ADVERTISEMENT

ಈಶ್ವರಪ್ಪ ಜವಾಬ್ದಾರಿಯಿಂದ ಮಾತಾಡಲಿ: ಪರಿಷತ್‌ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್‌

’ಈಶ್ವರಪ್ಪ ಪ್ರಬುದ್ಧ ರಾಜಕಾರಣಿ, ಜವಾಬ್ದಾರಿಯಿಂದ ಮಾತಾಡಲಿ‘

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 18:23 IST
Last Updated 21 ಮಾರ್ಚ್ 2023, 18:23 IST
ಕೆ.ಎಸ್.ಈಶ್ವರಪ್ಪ ಹಾಗೂ ಆಯನೂರು ಮಂಜುನಾಥ್
ಕೆ.ಎಸ್.ಈಶ್ವರಪ್ಪ ಹಾಗೂ ಆಯನೂರು ಮಂಜುನಾಥ್   

ಶಿವಮೊಗ್ಗ: ‘ಯಾವುದೋ ಧರ್ಮದ ದೇವರು ಕಿವುಡನೋ, ಕುರುಡನೋ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮಾತಾಡುವುದು ಬೇಡ. ಪ್ರಬುದ್ಧ ರಾಜಕಾರಣಿಯಾದ ಅವರಿಂದ ಜವಾಬ್ದಾರಿಯುತ ಮಾತುಗಳನ್ನು ನಿರೀಕ್ಷಿಸುತ್ತೇವೆ’ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಯುಗಾದಿ ಹಾಗೂ ರಮ್ಜಾನ್‌ ಹಬ್ಬಗಳಿಗೆ ಶುಭಕೋರಿ ನಗರದಾದ್ಯಂತ ಆಯನೂರು ಮಂಜುನಾಥ್ ಹೆಸರಿನಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಅದರಲ್ಲಿ ‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ–ಸೌಹಾರ್ದ ನೆಲೆಸಲಿ’ ಎಂದು ಉಲ್ಲೇಖಿಸಲಾಗಿದೆ. ಆ ಬಗ್ಗೆ ಮಂಗಳವಾರ ಮಾಧ್ಯಮದವರ ಪ್ರಶ್ನೆಗೆ ಆಯನೂರು ಮಂಜುನಾಥ್ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅನ್ವಯಿಸುತ್ತದೆ’ ಎಂದರು.

ADVERTISEMENT

‘ಬಿಜೆಪಿಗೆ ಧಕ್ಕೆ ಬರುವ ಮಾತನ್ನು ಯಾರೇ ಆಡಿದರೂ ಸ್ವೀಕರಿಸಬೇಕೆಂಬ ಬಲವಂತ ನಮಗಿಲ್ಲ. ಸಂಘಟನೆ ಹಿತದೃಷ್ಟಿ
ಯಿಂದ ಹೀಗೆಲ್ಲ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಲು ಹೇಳಿದ್ದರಲ್ಲಿ ತಪ್ಪೇನಿದೆ‘ ಎಂದರು.

‘ಮದುವೆ ಆಗೋಕೆ ನಮ್ಮ (ಬಿಜೆಪಿ) ಮನೆಯಲ್ಲೇ ಹೆಣ್ಣು ಕೊಡ್ತಾರೆ. ಪಕ್ಕದ ಮನೆ ಅಥವಾ ರಸ್ತೆಯಲ್ಲಿ ಹೋಗುವವರನ್ನು ಏಕೆ ನೋಡಲಿ. ಶಿವಮೊಗ್ಗ ನಗರದಿಂದ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿದೆ. ಮಗನಿಗೆ ಟಿಕೆಟ್ ಕೊಡಿ ಎಂದು ಈಶ್ವರಪ್ಪ ಕೇಳಿದ್ದಾರೆ. ಅವರ ಮಗ ಇನ್ನೂ ಚಿಕ್ಕವನಿದ್ದಾನೆ. ನಂತರ ಕೊಡಲಿ. ಕ್ಯೂನಲ್ಲಿ ನಾವು ಇದ್ದೇವೆ’ ಎಂದರು.

ಶಿವಮೊಗ್ಗ

***

ಆಯನೂರು ಹಾಕಿರುವ ಫ್ಲೆಕ್ಸ್‌ಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೇಲಿನವರಿಗೂ ವರದಿ ನೀಡಲಾಗಿದೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು

- ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಈಶ್ವರಪ್ಪ– ಬಿಜೆಪಿ ಮಧ್ಯೆ ನಾನು ಉರಿಗೌಡ, ನಂಜೇಗೌಡನಲ್ಲ. ಯಾರ ಬಾಯಲ್ಲಿ ನಂಜು ಬರುವುದೋ<br/>ಅವರು ನಂಜೇಗೌಡ, ಉರಿಯುವವರು ಉರಿಗೌಡ ಅನ್ನಿ

- ಆಯನೂರು ಮಂಜುನಾಥ, ವಿಧಾನಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.