ಉಜಿರೆ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣಕ್ಕೆ ನೆರವು ನೀಡಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ‘ಜ್ಞಾನತಾಣ’ ಕಾರ್ಯಕ್ರಮ ರೂಪಿಸಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಸೋಮವಾರ ಚಾಲನೆ ನೀಡಿದರು.
‘ಈ ಯೋಜನೆಗೆ ₹ 81 ಕೋಟಿ ವಿನಿಯೋಗಿಸಲಾಗುವುದು. 1 ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 20 ಸಾವಿರ ಟ್ಯಾಬ್ಗಳು ಹಾಗೂ 10 ಸಾವಿರ ಲ್ಯಾಪ್ಟಾಪ್ಗಳನ್ನು ವಿತರಿಸುವ ಗುರಿ ಹೊಂದಿದ್ದೇವೆ’ ಎಂದರು.
5ನೇ ತರಗತಿಯಿಂದ 10ನೇ ತರಗತಿ ವರೆಗೆ ಇಂಗ್ಲಿಷ್, ವಿಜ್ಞಾನ ಮತ್ತು ಗಣಿತದ ಪಠ್ಯವನ್ನು ಟ್ಯಾಬ್ ಮತ್ತು ಲ್ಯಾಪ್ ಟಾಪ್ನಲ್ಲಿ ಅಳವಡಿಸಿ (ಪ್ರಿಲೋಡೆಡ್) ವಿದ್ಯಾರ್ಥಿಗಳಿಗೆ ನೀಡಲಾಗುವುದು. ಇದರಿಂದ ಇಂಟರ್ನೆಟ್ ಅಥವಾ ಸಿಮ್ಕಾರ್ಡ್ ಸೌಲಭ್ಯ ಇಲ್ಲದಿದ್ದರೂ ವಿದ್ಯಾರ್ಥಿಗಳು ಪಠ್ಯವನ್ನು ಅಧ್ಯಯನ ಮಾಡಬಹುದು’ ಎಂದರು.
‘ಸದ್ಯ ಪ್ರಿಲೋಡೆಡ್ ಪಠ್ಯ ಕನ್ನಡ ಮಾಧ್ಯಮದಲ್ಲಿ ಮಾತ್ರ ಲಭ್ಯ. ವಿದ್ಯಾರ್ಥಿಗಳಿಗೆ ಮಾಸಿಕ ಪರೀಕ್ಷೆಯನ್ನೂ ನಡೆಸಲಾಗುವುದು. ಇದಕ್ಕಾಗಿ 450 ಗೌರವ ಶಿಕ್ಷಕರನ್ನು ನಿಯೋಜಿಸಿ, ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.
‘ಜ್ಞಾನತಾಣ’ ಕಾರ್ಯಕ್ರಮದ ಫಲಾನುಭವಿ ಕುಟುಂಬವು ಉಪಕರಣ ಮತ್ತು ಪಠ್ಯವನ್ನು ಖರೀದಿಸಲು ನಿಗದಿತ ಮೊತ್ತ ಪಾವತಿಸಬೇಕು. ಟ್ಯಾಬ್ಗೆ ₹6 ಸಾವಿರ ಮತ್ತು ಲ್ಯಾಪ್ಟಾಪ್ಗೆ ₹18 ರಿಂದ ₹24 ಸಾವಿರ ದರ ನಿಗದಿಪಡಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಟ್ಯಾಬ್ಗೆ ₹4 ಸಾವಿರ, ಲ್ಯಾಪ್ಟಾಪ್ ಖರೀದಿಗೆ ₹6 ಸಾವಿರ ಅನುದಾನ ಒದಗಿಸಲಾಗುವುದು’ ಎಂದು ಸಂಸ್ಥೆ ಸಿಬ್ಬಂದಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.