ADVERTISEMENT

‘ಗಗನಯಾನ’ಕ್ಕೆ ಹಿನ್ನಡೆ ತಂದ ಕೋವಿಡ್

ಡಿಸೆಂಬರ್‌ನಲ್ಲಿ ಮೊದಲ ಪ್ರಾಯೋಗಿಕ ಉಡಾವಣೆ ಸಾಧ್ಯತೆ ಇಲ್ಲ

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:59 IST
Last Updated 28 ಜೂನ್ 2021, 21:59 IST
.
.   

ಬೆಂಗಳೂರು: ಮಾನವ ಸಹಿತ ‘ಗಗನಯಾನ’ಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಕೋವಿಡ್‌ ಲಾಕ್‌ಡೌನ್‌ನಿಂದ ದೊಡ್ಡ ಹಿನ್ನಡೆಯಾಗಿದೆ. ಇದರ ಪರಿಣಾಮ ಗಗನಯಾತ್ರಿಗಳನ್ನು ಒಯ್ಯುವುದಕ್ಕೂ ಮೊದಲು ಇದೇ ಡಿಸೆಂಬರ್‌ನಲ್ಲಿ ನಡೆಸಬೇಕಿದ್ದ ಮಾನವ ರಹಿತ ಪ್ರಾಯೋಗಿಕ ಯಾನವನ್ನು ಮುಂದೂಡುವ ಸಾಧ್ಯತೆ ಇದೆ.

ಲಾಕ್‌ಡೌನ್‌ನಿಂದಾಗಿ ಉದ್ಯಮಗಳು ಮುಚ್ಚಿದ್ದರಿಂದ ರಾಕೆಟ್‌ ಅದಕ್ಕೆ ಸಂಬಂಧಿಸಿದ ಇತರ ಸೌಲಭ್ಯಗಳ ನಿರ್ಮಾಣಕ್ಕೆ ಅಗತ್ಯವಿರುವ ಪರಿಕರಗಳು ಸಿಗುತ್ತಿಲ್ಲ. ಲಾಕ್‌ಡೌನ್‌ ತೆರೆದು ಈಗಷ್ಟೇ ಕೈಗಾರಿಕಾ ಘಟಕಗಳು ಕಾರ್ಯಾರಂಭ ಮಾಡಿರುವುದರಿಂದ ಇನ್ನಷ್ಟೇ ಪೂರೈಕೆ ಆಗಬೇಕಿದೆ.

ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸುವುದಕ್ಕೆ ಮುನ್ನ ಎರಡು ಮಾನವ ರಹಿತ ರಾಕೆಟ್‌ಗಳನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಿ ಅದರ ಸಾಮರ್ಥ್ಯವನ್ನು ಪರೀಕ್ಷೆ ಮಾಡಿ, ನೌಕೆಯ ಕ್ಷಮತೆಯನ್ನು ನಿರ್ಧರಿಸಬೇಕಿತ್ತು. ಆದರೆ, ಕೋವಿಡ್‌ ಮೊದಲ ಮತ್ತು ಎರಡನೇ ಅಲೆಗಳು ಗಗನಯಾನ ಯೋಜನೆಯ ಮೇಲೆ ಗಂಭೀರ ಸ್ವರೂಪದ ಪರಿಣಾಮ ಬೀರಿದೆ ಎಂದು ಇಸ್ರೊ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಈ ಯೋಜನೆಗೆ ಅಗತ್ಯವಿರುವ ಹಾರ್ಡ್‌ವೇರ್‌ ಸಾಧನಗಳನ್ನು ಫ್ಯಾಬ್ರಿಕೇಟ್‌ ಮಾಡುವ ಉದ್ಯಮಗಳು ಲಾಕ್‌ಡೌನ್‌ ಪರಿಣಾಮ ಮುಚ್ಚಿಹೋಗಿವೆ. ಇದರಿಂದಾಗಿ ವಿವಿಧ ಕಾಲಘಟ್ಟದಲ್ಲಿ ಫ್ಯಾಬ್ರಿಕೇಟ್‌ಗಳನ್ನು ಪೂರೈಕೆ ಮಾಡಲು ಅವುಗಳಿಗೆ ಸಾಧ್ಯವಾಗಲಿಲ್ಲ. ವಿನ್ಯಾಸ, ವಿಶ್ಲೇಷಣೆ ಮತ್ತು ಇತರ ಕಾರ್ಯಗಳನ್ನು ಇಸ್ರೊ ಮಾಡಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭೂಮಿಯ ಕೆಳ ಹಂತದ ಕಕ್ಷೆಗೆ ಮಾನವನನ್ನು ಒಯ್ದು ಸುರಕ್ಷಿತವಾಗಿ ಹಿಂದಕ್ಕೆ ಕರೆತರುವ ಯೋಜನೆ ಇದಾಗಿತ್ತು. ಗಗನಯಾನದ ಮೂಲಕ ಭಾರತದ ಬಾಹ್ಯಾಕಾಶ ವಿಜ್ಞಾನದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಇಚ್ಛೆ ಇಸ್ರೊದಾಗಿತ್ತು.

‘ಮೊದಲ ಮಾನವ ರಹಿತ ರಾಕೆಟ್‌ ಉಡಾವಣೆ ಡಿಸೆಂಬರ್‌ನಲ್ಲೂ, ಎರಡನೇ ಮಾನವ ರಹಿತ ಉಡಾವಣೆ 2022–23 ರಲ್ಲಿ, ಆ ಬಳಿಕವೇ ಮಾನವ ಸಹಿತ ಉಡಾವಣೆ ನಡೆಯಲಿದೆ’ ಎಂದು ಕೇಂದ್ರ ಬಾಹ್ಯಾಕಾಶ ಖಾತೆ ಸಚಿವ ಜಿತೇಂದ್ರ ಸಿಂಗ್‌ ಕಳೆದ ಫೆಬ್ರುವರಿಯಲ್ಲಿ ಹೇಳಿದ್ದರು.

ಇದಕ್ಕಾಗಿ ಈಗಾಗಲೇ ಆಯ್ಕೆಯಾಗಿರುವ ಭಾರತೀಯ ಗಗನಯಾನ ಅಭ್ಯರ್ಥಿಗಳು ರಷ್ಯಾದಲ್ಲಿ ಯಾನಕ್ಕೆ ಅಗತ್ಯವಿರುವ ತರಬೇತಿ ಪಡೆಯುತ್ತಿದ್ದಾರೆ. ಇಸ್ರೊದ ಹೆಮ್ಮೆಯ ‘ಜಿಎಸ್‌ಎಲ್‌ವಿ ಎಂಕೆ 3’ಯನ್ನು ಗಗನಯಾತ್ರಿಗಳನ್ನು ಹೊತ್ತೊಯ್ಯುವ ಕಾರ್ಯಕ್ಕೆ ಬಳಸಲಾಗುವುದು. 2022 ರ ಆಗಸ್ಟ್‌ 15 ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ತುಂಬುವ ಕಾರಣ, ಅದೇ ಸಂದರ್ಭದಲ್ಲಿ ಮಾನವ ಸಹಿತ ಗಗನಯಾನ ಕೈಗೊಳ್ಳಲು ಉದ್ದೇಶಿಸಲಾಗಿತ್ತು.

‘ಇನ್ನೂ ಹೆಚ್ಚು ಸಮಯ ಕಳೆದು ಕೊಳ್ಳಲು ಬಯಸುವುದಿಲ್ಲ. ಕೆಲವು ಉದ್ಯಮಗಳು ಮುಚ್ಚಿದ್ದರಿಂದ ಅಗತ್ಯ ವಿರುವ ಸಾಧನಗಳು ಸಿಗಲಿಲ್ಲ. ಆದರೂ, ಸರ್ಕಾರ ನಿಗದಿ ಮಾಡಿರುವ ಸಮಯಕ್ಕೆ ಸರಿಯಾಗಿ ಯಾನದ ದಿನಾಂಕವನ್ನು ನಿಗದಿ ಮಾಡಲು ಪ್ರಯತ್ನಿಸುತ್ತೇವೆ’ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.