ADVERTISEMENT

ಹರ್‌ ಕಿ ದುನ್‌ ದಾರಿಯಲ್ಲಿ ಸಗ್ಗದ ಸಿರಿ

ಶ್ರೀಧರ ಭಟ್ಟ ಐನಕೈ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST
ನಮ್ಮ ಬಿಡಾರದಿಂದ ಕಂಡ ಹಿಮಪರ್ವತ
ನಮ್ಮ ಬಿಡಾರದಿಂದ ಕಂಡ ಹಿಮಪರ್ವತ   

ಔಟ್‌ಲುಕ್‌ ಮ್ಯಾಗಜಿನ್‌ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡ ವಿಶಿಷ್ಟ ದೇವಾಲಯ ಮತ್ತು ಓಸ್ಲಾ ಎಂಬ ಹಳ್ಳಿಯ ಕುರಿತಾದ ಬರಹವನ್ನು ನೋಡಿ ಉತ್ತರಾಖಂಡದಿಂದ 66 ಕಿಲೋ ಮೀಟರ್ ದೂರದ ‘ಹರ್ ಕಿ ದುನ್’ ಚಾರಣಕ್ಕೆ ಹೊರಟೆ.

ಉತ್ತರಾಖಂಡದ ಡೆಹ್ರಾಡೂನ್ ರೈಲ್ವೆ ಸ್ಟೇಷನ್‍ಗೆ ಬೆಳಿಗ್ಗೆ 5.30ಕ್ಕೆ ರೈಲು ಏದುಸಿರುಬಿಡುತ್ತಾ ಬಂದು ನಿಂತಿತು. ಬೆಳಗಿನ ಚಳಿಗೆ ಡೆಹ್ರಾಡೂನ್‌ ಸ್ಟೇಷನ್ ತಣ್ಣಗೆ ಮಲಗಿತ್ತು. ಚಾರಟೆ ಹುಳುವಂತೆ ಮುದುಡಿ ಕುಳಿತ ಪೊಲೀಸಿನವರಲ್ಲಿ ಹೋಟೆಲ್ ವಿಳಾಸ ಕೇಳಿ ಹೊರಬಿದ್ದೆ. ಚಳಿಯ ಮೊದಲ ಆಲಿಂಗನಕ್ಕೆ ಮನಸೋತೆ. ಬೆಳ್ಳಗಿನ ಹಿಮ ಹೊದ್ದ ಗೂಡಂಗಡಿಯಲ್ಲಿ ಚಹ ಕುಡಿದು ವಿಳಾಸ ಹುಡುಕುತ್ತಾ ಹೊಟೆಲ್ ಕಡೆಗೆ ಹೊರಟೆ.

ಮರುದಿನ ಬೆಳಿಗ್ಗೆ ಡೆಹ್ರಾಡೂನ್‍ನಿಂದ ಸಾಂಕ್ರಿ ಎಂಬ ಹಳ್ಳಿಗೆ ಪ್ರಯಾಣ ನಿಗದಿಯಾಗಿತ್ತು. ದೊಡ್ಡ ದೊಡ್ಡ ಪೈನ್ ಮರಗಳ ನೆರಳುಗಳ ಉದ್ದದ ಹಾದಿ. ಹೋದ ಹೋದಲ್ಲೆಲ್ಲಾ ನರ್ಮದೆ ನಮ್ಮನ್ನೇ ಹಿಂಬಾಲಿಸುತ್ತಿದ್ದಳು. ಊರೊಂದರಲ್ಲಿ ಇಳಿದು –ನೀರು ಕಾಣದೇ ವರ್ಷವಾದವರಂತೆ ಹರ್ಷಿಸುತ್ತಾ– ಸ್ಪಟಿಕಶುಭ್ರ ನರ್ಮದೆಯಲಿ ಮುಳುಗಿ ಬಂದೆವು. ಮುಂದೆ ನಮ್ಮ ಪ್ರಯಾಣದುದ್ದಕ್ಕೂ ಜೊತೆಯಾದವಳು ಟೋನ್ಜ್ಸ್ ಎಂಬ ನರ್ಮದೆಯ ಉಪನದಿ. ನಡುಮಧ್ಯಾಹ್ನ ಪಹಾಡಿ ಅನ್ನ, ದಾಲ್ ತಡಕಾ, ಪಾವಡಿ ರೋಟಿಯ ತುಣುಕು ನಮ್ಮ ಹೊಟ್ಟೆಯನ್ನು ಸೇರಿತು!

ADVERTISEMENT

ಬೆಟ್ಟದ ಇಳಿಜಾರು ಕಡಿದು ಕಟ್ಟಿದ ಕಟ್ಟಿಗೆಯ ಸಣ್ಣ ಮನೆಗಳು. ಮನೆಯ ಮೇಲೋ, ಮರದ ಮೇಲೋ ಒಣಗಿಸುತ್ತಿದ್ದ ಒಣ ಹುಲ್ಲಿನ ಕಂತೆಗಳು... ಎಲೆ ಉದುರಿಸಿಕೊಂಡು ಮರುಕ ಹುಟ್ಟಿಸುವ ಬೋಳು ಬೋಳಾದ ಸೇಬಿನ ತೋಪುಗಳು ಮನೆಯ ಪಕ್ಕ ಸುಮ್ಮನೆ ನಿಂತಿದ್ದವು.

ಸಂಜೆ ನಾಲ್ಕರ ಸುಮಾರಿಗೆ ಚಾರಣದ ಹೆಬ್ಬಾಗಿಲಾದ ಸಾಂಕ್ರಿ ಎಂಬ ಪುಟ್ಟ ಹಳ್ಳಿಯಲ್ಲಿದ್ದೆವು. ಅಂದು ಅಲ್ಲಿ ಚಾರಣಿಗರ ಸಂತೆ. ಬಹುಬೇಗ ಕಟ್ಟಿಗೆಯ ವಿಶಿಷ್ಟ ಕುಟೀರಗಳಲ್ಲಿ ನಾವು ನಿದ್ದೆಗೆ ಬಿದ್ದದ್ದೇ ತಿಳಿಯಲಿಲ್ಲ. ಎರಡನೆಯ ದಿನವೇ ಹಿಮಾಲಯದ ಸನ್ನಿಧಿಯಲ್ಲಿ ನನ್ನ ಎರಡನೇ ಚಾರಣ ಶುರುವಿಟ್ಟುಕೊಂಡಿತು.

ಮೊದಲ್ಗೊಂಡ ಮಂದ್ರ
ತಿಂಡಿ ತಿಂದು, ಚಪಾತಿ ಕಟ್ಟಿಸಿಕೊಂಡು ಪೈನ್ ಮರಗಳ ಸೆರಗಿಗೆ ಬಿದ್ದೆವು. ಪ್ರಪಾತಕ್ಕೆ ಬೋರಲು ಬಿದ್ದ ದಾರಿಗಳಲ್ಲಿ ಉಸಿರು ಬಿಗಿ ಹಿಡಿದು ಜಿಪ್ಸಿಯಲ್ಲಿ ಪ್ರಯಾಣಿಸಿ ತಲೂಕಾ ಎಂಬ ಪುಟ್ಟ ಹಳ್ಳಿ ಕಡೆಗೆ ಹೊರಟೆವು. ಅದು12 ಕಿ.ಮೀ. ದೂರದ ಹಾದಿ. ಹನುಮನನ್ನು ನೆನಪಿಸುವ ಇಬ್ಬರು ಜಿಪ್ಸಿ ಮೇಲೇರಿ ಕುಳಿತರು! ಮಂಗನಂತೆ ಎಗರಾಡುತ್ತ ನಮ್ಮ ಜೀಪು ತೊರೆಗಳ ಹತ್ತಿ ಇಳಿಯಿತು.

ಕೆಳಗೆ ನೂರಾರು ಅಡಿಯ ಪ್ರಪಾತ... ಅದನ್ನು ನೋಡಿ ಜೀವ ಒಮ್ಮೆಗೆ ಜಗ್ ಎಂದು ತಂದೆ, ತಾಯಿ, ಹೆಂಡತಿ, ಮಕ್ಕಳ ನೆನಪು ಮಾಡಿಕೊಟ್ಟಿತು. ಅಂತೂ ಅವನ್ನೆಲ್ಲಾ ದಾಟಿಕೊಂಡು ಕೇವಲ ಐದಾರು ಮನೆಗಳಿರುವ ಪುಟ್ಟ ಪುಟಾಣಿ ಹಳ್ಳಿ ತಲೂಕಾ ತಲುಪಿದೆವು. ಇಲ್ಲಿಂದಲೇ ನಮ್ಮ ಮೆರವಣಿಗೆ ಮೊದಲ್ಗೊಂಡಿತು. ಚಡ್ಡಿ ಹಾಕದ ಮಕ್ಕಳೆಲ್ಲಾ ಫ್ಯಾಷನ್ ಷೋಗೆ ನಿಂತಂತೆ ನಮ್ಮ ಕ್ಯಾಮೆರಾ ಪೋಸು ಕೊಟ್ಟರು!

ಎಡಕ್ಕೆ ಸುಪಿನ್ ನದಿ. ಬಲಕ್ಕೆ ಪೈನ್‌ ಮರಗಳ ಕಾಡು. ಸುತ್ತಲೂ ಕಾಡು ಹೂಗಳ ಮೆರವಣಿಗೆ. ಹಿಮಾಲಯದ ಹಕ್ಕಿಗಳ ಇಂಚರ. ಹಿಮಸುಂದರಿಯರ ತೆಕ್ಕೆಯಲ್ಲಿ ಮೋಹಿತರಾಗಿ, ಸಾಮಾನು ಹೊತ್ತ ಹೇಸರಗತ್ತೆಗಳು ನಮ್ಮ ಜೊತೆ ಪೈಪೋಟಿಗೆ ಬಿದ್ದು ಗುಡ್ಡ ಏರತೊಡಗಿದವು. ಐದಾರು ಸಣ್ಣ ದೊಡ್ಡ ತೊರೆಗಳನ್ನೆಲ್ಲಾ ಹತ್ತಿಳಿದು ಅತ್ಯಂತ ಸಪಾಟಾದ ಜಾಗದಲ್ಲಿ ಕುಳಿತು ಚಾರಣಿಗರು ಪಟೊಗೆ ಪೋಸ್ ಕೊಡತೊಡಗಿದರು. ಅಲ್ಲೇ ಬಲದ ಏರಿನಲ್ಲಿ ದೊಡ್ಡ ಗುಡ್ಡದಲ್ಲಿ ಡಟ್‍ಮೀರ್ ಎಂಬ ಪುಟ್ಟ ಹಳ್ಳಿ. ಕತ್ತೆತ್ತಿ ನೋಡಿದೆ ದೊಡ್ಡ ಬೆಟ್ಟದ ನೆತ್ತಿಯಲ್ಲಿತ್ತು! ಮನುಷ್ಯನ ಇಚ್ಛಾಶಕ್ತಿಗೆ ಚಕಿತನಾದೆ.

ತಲೂಕಾ ಹಳ್ಳಿಯ ಝರಿಯೊಂದರಲ್ಲಿ ಉತ್ಪಾದನೆಗೊಂಡ ವಿದ್ಯುತ್ ಅಲ್ಲಿವರೆಗೆ ಬಂದಿತ್ತು. ರಜೆ ಮುಗಿಸಿ ರಣಬೀರ್ ಎಂಬ ಡಟಮೀರ್ ಹಳ್ಳಿಯ ಹುಡುಗ ದೂರದ ಡೆಹ್ರಾಡೂನ್‍ಗೆ ಎಂ.ಎ. ಮಾಡಲು ಹೊರಟ್ಟಿದ್ದ. ಕಷ್ಟ ಸುಖ ವಿಚಾರಿಸಿದೆ. ಪುಣ್ಯಾತ್ಮ ಬರೋಬ್ಬರಿ 25 ಕಿ.ಮೀ. ನಡೆದೇ ಹೊರಟಿದ್ದ!

ನಾಚಿಕೆ ಸ್ವಭಾವದ ಹಳ್ಳಿ ಹೆಂಗಸರು ಬೆಳ್ಳಂಬೆಳಿಗ್ಗೆ ಎದ್ದು ಏನೋ ಕೊಯ್ದು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಮಕ್ಕಳೂ ತಮ್ಮ ಬೆನ್ನ ಹಿಂದೆ ಒಂದೊಂದು ಬುಟ್ಟಿ ನೇತಾಡಿಸಿಕೊಂಡಿದ್ದರು. ಅವರಲ್ಲಿ ಕೇಳಬೇಕಿದ್ದೆಲ್ಲಾ ನನ್ನಲ್ಲೇ ಕರಗಿತು.

ಪೌನಿಗರಾತ್ ಎಂಬ ಹಳ್ಳಿಯೊಂದು ಸುಪಿನ್‌ ನದಿಯ ಎಡ ದಂಡೆಯಲ್ಲಿತ್ತು. ಅಲ್ಲಿ ಸಿಕ್ಕವನೇ ಸುರೇಶ್ ಎಂಬ ದನಗಾಹಿ ಮತ್ತು ಪುಟಾಣಿ ಮಕ್ಕಳು. ಸಕ್ಕರೆಯ ಸಹವಾಸವೇ ಇಲ್ಲದ ಇಲ್ಲಿನ ಮಕ್ಕಳು ಚಾಕೊಲೇಟ್‍ಗಾಗಿ ಹಪಹಪಿಸುತ್ತಿದ್ದರು. ಶಾಲೆ ಇದೆಯೇ ಇಲ್ಲಿ ಎಂದು ಸುರೇಶ್‌ನಲ್ಲಿ ವಿಚಾರಿಸಿದೆ.

‘200 ಮಕ್ಕಳು ಮತ್ತು ಎಂಟು ಜನ ಶಿಕ್ಷಕರಿರುವ ಶಾಲೆಯೊಂದು ಇಲ್ಲಿದೆ’. ಎಂದು ನನ್ನ ದಂಗುಬಡಿಸಿದ! ‘ದೂರದ ಓಸ್ಲಾ ಎಂಬ ಹಳ್ಳಿಯಿಂದ ಮಕ್ಕಳು ಶಾಲೆಗೆ ಐದು ಕಿ.ಮೀ. ನಡೆದೇ ಬರುತ್ತಾರೆ.’ ಎಂದ. ಶಾಲೆಗೆ ಭೇಟಿ ಕೊಡಬೇಕೆನಿಸಿತು. ಆದರೆ ಭಾನುವಾರ. ಸಂಜೆ ಐದಕ್ಕೆ ಕ್ಯಾಂಪ್ ತಲುಪಿದಾಗ ಬಿಸಿ ಬಿಸಿ ಬ್ರೆಡ್ ಬೋಂಡಾ ನಮಗಾಗಿ ಕಾದಿತ್ತು.

ಹಿಮಾಲಯ ಕಣಿವೆಯ ಚಂದದ ನೋಟ

ಪುರಾತನ ಹಳ್ಳಿ ಓಸ್ಲಾದೆಡೆಗೆ
ಬೆಳ್ಳಂಬೆಳಿಗ್ಗೆ ಬೇಡವೆಂದರೂ ತಣ್ಣೀರಲ್ಲಿ ಬ್ರಷ್ ಮಾಡಿದ ನಮ್ಮೆಲ್ಲರ ಬೆರಳು ಬೆಂಡೆಕಾಯಿಯಂತಾಗಿತ್ತು. ಮೈಚೆಲ್ಲಿ ಮಲಗಿದ್ದ ತಣ್ಣನೆ ಸೂರ್ಯ ಆಗಷ್ಟೇ ಬಂದಿದ್ದ. ಸಮುದ್ರಮಟ್ಟದಿಂದ 10,000 ಅಡಿ ಎತ್ತರದ ಹಿಮಾಲಯದ ಅತಿ ಪುರಾತನ ಪುಟಾಣಿ ಹಳ್ಳಿ ಓಸ್ಲಾದ ತುಡಿತವೇ ನನ್ನನ್ನು ಇಲ್ಲಿಗೆ ಎಳೆದು ತಂದಿದ್ದು. ಹಾಗಾಗಿ ಪತರುಗುಟ್ಟಿಸುವ ಚಳಿ ಲೆಕ್ಕಿಸದೇ ಓಸ್ಲಾದೆಡೆಗೆ ದೌಡಾಯಿಸಿದೆ.

ಇಲ್ಲಿನ ಜನರಿಗೆ ಕುರಿ, ಹಸು ಸಾಕಣೆ, ಕೃಷಿಯೇ ಪ್ರಮುಖ ಉದ್ಯೋಗ. ಕುರಿ ಕಾಯುವವರು ಕುರಿಗಳನ್ನು ಮೇಯಿಸಲು ಹೊರಟಿದ್ದರಷ್ಟೇ. ಅವರಲ್ಲಿ ಹೆಣ್ಮಕ್ಕಳೂ ಇದ್ದರು. ಕ್ಯಾಮೆರಾ ಕ್ಲಿಕ್ಕಿಸುತ್ತಲೇ ನಾಚುತ್ತಿದ್ದರು. ಕೆಲವರಂತೂ ರಾತ್ರಿ ಬಿದ್ದ ಚಳಿಗೆ ಏಳುತ್ತಿದ್ದರಷ್ಟೇ. ಚಳಿ ಕಾಯಿಸುತ್ತಾ ಕುಳಿತ ಮಕ್ಕಳು, ಹೆಂಗಸರು, ಗಂಡಸರು ನಮ್ಮನ್ನೇ ನೋಡುತ್ತಿದ್ದರು.

ಹರಿಯಾಣದ ಹುಡುಗಿಯೊಬ್ಬಳು ಈ ಹಳ್ಳಿಯವನನ್ನೇ ಮದುವೆಯಾಗಿ ಇಲ್ಲೇ ಇದ್ದಾಳೆಂದು ಗೈಡ್ ಹೇಳಿದ. ಬದುಕೆಷ್ಟು ವಿಚಿತ್ರವೆನಿಸಿತು. ಇಲ್ಲಿ ಆಚರಿಸುವ ಐದು ಹಬ್ಬಗಳ ಹೆಸರು ಹೇಳಿದ. ಈಗ ಒಂದೂ ನೆನಪಿಲ್ಲ. ಬೆಳಿಗ್ಗೆ ಹನ್ನೊಂದರ ಸುಮಾರಿಗೇ ದೊಡ್ಡ ದೊಡ್ಡ ಹೊರೆ ಹುಲ್ಲು ಹೊತ್ತು ಮನೆ ಕಡೆ ಬರುತ್ತಿದ್ದರು. ಅಂಜಲಿ ಎಂಬ ಪುಟ್ಟ ಹುಡುಗಿ ನಮಗೆ ಜೊತೆಯಾದಳು. ದೊಡ್ಡದೊಂದು ಕೋಲು, ಕತ್ತಿ ಹಿಡಿದು ಕಲ್ ಕತೀಯಾಧಾರ್ ಕಡೆ ಹೊರಟಿದ್ದಳು.

ಮೂರಂತಸ್ತಿನ ಮನೆ

ಹಿಮಾಲಯದ ದಿವ್ಯ ಏಕಾಂತದಲ್ಲಿ ಕರಗಿ
ದೇವಾಲಯ ದಾಟಿಕೊಂಡರೆ ಏರು ತಗ್ಗುಗಳ ಕಠಿಣ ಹಾದಿ. ಒಂದೆರಡು ಕಡೆ ಗುಡ್ಡ ಜರಿದಿತ್ತು. ಒಂದು ಹೆಜ್ಜೆ ತಪ್ಪಿದರೆ ನೇರ ಯಮಲೋಕದ ಹೆದ್ದಾರಿಗೆ! ಇಂತಹ ದಾರಿಗಳ ದಾಟಿ ಕಲ್ ಕತೀಯಾಧಾರ್‌ ಎಂಬ ಕ್ಯಾಂಪ್ ಸೈಟ್‍ಗೆ ಬಂದಿಳಿದೆವು. ಎತ್ತರದ ಜಾಗದಲ್ಲಿ ನಮ್ಮ ಎರಡನೆಯ ಕ್ಯಾಂಪ್. ಬಿಸಿ ಬಿಸಿ ಮ್ಯಾಕರೋನಿ ನಮ್ಮ ಹೊಟ್ಟೆ ತಣಿಸಿತು. ಪರ್ವತಗಳು ಫೋಟೊ ಫ್ರೇಮ್ ಹಾಕಿಸಿಕೊಂಡಂತೆ ಸಾಲಾಗಿ ನಮ್ಮೆದುರು ಕೈಕಟ್ಟಿ ನಿಂತಿದ್ದವು!

ಎದುರಿನ ದೃಶ್ಯ ಬಣ್ಣಿಸಲಸದಳ. ಗುಟುರು ಚಳಿ ನಮ್ಮ ಗುಡಾರದೊಳಹೊಕ್ಕಿತು. ಚಳಿ ಓಡಿಸಲು ಸಣ್ಣ ಬೆಂಕಿ ಉರಿಸಿದೆವು. ಬೆಂಕಿಯ ಸುತ್ತಲೂ ಕೂತು ಕೆಲವರು ಅವರು ಬರೆದ ಕವನ ಓದಿ ಕಾವ್ಯದ ಮಳೆಯಲ್ಲಿ ಮಿಂದೆದ್ದೆರು. ಕಾವ್ಯ ಕಮ್ಮಟಕ್ಕೆ ಆಕಾಶದ ರಾಶಿ ರಾಶಿ ನಕ್ಷತ್ರಗಳೇ ಕೇಳುಗರು. ಕಣ್ಣೂರಲು ಒಂದೈದು ಸೆಂಟ್ಸ್ ಜಾಗ ಉಳಿಸದೆ ನಕ್ಷತ್ರಗಳೇ ತುಂಬಿದ್ದವು. ಅಬ್ಬಾ ನಕ್ಷತ್ರ ಸಂತೆ! ಭಾವ ಪರವಶನಾದೆ. ಮಾಲಿನ್ಯರಹಿತ ಆಗಸ ನೋಡುವ ಆನಂದವ ಬಣ್ಣಿಸಲು ಸಾಧ್ಯವಿಲ್ಲ.

ಸಂಜೆ ಎಂಟಕ್ಕೆಲ್ಲಾ ಊಟ ಮುಗಿಸಿ ನಿದ್ರಾಚೀಲದೊಳಗೆ ಹೂತು ಹೋದೆವು. ಹಿಮಾಲಯದ ದಿವ್ಯ ಏಕಾಂತದ ತುಣುಕೊಂದು ನಿಮ್ಮ ಬಳಿಯೇ ಇರುವಂಥ ಧನ್ಯತಾ ಭಾವ ನಮ್ಮನ್ನಾವರಿಸಿತು. ನಿದ್ದೆ ನಮ್ಮನ್ನು ಅವುಚಿಕೊಂಡದ್ದು ಗೊತ್ತಾಗಲೇ ಇಲ್ಲ.

ಹೂ ಹಾಸಿನ ಅಂಗಳದಲಿ ನಿಂತು
ಹರ್ ಕಿ ದುನ್ ಶಿಖರ, ಆಟಾ ಪರ್ವತಗಳು ತಮ್ಮಿರುವನ್ನು ಮೊದಲ ಹೆಜ್ಜೆಗೇ ಸಾರಿದ್ದವು. ಹಿಮಾಲಯದ ಜಲಸುಂದರಿ ತನ್ನ ಮಾಟ ತೋರುತ್ತಾ ಜಲಧಾರೆಯಾಗಿ ಹರಿಯುತ್ತಿದ್ದಳು. ಅವಳ ತೆಕ್ಕೆ ಬಳಸಿ, ಮರದ ಸಂಕ ದಾಟಿ ಏರುದಾರಿ ಏರಿದಾಗ ತೆರೆದುಕೊಂಡ ವಿಶಾಲ ಬಯಲ ತುಂಬ ಚಿಟ್ಟೆ ಹೂಗಳ ವನ! ವಿಶಿಷ್ಟ ಪುಷ್ಪಗಳ ಗಂಧಕ್ಕೆ ಮೂಗರಳಿ ಮೈ-ಮನಗಳಿಗೆ ಪುಳಕ. ಎಡಕ್ಕೂ ಬಲಕ್ಕೂ ಹೂ ಹಾಸಿನ ದಾರಿ. ಮರಗಳೆಲ್ಲಾ ಗ್ರೀಷ್ಮ ಬರುವ ಸೂಚನೆಗೆ ಎಲೆ ಉದುರಿಸಿಕೊಂಡು ನಿಂತಿದ್ದವು.

ಭಾರತದ ಅತಿ ಸುಂದರ ಚಾರಣಗಳಲ್ಲಿ ಹರ್ ಕಿ ದುನ್ ಕೂಡ ಒಂದು. ಇಲ್ಲಿಂದ ಮುಂದೆ ಸಿಗುವ ಅನೇಕ ಝರಿಗಳನ್ನು ದಾಟಿ ಒಂದು ಗಂಟೆಯಷ್ಟೊತ್ತಿಗೆ ಕೊನೆಯ ಕ್ಯಾಂಪ್‍ಗೆ ಬಂದು ತಲುಪಿದ್ದೆವು. ತಲುಪುತ್ತಲೇ ಬಿಸಿ ಬಿಸಿ ಊಟ ನಮ್ಮನ್ನು ಸ್ವಾಗತಿಸಿತು. ಎದುರಿಗಿದ್ದ ಹರ್ ಕಿ ದುನ್ ಮತ್ತು ಸ್ವರ್ಗಾರೋಹಿಣಿ ಪರ್ವತಗಳ ತಪ್ಪಲಿನಲ್ಲಿ ಮಗುವಿನಂತೆ ಬಟ್ಟಲು ಹರವಿಕೊಂಡು ಊಟ ಮಾಡಿದೆವು. ವಿಶಿಷ್ಟ ರುಚಿಯ ದಾಲ್ ಹೊಟ್ಟೆ ತಣಿಸಿತು. ಕ್ಯಾಂಪ್ ಪಕ್ಕದ ಬೆಟ್ಟಗಳನ್ನೇರಿ ಸುತ್ತಲಿನ ನೋಟಕ್ಕೆ ಸಾಕ್ಷಿಯಾದೆವು. ಅಮ್ಮ ಹಚ್ಚಿಟ್ಟ ಹಣತೆಯಂತಾಗಿದ್ದ ಸೂರ್ಯಕಿರಣಕ್ಕೆ ಹರ್ ಕಿ ದುನ್ ಶಿಖರ ಬೆಳಗುತ್ತಿತ್ತು. ಯಾರೂ ಏರದ ಸ್ವರ್ಗಾರೋಹಿಣಿ ಶಿಖರ ಚಳಿಗೆ ಮೋಡ ಹೊದ್ದು ಮಲಗಲು ತಯಾರಾಗಿತ್ತು. ಸಂಜೆಯ ಬೆರಗನ್ನು ಕ್ಯಾಮರಾದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ.

ಮಾರನೆಯ ದಿನ ನಸುಕಿಗೇ ಎದ್ದು ಸುಮಾರು ಏಳು ಕಿ.ಮೀ ದೂರದ ಗ್ಲೇಶಿಯರ್ ನೋಡಲು ಹೋಗಿ ಬಂದೆವು. ನಡುವೆ ಕಡೆದಾದ ಹಾದಿಯಲ್ಲಿ ನಾವು ಮುಂದೆ ಹೋಗಲೂ ಆಗದೇ ಹಿಂದೆ ಬರಲೂ ಆಗದೇ ಜಾಮ್ ಆದೆವು. ನಮ್ಮ ಟೀಮ್‌ ಲೀಡ್ ಬಂದು ನಮ್ಮನ್ನು ಮುಂದೆ ಕರೆದೊಯ್ದ. ಕೆಲವರು ಗ್ಲೇಶಿಯರ್‌ವರೆಗೆ ಹೋಗಿ ಬಂದರು. ನಾವು ಮುಕ್ಕಾಲು ದಾರಿ ಸವೆಸಿ ಸ್ವರ್ಗಾರೋಹಿಣಿಯ ಸರಿ ಸುಮಾರು ಸಮೀಪದವರೆಗೆ ಹೋಗಿ ಹಿಂದಿರುಗಿದೆವು.

ನೆನಪಿನೋಕಳಿಯಲ್ಲಿ ಮೀಯುವಂತೆ ಮಾಡಿದ ಚಾರಣ ಪುನಃ ಸಾಂಕ್ರಿಯಲ್ಲಿ ಕೊನೆಗೊಂಡಿತು. ಒಂದಿಷ್ಟು ಪೂರ್ವತಯಾರಿ ಮತ್ತು ಮೂವತ್ತು ಸಾವಿರ ರೂಪಾಯಿ ಇದ್ದರೆ ಈ ಚಾರಣ ಮಾಡಿ ಮುಗಿಸಬಹುದು.

ಮನೆಗಳ ವಿನ್ಯಾಸ
ಇಲ್ಲಿನ ಮನೆಗಳು ನಾಲ್ಕು ಹಂತದವು. ಮೊದಲನೇ ಹಂತ ದನಗಳಿಗೆ. ಎರಡನೆಯದು ಕುರಿಗಳಿಗೆ. ಮೂರನೆಯದು ಹುಲ್ಲು ಮತ್ತಿತರ ಸಾಮಾನು ತುಂಬಿಸಲು. ಕೊನೆಯದ್ದು ವಾಸಕ್ಕೆ. ಹಿಮ ಸುರಿವ ಡಿಸೆಂಬರ್‌ನಿಂದ ಮಾರ್ಚ್‌ ಕೊನೆಯವರೆಗೆ ಇಲ್ಲಿನವರಿಗೆ ದಿವ್ಯ ಏಕಾಂತ.

ದುರ್ಯೋಧನನ ದೇವಾಲಯ

ದುರ್ಯೋಧನನ ಮಂದಿರದಲ್ಲಿ!
ಇಲ್ಲಿ ಭಯ ಭಕ್ತಿಯಿಂದ ದುರ್ಯೋದನನಿಗೆ ನಮಿಸುತ್ತಾರೆ! ಅರೆರೆ, ದುರ್ಯೋಧನನಿಗಾ ಎಂದು ಹುಬ್ಬೇರಿಸಬೇಡಿ. ಅವನಿಗೆಂದೇ ಒಂದು ದೇವಾಲಯವಿದೆ ಉತ್ತರಾಖಂಡದಲ್ಲಿ. ಅಪಕೀರ್ತಿಗಂಜಿಯೋ ಏನೋ ಅದನ್ನು ಈಗ ಶಿವನ ದೇವಾಲಯವೆಂದು ಹೇಳುತ್ತಾರೆ. ಪೂರ್ಣ ದೇವಾಲಯವನ್ನು ಮರದಿಂದ ನಿರ್ಮಿಸಲಾಗಿದೆ. ಹೊರಮೈಯನ್ನು ಸುಂದರ ಕೆತ್ತನೆಗಳಿಂದ ಸಿಂಗರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.