ADVERTISEMENT

ಯುಪಿಎಸ್‌ಸಿ: ವಿಜಯಪುರ ಜಿಲ್ಲೆಯ ಸಾಗರ ವಾಡಿಗೆ 385ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 18:16 IST
Last Updated 24 ಸೆಪ್ಟೆಂಬರ್ 2021, 18:16 IST
ಸಾಗರ್‌ ವಾಡಿ
ಸಾಗರ್‌ ವಾಡಿ   

ವಿಜಯಪುರ: ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ಸಾಗರ್‌ ವಾಡಿ ಅವರಿಗೆ ಯಪಿಎಸ್‌ಸಿಯಲ್ಲಿ 385ನೇ ರ‍್ಯಾಂಕ್ ಲಭಿಸಿದೆ.

ಸಾಗರ್‌ ಅವರು ಸದ್ಯ ಕೇಂದ್ರ ಸರ್ಕಾರದ ಇಂಧನ ಇಲಾಖೆಯಲ್ಲಿ 2014ರಿಂದ ಡೆಪ್ಯೂಟಿ ಮ್ಯಾನೇಜರ್‌ ಆಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಂದರಿಂದ ಐದನೇ ತರಗತಿ ವರೆಗೆ ಸಿಂದಗಿ ತಾಲ್ಲೂಕಿನ ಕೋರವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಹಾಗೂ ಆರರಿಂದ ದ್ವಿತೀಯ ಪಿಯುಸಿ ವರೆಗೆ ಆಲಮಟ್ಟಿಯ ಜವಾಹರ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಎಲೆಕ್ಟ್ರಿಕ್ಸ್‌ ಎಂಜಿನಿಯರಿಂಗ್‌ ಪದವಿ ಪಡೆದುಕೊಂಡಿದ್ದಾರೆ.

ADVERTISEMENT

‘ಐಎಎಸ್‌ ಅಧಿಕಾರಿ ಆಗಬೇಕು ಎಂಬುದು ಬಾಲ್ಯದಿಂದ ಇದ್ದ ಕನಸು. ತಂದೆ, ತಾಯಿ ಪ್ರೋತ್ಸಾಹದಿಂದ ಕನಸು ನನಸಾಗಿದೆ. ಮುಂದೆ ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಆಶಯ ಇದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಜಾವಾಣಿ ಪತ್ರಿಕೆ ಓದುಗನಾಗಿದ್ದು, ಸಂದರ್ಶನದ ವೇಳೆ ಪತ್ರಿಕೆ ಓದು ನೆರವಿಗೆ ಬಂತು’ ಎಂದು ಹೇಳಿದರು.

‘ಕೆಲಸದಲ್ಲಿ ಇದ್ದ ಕಾರಣ ಯಾವುದೇ ತರಬೇತಿ ಪಡೆದಿರಲಿಲ್ಲ. ಆನ್‌ಲೈನ್‌ ಓದು ಮುಖ್ಯವಾಗಿತ್ತು. ಈ ಹಿಂದೆ ಮೂರು ಬಾರಿ ಪರೀಕ್ಷೆ ಬರೆದಿದ್ದೇ. ಇದೀಗ ನಾಲ್ಕನೇ ಅವಧಿಯಲ್ಲಿ ಯಶಸ್ವಿಯಾಗಿರುವೆ’ ಎಂದು ಹೇಳಿದರು.

ಸಿಂದಗಿ ತಾಲ್ಲೂಕಿನ ಕೋರವಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಶಿಕ್ಷಕರಾದ ಅಮಗೊಂಡ ವಾಡಿ ಮತ್ತು ವಿಜಯಲಕ್ಷ್ಮಿ ದಂಪತಿ ಪುತ್ರರಾಗಿದ್ದಾರೆ. ಇವರಿಗೆ ಕಿರಿಯ ಸಹೋದರಿ ಮತ್ತು ಸಹೋದರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.