ADVERTISEMENT

ಪಂಚೆ ನಿಲ್ಲುತ್ತಿಲ್ಲ ಈಶ್ವರಪ್ಪಾ, ಕಳಚಿ ಹೋಗ್ತಿದೆ: ಸಿದ್ದರಾಮಯ್ಯ ಹಾಸ್ಯದ ಪಂಚ್‌!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 12:27 IST
Last Updated 22 ಸೆಪ್ಟೆಂಬರ್ 2021, 12:27 IST
ವಿಧಾನಸಭೆಯಲ್ಲಿ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಸಾಂದರ್ಭಿಕ ಚಿತ್ರ
ವಿಧಾನಸಭೆಯಲ್ಲಿ ಮಾತನಾಡುತ್ತಿರುವ ಸಿದ್ದರಾಮಯ್ಯ ಅವರ ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕೋವಿಡ್‌ ಬಂದು ಹೋದ ಮೇಲೆ ನನ್ನ ಹೊಟ್ಟೆ ದಪ್ಪ ಆಗಿದೆ. ಪಂಚೆ ನಿಲ್ಲುತ್ತಿಲ್ಲ ಕಳಚಿ ಹೋಗ್ತಾ ಇದೆ...’

ಹೀಗೆಂದು ಹೇಳಿದ್ದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ. ವಿಧಾನಸಭೆಯಲ್ಲಿ ಬುಧವಾರ ಚರ್ಚೆಯ ವೇಳೆ ಸಿದ್ದರಾಮಯ್ಯ ಅವರ ಪಂಚೆ ಕಳಚಿ ಬಿದ್ದು ಸ್ವಾರಸ್ಯಕರ ಮತ್ತು ಹಾಸ್ಯ ಲೇಪಿತ ಮಾತುಗಳಿಗೆ ವೇದಿಕೆಯಾಯಿತು.

ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಗಂಭೀರವಾಗಿ ಮಾತನಾಡುತ್ತಿದ್ದರು. ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್‌ ಬಂದು ಸಿದ್ದರಾಮಯ್ಯ ಅವರ ಕಿವಿಯಲ್ಲಿ, ‘ಪಂಚೆ ಕಳಚಿದೆ ಸರಿ ಮಾಡಿಕೊಳ್ಳಿ’ ಎಂದರು. ಇದರಿಂದ ತಡಬಡಾಯಿಸಿ ಪಂಚೆಗೆ ಕೈ ಹಾಕಿದಾಗ ಕಳಚಿ ಬಿದ್ದಿದ್ದು ಅವರ ಗಮನಕ್ಕೆ ಬಂದಿತು. ಎತ್ತಿ ಕಟ್ಟಿಕೊಳ್ಳಲು ಪ್ರಯತ್ನಿಸಿದರು. ಆದರೂ ನಿಲ್ಲುತ್ತಿರಲಿಲ್ಲ.

ADVERTISEMENT

‘ಸ್ವಲ್ಪ ಪಂಚೆ ಕಳಚಿಕೊಂಡಿದೆ ಸರಿ ಮಾಡಿಕೊಂಡು ಮಾತನಾಡುತ್ತೇನೆ’ ಎಂದು ಸಿದ್ದರಾಮಯ್ಯ ನಗುತ್ತಾ ಪಂಚೆ ಬಿಗಿಗೊಳಿಸಿದರು. ‘ಕೋವಿಡ್‌ ಬಂದು ಹೋದ ಮೇಲೆ 4–5 ಕೆ.ಜಿ ತೂಕ ಹೆಚ್ಚಾಗಿದೆ. ಹೊಟ್ಟೆ ದೊಡ್ಡದಾಗಿದೆ. ಪಂಚೆ ನಿಲ್ಲುತ್ತಿಲ್ಲ ಈಶ್ವರಪ್ಪಾ’ ಎಂದರು.

ಆಗ ಕಾಂಗ್ರೆಸ್‌ನ ರಮೇಶ್‌ ಕುಮಾರ್ ಮಧ್ಯ ಪ್ರವೇಶಿಸಿ, ‘ಪಂಚೆ ಬಿಚ್ಚಿ ಹೋಗಿದ್ದು ಯಾರಿಗೂ ಗೊತ್ತಿರಲಿಲ್ಲ. ನಮ್ಮ ಪಕ್ಷದ ಅಧ್ಯಕ್ಷರು ಬಂದು ಕಿವಿಯಲ್ಲಿ ಹೇಳಿದ್ದು, ಈಗ ಊರಿಗೆಲ್ಲ ಗೊತ್ತಾಯಿತು’ ಎಂದರು.

‘ಉದ್ದದ ಜುಬ್ಬಾ ಹಾಕುವುದರಿಂದ ಪಂಚೆ ಬಿಚ್ಚಿದರೂ ಏನೂ ಆಗುವುದಿಲ್ಲ. ಕೆಲವರು ನಿಲುವಂಗಿ ಹಾಕಿಕೊಳ್ಳುತ್ತಾರೆ. ಅದಿದ್ದರೆ ಪಂಚೆನೂ ಬೇಕಿಲ್ಲ, ಪ್ಯಾಂಟ್‌ ಕೂಡ ಬೇಕಾಗುವುದಿಲ್ಲ’ ಎಂದರು ಸಿದ್ದರಾಮಯ್ಯ.

ಭೋಜನ ವಿರಾಮದ ವೇಳೆ ಹೊರ ಹೋಗುವಾಗಲೂ ಸಿದ್ದರಾಮಯ್ಯ ಅವರ ಪಂಚೆ ಕಳಚಿಕೊಂಡಿತು. ‘ಹೊಟ್ಟೆ ದಪ್ಪ ಆಗಿ ಪ್ರಾಬ್ಲಂ ಆಗಿದೆ ಎಂದು ನಗುತ್ತಾ ಪಂಚೆ ಕಟ್ಟಿಕೊಳ್ಳಲು’ ಅವರು ತಿಣುಕಾಡಿದರು.

ಪಂಚೆ ಕಳಚಿದ ಪ್ರಸಂಗದ ಕುರಿತಾದಸ್ವಾರಸ್ಯಕರ ಮಾತುಗಳ ವಿಡಿಯೊ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.