ADVERTISEMENT

Covid-19 Karnataka Update: ಮರಣ ಪ್ರಮಾಣ ದರ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2021, 18:10 IST
Last Updated 27 ಸೆಪ್ಟೆಂಬರ್ 2021, 18:10 IST
   

ಬೆಂಗಳೂರು:ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪೀಡಿತರ ಪೈಕಿ ಸೋಮವಾರ 20 ಮಂದಿ ಅಸುನೀಗಿದ್ದಾರೆ. ಈವರೆಗೆ37,746 ಜನ ಮೃತರಾಗಿದ್ದು, ಮರಣ ಪ್ರಮಾಣ ದರವು ಶೇ 3.96ಕ್ಕೆ ಏರಿಕೆಯಾಗಿದೆ.

ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಒಂದು ದಿನದಲ್ಲಿ 504 ಜನರಿಗೆ ಸೋಂಕು ತಗುಲಿದೆ. ಈವರೆಗೆ ಸೋಂಕಿಗೊಳಪಟ್ಟವರ ಸಂಖ್ಯೆ29.73 ಲಕ್ಷಕ್ಕೆ ಹೆಚ್ಚಿದೆ. ಕೋವಿಡ್‌ ದೃಢ ಪ್ರಮಾಣವು ಶೇ0.48ರಷ್ಟಿದೆ.

ಹಿಂದಿನ 24 ಗಂಟೆಗಳಲ್ಲಿ893 ಜನರಿಗೆ ಕಾಯಿಲೆ ವಾಸಿಯಾಗಿದೆ. ಹೀಗಾಗಿ ಗುಣಮುಖರ ಒಟ್ಟು ಸಂಖ್ಯೆಯು29.23 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳು ಮತ್ತಷ್ಟು ಇಳಿಕೆಯಾಗಿವೆ. ಸದ್ಯ12,804 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು ಇಳಿಕೆಯಾಗಿವೆ. ಸೋಮವಾರ 181 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಬಾಗಲಕೋಟೆ, ಚಿಕ್ಕಬಳ್ಳಾಪುರ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಮನಗರ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. 9 ಜಿಲ್ಲೆಗಳಲ್ಲಿ ಇದು ಒಂದಂಕಿಯಷ್ಟಿದೆ. ಕೇರಳಕ್ಕೆ ಹೊಂದಿಕೊಂಡಂತಿರುವ ಗಡಿ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡದಲ್ಲಿ83 ಪ್ರಕರಣಗಳು ದಾಖಲಾಗಿವೆ. ಕೊಡಗು ಮತ್ತು ಮೈಸೂರಿನಲ್ಲಿ ಕ್ರಮವಾಗಿ 26 ಮತ್ತು 47 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಏಳು ಜಿಲ್ಲೆಗಳಲ್ಲಿ ಇದು 20ಕ್ಕಿಂತ ಕಡಿಮೆ ಇದೆ.

ಕೋವಿಡ್‌ ಪೀಡಿತರ ಪೈಕಿ ಬೆಂಗಳೂರಿನಲ್ಲಿ 5 ಜನ ಅಸುನೀಗಿದ್ದಾರೆ. ದಕ್ಷಿಣ ಕನ್ನಡ (4), ಮೈಸೂರು (3) ಮತ್ತು ಮಂಡ್ಯದಲ್ಲಿ (2) ಹೆಚ್ಚು ಮಂದಿ ಮೃತರಾಗಿದ್ದಾರೆ. ಬಾಗಲಕೋಟೆ, ಚಿಕ್ಕಮಗಳೂರು, ಹಾಸನ, ಕೋಲಾರ, ತುಮಕೂರು, ಉಡುಪಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಮೃತರ ಪೈಕಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಎದುರಿಸುತ್ತಿದ್ದವರೇ ಹೆಚ್ಚಿದ್ದಾರೆ.

ಕೋವಿಡ್‌ ಪರೀಕ್ಷೆಯಲ್ಲಿ ಗಣನೀಯ ಇಳಿಕೆಯಾಗಿದೆ. ಒಂದು ದಿನದಲ್ಲಿ 1.03 ಲಕ್ಷ ಮಾದರಿಗಳನ್ನಷ್ಟೇ ಪರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.