ADVERTISEMENT

ಸಿಎಂ ಸ್ವಕ್ಷೇತ್ರದಲ್ಲಿ ಪರಿಶಿಷ್ಟ ಸಮುದಾಯದವರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ಸಿ.ಎಂ ಸ್ವಕ್ಷೇತ್ರದಲ್ಲೇ ಭೂ ಹಕ್ಕು ವಿಚಾರದಲ್ಲಿ ದಬ್ಬಾಳಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 19:59 IST
Last Updated 16 ಜೂನ್ 2021, 19:59 IST
ಶಿಕಾರಿಪುರದ ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದವರು ತಮ್ಮ ಜಮೀನಿನಲ್ಲಿ ವಿಷದ ಬಾಟಲಿ ಹಿಡಿದು ನಿಂತಿರುವುದು
ಶಿಕಾರಿಪುರದ ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದವರು ತಮ್ಮ ಜಮೀನಿನಲ್ಲಿ ವಿಷದ ಬಾಟಲಿ ಹಿಡಿದು ನಿಂತಿರುವುದು   

ಶಿವಮೊಗ್ಗ: ಭೂಮಿ ಹಕ್ಕು ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ ಕುಟುಂಬಗಳು ಹಾಗೂ ಮೇಲ್ಜಾತಿಯವರ ಮುಸುಕಿನ ಗುದ್ದಾಟ ಈಗ ತಾರಕಕ್ಕೇರಿದೆ. ತಾಲ್ಲೂಕು ಆಡಳಿತದ ಕ್ರಮ ವಿರೋಧಿಸಿ ಪರಿಶಿಷ್ಟ ಸಮುದಾಯದ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿವೆ.

ಬುಧವಾರ ಇಲ್ಲಿನ ತಹಶೀಲ್ದಾರ್ ಕವಿರಾಜ್ ಅವರು ಪೊಲೀಸರೊಂದಿಗೆ ಬಂದು ಪರಿಶಿಷ್ಟ ಸಮುದಾಯದವರು ಬಿತ್ತನೆ ಮಾಡಿದ್ದ ಜಮೀನಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಗೊಳಿಸಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಸಮುದಾಯದ ಕುಟುಂಬದವರು ಸಾಮೂಹಿಕ ಆತ್ಮಹತ್ಯೆ ಬೆದರಿಕೆ ಒಡ್ಡಿದರು. ಇದರಿಂದ ಆತಂಕಗೊಂಡ ತಹಶೀಲ್ದಾರ್ ಹಾಗೂ ಪೊಲೀಸರು ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ನಿಲ್ಲಿಸಿ ಹಿಂತಿರುಗಿದರು.

ಮಾಯತಮ್ಮನ ಮುಚುಡಿ ಗ್ರಾಮದ ಪರಿಶಿಷ್ಟ ಸಮುದಾಯದ 19 ಕುಟುಂಬಗಳು 40 ವರ್ಷಗಳಿಂದ ಸರ್ವೆ ನಂಬರ್ 128ರಲ್ಲಿ ತಲಾ 2 ಹಾಗೂ 3 ಎಕರೆಯಂತೆ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದವು. ಮಂಜೂರಾತಿಗಾಗಿ 1991ರಲ್ಲಿ ಆ ಕುಟುಂಬ
ಗಳವರು 53 ಅರ್ಜಿಗಳನ್ನು ಸಲ್ಲಿಸಿದ್ದಾರೆ. ಬಗರ್‌ಹುಕುಂ ಸಾಗುವಳಿ ಹಕ್ಕಿಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದ್ದರೂ ಭೂ ಒಡೆತನದ ಭಾಗ್ಯ ಸಿಕ್ಕಿಲ್ಲ.

ADVERTISEMENT

ಸಮುದಾಯದವರ ಆರೋಪವೇನು?: ‘ಸರ್ವೆ ನಂಬರ್ 128ರಲ್ಲಿ ಹಲವರು ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ನಮ್ಮ ಸಮುದಾಯದವರನ್ನು ಹೊರತುಪಡಿಸಿ ಎಲ್ಲರಿಗೂ ಭೂಮಿಯನ್ನು ಮಂಜೂರು ಮಾಡಿಕೊಟ್ಟಿದ್ದಾರೆ.’ ಎಂಬುದು ಇಲ್ಲಿನ ಪರಿಶಿಷ್ಟ ಸಮುದಾಯದವರ ದೂರು.

ಕೂಲಿಗೆ ಕರೆದರೆ ₹ 25 ಸಾವಿರ ದಂಡ: ‘ಗ್ರಾಮದಲ್ಲಿ ನಮ್ಮನ್ನು ಯಾರೂ ಕೂಲಿಗೆ ಕರೆಯುವಂತಿಲ್ಲ. ಯಾರಾದರೂ ಕೂಲಿಗೆ ಕರೆದರೆ ಅವರಿಗೆ ₹ 25 ಸಾವಿರ ದಂಡ ಹಾಕುತ್ತಾರೆ. ಈ ಘಟನೆ ನಡೆದ ನಂತರ ನಾವು ಹೊರಗಡೆ ಓಡಾಡುವ ಹಾಗಿಲ್ಲ. ಇದೇ ಸರ್ವೆ ನಂಬರ್‌ನಲ್ಲಿ ಬಲಾಢ್ಯ ಜಾತಿಗಳವರಿಗೆ ಹತ್ತಾರು ಎಕರೆ ಭೂಮಿ ಮಂಜೂರು ಮಾಡಿರುವಾಗ ನಮಗೂ ಕನಿಷ್ಠ ಒಂದು ಎಕರೆ ಭೂಮಿಯನ್ನಾದರೂ ಮಂಜೂರು ಮಾಡಿ, ಬದುಕಲು ಬಿಡಿ’ ಎಂದು ಗ್ರಾಮದ ಸಂತ್ರಸ್ತ ವೀರೇಶ್
ತಿಳಿಸಿದರು.

‘ಭೂಮಿ ಹಕ್ಕು ಕೇಳುತ್ತಿರುವುದನ್ನು ಸಹಿಸದ ಗ್ರಾಮದ ಲಿಂಗಾಯತರು ನಮ್ಮ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಈ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಅವರ ಸೂಚನೆ ಮೇರೆಗೆ ನಮ್ಮ ಕುಟುಂಬಗಳಿಗೆ ತಲಾ ಒಂದು ಎಕರೆ ಜಮೀನು ಕೊಡುವ ಬಗ್ಗೆ ಪಂಚಾಯಿತಿ ನಡೆದಿತ್ತು. ಆದರೂ ಅಲ್ಲಿನ ತೀರ್ಮಾನವನ್ನು ಗ್ರಾಮಸ್ಥರು ಪಾಲಿಸುತ್ತಿಲ್ಲ. ಒಂದು ವಾರದಲ್ಲಿ ಸಂಸದರು ಬಂದ ಮೇಲೆ ಚರ್ಚೆ ಮಾಡುವ ಭರವಸೆಯನ್ನು ತಹಶೀಲ್ದಾರ್‌ ನೀಡಿದ್ದಾರೆ.’ ಎಂದು ವೀರೇಶ್ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.