ADVERTISEMENT

ಗಾಂಧೀಜಿಯನ್ನೇ ಹೊಡೆದು ಹಾಕಿದವರು ನನ್ನನ್ನು ಬಿಡ್ತಾರಾ?: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 22:11 IST
Last Updated 19 ಆಗಸ್ಟ್ 2022, 22:11 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಚಿಕ್ಕಮಗಳೂರು: ‘ಗಾಂಧೀಜಿ ಅವರನ್ನೇ ಹೊಡೆದು ಹಾಕಿದವರು ನನ್ನನ್ನು ಬಿಡ್ತಾರಾ? ನಾನು ಸತ್ಯವನ್ನು ಹೇಳುತ್ತೇನೆ. ಹೀಗಾಗಿ, ಬಿಜೆಪಿ, ಆರ್‌ಎಸ್‌ಎಸ್‌ನವರಿಗೆ ನನ್ನ ಮೇಲೆ ಕೋಪ, ನನ್ನನ್ನು ಕಂಡರೆ ಆಗಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಮಳೆ ಹಾನಿ ವೀಕ್ಷಣೆಗೆ ಜಿಲ್ಲೆಗೆ ಬಂದಿದ್ದ ಅವರು ತಾಲ್ಲೂಕಿನ ಬಾಸಾಪುರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ಗಾಂಧೀಜಿ ಅವರನ್ನು ಕೊಂದಿದ್ದು ನಾಥೂರಾಮ್‌ ಗೋಡ್ಸೆ. ಆತನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ ಎಂಬುದು ಬೇಸರದ ಸಂಗತಿ’ ಎಂದರು.

ADVERTISEMENT

‘ವಿ.ಡಿ.ಸಾವರ್ಕರ್‌ ಜೈಲಿಗೆ ಹೋಗಿದ್ದು ನಿಜ. ಅವರು ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಜೆಪಿಯವರು ಅವರನ್ನು ವೀರ ಸಾವರ್ಕರ್ ಎಂದು ಹೇಳುತ್ತಾರೆ. ಸಾವರ್ಕರ್‌ ಬಗ್ಗೆ ನನಗೆ ಕೋಪ ಇಲ್ಲ. ಅವರು ನಡೆದುಕೊಂಡಿದ್ದ ರೀತಿ ಸರಿ ಇಲ್ಲ ಎಂದು ಹೇಳಿದ್ದೇನೆ ಅಷ್ಟೆ’ ಎಂದು ಸಮಜಾಯಿಷಿ ನೀಡಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬಿಜೆಪಿಯವರು ‘ಹರ್‌ ಘರ್‌ ತಿರಂಗಾ’ ಅಭಿಯಾನ ಮಾಡಿದ್ದಾರೆ. ಈ ರಾಷ್ಟ್ರಧ್ವಜವು ನಮ್ಮ ದೇಶಕ್ಕೆ ಯೋಗ್ಯವಲ್ಲ ಎಂದು ಸಾವರ್ಕರ್‌, ಗೋಳವಲ್ಕರ್‌ ಹೇಳಿದ್ದರು. ಬಿಜೆಪಿಯವರು ‘ಈಗ ಹರ್‌ ಘರ್‌ ತಿರಂಗಾ’ ಎಂದು ನಾಟಕವಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.