಂದ ಮತ್ತು ಸಂಘ ಸಂಸ್ಥೆಗಳು, ಕಲ್ಯಾಣಕುಮಾರ ಅವರನ್ನು ಸನ್ಮಾನಿಸಿದ್ದಾರೆ. ಕಲ್ಯಾಣಕುಮಾರರ ಸಂಪರ್ಕಕ್ಕೆ 8660161546.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.