ಬೆಂಗಳೂರು: ‘ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಲಕ್ಷಾಂತರ ಮಂದಿಯ ಸ್ವಂತ ಸೂರಿನ ಕನಸನ್ನು ಈಡೇರಿಸುವ ಸಲುವಾಗಿ ವಸತಿ ಇಲಾಖೆಯು ಏಷ್ಯಾದ ಅತಿದೊಡ್ಡ ಟೌನ್ಶಿಪ್ ಯೋಜನೆಯಾದ ‘ಸೂರ್ಯನಗರ ಟೌನ್ಶಿಪ್’ ಅನ್ನು ಕೈಗೆತ್ತಿಕೊಂಡಿದ್ದು, ಆನೇಕಲ್ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿರುವ 1ನೇ ಹಂತದ ‘ಸೂರ್ಯ ಎಲಿಗೆನ್ಸ್’ ಬಹುಮಹಡಿ ಸಮುಚ್ಚಯ ಉದ್ಘಾಟನೆಗೆ ಸಜ್ಜಾಗಿದೆ.
ಒಟ್ಟು 6 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ‘ಸೂರ್ಯ ಎಲಿಗೆನ್ಸ್’ ಹಲವು ವಿಶೇಷತೆಗಳನ್ನು ಹೊಂದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ(ಸೆ.26) ಉದ್ಘಾಟಿಸಲಿದ್ದಾರೆ.
ಇಲ್ಲಿ 2 ಮತ್ತು 3 ಬಿಎಚ್ಕೆ ಫ್ಲಾಟ್ಗಳು ಲಭ್ಯವಿವೆ. ಗುಣಮಟ್ಟದ ರಸ್ತೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಒಳಚರಂಡಿ, ಕಾವೇರಿ ನೀರು ಸರಬರಾಜು ವ್ಯವಸ್ಥೆಯನ್ನೂ ಮಾಡಲಾಗಿದೆ. ನಿವಾಸಿಗಳ ಅನುಕೂಲಕ್ಕಾಗಿ ಕ್ಲಬ್ ಹೌಸ್, ಈಜುಕೊಳ, ಆಟದ ಮೈದಾನ, ಒಳಾಂಗಣ ಕ್ರೀಡಾಂಗಣ ಮತ್ತು ಉದ್ಯಾನ ನಿರ್ಮಿಸಲಾಗಿದೆ. ನಿವಾಸಿಗಳಿಗೆ ಮತ್ತು ಸಂದರ್ಶಕರಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಮಳೆ ನೀರು ಕೋಯ್ಲು ಅಳವಡಿಸಲಾಗಿದೆ’ ಎಂದುವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
‘2 ಬಿಎಚ್ಕೆ ಮತ್ತು 3 ಬಿಎಚ್ಕೆಯ ತಲಾ 192 ಫ್ಲಾಟ್ಗಳು ಇಲ್ಲಿ ಲಭ್ಯವಿವೆ. ಫ್ಲಾಟ್ಗಳ ಹಂಚಿಕೆಗೆ ಈಗಾಗಲೇ ಅರ್ಹರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಗುಣಮಟ್ಟದ ಫ್ಲಾಟ್ಗಳ ನಿರ್ಮಾಣದ ಸಂಕಲ್ಪಕ್ಕೆ ಇಲಾಖೆ ಬದ್ಧವಾಗಿದೆ. ಆನೇಕಲ್ ತಾಲ್ಲೂಕಿನ ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಬಳಿ ಸೂರ್ಯನಗರ 4ನೇ ಹಂತದಲ್ಲಿ ಬೃಹತ್ ಟೌನ್ಶಿಪ್ ನಿರ್ಮಾಣ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಆಕರ್ಷಕ ಸರೋವರ ನಿರ್ಮಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.