ದಾಬಸ್ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ನಮ್ಮ ಊರು ನಮ್ಮ ಕೆರೆ’ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ನೆಲಮಂಗಲ ತಾಲ್ಲೂಕಿನ ಕೆರೆಪಾಳ್ಯ–ಬುಗಡಿಹಳ್ಳಿ ಕೆರೆಯನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಲಾಯಿತು.
12 ಎಕರೆ 33 ಗುಂಟೆ ವಿಸ್ತೀರ್ಣದ ಕೆರೆಯ ಪುನಶ್ಚೇತನ ಕಾರ್ಯವನ್ನು ಮಾರ್ಚ್ 13ರಂದು ಆರಂಭಿಸಿ ಮೇ 16ಕ್ಕೆ ಪೂರ್ಣಗೊಳಿಸಲಾಗಿತ್ತು. ಕಾಮಗಾರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 7 ಲಕ್ಷ ಹಾಗೂ ಸ್ಥಳೀಯ ಮೂಲಗಳಿಂದ ₹ 8 ಲಕ್ಷ ಭರಿಸಲಾಗಿದೆ.
ಕೆರೆಯ ಹೂಳು ತೆಗೆದು, ಏರಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ರಾಜಕಾಲುವೆ ದುರಸ್ತಿ ಹಾಗೂ ಪೋಷಕ ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ.
ಯೋಜನೆಯ ಕಾರ್ಯ ನಿರ್ವಾಹಕ ಎಲ್.ಎಚ್.ಮಂಜುನಾಥ್ ಮಾತನಾಡಿ, ‘ಕೆರೆಯ ಪುನಶ್ಚೇತನದಿಂದ 500 ಎಕರೆ ಭೂಮಿಗೆ ನೀರು ಒದಗಿಸಬಹುದಾಗಿದೆ. ಅಂತರ್ಜಲ ಮಟ್ಟ ವೃದ್ಧಿಸುವ ಮೂಲಕ, ಬತ್ತಿರುವ ಕೊಳವೆಬಾವಿಗಳು ಮರುಜೀವ ಪಡೆದುಕೊಳ್ಳಲಿವೆ’ ಎಂದರು.
ಯೋಜನೆಯ ನೆಲಮಂಗಲ ತಾಲ್ಲೂಕು ಘಟಕದ ಯೋಜನಾಧಿಕಾರಿ ಸುಖೇಶ್, ‘ಕೆರೆಯ ಸುತ್ತಲೂ ಗಿಡಗಳನ್ನು ನೆಡಲಾಗುತ್ತದೆ. ಗಿಡಗಳು ಹಾಳಾಗದಂತೆ ಗ್ರಾಮಸ್ಥರು ನೋಡಿಕೊಳ್ಳಬೇಕು.
ಕೆರೆಯಿಂದ ಮಣ್ಣು ಹಾಗೂ ಮರಳು ತೆಗೆಯಬಾರದು. ಕೆರೆಗೆ ಕಸ ಹಾಕಬಾರದು. ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.