ADVERTISEMENT

ಬೆಂಗಳೂರು: ‘ನಿಗಮದ ಬದಲು ಉದ್ಯೋಗ ಮೀಸಲಾತಿ ನೀಡಿ’

ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:41 IST
Last Updated 25 ಮಾರ್ಚ್ 2023, 5:41 IST
ಎಂ.ಆರ್. ಸೀತಾರಾಂ
ಎಂ.ಆರ್. ಸೀತಾರಾಂ   

ಬೆಂಗಳೂರು: ‘ಬಲಿಜ ಸಮುದಾಯಕ್ಕೆ ಸರ್ಕಾರ ಘೋಷಿಸಿರುವ ಪ್ರತ್ಯೇಕ ಅಭಿವೃದ್ಧಿ ನಿಗಮದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಆದ್ದರಿಂದ, ನಿಗಮದ ಬದಲು ಈ ಹಿಂದೆ ಇದ್ದಂತೆ ‘ಪ್ರವರ್ಗ–2ಎ’ ಅಡಿ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಬೇಕು’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್. ಸೀತಾರಾಂ ಆಗ್ರಹಿಸಿದರು.

‌ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಬಲಿಜ ಸಮುದಾಯವು ಬಹಳ ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಚುನಾವಣೆ ಸಂದರ್ಭದಲ್ಲಿ ಬಲಿಜ ಸಮುದಾಯಕ್ಕೆ ನಿಗಮ ಘೋಷಿಸಿರುವುದು ಚುನಾವಣೆಯ ಗಿಮಿಕ್ ಹೊರತು, ಸಮುದಾಯದ ಕಾಳಜಿಯಿಂದಲ್ಲ’ ಎಂದರು.

‘ಹಾವನೂರು ಆಯೋಗವು ಬಲಿಜ ಜನಾಂಗವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪರಿಗಣಿಸಿದೆ. ಸಂವಿಧಾನದ ಕಲಂ 154 ಮತ್ತು 16 (4) ರಂತೆ ಮೀಸಲಾತಿ ನೀಡಿ, ಈ ಜನಾಂಗವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆಯೆಂದು ಪರಿಗಣಿಸಿ ಸೌಲಭ್ಯವನ್ನು ನೀಡಲಾಗಿತ್ತು. ಚಿನ್ನಪ್ಪರೆಡ್ಡಿ ಆಯೋಗವೂ ಬಲಿಜ ಜನಾಂಗವನ್ನು ಹಿಂದುಳಿದ ವರ್ಗಗಳ ಸಾಲಿನಲ್ಲಿ ಮುಂದುವರಿಸಿ, ‘ಪ್ರವರ್ಗ-2ಎ’ ಗುಂಪಿನಡಿ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯವನ್ನು ನೀಡಿತ್ತು’ ಎಂದು ಹೇಳಿದರು.

ADVERTISEMENT

‘1994ರಲ್ಲಿ ಅಸಾಂವಿಧಾನಿಕ, ಅವೈಜ್ಞಾನಿಕವಾಗಿ, ರಾಜಕೀಯ ಒತ್ತಡದಿಂದ ಒಂದು ವರ್ಷಕ್ಕೆ ಸೀಮಿತವಾಗಿ ‘ಪ್ರವರ್ಗ-2ಎ’ಯಿಂದ ಬಲಿಜ ಜನಾಂಗವನ್ನು ಬದಲಿಸಲಾಯಿತು. ಬಳೆಬಲಜಿಗ, ಬಣಜಿಗ, ತೆಲುಗು ಬಲಜಿಗ, ಬಲಜಿ ನಾಯ್ಡು ಇತ್ಯಾದಿ ಸಮುದಾಯದ ಗುಂಪಿಗೆ ಈ ಆದೇಶ ತೀವ್ರ ಹೊಡೆತ ನೀಡಿತು. ರಾಜ್ಯದ ವಿವಿಧೆಡೆ ವಾಸವಾಗಿರುವ ಬಲಿಜ ಜನಾಂಗದವರ ಸಾಮಾಜಿಕ ಬದುಕು ದುರ್ಬಲಗೊಂಡಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಲಿಜ ಸಮುದಾಯವನ್ನು 1994 ರಲ್ಲಿ ‘3ಎ ಪ್ರವರ್ಗ’ಕ್ಕೆ ಬದಲಾವಣೆ ಮಾಡಿರುವುದರಿಂದ ಸಾಮಾಜಿಕ ತುಳಿತಕ್ಕೆ ಒಳಗಾಗಿ, ಅಸಹಾಯಕತೆಯಿಂದ ಬದುಕು ಸಾಗಿಸಬೇಕಾಗಿದೆ. 2011ರ ಜುಲೈ 16ರಂದು ಬಲಿಜ ಮತ್ತು ಇತರೆ ಉಪಜಾತಿಗಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ‘ಪ್ರವರ್ಗ-2ಎ’ಗೆ ಸೇರಿಸಲಾಗಿದೆ. ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ‘ಪ್ರವರ್ಗ-3ಎ’ರಲ್ಲೇ ಮುಂದುವರಿಸಿರುವುದು ಶೋಚನೀಯ’ ಎಂದರು.

ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಹಾಗೂ ಸಮುದಾಯದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.