ADVERTISEMENT

ಕಲ್ಲು ನೆಟ್ಟಿದ್ದೇ ಬಿಜೆಪಿ ಸಾಧನೆ: ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯ

ಜಾಲಮಂಗಲದಲ್ಲಿ ಜೆಡಿಎಸ್‌ ಸಮಾವೇಶ: ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 19:58 IST
Last Updated 25 ಮಾರ್ಚ್ 2023, 19:58 IST
ಕಾರ್ಯಕ್ರಮವನ್ನು ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ನಿಖಿಲ್‌ ಕುಮಾರಸ್ವಾಮಿ, ಎ. ಮಂಜುನಾಥ್‌ ಮತ್ತಿತರರು ಇದ್ದರು
ಕಾರ್ಯಕ್ರಮವನ್ನು ಎಚ್‌.ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ನಿಖಿಲ್‌ ಕುಮಾರಸ್ವಾಮಿ, ಎ. ಮಂಜುನಾಥ್‌ ಮತ್ತಿತರರು ಇದ್ದರು   

ರಾಮನಗರ: ಚುನಾವಣೆ ಹೊಸ್ತಿಲಲ್ಲಿ ಬರೀ ಕಲ್ಲು ನೆಡುವುದೇ (ಶಂಕುಸ್ಥಾಪನೆ) ಬಿಜೆಪಿ ಸಾಧನೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ತಾಲ್ಲೂಕಿನ ಜಾಲಮಂಗಲ ಗ್ರಾಮದಲ್ಲಿ ಶನಿವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಜಿಲ್ಲೆಗೆ ಏನೂ ಮಾಡಿಲ್ಲ. ಹೀಗಿರುವಾಗ ರಾಮನಗರದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗೆಂದು ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಹೇಳಿದರು.

ರಾಜೀವ್ ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್‌ 2006ರಲ್ಲಿ ನಾನೇ ಘೋಷಿಸಿದ ಯೋಜನೆ. ಮಾವು ಸಂಸ್ಕರಣ ಘಟಕ, ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಈಗ ಕೇವಲ ಒಂದು ಕಲ್ಲು ಮಾತ್ರ ಇರಲಿದೆ. ನಂತರ ಬರುವ ಸರ್ಕಾರಗಳೇ ಆ ಕೆಲಸಗಳನ್ನು ಮಾಡಬೇಕು ಎಂದರು.

ADVERTISEMENT

ಈ ಬಾರಿಯೂ ಜಿಲ್ಲೆಯ ಚನ್ನಪಟ್ಟಣ, ಮಾಗಡಿ, ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಕನಕಪುರದಲ್ಲೂ ಇದು ಸಾಧ್ಯವಿದೆ. 2028ಕ್ಕೆ ನಿಶ್ಚಿತವಾಗಿ ಕನಕಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲ್ಲಿದ್ದಾರೆ ಎಂದರು.

₹30 ಕೋಟಿ ಆಮಿಷ: ಹಿಂದೆ ಸಮ್ಮಿಶ್ರ ಸರ್ಕಾರವನ್ನು ಅಧಿಕಾರದಿಂದ ತೆಗೆಯುವ ವೇಳೆ ಮಾಗಡಿ ಶಾಸಕ ಎ.ಮಂಜುನಾಥ್ ಅವರಿಗೂ ಬಿಜೆಪಿ ₹30 ಕೋಟಿ ಆಮಿಷ ಒಡ್ಡಿತ್ತು. ಆದರೆ ಅವರು ಇದನ್ನು ತಿರಸ್ಕರಿಸಿದ್ದರು. ಇವರನ್ನು ಮತ್ತೊಮ್ಮೆ ನನ್ನ ಜೊತೆ ಕೆಲಸ ಮಾಡಲು ವಿಧಾನಸೌಧಕ್ಕೆ ಕಳುಹಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ರಾಮನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಶಾಸಕ ಎ. ಮಂಜುನಾಥ್‌, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.