ADVERTISEMENT

ಪ್ರಾಣಿಗಳಿಗಳೂ ಇರಬೇಕಿತ್ತು ಮತದಾನದ ಹಕ್ಕು!

ಕೆ.ಎಂ.ಸಂತೋಷ್‌ ಕುಮಾರ್‌
Published 21 ಅಕ್ಟೋಬರ್ 2017, 19:30 IST
Last Updated 21 ಅಕ್ಟೋಬರ್ 2017, 19:30 IST

ಬೆಂಗಳೂರು: ‘ವನ್ಯಜೀವಿಗಳಿಗೂ ಮತದಾನದ ಹಕ್ಕು ಇರಬೇಕಿತ್ತು, ಮತದಾನದ ಹಕ್ಕು ಇದ್ದಿದ್ದರೆ ಅದರ ಕಥೆನೇ ಬೇರೆ ಇರ್ತಿತ್ತು!’ ಇದು ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್‌. ಟಾಟಾ ಸಭಾಂಗಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ 63ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ವ್ಯಕ್ತಪಡಿಸಿದ ‘ಕಳಕಳಿ’.

ವನ್ಯಜೀವಿಗಳ ಸಂರಕ್ಷಣೆಗೆ ಕಠಿಣ ಕಾಯ್ದೆ–ಕಾನೂನು ರೂಪಿಸಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎನ್ನುವುದು ಶಾಸಕರ ಕಳವಳವಾಗಿತ್ತು. ವನ್ಯಜೀವಿಗಳಿಗೆ ಮತದಾನದ ಹಕ್ಕು ಕೊಟ್ಟಿದ್ದರೆ, ಮಾಂಸ, ಚರ್ಮ, ಉಗುರು, ಎಲುಬು, ಕಳ್ಳಸಾಗಣೆ....ಇತ್ಯಾದಿ ಉದ್ದೇಶಕ್ಕೆ ಶಿಕಾರಿಯಾಗುತ್ತಿರುವ ‘ಮತದಾರ ವನ್ಯಜೀವಿ ಬಂಧು’ಗಳ ಮೇಲೆ ರಾಜಕಾರಣಿಗಳಿಗೆ ಪ್ರೀತಿ ಉಕ್ಕುತ್ತಿತ್ತು. ಓಟಿನ ಆಸೆಗಾದರೂ ಅವುಗಳನ್ನು ಸಂರಕ್ಷಣೆಗೆ ಮುಂದಾಗುತ್ತಿದ್ದರೆನ್ನುವ ಆಶಯ ಅವರ ಮಾತಿನಲ್ಲಿತ್ತು!

ಶಾಸಕರ ಮಾತನ್ನು ಕೇಳಿಸಿಕೊಂಡ, ಸಭಿಕರ ಸಾಲಿನಲ್ಲಿ ಕುಳಿತಿದ್ದ ಹಿರಿಯರೊಬ್ಬರು ‘ಕಾಡಿನ ನಿಯಮಕ್ಕನುಗುಣವಾಗಿ ಬದುಕುತ್ತಿರುವ ವನ್ಯಜೀವಿಗಳ ನೆಮ್ಮದಿ, ಸ್ವಾತಂತ್ರ್ಯದ ಬದುಕನ್ನು ‘ಚುನಾವಣಾ ರಾಜಕಾರಣ’ ಕಸಿದುಕೊಳ್ಳುತ್ತಿರಲಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ’ ಎಂದು ಮೆಲುದನಿಯಲ್ಲಿ ಮಾತನಾಡಿಕೊಂಡಿದ್ದು ಶಾಸಕರ ಕಿವಿಗೆ ಬೀಳಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.