ವಿಜಯಪುರ: ‘ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಪ್ರತಿಷ್ಠಿತ ಖಾಸಗಿ ಬ್ಯಾಂಕ್ಗಳು ಗ್ರಾಹಕರನ್ನು ಆಕರ್ಷಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ದೊಡ್ಡ ಪೋಸ್ಟರ್ ಹಾಕಿರ್ತಾರಾ. ಇದನ್ನು ನಂಬಿ ಸಾಲ ಪಡೆದ ಮೇಲೆಯೇ ನಾವು ಎಂಥಾ ಹಳ್ಳಕ್ಕೆ ಬಿದ್ದೀವಿ ಎಂಬುದು ಗೊತ್ತಾಗೋದು? ಅವರು ವಿಧಿಸುವ ಹಿಡನ್ ಚಾರ್ಜ್ ಅಲ್ಲಿವರ್ಗೂ ಗೊತ್ತೇ ಆಗಲ್ರೀ...’
ವಿಧಾನ ಪರಿಷತ್ ಸದಸ್ಯ, ಸ್ಥಳೀಯ ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತದ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಈಚೆಗೆ ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ಗಳು ವಿಧಿಸುವ ಹಿಡನ್ ಚಾರ್ಜ್ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯವಿದು.
‘ಸಿದ್ಧಸಿರಿ ಸಹಕಾರಿ ಸೌಹಾರ್ದ ನಿಯಮಿತಕ್ಕೆ ಹುಬ್ಬಳ್ಳಿಯ ಎಸ್ಬಿಐ ಶಾಖೆಯಿಂದ ಸಾಲ ಪಡೆದಿದ್ದೇವೆ. ವರ್ಷಕ್ಕೊಮ್ಮೆ ಬ್ಯಾಂಕ್ನ ಅಧಿಕಾರಿಗಳು ಪರಿಶೀಲನೆಗೆ ಬಂದ್ರೇ ₹25,000 ಕೊಡ್ಬೇಕು. ಇದರ ಜತೆಗೆ ಗಾಡಿ ಖರ್ಚು–ಊಟಾನೂ ನಾವೇ ಹಾಕ್ಬೇಕು. ಇನ್ನಿತರ ಎಲ್ಲ ವಗೈರೆಗಳ ವೆಚ್ಚವೂ ನಮ್ಮದೇ. ಆದ್ರೆ ಅವ್ರೂ ಅಲ್ಲೂ ಕ್ಲೈಂ ಮಾಡ್ಕೊಳ್ತಾರೆ. ನಮ್ಮಂಥವರಿಗೇ ಹಿಂಗಾ..!
ಇನ್ನೂ 9–10% ಗೆ ಗೃಹ ಸಾಲ ಕೊಡ್ತೀವಿ ಅಂತಾರೆ. ಒಂದ್ ಕಂತ್ ಕಟ್ದಿದ್ರೇ ಬಡ್ಡಿಗೆ ಬಡ್ಡಿ ಹಾಕ್ತಾರೆ. ಮನೆ ಬಾಗಿಲಿಗೆ ಬಂದ್ರೇ ಅದರ ಖರ್ಚನ್ನು ನಮ್ಗೆ ಹಾಕ್ತಾರೆ. ಎಲ್ಲಾ ಸೇರಿದ್ರೇ ಬಡ್ಡಿ 17–18% ದಾಟುತ್ತೆ’ ಎಂದು ಬ್ಯಾಂಕ್ಗಳ ಹಿಡನ್ ಚಾರ್ಜ್ನ ರಹಸ್ಯ ಗೋಷ್ಠಿಯಲ್ಲಿದ್ದ ಕೆಲವರನ್ನು ಬೆಚ್ಚಿ ಬೀಳಿಸಿತು. ಅವರ ಮಾತಿನ ಶೈಲಿ ಗೋಷ್ಠಿಯನ್ನು ನಗೆಗಡಲಲ್ಲಿ ತೇಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.