ಬಾಗಲಕೋಟೆ: ’ಯಾರ ಮೇಲೋ ಆದಾಯ ತೆರಿಗೆ (ಐಟಿ) ದಾಳಿ ನಡೆಯುವುದಕ್ಕೂಯಡಿಯೂರಪ್ಪ ಅವರನ್ನ ಕಟ್ಟಿ ಹಾಕುವುದಕ್ಕೂ ಏನು ಸಂಬಂಧ‘ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಐಟಿ ದಾಳಿ ಹಿಂದೆ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವ ತಂತ್ರವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಮನೆಯಲ್ಲಿ ಕೆಲಸಕ್ಕೆ ಅಂತ ಇದ್ದವ ಕದ್ದುಕೊಂಡು ಹೋದರೆ ಯಾರ ಮೇಲೆ ಅನುಮಾನ ಪಡುತ್ತೀರಿ. ಮನೆಯಲ್ಲಿ ಪತ್ನಿ, ಅಣ್ಣತಮ್ಮಂದಿರ ಮೇಲೆ ಅನುಮಾನ ಪಡೋಕೆ ಆಗುತ್ತಾ? ದಾಳಿ ಆಗಿದೆ ಅಂದರೆ ತಪ್ಪಾಗಿದೆ ಅಂತ ಅಥ೯ ಅಲ್ಲ. ಯಡಿಯೂರಪ್ಪನವರ ಬಗ್ಗೆ ಅನುಮಾನ ಪಡೋದು ಸರಿಯಲ್ಲ ಎಂದರು.
ಐಟಿಯವರು ದಾಳಿ ಮಾಡಿದ ಬಿಎಂಟಿಸಿ ಚಾಲಕ ಉಮೇಶ ನನ್ನ ಆಪ್ತ ಹೌದು ಅಂತ ಯಡಿಯೂರಪ್ಪನವರೇ ಹೇಳಿದ್ದಾರೆ. ಬೊಮ್ಮಾಯಿ ಸಹ ಅವರನ್ನು ಮುಂದುವರೆಸಿದ್ದರು. ಈಗ ತೆಗೆದು ಹಾಕಿದ್ದಾರೆ. ಇದರಲ್ಲೇನು ಪ್ರಶ್ನೆ ಉದ್ಭವವಾಗೋದಿಲ್ಲ. ತಪ್ಪು ಯಾರು ಮಾಡಿದ್ದರೂ ಅದು ತಪ್ಪೆ. ತಪ್ಲಿಲ್ಲ ಅಂದ್ರೆ ಹೊರಗೆ ಬತಾ೯ರೆ. ಇಲ್ಲವಾದರೆ ಅವರ ಮೇಲೆ ಕ್ರಮ ಆಗುತ್ತದೆ ಎಂದರು.
ಕಾಂಗ್ರೆಸ್ನವರು ಕ್ಷಮೆಯಾಚಿಸಲಿ..
ಐಟಿ ದಾಳಿ ಕೇವಲ ಕಾಂಗ್ರೆಸ್ನವರ ಮೇಲೆ ಆಗುತ್ತದೆ ಎನ್ನುತ್ತಿದ್ದವರು ಈಗ್ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಕಿಚಾಯಿಸಿದ ಈಶ್ವರಪ್ಪ, ಕಾಂಗ್ರೆಸ್ ಮಾತ್ರ ಅಲ್ಲ, ಯಾರ ಮೇಲೆ ಅನುಮಾನ ಇದೆಯೋ ಅವರ ಮೇಲೆಲ್ಲಾ ಐಟಿಯವರು ದಾಳಿ ಮಾಡುತ್ತಾರೆ. ಇದನ್ನು ಕಾಂಗ್ರೆಸ್ ನಾಯಕರು ಹೇಳಬೇಕಲ್ಲಾ ಎಂದು ವ್ಯಂಗ್ಯವಾಡಿದರು.
ಕೇವಲ ಕಾಂಗ್ರೆಸ್ ಪಕ್ಷದವರನ್ನು ಗುರಿ ಇರಿಸಿ ಆದಾಯ ತೆರಿಗೆ ದಾಳಿಯಾಗುತ್ತದೆ ಎಂದು ಹೇಳುತ್ತಿದ್ದ ಆ ಪಕ್ಷದ ಮುಖಂಡರು ಈಗ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಈ ರೀತಿ ಸಂವಿಧಾನಬದ್ಧ ಸಂಸ್ಥೆ (ಐಟಿ) ಮೇಲೆ ವಿನಾಕಾರಣ ಗೂಬೆ ಕೂರಿಸಿದರೆ ನಾಳೆ ಐಟಿ, ಸಿಬಿಐ ಬಗ್ಗೆ ಜನರಿಗೆ ವಿಶ್ವಾಸ ಹೇಗೆ ಬರುತ್ತದೆ? ಕಾಂಗ್ರೆಸ್ನವರೇನು ಸತ್ಯಹರೀಶ್ಚಂದ್ರರಾ? ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.