ADVERTISEMENT

ಭಾವಪ್ರದ ಅಭಿವ್ಯಕ್ತಿಯ ಸುಮನೋಹರ ನೃತ್ಯಾಭಿನಯ

ನಾದನೃತ್ಯ

ವೈ.ಕೆ.ಸಂಧ್ಯಾಶರ್ಮ
Published 20 ನವೆಂಬರ್ 2016, 19:30 IST
Last Updated 20 ನವೆಂಬರ್ 2016, 19:30 IST
ಭೂಮಿಕಾ
ಭೂಮಿಕಾ   

ರಂಗದ ಮೇಲೆ ಲವಲವಿಕೆಯಿಂದ ನರ್ತಿಸುತ್ತಿದ್ದ ಬಾಲೆಯ ಪರಿಪಕ್ವ ಅಭಿನಯ, ನೆರೆದ ರಸಿಕರ ಗಮನವನ್ನು ವಿಶೇಷವಾಗಿ ಆಕರ್ಷಿಸಿತ್ತು. ಅದು ಇತ್ತೀಚೆಗೆ ಭಾರತೀಯ ವಿದ್ಯಾಭವನದಲ್ಲಿ ನಡೆದ ಭೂಮಿಕಾ ಗೌಡ ಅವರ ರಂಗಪ್ರವೇಶದ ಸಂದರ್ಭ.

‘ಅಭಿವ್ಯಕ್ತಿ ಡ್ಯಾನ್ಸ್ ಸೆಂಟರ್‌’ನ ನೃತ್ಯಗುರು ಎಸ್.ರಘುನಂದನ್ ಅವರಲ್ಲಿ ಅಭ್ಯಾಸ ಮಾಡಿದವರು ಭೂಮಿಕಾ. ಸತತ ಮೂರು ಗಂಟೆಗಳ ಕಾಲ ಮಂದಹಾಸದೊಂದಿಗೆ ಮನೋಜ್ಞವಾಗಿ, ಅಭಿನಯಪ್ರಧಾನ ನೃತ್ಯವನ್ನು ಪ್ರಸ್ತುತಪಡಿಸಿದ್ದು ಅಂದಿನ ವೈಶಿಷ್ಟ್ಯವಾಗಿತ್ತು.

ಸಾಂಪ್ರದಾಯಿಕ ‘ಪುಷ್ಪಾಂಜಲಿ (ಬಹುಧಾರಿ ರಾಗ- ಆದಿತಾಳ)ಯಲ್ಲಿ ಭೂಮಿಕಾ ಭಕ್ತಿಭಾವವನ್ನು ವಿನೀತಳಾಗಿ ಪ್ರದರ್ಶಿಸಿದಳು. ಅನಂತರ ‘ಪ್ರಥಮ ಪೂಜಿತ ಗಣಪತಿ’ಗೆ, ರಘುನಂದನ್  ವಿರಚಿತ ‘ತುಳಸಿವನಂ ಭಜಮಾನಸ ವಿಘ್ನೇಶ್ವರಂ ಅನಿಷಂ’ ಸಮರ್ಪಿಸುತ್ತ ಕಲಾವಿದೆ, ಭಾವಪ್ರದ ಅಭಿವ್ಯಕ್ತಿಯೊಂದಿಗೆ, ಹೊಸವಿನ್ಯಾಸದ ಜತಿಗಳನ್ನು ಸುಂದರವಾಗಿ ನಿರ್ವಹಿಸಿದಳು. ಲಯ-ಲಾಸ್ಯಗಳಿಂದ ಕೂಡಿದ ಸುಂದರ ಭಂಗಿಗಳು, ಖಚಿತ ಹಸ್ತಮುದ್ರಿಕೆಗಳು, ವಿಶಿಷ್ಟ ಅಡವುಗಳ ಬೆಡಗು ಅವಳು ಮಾಡಿದ ಕಠಿಣ ಅಭ್ಯಾಸವನ್ನು ನುಡಿಯುತ್ತಿದ್ದವು.

ವಿಲಂಬಿತ ಕಾಲದಿಂದ ಆರಂಭವಾದ ಏಳು ಅಕ್ಷರಗಳ ವೃತ್ತದ ಮಿಶ್ರಜಾತಿಯ ‘ಅಲ್ಲರಿಪು’ವಿನ ಜತಿಗಳಲ್ಲಿ ಹೊಸ ಹೊಳಪಿತ್ತು. ಶಾಸ್ತ್ರೀಯ ಚೌಕಟ್ಟಿನೊಳಗೆ ನರ್ತಿಸಿದರೂ ಕಲಾವಿದೆ ತನ್ನ ನೃತ್ಯಕ್ಕೆ ಮೆರುಗು ತುಂಬಿಸಿದಳು. ‘ಜತಿಸ್ವರಂ’ ಶುದ್ಧ ನೃತ್ತಗಳ ಒಂದು ಸಂಕೀರ್ಣ ಬಂಧ. ಭೂಮಿಕಾಳ ಶಿಲ್ಪ ಸದೃಶ ಸುಂದರಭಂಗಿಗಳು, ಖಚಿತ ನಿಲುವು, ಕರಾರುವಾಕ್ಕಾದ ಹೆಜ್ಜೆಯ ಗತಿ, ಚಾರಿ-ಕರಣಗಳು ಗಮನಾರ್ಹವಾಗಿದ್ದವು.

ಮುಂದಿನ ಪ್ರಸ್ತುತಿ ರಾಗಮಾಲಿಕೆ-ಮಿಶ್ರಛಾಪು ತಾಳದ ‘ಶಬ್ದಂ’ -‘ರಾಘವಾ ಜಾನಕಿಪ್ರಿಯ ಕೋಟಿ ಸುಂದರಂ’ ಶುದ್ಧ ನೃತ್ತ-ನೃತ್ಯ ಮತ್ತು ಅಭಿನಯಗಳಿಂದ ಮಿಳಿತವಾಗಿತ್ತು. ಕಲಾವಿದೆ ಇದರ ಅಭಿವ್ಯಕ್ತಿಯಲ್ಲಿ ತನ್ನ ಪ್ರತಿಭಾ ಕೌಶಲವನ್ನು  ಸಮರ್ಥವಾಗಿ ಪ್ರದರ್ಶಿಸಿದಳು. ಮರ್ಯಾದಾ ಪುರುಷೋತ್ತಮನ ಗಾಂಭೀರ್ಯ, ಶೌರ್ಯ-ಪರಾಕ್ರಮ, ಸತ್ಯ, ನಿಷ್ಠೆಗಳ ವರ್ಚಸ್ಸನ್ನು ಆಂಗಿಕಾಭಿನಯದಲ್ಲಿ ಪರಿಪೂರ್ಣವಾಗಿ ಬಿಂಬಿಸಿದಳು.

ಸಂಚಾರಿಭಾಗದಲ್ಲಿ, ಸೀತಾ ಸ್ವಯಂವರ, ರಾಮ, ಶಿವಧನಸ್ಸನ್ನು ಭೇದಿಸಿ, ಸೀತೆಯನ್ನು ಪಾಣಿಗ್ರಹಣ ಮಾಡಿಕೊಳ್ಳುವ ದೃಶ್ಯಗಳನ್ನು ನಾಟಕೀಯ ಶೈಲಿಯಲ್ಲಿ ಸುಂದರವಾಗಿ ಅಭಿವ್ಯಕ್ತಿಸಲಾಯಿತು. ಸಕಲ ಸದ್ಗುಣಿ ಶ್ರೀ ರಾಮಚಂದ್ರನ ಸಾತ್ವಿಕ-ಗಂಭೀರ ರೂಪ ಹಾಗೂ ಸುಮನೋಹರ ಭಂಗಿಗಳನ್ನು ಭೂಮಿಕಾ ಮನಮುಟ್ಟುವಂತೆ ಕಣ್ಮುಂದೆ ತಂದು ನಿಲ್ಲಿಸಿದಳು.

ಅಂತ್ಯದಲ್ಲಿ ಹನುಮನ ಸಖ್ಯ ಭಾಗದಲ್ಲಿ ರಾಮ, ಮಾನವ-ಪ್ರಾಣಿಗಳೆಂಬ ಭೇದವಿಲ್ಲದ ‘ವಿಶ್ವ ಮೈತ್ರಿ ಸ್ಥಾಪಕ’ ಗುಣ ಮೆರೆಯುವ ಘಟ್ಟದಲ್ಲಿ ಕಲಾವಿದೆ, ಅನುಪಮವಾಗಿ ಅಭಿನಯಿಸಿದಳು. ಇವಳ ರಂಗಪ್ರವೇಶಕ್ಕಾಗಿಯೇ ವಿದ್ವಾನ್ ರಘುನಂದನ್ ವಿಶೇಷವಾಗಿ ಸಂಯೋಜಿಸಿದ ಈ ಕೃತಿ ಸೊಗಸಾಗಿ ಮೂಡಿಬಂತು.

ಪಾಪನಾಶಂ ಶಿವಂ, ನಾಟ ಕುರಂಜಿ ರಾಗದಲ್ಲಿ ರಚಿಸಿದ ‘ಸ್ವಾಮಿ ನಾನ್ ಉನ್ದನ್ ಅಡಿಮೈ’ – ‘ವರ್ಣ’, ಪ್ರಸ್ತುತಿ ಕೇಂದ್ರ ಆಕರ್ಷಣೆಯಾಗಿ ಪ್ರಾಮುಖ್ಯತೆ ಪಡೆದಿತ್ತು. ನಾಟಕೀಯಾಂಶದ ಈ ಸುದೀರ್ಘ ಬಂಧದಲ್ಲಿ ಶಿವನಿಗೆ ಭಕ್ತಿ ಸಮರ್ಪಣೆಯಾಗಿ ಅವನ ಸದ್ಗುಣ-ಮಹಿಮೆಗಳ ವರ್ಣನೆಯನ್ನು ಭಕ್ತಿರಸದಲ್ಲಿ ಭೂಮಿಕಾ ಪರಾಕಾಷ್ಠೆಗೊಯ್ದಳು.

ಪುರಂದರದಾಸರ ಕೃತಿ ‘ಪಾಲಿಸೆಮ್ಮ ಮುದ್ದು ಶಾರದೆ’ (ರಾಗ-ಕಲ್ಯಾಣಿ, ಆದಿತಾಳ), ಸರಸ್ವತಿಯ ದಿವ್ಯ ಸಾಕ್ಷಾತ್ಕಾರವನ್ನು ನರ್ತಕಿ, ತನ್ನ ಚೇತೋಹಾರಿ ಅಭಿನಯದಿಂದ ರಸೋತ್ಕರ್ಷಗೊಳಿಸಿದಳು. ಮುಂದೆ ರುಕ್ಮಿಣಿ ಅರುಂಡೇಲ್ ನೃತ್ಯ ಸಂಯೋಜಿಸಿದ ‘ದಾರಿ ಜೂಚು’, ಶಂಕರಾಭರಣ ರಾಗದ ‘ಪದಂ’- ವಿರಹೋತ್ಕಂಠಿತ ನಾಯಕಿಯ ವಿರಹವೇದನೆಯ ಪರಿಸ್ಥಿತಿಯ ಬಗ್ಗೆ ಅವಳ ಸಖಿ ಗೋಪಾಲನಲ್ಲಿ ನಿವೇದಿಸುವ ಪ್ರಸಂಗದ ನಿರೂಪಣೆ ಅತ್ಯಾಕರ್ಷಕವಾಗಿತ್ತು.

ಜಯದೇವನ ‘ಗೀತಗೋವಿಂದ’ ದ ‘ಅಷ್ಟಪದಿ’- ‘ಲಲಿತ ಲವಂಗ ಲತಾ ಪರಿಶೀಲನ ಕೋಮಲ ಸಮೀರೆ’ –ಕೃಷ್ಣನಲ್ಲಿ ಅನುರಕ್ತಳಾದ ವಿರಹಿ ರಾಧೆಯ ಅಗಲಿಕೆಯ ಸಂಕಟವನ್ನು ಸಖಿ ದಯನೀಯವಾಗಿ ಅವನಲ್ಲಿ ಬಿನ್ನವಿಸುತ್ತಾಳೆ. ವಿರಹ ಹೆಚ್ಚಿಸುತ್ತಿರುವ ವಸಂತ ವೈಭವದ ಪೂರಕ ವಾತಾವರಣದ ವರ್ಣನೆ, ವಿರಹತಾಪಗಳ ಪರಿಣಾಮಕಾರಿ ಅಭಿನಯವನ್ನು ಭೂಮಿಕಾ ತನ್ನ ರಮಣೀಯ ನೃತ್ಯದಿಂದ ಬೇರೆಲೋಕಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾದಳು.

ಹಿನ್ನೆಲೆಯ ಇಂಪಾದ ಕೊಳಲಗಾನ ಈ ಉತ್ಕಟತೆಯನ್ನು ಮತ್ತಷ್ಟು ವೃದ್ಧಿಸಿತು. ಜೊತೆಗೆ  ಹೊಸವಿನ್ಯಾಸದ ನೃತ್ಯ ಸಂಯೋಜನೆ ಹೃದಯಸ್ಪರ್ಶಿಸಿ ಮುದನೀಡಿತು. ವೇಗಗತಿಯ, ಸಂಕೀರ್ಣ ನೃತ್ತಚಲನೆಯ ಜತಿ-ಅಡವುಗಳಿಂದ ಕೂಡಿದ ನಟರಾಜ ಸಮರ್ಪಿತ ‘ತಿಲ್ಲಾನ’ದಿಂದ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು. ವಾದ್ಯಸಹಕಾರ - ನಟುವಾಂಗ ಎಸ್. ರಘುನಂದನ್, ಗಾಯನ- ತ್ಯಾಗರಾಜನ್, ಮೃದಂಗ- ಜನಾರ್ದನ ರಾವ್, ಕೊಳಲು-ಮಹೇಶಸ್ವಾಮಿ, ಪಿಟೀಲು- ನಟರಾಜಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT