ADVERTISEMENT

ಉಳಿಸಬೇಕಿದೆ ‘ವಿಜ್ಞಾನ ರಾಜಧಾನಿ’ ಪಟ್ಟ!

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2016, 6:06 IST
Last Updated 4 ನವೆಂಬರ್ 2016, 6:06 IST
ಸಿಎನ್‌ಆರ್‌ ರಾವ್‌
ಸಿಎನ್‌ಆರ್‌ ರಾವ್‌   
ಕನ್ನಡದಲ್ಲೇ ಬೇಕು ಮಾಧ್ಯಮಿಕ ಶಿಕ್ಷಣ
ಮಾತೃಭಾಷೆಯಲ್ಲಿ ಓದಿದರೆ ವಿಜ್ಞಾನ ರಂಗಕ್ಕೆ ಧುಮುಕುವುದು ಕಷ್ಟ ಎಂಬ ಅಭಿಪ್ರಾಯ ಬಹುತೇಕ ಪಾಲಕರಲ್ಲಿದೆ. ಆದರೆ, ಇಂತಹ ಆತಂಕಕ್ಕೆ ಯಾವುದೇ ಕಾರಣವಿಲ್ಲ. ಮಾಧ್ಯಮಿಕ ಶಿಕ್ಷಣದವರೆಗೆ ಮಾತೃಭಾಷೆಯೇ ಕಲಿಕಾ ಮಾಧ್ಯಮವಾದರೆ ಮಕ್ಕಳಿಗೆ ಗ್ರಹಿಕೆ ಸುಲಭ. ನಾನು ವಿಜ್ಞಾನದಲ್ಲಿ ಇವತ್ತು ಏನಾದರೂ ಸಾಧನೆ ಮಾಡಿದ್ದರೆ ಮಾಧ್ಯಮಿಕ ಶಿಕ್ಷಣದವರೆಗೆ ನನಗೆ ಮಾತೃಭಾಷೆಯಾದ ಕನ್ನಡದಲ್ಲಿ ಶಿಕ್ಷಣ ದೊರೆತದ್ದೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಹೈಸ್ಕೂಲ್‌ ಹೆಡ್‌ ಮಾಸ್ಟರ್‌ ಆಗಿದ್ದ ನಮ್ಮಪ್ಪ, ‘ಇಂಗ್ಲಿಷ್‌ ಭಾಷೆಯನ್ನು ಕಲಿತುಕೊ. ಆದರೆ, ಕನ್ನಡ ಮಾಧ್ಯಮದಲ್ಲೇ ಓದು’ ಎಂದು ಹೇಳಿದ್ದರು. ರಾಜ್ಯದ ಜನರಿಗೆ ನನ್ನ ಹಿತವಚನವೂ ಅದೇ: ಮಕ್ಕಳಿಗೆ ಇಂಗ್ಲಿಷ್‌ ಭಾಷೆಯನ್ನು ಖಂಡಿತವಾಗಿ ಕಲಿಸಿ, ಹೈಸ್ಕೂಲ್‌ವರೆಗೆ ಕನ್ನಡದಲ್ಲೇ ಶಿಕ್ಷಣ ಕೊಡಿಸಿ. ವಿಜ್ಞಾನದ ಆಳವನ್ನು ಅರಗಿಸಿಕೊಳ್ಳಲು ತಕ್ಕ ಬುನಾದಿಯನ್ನು ಅದು ಹಾಕುತ್ತದೆ.
 
ನಮ್ಮ ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಎರಡು ‘ದಕ್ಷಿಣ ಕೊರಿಯಾ’ಗಳನ್ನೇ ಸೃಷ್ಟಿಸಬಹುದು, ಗೊತ್ತೆ? ಆದರೆ, ಆ ಪುಟ್ಟ ದೇಶ ಸಂಶೋಧನಾ ಕ್ಷೇತ್ರದ ಹೂಡಿಕೆಯಲ್ಲಿ ‘ನೂರಾರು ಕರ್ನಾಟಕ’ಗಳ ಸಾಧನೆಯನ್ನು ಮೀರಿ ನಿಂತಿದೆ. ವಿಜ್ಞಾನ ಕ್ಷೇತ್ರದಲ್ಲಿ ನಾವು ಹಿಂದೆ ಬಿದ್ದಿದ್ದೇವೆ ಎನ್ನುವ ಮಾತು ಕೇಳಿಬಂದಾಗಲೆಲ್ಲ ಈ ಎರಡೂ ಅಂತರಗಳ ಚಿತ್ರಣ ಮನದಂಗಳದಲ್ಲಿ ಥಟ್ಟಂತ ಮೂಡುತ್ತದೆ.
 
‘ರಾಜ್ಯದಲ್ಲಿ ವಿಜ್ಞಾನದ ಅಭಿವೃದ್ಧಿಗೆ ನಾವೀಗ ಏನು ಮಾಡಬೇಕು’ ಎನ್ನುವ ಪ್ರಶ್ನೆಗೆ ಬಳಿಕ ಬರೋಣ. ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ; ರಾಜ್ಯದಲ್ಲಿ ಆಧುನಿಕ ವಿಜ್ಞಾನಕ್ಕೆ ನೂರು ವರ್ಷಗಳ ಇತಿಹಾಸ ಉಂಟು. ಭಾರತದಲ್ಲಿ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಜಮ್‌ಶೆಡ್‌ಜಿ ಟಾಟಾ ಅವರು ಬ್ರಿಟಿಷ್‌ ಆಡಳಿತದ ಮುಂದೆ ಪ್ರಸ್ತಾವ ಇಟ್ಟಾಗ, ಸಾರಾಸಗಟಾಗಿ ತಿರಸ್ಕರಿಸಲಾಯಿತು. ಆದರೆ, ಟಾಟಾ ಅಷ್ಟಕ್ಕೆ ಬಿಡಲಿಲ್ಲ. ಮತ್ತೆ ಮನವಿ ಸಲ್ಲಿಸಿದರು. ಆ ಮನವಿ ಕುರಿತಂತೆ ಪರಿಶೀಲಿಸಲು ರಾಯಲ್‌ ಸೊಸೈಟಿಯ ಸದಸ್ಯರಾಗಿದ್ದ ಸರ್‌ ವಿಲಿಯಂ ರಾಮ್ಸೆ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು.
 
ಭಾರತಕ್ಕೆ ವಿಜ್ಞಾನ ಸಂಸ್ಥೆಯೊಂದರ ಅಗತ್ಯವಿದೆ ಎಂಬ ವರದಿಯನ್ನು ಆ ಸಮಿತಿ ನೀಡಿತು. ಹಾಗಾದರೆ ಆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸುವುದು ಎಂಬ ಪ್ರಶ್ನೆ ಎದುರಾದಾಗ, ಬೆಂಗಳೂರಿನ ಜತೆಗೆ ಸ್ಪರ್ಧೆ ಒಡ್ಡಿದ್ದು ಈಗಿನ ಉತ್ತರಾಖಂಡದ ರೂರ್ಕಿ. ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಬೆಂಗಳೂರಿನಲ್ಲಿ 371 ಎಕರೆ ಭೂಮಿ ಕೊಟ್ಟಿದ್ದಲ್ಲದೆ ನೀರು–ವಿದ್ಯುತ್‌ ಸೌಲಭ್ಯವನ್ನೂ ಕಲ್ಪಿಸಲು ಮುಂದೆ ಬಂದಿದ್ದರಿಂದ ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರವಾದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕನ್ನಡ ನಾಡಿನಲ್ಲಿ ತಲೆ ಎತ್ತುವಂತಾಯಿತು. ಈ ಹೆಮ್ಮೆಯ ಕೇಂದ್ರದ ಮಕ್ಕಳಂತೆ ದೇಶದ ಹಲವೆಡೆ ವಿವಿಧ ಸಂಶೋಧನಾ ಸಂಸ್ಥೆಗಳು ಸ್ಥಾಪನೆಯಾಗಿದ್ದು ಈಗ ಇತಿಹಾಸ.
 
ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿಬಂದಿದ್ದ ಬಿ.ಎ. ರಾವ್‌ ಎಂಬುವರು ಮೈಸೂರು ಸಂಸ್ಥಾನದ ಆರೋಗ್ಯ ಇಲಾಖೆಯಲ್ಲಿದ್ದರು. ಮೈಸೂರು ರಾಜ್ಯದಲ್ಲಿ ಮಲೇರಿಯಾ ಉಲ್ಬಣಿಸಿದಾಗ ಲಾರ್ವಾಗಳನ್ನು ನಾಶಮಾಡಲು ವಿಶೇಷ ತಳಿಯ ಮೀನು ತರಿಸಿ ಪ್ರತಿ ಹಳ್ಳಿಯ ಕೆರೆಗೂ ಬಿಟ್ಟರು. ಮಲೇರಿಯಾ ನಿರ್ಮೂಲನಾ ಅಧಿಕಾರಿಯಾಗಿ ದೇಶದ ತುಂಬಾ ಹೆಸರು ಮಾಡಿದರು.

ಸರಿಸುಮಾರು ಅದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನ ಕುಟುಂಬ ಯೋಜನೆಯನ್ನೂ ಜಾರಿಗೊಳಿಸಿತು. ಸಿ.ವಿ. ನಟರಾಜನ್‌ ಎಂಬುವರನ್ನು ಈ ಯೋಜನೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲಾಯಿತು. ಸರ್‌ ಎಂ. ವಿಶ್ವೇಶ್ವರಯ್ಯನವರು ಕಾಗದ ಕಾರ್ಖಾನೆ, ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ, ಕನ್ನಂಬಾಡಿ ಅಣೆಕಟ್ಟು ಕಟ್ಟಿದರು. ಮೊದಲ ಬಾರಿಗೆ ಜಲ ವಿದ್ಯುತ್‌ ಉತ್ಪಾದನೆ ಆರಂಭಿಸಿದ್ದು ಸಹ ಇದೇ ಸಂಸ್ಥಾನದಲ್ಲಿ. ಈ ಸಂಗತಿಗಳಲ್ಲಿ ದೊಡ್ಡ ವಿಜ್ಞಾನವೇನೂ ಇಲ್ಲ. ಆದರೆ, ಆಗಿನ ಆಡಳಿತಗಾರರು ತೋರಿದ ವೈಜ್ಞಾನಿಕ ಮನೋಭಾವ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿತ್ತು.
 
ಬೆಂಗಳೂರು ಹಿಂದೆಯೂ ದೇಶದ ‘ವಿಜ್ಞಾನ ರಾಜಧಾನಿ’ಯಾಗಿತ್ತು. ಈಗಲೂ ಅದೇ ಕಿರೀಟ ತೊಟ್ಟಿದೆ. ಮತ್ತೆ, ಸದ್ಯದ ಭವಿಷ್ಯದಲ್ಲಿ ಆ ಪಟ್ಟ ಅಬಾಧಿತ. ನಾನು ವಿದ್ಯಾರ್ಥಿಯಾಗಿದ್ದಾಗ ಇಡೀ ಮೈಸೂರು ಸಂಸ್ಥಾನದಲ್ಲಿ ವಿಜ್ಞಾನ ಪದವಿ ಅಧ್ಯಯನಕ್ಕಾಗಿ ಇದ್ದ ಏಕೈಕ ವಿದ್ಯಾಕೇಂದ್ರವಾಗಿತ್ತು ಸೆಂಟ್ರಲ್‌ ಕಾಲೇಜು. ತಮ್ಮ ದೈನಂದಿನ ಕೆಲಸ–ಕಾರ್ಯಗಳಿಗೆ ಬೇಕಾದ ವಿದ್ಯಾವಂತರನ್ನು ತಯಾರು ಮಾಡುವುದಷ್ಟೇ ಬ್ರಿಟಿಷ್‌ ಆಡಳಿತಗಾರರ ಉದ್ದೇಶವಾಗಿತ್ತು. ವಿಜ್ಞಾನಿಗಳನ್ನು ಬೆಳೆಸುವಂತಹ ವ್ಯವಸ್ಥೆ ಕಲ್ಪಿಸಿ ನಮ್ಮನ್ನೆಲ್ಲ ಉದ್ಧಾರ ಮಾಡುವಷ್ಟು ಔದಾರ್ಯ ಆಗ ಎಲ್ಲಿತ್ತು?
 
ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ನಾನು ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ. ನನಗಿನ್ನೂ ಚೆನ್ನಾಗಿ ನೆನಪಿದೆ. ‘ಕರ್ನಾಟಕ ಏಕೀಕರಣ ಬೇಕೇ, ಬೇಡವೇ’ ಎಂಬ ವಿಷಯವಾಗಿ ಆಗ ಚರ್ಚಾಕೂಟ ನಡೆದಿತ್ತು. ಅದರಲ್ಲಿ ನಾನೂ ಪಾಲ್ಗೊಂಡು ರಾಜ್ಯ ಪರಿಕಲ್ಪನೆಯ ಕುರಿತು ನನ್ನ ಪಾಂಡಿತ್ಯವನ್ನು ಪ್ರದರ್ಶಿಸಿದ್ದೆ. ಅದೇ 1956ರಲ್ಲಿ ರಾಜ್ಯ ಉದಯವಾಗುವ ವೇಳೆಗೆ ನಾನು ಅಮೆರಿಕದಲ್ಲಿ ಓದುತ್ತಿದ್ದೆ!
 
‘ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕು’ ಎಂಬ ಪ್ರಶ್ನೆಯನ್ನು ನಾವೀಗ ಎತ್ತಿಕೊಳ್ಳೋಣ. ಯಾವುದೇ ಕ್ಷೇತ್ರದಲ್ಲಿ ಹಣ ತೊಡಗಿಸುವಾಗ ಮುಂದಿನ ನೂರು ವರ್ಷಗಳ ಗುರಿ ಇರಬೇಕು. ಅನುಮಾನವೇ ಇಲ್ಲ, ಶಿಕ್ಷಣ ಹಾಗೂ ಸಂಶೋಧನೆಯಿಂದ ಮಾತ್ರ ಅಪೇಕ್ಷಿತ ಬದಲಾವಣೆ ತರಲು ಸಾಧ್ಯ. ಈ ಕ್ಷೇತ್ರಗಳೇ ನಮ್ಮ ಆದ್ಯತಾ ವಲಯಗಳಾಗಬೇಕು. ನಮ್ಮ ಆದ್ಯತೆ ಗುರುತಿಸುವಲ್ಲಿ ವಿಫಲವಾಗಿದ್ದರಿಂದ ಕಳೆದ 60 ವರ್ಷಗಳಲ್ಲಿ ರಾಜ್ಯದಲ್ಲಿ, ಅಷ್ಟೇ ಏಕೆ, ದೇಶದಲ್ಲಿ ವಿಜ್ಞಾನ ಸಹಜ ಬೆಳವಣಿಗೆಯನ್ನು ಕಾಣಲಿಲ್ಲ. 
 
ಶಿಕ್ಷಣ ಸಂಸ್ಥೆಗಳನ್ನು ಬಾಜಾ–ಭಜಂತ್ರಿಯೊಂದಿಗೆ ಶುರು ಮಾಡುತ್ತೇವೆ. ಆಮೇಲೆ ಗುಣಮಟ್ಟ ಕಾಯ್ದುಕೊಳ್ಳದೆ ಅವು ಠುಸ್‌ ಎನ್ನುತ್ತವೆ. ಇಂಗ್ಲೆಂಡಿನ ಕೆಂಬ್ರಿಜ್‌ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 800 ವರ್ಷಗಳೇ ಆಗಿವೆ. ಈಗಲೂ ಅದೇ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದೆ. ನಮ್ಮಲ್ಲೂ ಅಂತಹ ಘನವಾದ ಸಂಸ್ಥೆಗಳು ಬೇಡವೇ? 
 
ನಮ್ಮ ವಿಶ್ವವಿದ್ಯಾಲಯಗಳು ತುಂಬಾ ದಯನೀಯ ಸ್ಥಿತಿಯಲ್ಲಿವೆ. ಅವುಗಳಲ್ಲಿ ಎಷ್ಟೇ ಹುಡುಕಿದರೂ ಒಬ್ಬ ಅತ್ಯುತ್ತಮ ವಿಜ್ಞಾನಿ ಸಿಗಬಹುದು ಎಂದು ನನಗೆ ಅನಿಸುವುದಿಲ್ಲ. ಗ್ರಾಮಾಂತರ ಭಾಗದ ಯುವ ಪ್ರತಿಭೆಗಳ ವಿಜ್ಞಾನದ ಆಸಕ್ತಿಗೆ ನೀರೆರೆಯುವಂತಹ ವಾತಾವರಣ ಇಲ್ಲ. ವಿಜ್ಞಾನ ಕಾಲೇಜುಗಳು ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲದೆ ಇರುವುದರಿಂದ ಎಷ್ಟೋ ಮಕ್ಕಳು ಅನಿವಾರ್ಯವಾಗಿ ಬೇರೆ ಬೇರೆ ವಿದ್ಯಾ ಶಾಖೆಗಳಿಗೆ ಸೇರಬೇಕಾಗಿದೆ. ಇರುವ ವಿಜ್ಞಾನ ಕಾಲೇಜುಗಳಲ್ಲೂ ಪ್ರಯೋಗಾಲಯದ ಕೊರತೆ. ನಾನು ಇತ್ತೀಚೆಗೆ ಲಕ್ಷ್ಮೇಶ್ವರಕ್ಕೆ ಹೋಗಿದ್ದೆ. ಅಲ್ಲಿನ ಮಕ್ಕಳ ವಿಜ್ಞಾನದ ಆಸಕ್ತಿ ಕಂಡು ಮನಸ್ಸು ತುಂಬಿಬಂದಿದೆ. ಅಲ್ಲೊಂದು ವಿಜ್ಞಾನ ಅಧ್ಯಯನ ಕೇಂದ್ರವನ್ನು ತೆರೆಯಲು ನಿರ್ಧರಿಸಿದ್ದೇನೆ.
 
ಪ್ರಾಧ್ಯಾಪಕರು ಕೇವಲ ಬೋಧನಾ ವೃತ್ತಿಗೆ ಅಂಟಿಕೊಂಡು ಬಿಟ್ಟಿದ್ದಾರೆ. ಕಾಲೇಜು ಕ್ಯಾಂಪಸ್ಸುಗಳಲ್ಲಿ ಸಂಶೋಧನಾ ಚಟುವಟಿಕೆಗಳು ವಿರಳವಾಗಿವೆ. ವಿಜ್ಞಾನದ ಬೆಳವಣಿಗೆಗಳ ಕುರಿತು ಶಿಕ್ಷಕರಲ್ಲೇ ಮಾಹಿತಿ ಇಲ್ಲದಿರುವುದು ನನ್ನ ಸುತ್ತಾಟದಲ್ಲಿ ಎದ್ದುಕಂಡಿದೆ. ಬೋಧನಾ ಗುಣಮಟ್ಟ ಸುಧಾರಿಸಲು ಅವರಿಗೆ ಸರಿಯಾದ ತರಬೇತಿಯ ವ್ಯವಸ್ಥೆಯನ್ನು ಮಾಡಲೇಬೇಕಿದೆ.
 
ಮೈಸೂರು ಸಂಸ್ಥಾನದಲ್ಲಿ ಕಾಲೇಜು ಪ್ರಾಧ್ಯಾಪಕರು ಶಾಲೆಗಳಿಗೂ ಹೋಗಿ ಪಾಠ ಮಾಡಬೇಕಿತ್ತು. ಆಗಿನ ಶೈಕ್ಷಣಿಕ ವಾತಾವರಣದ ಕುರಿತು ಡಿ.ವಿ. ಗುಂಡಪ್ಪನವರು, ಮಾಸ್ತಿಯವರು ತಮ್ಮ ಕೃತಿಗಳಲ್ಲಿ ಬೇಕಾದಷ್ಟು ಉಲ್ಲೇಖಿಸಿದ್ದಾರೆ. ಬಿ.ಎಸ್‌. ಮಾಧವರಾವ್‌, ಶ್ರೀನಿವಾಸ್‌ ಅಯ್ಯಂಗಾರ್‌,  ಬಿ.ವೆಂಕಟೇಶಾಚಾರ್‌, ಬಿ.ಆರ್‌. ಶೇಷಾಚಾರ್‌, ಮಂಜುನಾಥ್‌ ಅವರಂತಹ ವಿಜ್ಞಾನಿಗಳು ಬೋಧಕರಾಗಿ ಸಿಕ್ಕಿದ್ದು ನನ್ನ ಸೌಭಾಗ್ಯ. ಅಂತಹ ಶೈಕ್ಷಣಿಕ ವಾತಾವರಣ ಮರುಸೃಷ್ಟಿ ಆಗಬೇಕು. 
 
ಎಲ್ಲರಿಗೂ ತಮ್ಮ ಮಕ್ಕಳನ್ನು ಐಐಟಿಯಲ್ಲೇ (ಭಾರತೀಯ ತಂತ್ರಜ್ಞಾನ ಸಂಸ್ಥೆ) ಓದಿಸುವ ಆಸೆ. ಆದರೆ, ಬೆರಳೆಣಿಕೆಯಷ್ಟು ಅಂತಹ ಅತ್ಯುನ್ನತ ಸಂಸ್ಥೆಗಳನ್ನು ಇಟ್ಟುಕೊಂಡು ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯವಿಲ್ಲ. ಈಗೇನೋ ಧಾರವಾಡದಲ್ಲೂ ಒಂದು ಐಐಟಿ ಆರಂಭಿಸಲಾಗಿದೆ. ರಾಜ್ಯದಲ್ಲಿ ಇನ್ನೂ ಅಂತಹ 2–3 ಸಂಸ್ಥೆಗಳಾದರೂ ಬೇಕು. ಆಗ ಪ್ರತಿಭೆಗಳಿಗೆ ಅಲ್ಲಿ ಕೆಲಸಮಾಡಲು ಅವಕಾಶ ಸಿಕ್ಕು, ಸಂಶೋಧನಾ ಗುಣಮಟ್ಟ ಎತ್ತರಕ್ಕೇರುತ್ತದೆ. ಹಾಗಂತ ಸೂಕ್ತ ತಯಾರಿ ಇಲ್ಲದೆ, ಬೇಕಾಬಿಟ್ಟಿಯಾಗಿ ಐಐಟಿ ಆರಂಭಿಸಿದರೆ ಗುಣಮಟ್ಟಕ್ಕೆ ಹೊಡೆತ ಬೀಳುತ್ತದೆ. ‘ಐಐಟಿ ಬ್ರ್ಯಾಂಡ್‌’ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. 
 
ಮೈಸೂರು ಭಾಗದಲ್ಲಿ ಒಡೆಯರ್‌ ಅವರ ಔದಾರ್ಯದಿಂದ ಒಳ್ಳೆಯ ಸಂಸ್ಥೆಗಳು ಸ್ಥಾಪನೆಯಾಗಿವೆ. ಆದರೆ, ಏಕೀಕರಣದ ಮುಂಚೆ ಮದ್ರಾಸ್‌ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡ, ಬಾಂಬೆ ಪ್ರಾಂತ್ಯ ಹಾಗೂ ಹೈದರಾಬಾದ್‌ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶದಲ್ಲಿ ಅಂತಹ ಸೌಲಭ್ಯಗಳು ಇಲ್ಲ. ಅಲ್ಲಿಯೂ ಪ್ರತಿಭಾವಂತರು ಇದ್ದಾರೆ. ಆ ಪ್ರದೇಶಗಳಲ್ಲಿ ಉನ್ನತ ಅಧ್ಯಯನ ಸಂಸ್ಥೆಗಳನ್ನು ಸ್ಥಾಪಿಸಬೇಕು. ಬೇಕಾದಷ್ಟು ಉದ್ಯಮಗಳು ನಮ್ಮ ರಾಜ್ಯದಲ್ಲಿವೆ. ಸಂಶೋಧನಾ ಚಟುವಟಿಕೆ ಹೆಚ್ಚಲು ಅವುಗಳ ಸಹಭಾಗಿತ್ವ ಅಗತ್ಯವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಗಮನಹರಿಸಬೇಕು.
 
ಯಾವ ಕ್ಷೇತ್ರದಲ್ಲಿ ಸಂಶೋಧನೆ ನಡೆಸಬೇಕು ಎನ್ನುವ ಖಚಿತತೆ ನಮ್ಮಲ್ಲಿರಬೇಕು. ಹಾಗೆ ಆಯ್ಕೆ ಮಾಡಲಾದ ಸಂಶೋಧನಾ ಚಟುವಟಿಕೆಗಳಲ್ಲಿ ಹಣ ಹೂಡಿದರೆ ಒಳ್ಳೆಯ ಫಲಿತಾಂಶ ಕಟ್ಟಿಟ್ಟ ಬುತ್ತಿ. ಬಾಹ್ಯಾಕಾಶ ಹಾಗೂ ಅಣುಶಕ್ತಿ ಸಂಶೋಧನಾ ಕ್ಷೇತ್ರದಲ್ಲಿ ನಮ್ಮ ಸಾಧನೆಗಳೇ ಇದಕ್ಕೆ ಸಾಕ್ಷಿ.  
 
ಮಾಹಿತಿ ತಂತ್ರಜ್ಞಾನ (ಐ.ಟಿ) ಹಾಗೂ ಜೈವಿಕ ತಂತ್ರಜ್ಞಾನಗಳ (ಬಿ.ಟಿ) ಅಬ್ಬರ ಹೆಚ್ಚಾಗಿರುವುದು ನಿಜ. ಐ.ಟಿಯಲ್ಲಿ ವಿಜ್ಞಾನವೇ ಇಲ್ಲ. ಬಿ.ಟಿಯಲ್ಲಿ ಚೂರುಪಾರು ವಿಜ್ಞಾನ ಇದೆ. ಮೂಲ ವಿಜ್ಞಾನ ಘನವಾದುದು. ಯುವ ಪೀಳಿಗೆಗೆ  ದೊಡ್ಡ ವಿಜ್ಞಾನಿ ಆಗಬೇಕು ಎಂಬುದಕ್ಕಿಂತ ದೊಡ್ಡ ಬಂಗಲೆ ಕಟ್ಟಬೇಕು, ಐಷಾರಾಮಿ ಕಾರು ಕೊಳ್ಳಬೇಕು ಎನ್ನುವ ಧಾವಂತ. ಹಣದ ಹೊಳೆಯನ್ನೇ ಹರಿಸುವ ಐ.ಟಿ–ಬಿ.ಟಿ ಕ್ಷೇತ್ರದತ್ತ ಅವರು ಆಕರ್ಷಿತರಾಗಲು ಇದೇ ಮುಖ್ಯಕಾರಣ. ನಾನು ವೃತ್ತಿ ಜೀವನ ಆರಂಭಿಸಿದಾಗ ನನ್ನ ಮೊದಲ ವೇತನ 720 ರೂಪಾಯಿ ಆಗಿತ್ತು.
 
ಈಗ ಅಂತಹ ಸನ್ನಿವೇಶ ಏನಿಲ್ಲ. ವಿಜ್ಞಾನಿಗಳಿಗೆ ಕೈತುಂಬ ಸಂಬಳ ಸಿಗುತ್ತಿದೆ. ಆದರೆ, ಮೂಲ ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಆಸಕ್ತಿ ತಾಳಲು ಸ್ಕಾಲರ್‌ಷಿಪ್‌ ವಿತರಣೆ, ಉದ್ಯೋಗ ಸೃಷ್ಟಿಯಂತಹ ಸೌಲಭ್ಯಗಳ ಕಡೆಗೂ ಗಮನಹರಿಸುವ ಅಗತ್ಯವಿದೆ. ಮುಖ್ಯವಾಗಿ ಅಧ್ಯಯನ ಮಾಡಲು ಅತ್ಯುನ್ನತ ಸಂಸ್ಥೆಗಳನ್ನು ಸೃಷ್ಟಿಸಬೇಕಿದೆ. ಮೂಲ ವಿಜ್ಞಾನದಲ್ಲಿ ಪೂರಕ ಅವಕಾಶವಿಲ್ಲದ ಕಾರಣ ಉದ್ಯಮ ಹಾಗೂ ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ ಯುವಪೀಳಿಗೆ ಭವಿಷ್ಯ ಕಂಡುಕೊಳ್ಳುತ್ತಿದೆ.
 
ಕಳವಳಕಾರಿ ಸಂಗತಿ ಏನೆಂದರೆ ನಮ್ಮ ಜವಾಹರಲಾಲ್‌ ನೆಹರೂ ಉನ್ನತ ಸಂಶೋಧನಾ ಸಂಸ್ಥೆಗೆ ಕಳೆದ 25 ವರ್ಷಗಳಲ್ಲಿ ಒಬ್ಬ ಬೆಂಗಳೂರು ವಿದ್ಯಾರ್ಥಿಯೂ ಅಧ್ಯಯನಕ್ಕಾಗಿ ಬಂದಿಲ್ಲ. ಇದೇ ಕಾಲಕ್ಕೆ ತುಮಕೂರು, ಮಂಡ್ಯದಂತಹ ಗ್ರಾಮಾಂತರ ಭಾಗಗಳಿಂದ ಒಂದಿಬ್ಬರು ವಿದ್ಯಾರ್ಥಿಗಳು ಬಂದಿರುವುದು ಆಶಾದಾಯಕ ಬೆಳವಣಿಗೆ. ಪಶ್ಚಿಮ ಬಂಗಾಲ, ಆಂಧ್ರ ಪ್ರದೇಶ ಹಾಗೂ ಬಿಹಾರ ಭಾಗಗಳಲ್ಲಿ ಈಗ ಸಂಶೋಧನಾ ಆಸಕ್ತಿ ಚೆನ್ನಾಗಿ ಬೆಳೆದಿದೆ.
 
ಮುಂದಿನ 15 ವರ್ಷಗಳ ಗುರಿ ಇಟ್ಟುಕೊಂಡು ವಿಜ್ಞಾನದ ಆಸಕ್ತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮ ಹಾಕಿಕೊಳ್ಳಬೇಕು. ಪ್ರಾದೇಶಿಕ ಮಟ್ಟದಲ್ಲಿ ಹತ್ತಾರು ವಿಜ್ಞಾನ ಸಂಸ್ಥೆಗಳನ್ನು ಕಟ್ಟಬೇಕು.
 
ವಿಜ್ಞಾನದ ಬೆಳವಣಿಗೆ ಆಗಬೇಕಾದರೆ ಸಮಾಜದ ದೃಷ್ಟಿಕೋನ ಸಹ ಬದಲಾಗಬೇಕಿದೆ. ಮೂಲ ವಿಜ್ಞಾನದ ಕಡೆಗೆ ಒಲವು ತೋರಿ ವಿದ್ಯಾರ್ಥಿಯೊಬ್ಬ ಬಿಎಸ್ಸಿ ಓದಿದರೆ ಆತನನ್ನು ದಡ್ಡನಂತೆ ಕಾಣಲಾಗುತ್ತದೆ. ಅದೇ ಎರಡನೇ ದರ್ಜೆಯ ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ ಓದಿದ ವಿದ್ಯಾರ್ಥಿಯನ್ನೂ ದೊಡ್ಡ ಸಾಧನೆ ಮಾಡಿದವನಂತೆ ಬಿಂಬಿಸಲಾಗುತ್ತದೆ. ಇದು ಸಮಾಜ ಗೌರವಿಸುವ ಮೌಲ್ಯಗಳು ಹಾಗೂ ನಂಬಿಕೆಗಳಿಗೆ ಸಂಬಂಧಿಸಿದ ವಿಚಾರ. ಜನರ ಈ ಮನಸ್ಥಿತಿ ಬದಲಾಗದಿದ್ದರೆ ವಿಜ್ಞಾನ ಬೆಳೆಯುವುದು ಹೇಗೆ? 
 
ವಿಜ್ಞಾನದ ಬೆಳವಣಿಗೆಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಏನೇನೂ ಸಾಲದು. ಬಹುತೇಕ ಅನುದಾನ ಕೇಂದ್ರ ಸರ್ಕಾರದಿಂದಲೇ ಬರುತ್ತಿದೆ. ಅದು ಕೂಡ ನಗಣ್ಯವಾಗಿದೆ. ಆದರೆ, ಕಳೆದ 8–10 ವರ್ಷಗಳಲ್ಲಿ ಪರಿಸ್ಥಿತಿ ಕೊಂಚ ಸುಧಾರಿಸಿದೆ. ಬಜೆಟ್‌ನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳು ಸಹ ಕಾಣಿಸಿಕೊಳ್ಳಲು ಆರಂಭಿಸಿವೆ. ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷನ್‌ ಗ್ರೂಪ್‌ ಮಾಡಿದ್ದ ಶಿಫಾರಸುಗಳಲ್ಲಿ ಕೆಲವನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ, ಸಾಧಿಸಬೇಕಾದುದು ಬಹಳಷ್ಟಿದೆ. ಮುಖ್ಯವಾಗಿ ಸರ್ಕಾರ ತನ್ನ ಬಜೆಟ್‌ನಲ್ಲಿ ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 2ರಷ್ಟನ್ನು ಸಂಶೋಧನೆಗೆ ಹಾಗೂ ಶೇ 6ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ವಿಜ್ಞಾನ ಕಲಿಕೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ ಬೇಕಾದ ಮೂಲ ಸೌಲಭ್ಯಗಳನ್ನು ತುರ್ತಾಗಿ ಒದಗಿಸಬೇಕು. ಉದ್ಯಮಗಳ ಸಹಭಾಗಿತ್ವ ಹೆಚ್ಚಾಗಿ ಬೇಕು. ಹಾಗಾದರೆ ಶತಮಾನದ ಸಮೃದ್ಧ ಕರ್ನಾಟಕದ ಕನಸು ನನಸಾಗುವುದಲ್ಲದೆ ದೇಶದ ಅಭಿವೃದ್ಧಿಗೂ ಕೊಡುಗೆ ನೀಡಲು ಸಾಧ್ಯವಾದೀತು.

ಏನು ಆಗಬೇಕು?
ಅನುದಾನ ಹಂಚಿಕೆಯಲ್ಲಿ...

* ನಿವ್ವಳ ಆಂತರಿಕ ಉತ್ಪನ್ನದ (ಜಿಡಿಪಿ) ಶೇ 8ರಷ್ಟು ಹಣವನ್ನು ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರಗಳಿಗೆ ಮೀಸಲಿಡಬೇಕು. ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಅಧ್ಯಯನ ಸಂಸ್ಥೆಗಳನ್ನು ತೆರೆಯಬೇಕು

* ಮುಂದಿನ 15 ವರ್ಷಗಳಲ್ಲಿ ನಮ್ಮ ವಿಜ್ಞಾನ ಕ್ಷೇತ್ರ ಪ್ರಗತಿಯತ್ತ ದಾಪುಗಾಲು ಹಾಕದಿದ್ದರೆ ಶಾಶ್ವತವಾಗಿ ಹಿಂದೆ ಬೀಳುವ ಅಪಾಯವಿದೆ. ಈ ಎಚ್ಚರಿಕೆ ಇಟ್ಟುಕೊಂಡು ಹಣ ವಿನಿಯೋಗ ಮಾಡಬೇಕು

ಸಂಶೋಧನಾ ಕ್ಷೇತ್ರದಲ್ಲಿ...
* ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌ ಅಂಡ್‌ ಡಿ) ಚಟುವಟಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಖಾಸಗಿ ಸಹಭಾಗಿತ್ವ ಬೇಕು. ರಾಜ್ಯದಲ್ಲಿ ಸಾವಿರಾರು ಬೃಹತ್‌ ಉದ್ಯಮಗಳು ಬೀಡು ಬಿಟ್ಟಿದ್ದು, ಅವುಗಳ ಸಹಯೋಗ ಪಡೆಯುವ ಕೆಲಸ ಆಗಬೇಕು. ದಕ್ಷಿಣ ಕೊರಿಯಾದಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಶೇ 75ರಷ್ಟು ಹೂಡಿಕೆ ಉದ್ಯಮ ಕ್ಷೇತ್ರದಿಂದಲೇ ಆಗುತ್ತಿದೆ

* ನೀರು, ಇಂಧನ, ಕೃಷಿ, ಆರೋಗ್ಯ ಸಂಶೋಧನೆಯ ಆದ್ಯತೆಗಳಾಗಬೇಕು

* ವಿಜ್ಞಾನ ಶಿಕ್ಷಣಕ್ಕೆ ಬೇಕಾದ ಉತ್ಕೃಷ್ಟ ಮೂಲಸೌಕರ್ಯವನ್ನು ರಾಜ್ಯದ ಉದ್ದಗಲಕ್ಕೂ ಒದಗಿಸಬೇಕು. ಎಲ್ಲ ವಿಜ್ಞಾನ ಪಿಯು ಕಾಲೇಜುಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯದ ವ್ಯವಸ್ಥೆ ಮಾಡಬೇಕು

ಶಿಕ್ಷಣ ಕ್ಷೇತ್ರದಲ್ಲಿ...
* ಪ್ರೌಢಶಾಲೆಯಿಂದ ವಿಶ್ವವಿದ್ಯಾಲಯ ವರೆಗೆ ಎಲ್ಲ ಹಂತದ ಶಿಕ್ಷಣದಲ್ಲೂ ವಿಜ್ಞಾನ ಬೋಧಕರಿಗೆ ಸೂಕ್ತ ತರಬೇತಿ ನೀಡಬೇಕು

* ಪ್ರತಿ ಜಿಲ್ಲೆಯಲ್ಲೂ ವಿಜ್ಞಾನದ ವಸ್ತು ಸಂಗ್ರಹಾಲಯದ ವ್ಯವಸ್ಥೆ ಮಾಡಬೇಕು. ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಸಂಸ್ಥೆಯೊಂದನ್ನು ಹುಟ್ಟುಹಾಕಬೇಕು

* ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್‌ ನೀಡುವ ಮೂಲಕ ಮೂಲವಿಜ್ಞಾನದತ್ತ ಅವರನ್ನು ಆಕರ್ಷಿಸಬೇಕು

* ಐ.ಟಿ–ಬಿ.ಟಿಗಿಂತ ಮೂಲವಿಜ್ಞಾನ ತುಂಬಾ ದೊಡ್ಡದು ಎಂಬ ಜಾಗೃತಿಯನ್ನು ಸಮಾಜದಲ್ಲಿ ಉಂಟು ಮಾಡಬೇಕು
- ಸಿಎನ್‌ಆರ್‌ ರಾವ್‌
(ಲೇಖಕ: ‘ಭಾರತ ರತ್ನ’ ಪುರಸ್ಕೃತ ರಸಾಯನ ವಿಜ್ಞಾನಿ,  ಜವಾಹರಲಾಲ್‌ ನೆಹರೂ ಉನ್ನತ ಸಂಶೋಧನಾ ಸಂಸ್ಥೆಯ ಗೌರವಾಧ್ಯಕ್ಷ)
ನಿರೂಪಣೆ : ಪ್ರವೀಣ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.