ADVERTISEMENT

ಪರಿಸರ ಅಸಮತೋಲನ ವಿಶ್ವದ ಗಂಭೀರ ಸಮಸ್ಯೆ: ರಾಜ್ಯಪಾಲ ಗೆಹಲೋತ್‌

ಕೆ.ಎಂ.ಮುನ್ಷಿ ಪ್ರತಿಮೆ ಅನಾವರಣ ಮಾಡಿದ ರಾಜ್ಯಪಾಲ ಗೆಹಲೋತ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:56 IST
Last Updated 25 ಮಾರ್ಚ್ 2023, 19:56 IST
ಥಾವರಚಂದ್‌ ಗೆಹಲೋತ್‌
ಥಾವರಚಂದ್‌ ಗೆಹಲೋತ್‌   

ಬೆಂಗಳೂರು: ‘ಪರಿಸರ ಅಸಮತೋಲನವು ವಿಶ್ವದ ಗಂಭೀರ ಸಮಸ್ಯೆಯಾಗಿದೆ. ಪರಿಸರ ವರ್ಧನೆ ಹಾಗೂ ನೀರು, ಅರಣ್ಯ, ವಾಯು ಸಂರಕ್ಷಣೆಗೆ ಸಮುದಾಯವೇ ಒಟ್ಟಾಗಿ ಕೆಲಸ ಮಾಡಬೇಕು’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ಭಾರತೀಯ ವಿದ್ಯಾಭವನದ ಸಂಸ್ಥಾಪಕ ಕೆ.ಎಂ.ಮುನ್ಷಿ ಅವರ ಪ್ರತಿಮೆ ಅನಾವರಣಗೊಳಿಸಿ, ನವೀಕೃತ ಇಎಸ್‌ವಿ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

‘ಭವ್ಯವಾದ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಮುಂದಿನ 25 ವರ್ಷಗಳು ಅಮೃತ ಕಾಲವಾಗಿದೆ. ಸ್ವಾತಂತ್ರ್ಯ ಮಹೋತ್ಸವದ ಶತಮಾನೋತ್ಸವದ ವೇಳೆಗೆ ಭಾರತವನ್ನು ವಿಶ್ವದ ಅತ್ಯುತ್ತಮ ದೇಶವಾಗಿ ರೂಪಿಸುವ ಕರ್ತವ್ಯ ಎಲ್ಲರದೂ ಆಗಿದೆ’ ಎಂದರು.

ADVERTISEMENT

‘ಭಾರತೀಯ ವಿದ್ಯಾಭವನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಉನ್ನತಿಗಾಗಿ ಕೆಲಸ ಮಾಡುತ್ತಿದೆ. ಇದರ ಸಂಸ್ಥಾಪಕ ಡಾ.ಮುನ್ಷಿ ಅವರು ಹೊಸ ಪೀಳಿಗೆಗೆ ನೈತಿಕ ಮೌಲ್ಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಪರಿಚಯಿಸಲು ಕಾರಣಕರ್ತರಾಗಿದ್ದಾರೆ. ವಿದ್ಯಾಭವನ ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ’ ಎಂದು ಶ್ಲಾಘಿಸಿದರು.

‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಉಕ್ಕಿನ ಮನುಷ್ಯ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅವರು ಭಾರತದ ರಾಜಕೀಯ ಸ್ವಾತಂತ್ರ್ಯ ಭದ್ರಪಡಿಸುವತ್ತ ಗಮನಹರಿಸುತ್ತಿದ್ದಾಗ ಮುನ್ಷಿ ಅವರು ಭಾರತೀಯ ಸಾಂಸ್ಕೃತಿಕ ಚೈತನ್ಯವನ್ನು ಉತ್ತೇಜಿಸುವತ್ತ ತಮ್ಮ ಗಮನ
ಕೇಂದ್ರೀಕರಿಸಿದ್ದರು’ ಎಂದು ಅವರು ಈ ವೇಳೆ ಸ್ಮರಿಸಿದರು.

ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಜಿ.ರಾಘವನ್, ಮುಂಬೈ ವಿಭಾಗದ ಜಂಟಿ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಜಗದೀಶ್ ಲಖಾನಿ, ಕಾರ್ಯದರ್ಶಿ ಮಾನಂದಿ ಸುರೇಶ್‌, ನಿರ್ದೇಶಕ ಎಚ್.ಎನ್.ಸುರೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.