ADVERTISEMENT

ಕೋಲಾರದ ಮಾಜಿ ಸಂಸದ ಮುನಿಯಪ್ಪ ರಾಜ್ಯ ರಾಜಕಾರಣಕ್ಕೆ: ದೇವನಹಳ್ಳಿಯಿಂದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 20:03 IST
Last Updated 25 ಮಾರ್ಚ್ 2023, 20:03 IST
   

ಕೋಲಾರ: ಸತತ ಏಳು ಬಾರಿ ಸಂಸದರಾಗಿ, ಯುಪಿಎ ಸರ್ಕಾರದ ಅವಧಿಯಲ್ಲಿ ಹತ್ತು ವರ್ಷ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಕೆ.ಎಚ್‌.ಮುನಿಯಪ್ಪ ಮೊದಲ ಬಾರಿಗೆ ರಾಜ್ಯ ರಾಜಕಾರಣ ಪ್ರವೇಶಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ಸೋಲು ಕಂಡಿದ್ದ ಅವರಿಗೆ ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಲಭಿಸಿದೆ. ಕಾಂಗ್ರೆಸ್‌ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಮುನಿಯಪ್ಪ ಅವರು 30 ವರ್ಷಗಳ ಬಳಿಕ ರಾಜ್ಯ ರಾಜಕಾರಣ ಪ್ರವೇಶಿಸಿರುವುದು ಕುತೂಹಲ ಮೂಡಿಸಿದೆ.

ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿರುವ ಅವರು 1991ರಲ್ಲಿ ಮೊದಲ ಬಾರಿ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿದು ಲೋಕಸಭೆ ಪ್ರವೇಶಿಸಿದ್ದರು. 7 ಬಾರಿ ಗೆದ್ದಿದ್ದ ಅವರು ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದ ಅವಧಿಯಲ್ಲಿ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ, ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಖಾತೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದಾರೆ.

ADVERTISEMENT

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಘಟಬಂಧನ್‌ ಹೆಸರಿನಲ್ಲಿ ಕೆಲ ಕಾಂಗ್ರೆಸ್‌ ಶಾಸಕರು ಹಾಗೂ ಮುಖಂ ಡರು ಮುನಿಯಪ್ಪ ಸೋಲಿಗೆ ಕಾರಣರಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ, ಜಿಲ್ಲೆಯಲ್ಲಿ ಕೆ.ಆರ್‌.ರಮೇಶ್‌ ಕುಮಾರ್‌ ಹಾಗೂ ಮುನಿಯಪ್ಪ ನೇತೃತ್ವದಲ್ಲಿ ಎರಡು ಬಣಗಳು ಸೃಷ್ಟಿಯಾಗಿ ಪದೇ ಪದೇ ಕಿತ್ತಾಟ ನಡೆಯುತಿತ್ತು.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿಯೂ ಎರಡು ಬಣಗಳ ನಡುವೆ ವೈಮನಸು ಜೋರಾಗಿತ್ತು. ಈ ಎಲ್ಲಾ ರಾಜಕೀಯ ವಿದ್ಯಮಾನಗಳಿಂದ ಮುನಿಸಿಕೊಂಡ ಮುನಿಯಪ್ಪ ಒಂದು ಹಂತದಲ್ಲಿ ಕಾಂಗ್ರೆಸ್‌ ತೊರೆಯುತ್ತಾರೆ ಎಂಬ ವದಂತಿ ದಟ್ಟವಾಗಿತ್ತು.

ಈಚೆಗೆ ಸಿದ್ದರಾಮಯ್ಯ ಖುದ್ದಾಗಿ ಎರಡು ಬಾರಿ ಮುನಿಯಪ್ಪ ಅವರನ್ನು ಭೇಟಿಯಾಗಿ ಸಂಧಾನ ಮಾಡಿಕೊಂಡಿದ್ದರು. ಕೋಲಾರದಲ್ಲಿ ಸಹಕರಿಸಿದರೆ, ದೇವನಹಳ್ಳಿಯಲ್ಲಿ ಸ್ಪರ್ಧಿಸಲು ಸಹಾಯ ಮಾಡುವ ಒಡಂಬಡಿಕೆ ನಡೆದಿತ್ತು ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಸಿದ್ದರಾಮಯ್ಯ ಭೇಟಿಯ ಬಳಿಕ ಮುನಿಯಪ್ಪ ಮಾತಿನ ವರಸೆಯೇ ಬದಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.