'ಇನ್ನೂ ಇಷ್ಟೋಂದು ಹೂವು ಕಟ್ಟಬೇಕಾ? ನಾನಂತು ಕಟ್ಟೊಲ್ಲ, ಅಪ್ಪ ಕೈ ನೋಯಿತ್ತಿದೆ ಸಾಕು. ನಾನಿನ್ನು ಆಟ ಆಡೊಕೆ ಹೋಗಬೇಕು.' ಹೀಗೆನ್ನುತ್ತಾ ಆಕೆ ಇನ್ನೇನು ಮನೆಯಿಂದ ಹೊರಗೆ ಹೋಗಬೇಕು ಅಷ್ಟರಲ್ಲಿ, “ಏ,.. ಎಲ್ಲೇ ಹೋಗ್ತೀದೀಯಾ? ನಿಂತುಕೊಳ್ಳೆ ಅಲೆಲೆ...,ಮುಖ ನೋಡು ಕರ್ರಗೆ ಹಂದಿತರ ಇದೀಯ! ನಿನ್ನ ಮುಖ ಯಾರನ್ನ ಹೋಲುತ್ತೆ? ನಿಮ್ಮ ಅಪ್ಪ-ಅಮ್ಮಂದಂತು ಅಲ್ಲವೇ ಅಲ್ಲ. ನೀನು ಒಬ್ಬಳೆ ಹೆಂಗೆ ಹುಟ್ಟಿದೆ ಕಾಗೆ ಬಣ್ಣ ಥೂ ದರಿದ್ರ”. ಆಕೆಗೆ ಯಾವ ಸಂಬಂಧ ಇಲ್ಲದಿದ್ದರೂ ಪಕ್ಕದ್ಮನೆ ಅಜ್ಜಿ ದಿನವೂ ವಟಗುಟ್ಟುತ್ತಿದ್ದಳು. ಒಂದು ಮಾತೂ ಮಾರುತ್ತರಿಸದೆ ಮತ್ತೊಂದು ಕ್ಷಣದಲ್ಲಿ ತನ್ನ ಸೌಂದರ್ಯ ನೋಡಿಯೇ ಬೆರಗಾಗಬೇಕು ಹಂಗೆ ರೆಡಿಯಾಗಿ ಅಜ್ಜಿ ಮುಂದೆ ನಿಂತು ಬಿಡುತ್ತಿದ್ದಳು. ಅಜ್ಜಿ ಮರು ಮಾತಾಡದೆ ತುಟಿ ಮೇಲೆ ಬೆರಳಿಟ್ಟುಕೊಂಡು ಕಣ್ಣು ಪಿಳಿ-ಪಿಳಿ ಬಿಟ್ಟುಕೊಂಡು ಮೌನವಹಿಸಿತ್ತಿದ್ದಳು. ಇದು ಅವಳ ದಿನ ನಿತ್ಯದ ಅಂತರಾಳದ ಆರ್ತನಾದದ ಹೋರಾಟ. 'ಬಣ್ಣ ಯಾವುದಾದರೇನು ಪ್ರೀತಿ ಭಾಂದವ್ಯ ತಾನೆ ಮುಖ್ಯ?' ಎಂಬ ಯೋಚನೆ ಅವಳದು.
ಆಶ್ಚರ್ಯದಿಂದ ಜನ ಸೇರಿದ್ದಾರೆ! ಯಾಕೆ ಅಂತ ನೋಡಿದರೆ, “ಜಾತಿಗೆ ಸವಲಾಕಿ 18ರ ಹದಿಹರೆಯದಲ್ಲಿ ಮನಸಿಗೊಪ್ಪುವವನ ಮದುವೆಯಾಗಿಯೇ ಹಳ್ಳಿಯಲ್ಲಿ ಬಂದು ನಿಂತಿದ್ದಳು.” ಊರಿನ ಜನ ಬೆರಗಾಗಿ ನೋಡುವಷ್ಟರಲ್ಲಿ ಹುಡುಗನ ಕುಟುಂಬ ಹಾಗೂ ಜಾತಿವಾದಿಗಳು ಸೇರಿ ಅವರನ್ನ ಊರಿಂದ ಹೊರ ಹಾಕಿದರು. ಎದೆಗುಂದದೆ ಅಲ್ಲಿನ ಜಾತಿ ವ್ಯವಸ್ಥೆಗೆ ಹಾಗೂ ಪುರುಷ ಪ್ರಧಾನತೆಯ ಮೌಲ್ಯಗಳಿಗೆ ಸವಾಲು ಎಸೆದು ಮೌನವಾಗಿ ಪ್ರತಿಭಟಿಸಿ ಹೊರನಡೆದಳು.
ಜಾತಿವಾದಿಗಳು ಶಾಂತವಾಗದೆ ಮೂರು ಮಕ್ಕಳ ತಂದೆಯಾದ ಅವಳ ಗಂಡನನ್ನು ಅವಳಿಂದ ದೂರ ಮಾಡಿ ಪೌರುಷವನ್ನು ಮರೆದರು. ದೃತಿಗೆಡದೆ ಕನಸು, ಸಂಬಂಧ, ದೈಹಿಕ ಆಕಾಂಕ್ಷೆ ಎಲ್ಲಾ ತೊರೆದು ಇಡೀ ಹಳ್ಳಿಗೆನೇ ಕಚ್ಚೆ ಹಾಕಿ ಕೇಳಿದಳು, "ಇನ್ನೇನು ಮಾಡುವಿರಿ ನೀವು?”
ಯಾರೋ ಬಂದು ನನ್ನ ಕಷ್ಟ ನೋಡಿ ಸಹಾಯ ಮಾಡೀಯಾರು ಎಂದೂ ನಿರೀಕ್ಷಿಸಲಿಲ್ಲ. ಜೀವಪರವಾದ ಕಾಳಜಿ, ಬದ್ಧತೆ, ಪ್ರೀತಿ, ಮಮತೆ, ಕರುಣೆ ಧೈರ್ಯ, ಗಂಡಿನ ಸಮಸಮವಾಗಿ ಬದುಕಿನ ಬಂಡಿಯನ್ನು ಎಳೆಯ ಬಲ್ಲೆ ಎನ್ನುವ ದೃಢವಾದ ನಂಬಿಕೆಯಲ್ಲಿ ಜೀವಿಸುತ್ತಿರುವ ಕಪ್ಪು ಸುಂದರಿ ಬೆಂಕಿಯಲ್ಲ ಬೆಳಕು. ಇವಳೇ ನನ್ನ ಸ್ಪೂರ್ತಿ. ಆಕೆ ಸುನೀತಾ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.