ADVERTISEMENT

ಮುಂಬೈ ದಾಳಿ ವೇಳೆ ಪಾರ್ಟಿ ಮಾಡುತ್ತಿದ್ದವರು ಯಾರು?: ಸಿದ್ದರಾಮಯ್ಯಗೆ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ನವೆಂಬರ್ 2021, 10:57 IST
Last Updated 29 ನವೆಂಬರ್ 2021, 10:57 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ‘ಭಯೋತ್ಪಾದಕ’ ಎಂದು ಕರೆದಿರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯನವರೇ, ನೀವು ಮಾತ್ರ ಯಾರಿಗೆ ಏನು ಬೇಕಾದರೂ ಹೇಳಿ ನಿಂದಿಸಬಹುದೇ? ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರನ್ನು ನೀವು ಭಯೋತ್ಪಾದಕ ಎಂದು ಆರೋಪಿಸಿದ್ದೀರಿ. ಎಲ್ಲರೂ ಇದೇ ಧಾಟಿಯಲ್ಲಿ ಉತ್ತರ ನೀಡಿದರೆ ನೀವು ಸಹಿಸುತ್ತೀರಾ’ ಎಂದು ಪ್ರಶ್ನಿಸಿದೆ.

‘ಸತ್ಯ ಕಟುವಾಗಿಯೇ ಇರುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರು ಸತ್ಯ ಹೇಳಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದಕ ಕೃತ್ಯಗಳು ಅಂಕೆಗೆ ಮೀರಿ ಘಟಿಸಿದ್ದು ಸುಳ್ಳೇ? ದೇಶಾದ್ಯಂತ ಉಗ್ರ ಕೃತ್ಯ ನಡೆದಾಗ ಕಾಂಗ್ರೆಸ್ ಅದಕ್ಕೆ ಪ್ರತಿರೋಧ ನೀಡದೇ ಸೋತದ್ದು ಸುಳ್ಳೇ? ಮುಂಬೈ ದಾಳಿ ಆದಾಗ ಪಾರ್ಟಿ ಮಾಡುತ್ತಿದ್ದವರು ಯಾರು’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಸಾಕ್ಷ್ಯವಿಲ್ಲದೇ ಆರೋಪ ಮಾಡುವುದೇ ಸಿದ್ದರಾಮಯ್ಯ ಇದುವರೆಗೆ ಮಾಡಿಕೊಂಡು ಬಂದಿರುವ ರಾಜಕೀಯ. ಜನರ ಲಕ್ಷ್ಯ ಬೇರೆಡೆ ಸೆಳೆಯುವ ತಂತ್ರಗಾರಿಕೆಯಿದು. ಆದರೆ, ಎಷ್ಟೋ ಸಂದರ್ಭದಲ್ಲಿ ಅವರು ಮಾಡಿದ ಆರೋಪಗಳಿಗೆ ಸಾಕ್ಷಿ ಅವರ ಮನೆಯ ಎದುರು ಬಂದು ನಿಂತಿರುತ್ತವೆ. ಉದಾಹರಣೆ ನೀಡಬೇಕೇ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ದೇಶದ ಆಂತರಿಕ ಭದ್ರತೆ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಸದಾ ಇಬ್ಬಗೆಯ ನಿಲುವು‌ ಪ್ರದರ್ಶಿಸುತ್ತದೆ. ಭಯೋತ್ಪಾದಕರ ದಾಳಿಯಾದಾಗಲೂ ಶಾಂತಿ ಮಂತ್ರ ಜಪಿಸುವ ನೀವು ನಗರ ನಕ್ಸಲರಿಗೆ ರಾಜ ಸನ್ಮಾನ ಕೊಡುವುದು ಸುಳ್ಳೇ? ಈ ಕಾರಣಕ್ಕಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದು’ ಎಂದು ನಳಿನ್ ಅವರನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.