ADVERTISEMENT

ಉತ್ತರ ಕನ್ನಡ: ಪ್ರವಾಹದ ಬಳಿಕ ಚೇತರಿಕೆಯತ್ತ ‘ಪ್ರವಾಸ’

ಜಿಲ್ಲೆಯ ನೂರಾರು ರೆಸಾರ್ಟ್‌ಗಳು ಭರ್ತಿ: ಸುಂದರ ತಾಣಗಳತ್ತ ಪ್ರವಾಸಿಗರ ಹೆಜ್ಜೆ

ಸದಾಶಿವ ಎಂ.ಎಸ್‌.
Published 27 ಸೆಪ್ಟೆಂಬರ್ 2019, 11:07 IST
Last Updated 27 ಸೆಪ್ಟೆಂಬರ್ 2019, 11:07 IST
ಕಾರವಾರ ತಾಲ್ಲೂಕಿನ ಕದ್ರಾ ಬಳಿ ಹೆದ್ದಾರಿಯ ಪಕ್ಕದಲ್ಲೇ ಹರಿಯುವ ಜಲಧಾರೆಯೂ ಪ್ರವಾಸಿಗರ ಆಕರ್ಷಣೆಯ ತಾಣ (ಸಂಗ್ರಹ ಚಿತ್ರ)
ಕಾರವಾರ ತಾಲ್ಲೂಕಿನ ಕದ್ರಾ ಬಳಿ ಹೆದ್ದಾರಿಯ ಪಕ್ಕದಲ್ಲೇ ಹರಿಯುವ ಜಲಧಾರೆಯೂ ಪ್ರವಾಸಿಗರ ಆಕರ್ಷಣೆಯ ತಾಣ (ಸಂಗ್ರಹ ಚಿತ್ರ)   

ಕಾರವಾರ: ಆಗಸ್ಟ್ ತಿಂಗಳಲ್ಲಿ ಭಾರಿ ಮಳೆ ಮತ್ತು ನೆರೆಯಿಂದ ಹಿನ್ನಡೆ ಕಂಡಿದ್ದ ಜಿಲ್ಲೆಯ ಪ್ರವಾಸೋದ್ಯಮ ಈಗ ಸುಧಾರಿಸುತ್ತಿದೆ. ಹೋಮ್‌ ಸ್ಟೇಗಳು, ರೆಸಾರ್ಟ್‌ಗಳುಪ್ರವಾಸಿಗರಿಂದ ಭರ್ತಿಯಾಗುತ್ತಿದ್ದು, ಆಶಾದಾಯಕ ಬೆಳವಣಿಗೆ ಕಂಡುಬರುತ್ತಿದೆ.

ಕರಾವಳಿಯಲ್ಲಿ ಮಳೆಯಿಂದಾಗಿ ಪ್ರವಾಸಿಗರ ಸಂಖ್ಯೆ ಕಡಿಮೆಯಿದೆ. ವಾತಾವರಣ ಸಂಪೂರ್ಣವಾಗಿ ಸಹಜ ಸ್ಥಿತಿಗೆಬಂದ ಪ್ರವಾಸೋದ್ಯಮ ಮತ್ತಷ್ಟು ಸುಧಾರಿಸಬಹುದು ಎಂಬ ವಿಶ್ವಾಸಇಲಾಖೆಯ ಅಧಿಕಾರಿಗಳದ್ದಾಗಿದೆ.

‘ಜಿಲ್ಲೆಯ ಮಲೆನಾಡು ಭಾಗದಲ್ಲಿ ಪ್ರವಾಸಿಚಟುವಟಿಕೆಗಳುಸಾಮಾನ್ಯವಾಗಿ ಸೆ.15ರ ನಂತರ ಆರಂಭವಾಗುತ್ತವೆ. ಈಗ ಅಲ್ಲಿನ ಜಲಧಾರೆಗಳಿಗೆ, ದೇಗುಲಗಳಿಗೆ, ರೆಸಾರ್ಟ್‌ಗಳಿಗೆ ಪ್ರತಿವರ್ಷದಂತೆ ಪ್ರವಾಸಿಗರು ಬರುತ್ತಿದ್ದಾರೆ. ದಾಂಡೇಲಿ, ಜೊಯಿಡಾ ಭಾಗದ ಎಲ್ಲ 124 ರೆಸಾರ್ಟ್‌ಗಳು ಪ್ರವಾಸಿಗರಿಂದ ಭರ್ತಿಯಾಗಿವೆ. ಇದು ಆಶಾದಾಯಕ’ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪನಿರ್ದೇಶಕ ಪುರುಷೋತ್ತಮ.

ADVERTISEMENT

‘ಕರಾವಳಿಯಲ್ಲಿ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆಯೇ ಇರುತ್ತದೆ. ಈ ಬಾರಿ ನೆರೆ ಮತ್ತು ಭಾರಿ ಮಳೆಯಿಂದ ಹಲವಾರು ಪ್ರಮುಖ ತಾಣಗಳಿಗೆರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈಗ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಾಣಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹೌಸ್‌ ಬೋಟ್‌ಗಳ ಆಕರ್ಷಣೆ:‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮತ್ತಷ್ಟುಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆಯಿಂದ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾಳಿ ಮತ್ತು ಅಘನಾಶಿನಿ ನದಿಗಳಲ್ಲಿ ತಲಾ ಎರಡು ಹೌಸ್ ಬೋಟ್‌ಗಳಿಗೆ ಅನುಮತಿ ನೀಡಲಾಗಿದೆ. ಕಾಳಿ ನದಿಯಲ್ಲಿ ಕಿನ್ನರದಿಂದ ಕಾರವಾರದ ತನಕ ಹಾಗೂ ಅಘನಾಶಿನಿಯಲ್ಲಿ ತದಡಿ ಬಂದರಿನವರೆಗೆ ಈ ದೋಣಿಗಳು ಸಂಚರಿಸಲಿವೆ’ ಎಂದು ಎಸ್.ಪುರುಷೋತ್ತಮಮಾಹಿತಿ ನೀಡಿದ್ದಾರೆ.

ಹೌಸ್ ಬೋಟ್ ಆರಂಭಿಸಲು ಒಬ್ಬರು ಎಷ್ಟು ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದೂ ಅವರು ತಿಳಿಸಿದ್ದಾರೆ.

‘ಯಾವುದೇ ತೊಂದರೆಯಿಲ್ಲ, ಬನ್ನಿ’:‘ಪ್ರವಾಹದ ಬಳಿಕ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪರಿಸ್ಥಿತಿ ಸಹಜವಾಗಿದೆ. ಇಲ್ಲಿಗೆ ಭೇಟಿ ನೀಡಿ ಎಂದು ನಾವೂ ಪ್ರಚಾರ ಮಾಡುತ್ತಿದ್ದೇವೆ. ನನ್ನ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನೇ ನಮ್ಮಇಲಾಖೆಯ ವೆಬ್‌ಸೈಟ್‌ನಲ್ಲಿ ನೀಡಿದ್ದೇನೆ.ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದಾ, ಅಲ್ಲಿನ ಪರಿಸ್ಥಿತಿ ಈಗ ಹೇಗಿದೆ ಎಂದು ದಿನವೂ ಐದಾರು ಕರೆಗಳು ಮೊಬೈಲ್‌ಗೆ ಬರುತ್ತವೆ. ಇಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಧೈರ್ಯವಾಗಿ ಬನ್ನಿ ಎಂದು ನಾನೂ ಆಹ್ವಾನಿಸುತ್ತೇನೆ’ಎನ್ನುತ್ತಾರೆಎಸ್.ಪುರುಷೋತ್ತಮ.

ಜಿಲ್ಲೆಗೆ ಪ್ರವಾಸಿಗರ ಭೇಟಿ: ಅಂಕಿ– ಅಂಶ

* 42.15 ಲಕ್ಷ – ಜ.1ರಿಂದ ಆ.31ರವರೆಗೆ ಭೇಟಿ ನೀಡಿದವರು

* 92.73 ಲಕ್ಷ –ಕಳೆದ ವರ್ಷ ಜಿಲ್ಲೆಗೆ ಭೇಟಿ ನೀಡಿದ್ದ ಪ್ರವಾಸಿಗರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.