ಮಂಡ್ಯ: ‘ಮಸೆದಿರುವ ಕತ್ತಿಯಿಂದ ರಕ್ಷಿಸಿಕೊಳ್ಳಲು ಕೋರ್ಟ್ ಮೊರೆ ಹೋಗಬೇಕಾಯಿತು. ದಿನೇಶ್ ಕಲ್ಲಹಳ್ಳಿಯ ಬಳಿ ಇನ್ನೂ ಹಲವು ಸಚಿವರ ಸಿ.ಡಿಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡಲಿ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಶನಿವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸತ್ಯಾಂಶ ಮುಚ್ಚಿಡಿ ಎಂದು ನಾವು ಕೇಳುತ್ತಿಲ್ಲ. ಸತ್ಯ ತೋರಿಸಿದರೆ ಅದಕ್ಕೆ ನಾವು ತಲೆ ಬಾಗುತ್ತೇವೆ. ದಿನೇಶ್ ಕಲ್ಲಹಳ್ಳಿ ದೊಡ್ಡಮನುಷ್ಯ, ಆತನ ಬಳಿ ಯಾವುದೇ ಸಿ.ಡಿಗಳಿದ್ದರೂ ಬೇಗ ಬಿಡುಗಡೆ ಮಾಡಲಿ, ತಡ ಯಾಕೆ? ರಕ್ಷಣೆಗಾಗಿ ನಾವು ಕೋರ್ಟ್ಗೆ ಹೋಗಿದ್ದೇವೆ, ಅದರಲ್ಲಿ ತಪ್ಪೇನಿದೆ. ಈ ವಿಚಾರದಲ್ಲಿ ನಮಗೆ ಭಯ ಇಲ್ಲ’ ಎಂದರು.
‘ರಮೇಶ್ ಜಾರಕಿಹೊಳಿ ಬಗ್ಗೆ ನಾನು ಮಾತನಾಡುವುದಿಲ್ಲ, ಅದು ಅವರ ವೈಯಕ್ತಿಕ ವಿಚಾರ. ಸಿನಿಮಾಗಳಲ್ಲಿ ತೋರಿಸುವುದೆಲ್ಲಾ ಸತ್ಯವಾಗಿರುವುದಿಲ್ಲ. ಒಬ್ಬ ನಟ ಬೆಟ್ಟದ ಮೇಲಿಂದ ನೆಗೆಯುತ್ತಾನೆ, ಆತ ನಿಜವಾಗಿಯೂ ನೆಗೆಯುತ್ತಾನಾ? ಗ್ರಾಫಿಕ್ ಮಾಡಿರುತ್ತಾರೆ. ಅದೇ ರೀತಿ ರಮೇಶ್ ಜಾರಕಿಹೊಳಿ ವಿಚಾರದಲ್ಲಿ ಗ್ರಾಫಿಕ್ಸ್ ಮಾಡಿರಬಹುದು’ ಎಂದರು.
‘ನನ್ನನ್ನು ಯಾವ ಉದ್ದೇಶದಿಂದ ಬಾಂಬೆ ಕಳ್ಳ ಎನ್ನುತ್ತಾರೋ ಗೊತ್ತಿಲ್ಲ. ನಾನು 32 ವರ್ಷದಿಂದ ಮುಂಬೈನಲ್ಲಿ ಇದ್ದೀನಿ, ಕಳ್ಳತನ, ಲೂಟಿ ಮಾಡಿಲ್ಲ. ಒಂದೇಒಂದು ಚೆಕ್ ಬೌನ್ಸ್ ಪ್ರಕರಣ ಕೂಡ ನನ್ನ ಮೇಲೆ ಇಲ್ಲ. ನಾನು ತಪ್ಪು ಮಾಡಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.