ADVERTISEMENT

ಅಮ್ಮನಿಗೆ ಮೊದಲ ಸಹಾಯ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:30 IST
Last Updated 13 ಜೂನ್ 2018, 19:30 IST
ಅಭಿಜ್ಞಾ ಸತೀಶ್‌
ಅಭಿಜ್ಞಾ ಸತೀಶ್‌   

ತೋಟಕ್ಕೆ ಹೋಗ್ಬಂದು ಅನ್ನಕ್ಕಿಟ್ರಾಯ್ತು ಎಂದು ಅಮ್ಮ ಅಂದುಕೊಂಡರು. ಆಗ ನಾನು ಒಂದನೇ ತರಗತಿಗೆ ಸೇರಿ 2 ದಿನ ಆಗಿತ್ತು. ಶಾಲೆಯಲ್ಲಿ ಮೊದಲ ದಿನವೇ ಮೇಷ್ಟ್ರು ನಾಳೆಯಿಂದ ‘ಪ್ರತಿದಿನ ಅಪ್ಪ-ಅಮ್ಮಂಗೇನಾದ್ರು ಸಹಾಯ ಮಾಡಿ ಬಂದು ನಂಗೊಪ್ಪಿಸ್ಬೇಕು’ ಅಂದಿದ್ದರು. ಹಾಗಾಗಿ ಅವತ್ತು  ಭಾನುವಾರ ಆದ್ದರಿಂದ, ನನ್ನ ತಂಗಿಯೊಟ್ಟಿಗೆ ಆಟ ಆಡೋದಕ್ಕೆ ಮನೆ ಹತ್ರ ಇರುವ ಕಾಡಿಗೆ ಒಂದು ಅಗಲವಾದ ಕಾಫಿ ಮಾಡುವ ‍ಪಾತ್ರೆ, ಒಂದ್ಹಿಡಿಯಷ್ಟು ಅಕ್ಕಿ, ಬೆಂಕಿಪೊಟ್ಟಣ ಮತ್ತು ಅಜ್ಜಿಯ ಹಳೇ ಸೀರೆ ತಗೊಂಡು ಹೊರಟೆ.

ಅಲ್ಲಿ 4 ಗಟ್ಟಿ ಕೋಲು, ಅಡಿಕೆ ಸೋಗೆ ಹಾಗು ಸೀರೆಯಿಂದ ಮನೆ ಕಟ್ಟಿ. ಅದರೊಳಗೆ 3 ಕಲ್ಲು ಇಟ್ಟು, ಒಲೆ ರೆಡಿ ಮಾಡಿ, ಸೌದೆ ಇಟ್ಟು ಉರಿ ಹಚ್ಚಿ, ನಾವು ತಂದಿದ್ದ ಕಾಫಿ ಪಾತ್ರೆಗೆ ಅಕ್ಕಿ ಹಾಕಿ ಅನ್ನ ಮಾಡೋದಕ್ಕಿಟ್ಟು ನಾವು ಹೊರಗೆ ಬಂದು ಮಣ್ಣಾಟ ಶುರು ಮಾಡ್ಕೊಂಡ್ವಿ. ಒಂದರ್ದ ಗಂಟೆಗೆಲ್ಲ ನೀರು ಹಾಕದೆ ಇಟ್ಟ ಅನ್ನದ ಜೊತೆಗೆ ಕಟ್ಟಿದ ಮನೆ, ಅಜ್ಜಿ ಸೀರೆ ಉರಿದು ಹೋಗಿ ಮನೆ ಸುತ್ತ ಹೊಗೆ ಹರಡಿಕೊಳ್ತು. ಅಲ್ಲೇ ಅಂಗಳ ಗುಡಿಸ್ತಿದ್ದ ಅಜ್ಜ ಹೆದರಿ ಓಡಿ ಬಂದು ಇಬ್ರಿಗೂ ಸರಿಯಾಗಿ ಬೈದು, ಬಾರಿಸಿದ್ದರು. ಇದು ಮೇಷ್ಟ್ರಿಗೆ ನಾವೊಪ್ಪಿಸಿದ ಮೊದಲ ಸಹಾಯದ ತುಣುಕಾಗಿತ್ತು. ಮೊದಲ ಸಲ ಕುಕ್ಕರ್‌ನಲ್ಲಿ ಅನ್ನಕ್ಕಿಟ್ಟು ನೀರು ಕಡಿಮೆ ಹಾಕಿ ಮಾಡಿದ ಎಡವಟ್ಟು ಈ ಕತೆಯನ್ನು ನೆನಪಿಸಿತ್ತು.

⇒ಅಭಿಜ್ಞಾ ಸತೀಶ್, ಚಿಕ್ಕಲಸಂದ್ರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.