ADVERTISEMENT

ಜನರನ್ನು ಎತ್ತಿಕಟ್ಟುವ ಸಿದ್ದರಾಮಯ್ಯ ಮನಸ್ಥಿತಿಗೆ ಛೀಮಾರಿ: ಲಾಲಾಜಿ ಮೆಂಡನ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 13:55 IST
Last Updated 18 ಅಕ್ಟೋಬರ್ 2021, 13:55 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಲಾಲಾಜಿ ಮೆಂಡನ್‌
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಲಾಲಾಜಿ ಮೆಂಡನ್‌    

ಕಾಪು (ಉಡುಪಿ ಜಿಲ್ಲೆ): ‘ಕಾಪು ಠಾಣೆ ಪೊಲೀಸರು ಆಯುಧ ಪೂಜೆಯ ದಿನ ಒಂದೇ ರೀತಿಯ ವಸ್ತ್ರ ಧರಿಸಿರುವುದರಲ್ಲಿ ಕೋಮು ಭಾವನೆ ಕಂಡದ್ದು ಸಿದ್ದರಾಮಯ್ಯ ಅವರಿಗೆ ಮಾತ್ರ. ಕಾಪು ಕ್ಷೇತ್ರ ಸಾಮರಸ್ಯ–ಶಾಂತಿಯುತವಾಗಿದ್ದು, ಸಿದ್ದರಾಮಯ್ಯ ಅವರ ಜನರನ್ನು ಎತ್ತಿಕಟ್ಟುವ ಕೀಳು ಮನಸ್ಥಿತಿಯ ದುಸ್ಸಾಹಸಕ್ಕೆ ಛೀಮಾರಿ’ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಪ್ರತಿಕ್ರಿಯಿಸಿದ್ದಾರೆ.

‘ಸಮಾಜದಲ್ಲಿ ಎರಡು ಪಂಗಡಗಳನ್ನು ಎತ್ತಿಕಟ್ಟುವುದರಲ್ಲಿ, ಒಡೆದು ಆಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಈ ದ್ವಂದ್ವ ನೀತಿಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಯಲ್ಲಿದೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಕರ್ನಾಟಕ ಜಂಗಲ್ ರಾಜ್ಯವಾಗಿತ್ತು. ಹಿಂದೂ ಕಾರ್ಯಕರ್ತರ ಕೊಲೆಗಳಿಗೆ ಪೂರಕವಾಗಿ ಕಾಂಗ್ರೆಸ್ ನಿಂತಿತ್ತು. ಮತಾಂಧ ಟಿಪ್ಪುವಿನ ಜಯಂತಿ ಆಚರಿಸಿ, ಕೋಮು ಗಲಭೆ ಸೃಷ್ಟಿಸಿದ ಅವಕಾಶವಾದಿ ಸಿದ್ದರಾಮಯ್ಯ ಅವರಿಂದ ಪೊಲೀಸ್ ಇಲಾಖೆ, ಕಾಪು ಪೊಲೀಸರು ಪಾಠ ಕಲಿಯಬೇಕಾದದ್ದು ಏನೂ ಇಲ್ಲ’ ಎಂದಿದ್ದಾರೆ.

‘ಕಾಪು ಪೊಲೀಸರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತಿದ್ದು, ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಈ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡಿದ್ದು, ನಾಟಕವೇ? ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಇಂತಹ ಪಿತೂರಿಯು ಬುದ್ಧಿವಂತರ ಜಿಲ್ಲೆಯಲ್ಲಿ ನಡೆಯುವುದಿಲ್ಲ. ಕ್ಷೇತ್ರದ ಶಾಸಕನಾಗಿ ಪೊಲೀಸ್ ಇಲಾಖೆಗೆ ಗೌರವ ಮತ್ತು ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಲು ಕಟಿಬದ್ಧನಾಗಿದ್ದೇನೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.