ಯಕ್ಷ ಸಿಂಚನ ಟ್ರಸ್ಟ್ನ 7ನೇ ವಾರ್ಷಿಕೋತ್ಸವ ಈಚೆಗೆ ಬನಶಂಕರಿಯ ಅವರ್ ಸ್ಕೂಲ್ನ ಶ್ರೀವಿದ್ಯಾ ಸಭಾಂಗಣದಲ್ಲಿ ನಡೆಯಿತು. ಗುರು ಕೃಷ್ಣಮೂರ್ತಿ ತುಂಗರ ಸಾರಥ್ಯದ ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರು ಪ್ರದರ್ಶಿಸಿದ ‘ರತ್ನಾವತಿ ಕಲ್ಯಾಣ’ ಯಕ್ಷಗಾನದೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಭದ್ರಸೇನನಾಗಿ ಕುಮಾರ ಕೌಸ್ತುಭ ತಮ್ಮ ಸ್ಪಷ್ಟ ಮಾತುಗಾರಿಕೆ ಮತ್ತು ಗಂಭೀರ ಅಭಿನಯದಿಂದ ಗಮನ ಸೆಳೆದರೆ, ವತ್ಸಾಖ್ಯನಾಗಿ ಕುಮಾರಿ ಚಿತ್ಕಲಾ ಕೆ.ತುಂಗ ಮನೋಜ್ಞ ಅಭಿನಯ ಹಾಗೂ ಮಾತುಗಾರಿಕೆಯಿಂದ ಪ್ರೇಕ್ಷಕರ ಮನಸೂರೆಗೊಂಡರು. ರತ್ನಾವತಿಯಾಗಿ ಪಾತ್ರನಿರ್ವಹಿಸಿದ ಆಯುಶ್ ಅಭಿನಯ ಮತ್ತು ಮಾತಿನಿಂದ ಪ್ರೇಕ್ಷಕರ ಮನಮುಟ್ಟಿದರು.
ಕಿರಾತ ವಿಂಧ್ಯಕೇತನಾಗಿ ಕುಮಾರ ಹೇಮಂತ್ ಮತ್ತೋಡ್ ಉತ್ತಮವಾಗಿ ಅಭಿನಯಿಸಿದರು. ಹನುಮನಾಯ್ಕನಾಗಿ ಕುಮಾರ ಉತ್ತಮ್ ಅದ್ಭುತ ನಗೆಚಟಾಕಿಗಳಿಂದ ಜನರನ್ನು ನಕ್ಕು ನಲಿಸಿದರು. ಚುರುಕಿನ ಚಿತ್ರಧ್ವಜನಾಗಿ ಕುಮಾರಿ ಶ್ರಾವ್ಯ ಎಲ್ಲರ ಮನಸೂರೆಗೊಂಡರು. ನಂತರ ಯಕ್ಷಸಿಂಚನ ತಂಡ ಕವಿ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ರಚಿಸಿದ ಕಚ- ದೇವಯಾನಿ ಪ್ರಸಂಗವನ್ನು ಪ್ರದರ್ಶಿಸಿತು.
ಯಕ್ಷಗಾನ ಛಾಯಾಗ್ರಹಣದಲ್ಲಿ ಸಾಧನೆ ಮಾಡಿದ ಛಾಯಾಗ್ರಾಹಕ ಮನೋಹರ್ ಎಸ್. ಕುಂದರ್ ಅವರನ್ನು ಗೌರವಿಸಲಾಯಿತು.
ಮಣೂರು ವಾಸುದೇವ ಮಯ್ಯ, ಮಹಾಬಲಮೂರ್ತಿ ಕೊಡ್ಲೆಕೆರೆ, ಸುಧಾಕಿರಣ ಅಧಿಕಶ್ರೇಣಿ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.