ADVERTISEMENT

ಸೂಕ್ಷ್ಮ ಪ್ರದೇಶಗಳಲ್ಲಿ ಕೈಗಾರಿಕಾ ಭದ್ರತಾ ಪಡೆ ನಿಯೋಜಿಸಿ: ಶಿಫಾರಸು

ಅಧೀನ ಶಾಸನ ರಚನಾ ಸಮಿತಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:19 IST
Last Updated 21 ಸೆಪ್ಟೆಂಬರ್ 2021, 22:19 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು:ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ, ಮೈಸೂರು ಅರಮನೆ, ಜಲಾಶಯಗಳು, ಬಂದರುಗಳು, ಮೆಟ್ರೊದಂತಹ ಸ್ಥಳಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯನ್ನೇ ನಿಯೋಜಿಸಬೇಕು ಎಂದುವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿ ಶಿಫಾರಸು ಮಾಡಿದೆ.

ಸೂಕ್ಷ್ಮ ಪ್ರದೇಶಗಳಲ್ಲಿ ಖಾಸಗಿ, ಸಿಎಆರ್‌, ಡಿಎಆರ್‌, ಸಿವಿಲ್‌ ಪೊಲೀಸ್‌ ಭದ್ರತೆ ಒದಗಿಸಲಾಗುತ್ತಿದೆ. ಇದನ್ನು ಹಿಂಪಡೆದು ಕೆಎಸ್‌ಐಎಸ್‌ಎಫ್‌ ಸಿಬ್ಬಂದಿಯನ್ನೇ ನಿಯೋಜಿಸಬೇಕು ಎಂದು ಪ್ರತಿಪಾದಿಸಿದೆ.

ಸಮಿತಿಯ 51ನೇ ವರದಿಯನ್ನು ಸಮಿತಿಯ ಅಧ್ಯಕ್ಷ ಎಸ್.ಕುಮಾರ ಬಂಗಾರಪ್ಪವಿಧಾನಸಭೆಯಲ್ಲಿ ಮಂಗಳವಾರ ಮಂಡಿಸಿದರು.

ADVERTISEMENT

ಇತರ ಶಿಫಾರಸುಗಳು

* ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ಠಾಣೆಗಳನ್ನು ಮಂಜೂರು ಮಾಡಬೇಕು. ಶಿಥಿಲಾವಸ್ಥೆಯಲ್ಲಿರುವ ಠಾಣೆಗಳನ್ನು ದುರಸ್ತಿ ಮಾಡಬೇಕು.

* 2018ರಲ್ಲಿ ಎಫ್‌ಡಿಎ/ಎಸ್‌ಡಿಎ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಇಲ್ಲಿಯವರೆಗೂ ಪರೀಕ್ಷೆ ನಡೆದಿಲ್ಲ. ಕೆಪಿಎಸ್‌ಸಿಯಿಂದ ಪ್ರಕ್ರಿಯೆ ಬಹಳಷ್ಟು ವಿಳಂಬವಾಗಿದೆ. ಜತೆಗೆ, ಖಾಲಿ ಹುದ್ದೆಗಳಿಗೆ ನಿವೃತ್ತಿಯಾದವರನ್ನು ನೇಮಕ ಮಾಡಲಾಗುತ್ತಿದೆ. ಅತ್ಯವಶ್ಯಕ ಸಂದರ್ಭ ಹೊರತುಪಡಿಸಿ ನಿವೃತ್ತಿ ಹೊಂದಿದವರನ್ನು ಮರು ನೇಮಕ ಮಾಡಬಾರದು. ಇದಕ್ಕಾಗಿ ವಿಶೇಷ ನಿಯಮಗಳನ್ನು ರೂಪಿಸಬೇಕು.

* ಸರ್ಕಾರಿ ನೌಕರರು ಸಂಘ ಸಂಸ್ಥೆಗಳನ್ನು ಸ್ಥಾಪಿಸಿದ ನಂತರ ಚುನಾವಣೆ ನಡೆಸಲು ಆರಂಭಿಸುತ್ತಾರೆ. ನಂತರ, ವಾಣಿಜ್ಯ ಹಾಗೂ ಇತರ ಚಟುವಟಿಕೆಗಳನ್ನು ಮಾಡುತ್ತಾರೆ. ಇಂತಹ ಸಂಘ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ನಿಯಮ ರೂಪಿಸಬೇಕು. ಇಲಾಖೇತರ ಜಾತಿ ಸಂಘ ಸಂಸ್ಥೆಗಳ ಚುನಾವಣೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸದಂತೆ ತಡೆಯಲು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು.

* ಶಿಕ್ಷಕರ ಒಂದು ಸಂಘಕ್ಕೆ ಮಾತ್ರ ಮಾನ್ಯತೆ ನೀಡಲು ಹಾಗೂ ಅಂತಹ ಸಂಘವೂ ನಿಗದಿತ ಕಾಲಮಿತಿಯಲ್ಲಿ ಕೆಲಸ ಮಾಡಲು ಮತ್ತು ಹೆಚ್ಚಿನ ಸಮಯವನ್ನು ತಮ್ಮ ಕರ್ತವ್ಯಕ್ಕಾಗಿ ಮೀಸಲಿಡಲು ನಿಯಮಗಳನ್ನು ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.