ADVERTISEMENT

ನಾಡ ಧ್ವಜವೋ ಕನ್ನಡ ಧ್ವಜವೋ!

ಎಂ.ಅಬ್ದುಲ್ ರೆಹಮಾನ್ ಪಾಷ
Published 12 ಮಾರ್ಚ್ 2018, 19:30 IST
Last Updated 12 ಮಾರ್ಚ್ 2018, 19:30 IST
ನಾಡ ಧ್ವಜವೋ ಕನ್ನಡ ಧ್ವಜವೋ!
ನಾಡ ಧ್ವಜವೋ ಕನ್ನಡ ಧ್ವಜವೋ!   

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಳದಿ, ಬಿಳಿ, ಕೆಂಪು ಈ ಮೂರು ಬಣ್ಣಗಳ ಮಧ್ಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಲಾಂಛನವಿರುವ ಒಂದು ಧ್ವಜದ ಮಾದರಿಯನ್ನು ‘ಬಿಡುಗಡೆ’ ಮಾಡಿದರು. ಹಾಗೆಂದರೇನು ಗೊತ್ತಿಲ್ಲ. ಏಕೆಂದರೆ, ಈ ಧ್ವಜಕ್ಕೆ ಇನ್ನೂ ಯಾವುದೇ ಮಾನ್ಯತೆ ಇಲ್ಲ. ಇದು ಕೇಂದ್ರ ಸರ್ಕಾರದಿಂದ ಅಧಿಕೃತ ಅನುಮೋದನೆ ಪಡೆಯಬೇಕು. ಈ ಕುರಿತು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಇನ್ನೂ ಪ್ರಸ್ತಾವವೂ ಹೋಗಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಪ್ರಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಕೆಲವು ಜಿಲ್ಲೆ–ತಾಲ್ಲೂಕು ಘಟಕಗಳ ಪ್ರತಿನಿಧಿಗಳು ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಸಿಕ್ಕಿತೆಂದು, ಕನ್ನಡ ಧ್ವಜವೇ ನಾಡಧ್ವಜವಾಗಿದೆ ಎಂದೂ ಹೇಳಿಕೊಂಡು ಈಗಾಗಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ ಕೂಡ. ಸಿದ್ದರಾಮಯ್ಯನವರು ಇದಕ್ಕಾಗಿ ರಚಿಸಿದ ತಜ್ಞರ ಸಮಿತಿ ‘ಪ್ರತ್ಯೇಕ ಧ್ವಜ ಬೇಕೇ?’ ಎಂದು ಪರಿಶೀಲಿಸುವ ಆದೇಶವನ್ನು ಹೊಂದಿರಲಿಲ್ಲ; ಬದಲಿಗೆ ರಾಜ್ಯಕ್ಕೆ ಬೇಕಾಗಿರುವ ಪ್ರತ್ಯೇಕ ಧ್ವಜದ ವಿನ್ಯಾಸ ಹೇಗಿರಬೇಕು ಎಂಬುದನ್ನು ರೂಪಿಸಬೇಕಾಗಿತ್ತು; ಸಮಿತಿ ತನ್ನ ಕೆಲಸವನ್ನು ಮಾಡಿ ಮುಗಿಸಿದೆ.

ಏನಾದರೂ ಮಹತ್ವವಾದ ಹೊಸದನ್ನು ಹುಟ್ಟು ಹಾಕಬೇಕು ಎಂದರೆ ಅದರ ತೀವ್ರವಾದ ಅಗತ್ಯವಿರಬೇಕು. ಅದರ ಕೊರತೆಯಿಂದ ಏನಾದರೂ ಹಾನಿ, ನಷ್ಟ ಆಗಿರಬೇಕು ಅಲ್ಲವೇ? ಇಲ್ಲವಾದರೆ ಹೊಸದನ್ನು ಹುಟ್ಟುಹಾಕುವುದು ಒಂದು ದುಬಾರಿ ಹವ್ಯಾಸವಾಗಿಬಿಡುತ್ತದೆ. ಪ್ರತ್ಯೇಕ ನಾಡಧ್ವಜ ರಚನಾ ಸಮಿತಿಯು ಕೊನೆಯ ಬಾರಿ ಸೇರುವ ಮುನ್ನ ನಾನು ಅದರ ಐದಾರು ಪ್ರಮುಖ ಸದಸ್ಯರಿಗೆ ದೀರ್ಘ ಪತ್ರವನ್ನು ಬರೆದಿದ್ದೆ. ಅದರಲ್ಲಿ, ‘ಸಂವಿಧಾನದ ಅಡಿಯಲ್ಲಿ ಸೂಚಿತವಾಗಿರುವ ಒಂದು ರಾಷ್ಟ್ರಧ್ವಜ ಈಗಾಗಲೇ ಇರುವಾಗ ನಮ್ಮ ರಾಜ್ಯಕ್ಕೊಂದು ಪ್ರತ್ಯೇಕ ‘ರಾಜ್ಯಧ್ವಜ’ ಬೇಕೆ? ‘ಬೇಕು, ಪ್ರಾದೇಶಿಕ ಅಸ್ಮಿತೆಗಾಗಿ ರಾಜ್ಯಧ್ವಜ ಬೇಕು’ ಎನ್ನುವುದಾದರೆ, ಇಷ್ಟೊಂದು ಪ್ರಾಧಿಕಾರಗಳು, ಪರಿಷತ್ತು, ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಾದೇಶಿಕ ಉತ್ಸವಗಳು, ರಾಜ್ಯೋತ್ಸವ, ಹತ್ತಾರು ಜಯಂತಿಗಳು, ಕನ್ನಡ ಪರ ಸಂಘ–ಸಂಸ್ಥೆಗಳು ಇವೆಲ್ಲವೋ ಈಗಾಗಲೇ ಪೋಷಿಸಿರುವ ಪ್ರಾದೇಶಿಕ ಅಸ್ಮಿತೆಯಿಂದ ಸಾಧಿಸಲು ಆಗದೇ ಇರುವ ಪ್ರಗತಿಗಿಂತ ಭಿನ್ನವಾದ ಅದ್ಯಾವ ಪ್ರಗತಿಯನ್ನು ನಾವು ರಾಜ್ಯಧ್ವಜದಿಂದ ಸಾಧಿಸಲಿದ್ದೇವೆ’ ಎಂಬ ರೀತಿಯ ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಪತ್ರ ತಲುಪಿದೆ ಎಂದು ಮಾರುತ್ತರ ಕೊಡುವಷ್ಟು ಸಮಯವೂ, ಸೌಜನ್ಯವೂ ಸಮಿತಿಗಿರಲಿಲ್ಲ ಎನ್ನುವುದು ಬೇರೆ ಮಾತು.

ಸಂವಿಧಾನದ ಅಥವಾ ಅದನ್ನು ಆಧರಿಸಿದ ಯಾವುದೇ ಅಧಿನಿಯಮಗಳಲ್ಲಿ ರಾಜ್ಯಗಳಿಗೆ ಪ್ರತ್ಯೇಕ ಧ್ವಜದ ಕುರಿತಾದ ಅಗತ್ಯದ ಅಥವಾ ಅನುಮತಿಯ ಉಲ್ಲೇಖವಿಲ್ಲ. ‘ಆದರೆ, ನಿಷೇಧವೂ ಇಲ್ಲವಲ್ಲ’ ಎಂಬುದು ತಜ್ಞರ ಸಮಿತಿಯ ವಾದ.

ADVERTISEMENT

ಇದೇ ರೀತಿ ಈ ಹಿಂದೆ, ಸಂವಿಧಾನದಲ್ಲಿ ರಾಷ್ಟ್ರಗೀತೆಯ ಕುರಿತು ಉಲ್ಲೇಖಗಳಿವೆ, ಆದರೆ ‘ರಾಷ್ಟ್ರಗಾನ’ (ನ್ಯಾಷನಲ್ ಸಾಂಗ್) ಕುರಿತು ‘ಅನುಮತಿಯೂ ಇಲ್ಲ, ನಿಷೇಧವೂ ಇಲ್ಲವಲ್ಲ’ ಎಂದು ಬಿಜೆಪಿ ಮುಖಂಡ ಅಶ್ವಿನಿಕುಮಾರ್‌ ಉಪಾಧ್ಯಾಯ್ ಎನ್ನುವವರು ‘ವಂದೇಂಮಾತರಂ’ ಹಾಡನ್ನು ‘ನ್ಯಾಷನಲ್ ಸಾಂಗ್’ ಎಂದು ಘೋಷಿಸಬೇಕು; ರಾಷ್ಟ್ರಗೀತೆಯೊಂದಿಗೆ ಇದನ್ನೂ ಹಾಡುವುದನ್ನು ಕಡ್ಡಾಯಗೊಳಿಸಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅದಕ್ಕೆ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, ‘ಸಂವಿಧಾನ ಅನುಚ್ಛೇದ 51 ಎ (ಮೂಲಭೂತ ಹಕ್ಕುಗಳು) ಕೇವಲ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಮಾತ್ರ ಗೌರವಾರ್ಹವೆಂದು ಉಲ್ಲೇಖಿಸುತ್ತದೆ. ನ್ಯಾಷನಲ್ ಸಾಂಗ್ ಕುರಿತಾದ ಯಾವುದೇ ಸಂವಾದದಲ್ಲಿ ನಾವು ತೊಡಗಬಯಸುವುದಿಲ್ಲ’ ಎಂದು ಹೇಳಿ, ಅಶ್ವಿನಿ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಇದೇ ತೀರ್ಪು ನಾಡಧ್ವಜಕ್ಕೂ ಬರಬಹುದು ಎಂಬುದನ್ನು ನಾವು ನೆನಪಿಡಬೇಕು.

ಕನ್ನಡ ಧ್ವಜವನ್ನೇ ‘ನಾಡಧ್ವಜ’ವನ್ನಾಗಿ ಮಾನ್ಯ ಮಾಡಬೇಕು ಎಂಬುದು ಕನ್ನಡ ಪರ ಸಂಘ–ಸಂಸ್ಥೆ, ಬುದ್ಧಿಜೀವಿಗಳ ಒತ್ತಾಯ ಮತ್ತು ನಿರೀಕ್ಷೆಯೂ ಆಗಿತ್ತು. ‘ಕನ್ನಡ ಭಾಷೆಯನ್ನು ಮಾತ್ರ ಪ್ರತಿನಿಧಿಸುವ ಕೆಂಪು-ಹಳದಿ ಬಣ್ಣದ, ನಡುವೆ ಭುವನೇಶ್ವರಿ ದೇವತೆಯ ಚಿತ್ರವನ್ನು ಹೊಂದಿದ ಬಾವುಟವು ಬಹುಧರ್ಮೀಯ, ಬಹುಸಂಸ್ಕೃತಿ, ಬಹುಭಾಷೀಯ ಕರ್ನಾಟಕವನ್ನು ಇಡಿಯಾಗಿ ಪ್ರತಿನಿಧಿಸುವುದಿಲ್ಲ. ಕನ್ನಡ ಧ್ವಜವಾಗಿ ಅದು ಸೂಕ್ತವೇ ವಿನಾ ಇದನ್ನು ಈಗಿರುವ ಹಾಗೆಯೇ ನಾಡಧ್ವಜವಾಗಿ ಒಪ್ಪಿಕೊಳ್ಳುವುದರಲ್ಲಿ ಕೆಲವು ಆತಂಕಗಳಿವೆ. ಮುಂದೆ ಇದು ಅನೇಕ ಭಾಷಿಕ, ಸಾಮುದಾಯಿಕ ಗೊಂದಲ, ಸಂಘರ್ಷಗಳಿಗೆ ಎಡೆಮಾಡಿ ಕೊಡಬಹುದು’ ಎಂಬುದನ್ನೂ ನಾನು ಸಮಿತಿಗೆ ಬರೆದ ಪತ್ರದಲ್ಲಿ ನಿದರ್ಶನಗಳ ಸಹಿತವಾಗಿ ವಿವರವಾಗಿ ಬರೆದಿದ್ದೆ. ನಾನು ಹೇಳಿದ್ದು ಇನ್ನೊಂದು ರೀತಿಯಲ್ಲಿ ನಿಜವಾಗುತ್ತಿರುವುದು ಈಗಾಗಲೇ ಕಾಣುತ್ತಿದೆ.

ಈಗ ರೂಪಿಸಲಾಗಿರುವಂತೆ ತ್ರಿವರ್ಣದ ನಾಡಧ್ವಜವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಈಗಾಗಲೇ ವಿರೋಧಿಸಿದ್ದಾರೆ. ಮುಖ್ಯಮಂತ್ರಿಯವರೇನೋ, ‘ನಾಡಧ್ವಜ’ ಬೇರೆ, ‘ಕನ್ನಡಧ್ವಜ’ ಬೇರೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಮೊದಲಿನಿಂದಲೂ ‘ಕರ್ನಾಟಕ ರಾಜ್ಯೋತ್ಸವ’ದ ಬದಲು ‘ಕನ್ನಡ ರಾಜ್ಯೋತ್ಸವ’ವನ್ನು ಆಚರಿಸಿಕೊಂಡು ಬಂದಿರುವ, ‘ಕನ್ನಡ’ ಎಂಬುದಕ್ಕೂ ರಾಜ್ಯದ ‘ಮಾತೃಭಾಷೆ’ ಎನ್ನುವುದಕ್ಕೂ, ‘ಕನ್ನಡಿಗರಿಗೂ’ ‘ಕರುನಾಡಿಗರಿಗೂ’ ವ್ಯತ್ಯಾಸವನ್ನು ಕಾಣದ ಕನ್ನಡಾಭಿಮಾನಿಗಳಿಗೆ ಇದು ಅರ್ಥವಾಗುವುದಿಲ್ಲ ಅಥವಾ ಇದು ಅವರು ಅಂದುಕೊಂಡಂತೆ ಲಾಭದಾಯವಾಗಿರುವುದಿಲ್ಲ.

ಈಗಾಗಲೇ ಹಲವಾರು ಕನ್ನಡಪರ ಸಂಘ–ಸಂಸ್ಥೆಗಳು, ವ್ಯಕ್ತಿಗಳು, ಕ.ಸಾ.ಪ.ದ ಕೆಲವು ಘಟಕಗಳು ನಾಡಧ್ವಜವು ಕನ್ನಡಪರ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮವನ್ನು ಹಂಚಿಕೊಳ್ಳುತ್ತಿರುವುದನ್ನು ನೋಡುವಾಗ ಮುಖ್ಯಮಂತ್ರಿ ಮಾತು ಅವರಿಗೆ ಅರ್ಥವಾದಂತೆ ತೋರುವುದಿಲ್ಲ. ಅಷ್ಟೇ ಏಕೆ ‘ಪ್ರಜಾವಾಣಿ’ಯ ಮಾರ್ಚ್ 10ರ ಸಂಚಿಕೆಯಲ್ಲಿ ರಘುನಾಥ ಚ.ಹ. ಬರೆದಿರುವ ‘ಕನ್ನಡ ಧ್ವಜ: ಮೂರು ರಂಗು, ನೂರಾರು ಗುಂಗು’ ಎಂಬ ಲೇಖನದಲ್ಲಿಯೂ ಉದ್ದಕ್ಕೂ ಈ ಹೊಸ ತ್ರಿವರ್ಣ ಧ್ವಜವನ್ನು ‘ಕನ್ನಡಧ್ವಜ’ವೆಂದೇ ಪ್ರತಿಪಾದಿಸುತ್ತಾ ಹೋಗಿದ್ದಾರೆ. ಕನ್ನಡಧ್ವಜದ ಮುಂದುವರಿದ ರೂಪವೇ ಈ ಧ್ವಜ ಎನ್ನುವ ಹೊಳಹು ಅವರ ಲೇಖನದಲ್ಲಿ ದೊರೆಯುತ್ತದೆ. ನಾನು ಸಮಿತಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದು ಈ ಬಗೆಯ ಅನಪೇಕ್ಷಿತ ಗೊಂದಲಗಳ ಬಗ್ಗೆಯೇ.

ಸಂವಿಧಾನದ ಪ್ರಕಾರ ಭಾರತ ಒಂದು ಸಾರ್ವಭೌಮ (ಭೂಪ್ರದೇಶ) ರಾಷ್ಟ್ರ. ಜಾಗತಿಕ ಮಟ್ಟದಲ್ಲಿ ಅದರ ಸಾರ್ವಭೌಮತ್ವವನ್ನು ಸಾರಲು ಮತ್ತು ರಾಷ್ಟ್ರಕ್ಕೆ ಒಂದು ಅಸ್ಮಿತೆಯನ್ನು ಕೊಡಲು ರಾಷ್ಟ್ರ ಲಾಂಛನ, ಧ್ವಜ, ಗೀತೆ ಇತ್ಯಾದಿಗಳನ್ನು ಸಂವಿಧಾನದಲ್ಲಿ ನಿರೂಪಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾರ್ವಭೌಮ ಭೂಪ್ರದೇಶಗಳಲ್ಲ. ಅವೆಲ್ಲವೂ ಒಂದು ರಾಷ್ಟ್ರದ ಅಡಿಯಲ್ಲಿ ಆಡಳಿತಾತ್ಮಕ ಸೌಲಭ್ಯಕ್ಕೋಸ್ಕರ ಮಾಡಿಕೊಂಡ ವಿಭಜನೆಗಳು. ಯಾವುದೇ ರಾಜ್ಯ ಒಂದೇ ಭಾಷೆ, ಮತ, ಸಂಸ್ಕೃತಿ, ಪರಂಪರೆ ಎಂಬುದನ್ನು ಹೊಂದಿಲ್ಲ. ಅವೆಲ್ಲವೂ ಒಂದು ರೀತಿ ಕಾಮನಬಿಲ್ಲಿನ ತರಹ ಸಮ್ಮಿಶ್ರವಾದ ಅಸ್ಮಿತೆಯನ್ನು ಹೊಂದಿರುವವು. ಇಷ್ಟಕ್ಕೂ ರಾಜ್ಯಗಳಿಗೂ ಪ್ರತ್ಯೇಕ ಅಧಿಕೃತ ಧ್ವಜ ಬೇಕು ಎಂದಾದರೆ, ರಾಜ್ಯದ ಗಡಿಗಷ್ಟೇ ಈ ‘ಪ್ರಾದೇಶಿಕ ಅಸ್ಮಿತೆ’ಯ ಪ್ರಶ್ನೆ ಏಕೆ ಸೀಮಿತವಾಗಬೇಕು? ಪಂಚಾಯತ್ ರಾಜ್‍ನಿಂದಾಗಿ ಸಾಕಷ್ಟು ಸ್ವಾಯತ್ತ ಘಟಕಗಳಾಗಿ ಆಡಳಿತ ನಿರ್ವಹಿಸುವ ಜಿಲ್ಲೆಗೊಂದು, ತಾಲ್ಲೂಕಿಗೊಂದು, ಗ್ರಾಮಪಂಚಾಯಿತಿಗೊಂದು ಪ್ರತ್ಯೇಕ ಧ್ವಜ ಏಕೆ ಬೇಡ? ಅವುಗಳಿಗೂ ಪ್ರಾದೇಶಿಕ ಅಸ್ಮಿತೆ ಬೇಡವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.