ಬೀಜಿಂಗ್: ಕ್ಸಿಯಾಮೆನ್ ಪ್ರಾಂತದಲ್ಲಿ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆ ಮೇಲೆ ಭಾರತ–ಚೀನಾ ಗಡಿ ಸಂಘರ್ಷದ ಕರಿನೆರಳು ಬೀಳುವ ಸಾಧ್ಯತೆ ಇದೆ. ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್ ಅವರು ಶೃಂಗಸಭೆಯಲ್ಲಿ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎನ್ನಲಾಗಿದೆ.
ಶೃಂಗಸಭೆಗೂ ಮೊದಲು ಭಾರತದ ಜತೆಗಿನ ಗಡಿ ಸಂಘರ್ಷ ಬಗೆಹರಿಸಿಕೊಳ್ಳಲು ಚೀನಾ ಬಯಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಭಾರತದ ಸೇನೆ ಅಕ್ರಮವಾಗಿ ಚೀನಾ ಗಡಿ ಪ್ರವೇಶಿಸಿದ್ದಕ್ಕೆ, ಭಾರತ ಹಲವು ರೀತಿಯ ಸಮರ್ಥನೆಗಳನ್ನು ನೀಡುತ್ತಿದೆ ಎಂದು ಚೀನಾ ಬುಧವಾರವಷ್ಟೆ ಆರೋಪಿಸಿದೆ.
‘ದೇಶದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿ ರಕ್ಷಿಸಿಕೊಳ್ಳಲು ಚೀನಾ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, ‘ಭಾರತ–ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ, ಸ್ಥಿರತೆ ಇರುವುದು ದ್ವಿಪಕ್ಷೀಯ ಬಾಂಧವ್ಯ ಅಭಿವೃದ್ಧಿಗೆ ಅತ್ಯವಶ್ಯ ಎಂದು ಭಾರತ ಭಾವಿಸಿದೆ’ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ದೋಕಲಾದಲ್ಲಿ ಉಭಯ ರಾಷ್ಟ್ರಗಳ ಸೇನಾಪಡೆಗಳ ಮುಖಾಮುಖಿ ಮುಂದುವರಿದಿದೆ. ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಈ ಬೆಳವಣಿಗೆ ಕುರಿತು ಸೂಕ್ಷ್ಮವಾಗಿ ನಿಗಾ ಇರಿಸಿರುವ ಭಾರತ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತ–ಭೂತಾನ್ ಪ್ರತ್ಯೇಕಗೊಳಿಸುವ ಪ್ರದೇಶಕ್ಕೆ ಸಮೀಪವಿರುವ ಚೀನಾ ನಿಯಂತ್ರಿತ ಕಣಿವೆಯಲ್ಲಿ ಚೀನಾ ಹಾಗೂ ಭಾರತದ ಸೇನಾಪಡೆಗಳು ಕಾದಾಟ ನಡೆಸುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.