ADVERTISEMENT

ವಿಶ್ಲೇಷಣೆ: ಸಮಗ್ರತೆ ಮೂಡಲಿ, ಅಲ್ಪಮತಿ ತೊಲಗಲಿ

ಸ್ಥಾಪಿತ ಮೌಲ್ಯಗಳು ಜಡವಾದಾಗ ಅವನ್ನು ಸರಿಪಡಿಸಲು ಪರಿವರ್ತನೆ ಬೇಕಾಗುತ್ತದೆ

ಡಾ.ಶಿವಮೂರ್ತಿ ಮುರುಘಾ ಶರಣರು
Published 9 ಸೆಪ್ಟೆಂಬರ್ 2021, 23:57 IST
Last Updated 9 ಸೆಪ್ಟೆಂಬರ್ 2021, 23:57 IST
   

ವೀರಶೈವವು ಶೈವದ ರೂಪಾಂತರ. ಶೈವ ಆಗಿರಬಹುದು ವೀರಶೈವ ಆಗಿರಬಹುದು ಎರಡೂ ವೇದಾಗಮ ಪ್ರಣೀತವಾದುವು. ತಾವು ಜನಿಸಿದಂತಹ ಶೈವ
ಬ್ರಾಹ್ಮಣದಲ್ಲಿ ಇದ್ದಂತಹ ಅಸಮಾನತೆ, ಅಸ್ಪೃಶ್ಯತೆ, ಲಿಂಗ ತಾರತಮ್ಯ ಮೊದಲಾದ ಭೇದಗಳ ಕುರಿತು ಬಸವಣ್ಣನವರು ಹೀಗೆ ಹೇಳಿದ್ದರು.

ಡಾ. ಶಿವಮೂರ್ತಿ ಮುರುಘಾ ಶರಣರು

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,
ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾಮಹಾದಾನಿ ಕೂಡಲಸಂಗಮದೇವಾ,
ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ

ಇದು ವೇದಾಗಮಗಳ ಬಗೆಗಿನ ಅವರ ಸ್ಪಷ್ಟವಾದ ನಿಲುವು. ಬಸವಣ್ಣನ ಮಾತಾಪಿತೃಗಳು ಮತ್ತು ಅವರ ಮನೆತನವು ಶೈವ ಬ್ರಾಹ್ಮಣಕ್ಕೆ ಸೇರಿದುದಾಗಿತ್ತು. ಹಾಗಾಗಿ ಬಸವಣ್ಣನವರು ಶಿವೋಪಾಸಕರಾಗಿದ್ದರು. ವ್ಯವಸ್ಥೆಯೊಳಗಿನ ಲೋಪದೋಷವನ್ನು ವಿರೋಧಿಸುತ್ತಲೇ ಹೊಸ ಧರ್ಮ ಹುಟ್ಟಿಕೊಂಡಿದೆ. ಅದರಿಂದಾಗಿ ವೀರಶೈವ ಮತ್ತು ಬಸವಾಯತರ ನಡುವಿನ ಅಂತರವು ಆಳವಾಗಿ ಬೆಳೆಯುತ್ತ ಹೋಗಿದೆ. ದೇಶದಲ್ಲಿ ಎಷ್ಟು ಧರ್ಮಗಳು ಅಸ್ತಿತ್ವದಲ್ಲಿ ಬಂದವೊ ಅವೆಲ್ಲವೂ ನ್ಯೂನತೆಗಳನ್ನು ವಿರೋಧಿಸುತ್ತ ಅಸ್ತಿತ್ವಕ್ಕೆ ಬಂದಿವೆ.

ADVERTISEMENT

ವೈದಿಕ ಧರ್ಮವು ಸನಾತನವಾದುದು. ಸ್ಥಾಪಿತ ಮೌಲ್ಯಗಳು ಜಡವಾದಾಗ ಅವನ್ನು ಸರಿಪಡಿಸಲು ಪರಿವರ್ತನೆ ಬೇಕಾಗುತ್ತದೆ. ಹೊಸ ಧರ್ಮದ ಉಗಮ ಆದಾಗಲೆಲ್ಲ ಸಂಘರ್ಷಗಳು ನಡೆದಿವೆ. ಅದರಿಂದ ಬೌದ್ಧ ಧರ್ಮ ಹೊರತಾಗಿಲ್ಲ. ಬುದ್ಧನ ಮೇಲೆ ದೌರ್ಜನ್ಯಗಳು ನಡೆದಿವೆಯೆಂಬುದು ಇತಿಹಾಸದಿಂದ ತಿಳಿದು
ಬರುತ್ತದೆ. ದೇಶದಲ್ಲಿ ಧರ್ಮವನ್ನು ವಿಸ್ತರಿಸಲು ಸಾಧ್ಯ ಆಗದಿದ್ದಾಗ, ಅದು ಹೊರದೇಶಗಳಲ್ಲಿ ಅಸ್ತಿತ್ವ ಕಂಡು
ಕೊಂಡಿತು. ಅಷ್ಟೇ ಪ್ರಾಚೀನವಾದುದು ಜೈನಧರ್ಮ. ಯಜ್ಞದ ಹೆಸರಲ್ಲಿ ನಡೆಯುತ್ತಿದ್ದಂತಹ ಹಿಂಸೆಯನ್ನು ವಿರೋಧಿಸುತ್ತ, ಸ್ವತಂತ್ರ ಧರ್ಮದ ಸ್ವರೂಪ ಪಡೆಯಿತು. ನಂತರ ಸಿಖ್ ಧರ್ಮವು ಸಾಕಾರ ಪಡೆಯಿತು.

ಯಾವ ಸಮಸ್ಯೆಗಳು ಪರಿವರ್ತನೆ ಕಾಣದೆ ಉಳಿದಿದ್ದವೋ, ಅಂಥ ಸಮಸ್ಯೆಗಳನ್ನು ಹನ್ನೆರಡನೇ ಶತಮಾನದ ಬಸವಣ್ಣ ಮತ್ತಿತರ ಶರಣರು ಕೈಗೆತ್ತಿಕೊಂಡರು. ಅವೆಂದರೆ, ಲಿಂಗ ಅಸಮಾನತೆ ಮತ್ತು ಅಸ್ಪೃಶ್ಯತಾ ನಿವಾರಣೆ. ಒಂದು, ಮಹಿಳೆಯರ ಹಕ್ಕುಬಾಧ್ಯತೆಯನ್ನು ಎತ್ತಿ ಹಿಡಿಯುವುದು; ಮತ್ತೊಂದು, ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವುದು. ಅದಕ್ಕಾಗಿ ಬಸವಣ್ಣ ನಿರ್ಲಕ್ಷಿತ ಸಮುದಾಯಗಳನ್ನೆಲ್ಲ ಒಟ್ಟುಗೂಡಿಸುತ್ತ, ಅವರಲ್ಲಿ ಸ್ವಾಭಿಮಾನ ಜಾಗೃತಿ ಮೂಡಿಸಿದರು. ಬಿಡಿಬಿಡಿಯಾಗಿದ್ದ ಶರಣರನ್ನು ಒಗ್ಗೂಡಿಸಿದರು. ಕುಲಕಸುಬುಗಳು ಕಾಯಕ ಸ್ವರೂಪ ಪಡೆದು ಕಾಯಕ ಸಮಾಜ ರಚನೆಗೊಂಡಿತು.

ಮುಸ್ಲಿಂ ರಾಜಮಹಾರಾಜರು ಸಾವಿರಾರು ವರ್ಷಗಳವರೆಗೆ ದೇಶವನ್ನು ಆಳಿದ್ದು, ಗಣನೀಯವಾಗಿ ಮತಾಂತರ ನಡೆದಿದೆ. ಅದರಂತೆ ಎಲ್ಲ ಧರ್ಮಗಳು ಮತಾಂತರವನ್ನು ಪ್ರಮುಖ ಆಶಯವನ್ನಾಗಿಟ್ಟುಕೊಂಡು ತಮ್ಮ ಧರ್ಮವನ್ನು ವಿಸ್ತರಿಸುತ್ತ ಹೋಗಿವೆ. ಧಾರ್ಮಿಕ ಹಕ್ಕಿನಿಂದ ವಂಚಿತವಾಗಿದ್ದ ಸಣ್ಣಪುಟ್ಟ ಜನಾಂಗಗಳೆಲ್ಲ ಬಸವಣ್ಣನವರ ಮುಖಂಡತ್ವದಲ್ಲಿ ಒಂದಾದದ್ದು ಅವರ ಸಂಘಟನಾ ಶಕ್ತಿಗೆ ಮಾತ್ರವಲ್ಲದೆ ಶರಣರ ಸ್ವಾಭಿಮಾನದ ಶಕ್ತಿಗೆ ದ್ಯೋತಕ. ತಮ್ಮ ಪೂರ್ವಾಶ್ರಯವನ್ನು ಕಳೆದುಕೊಂಡ ಜನಾಂಗಗಳು ಹೊಸ ಸಿದ್ಧಾಂತ ಕಂಡುಕೊಂಡವು. ತಾವು ಕಟ್ಟಿದ ಶರಣ ಧರ್ಮದೊಂದಿಗೆ ಶರಣರು ಗುರುತಿಸಿಕೊಂಡರು.

ತಮ್ಮನ್ನು ಹೊರದೂಡಿದ ಪಟ್ಟಭದ್ರರಿಗೆ ಬಸವಣ್ಣನವರು ಹೀಗೆ ಉತ್ತರ ಕೊಡುತ್ತಾರೆ. ಬಹಿಷ್ಕಾರದಿಂದ ನೊಂದು ಬೆಂದ ಬಸವಣ್ಣ ಅದನ್ನೇ ಭವಿಷ್ಯದ ಬದುಕಿಗೆ ಮೆಟ್ಟಿಲಾಗಿಸಿಕೊಳ್ಳುತ್ತಾರೆ. ಅದು ಬಸವ ಶಕ್ತಿ. ಅವರ ಪ್ರಯತ್ನ ಅಷ್ಟಕ್ಕೇ ನಿಲ್ಲದೆ ಸಮ ಸಮಾಜವನ್ನು ಕಟ್ಟಲು ಮುಂದಾಗುತ್ತಾರೆ. ಅಂತರ್ಜಾತಿ ವಿವಾಹ ನೆರವೇರಿಸಿದಾಗ ವರ್ಣಸಂಕರದ ಆರೋಪ ಹೊರಿಸಿದ ಬಿಜ್ಜಳ ಮತ್ತವರ ಕಡೆಯಿಂದ ಬಹಿಷ್ಕಾರ. ಬಸವಣ್ಣನವರಿಗೆ ಆರಂಭ ಮತ್ತು ಅಂತ್ಯ ಎರಡು ಹಂತದಲ್ಲೂ ಬಹಿಷ್ಕಾರ. ಅದನ್ನು ಸವಾಲಾಗಿ ಸ್ವೀಕರಿಸಿದ ಬಸವಣ್ಣ ಭವ್ಯ ವ್ಯಕ್ತಿಯಾಗುತ್ತಾರೆ; ಬಹಿಷ್ಕಾರದಿಂದ ಎದ್ದುಬರುತ್ತಾರೆ.

ಇಷ್ಟೆಲ್ಲ ತ್ಯಾಗ ಮತ್ತು ಬಲಿದಾನದಿಂದ ಕಟ್ಟಲ್ಪಟ್ಟಂತಹ ಶರಣಧರ್ಮವನ್ನು ಸರ್ವರೂ ಒಗ್ಗೂಡಿ ಬೆಳೆಸಿದ್ದರೆ ಬೌದ್ಧ ಧರ್ಮದಷ್ಟೇ ಪ್ರಭಾವಶಾಲಿಯಾಗಿ ವಿಶ್ವದಾದ್ಯಂತ ಪ್ರಚಾರಗೊಳ್ಳುತ್ತಿತ್ತು. ಸನಾತನವಾದ ಮತ್ತು ಪರಿವರ್ತನವಾದ ಎರಡರ ನಡುವಿನ ತಿಕ್ಕಾಟದಿಂದಾಗಿ ಸ್ವಾಮಿ ವಿವೇಕಾನಂದರು, ಬಾಬಾಸಾಹೇಬ ಅಂಬೇಡ್ಕರರು, ಕೊಲ್ಲಾಪುರದ ಶಾಹು ಮಹಾರಾಜರು, ಮೈಸೂರಿನ ಅರಸು ಮನೆತನದ ಮಹಾರಾಜ ಮುಂತಾದವರು ಈ ಧರ್ಮಕ್ಕೆ ಸೇರ್ಪಡೆ ಆಗುವ ಸಂದರ್ಭವು ಕೈತಪ್ಪಿ ಹೋಯಿತು.

ಪ್ರಾಚೀನ ಪರಂಪರೆಯು ವೇದಾಗಮ ಪ್ರಣೀತವಾದರೆ; ಬಸವ ಪರಂಪರೆಯು ವಚನಾಗಮ ಕೇಂದ್ರಿತವಾಗಿದೆ. ಇಬ್ಬರ ನಡುವಿನ ತಾತ್ವಿಕ ಸಂಘರ್ಷ, ಅದರೊಂದಿಗೆ ಸಾಮಾಜಿಕ ಸಂಘರ್ಷ. ಎರಡು ಪ್ರಭೇದಗಳು. ಉಭಯತ್ರರು ದಲಿತ, ಕ್ರೈಸ್ತ, ಮುಸ್ಲಿಂ ಮತ್ತು ಇತರೆಯವರೊಟ್ಟಿಗೆ ಸಂಪರ್ಕ ಹೊಂದುತ್ತಾರೆ. ಒಂದೇ ಧರ್ಮಕ್ಕೆ ಸೇರಿದ ಲಿಂಗಾಯತರು ವೀರಶೈವರನ್ನು; ವೀರಶೈವರು ಲಿಂಗಾಯತರನ್ನು ಪರಸ್ಪರ ದ್ವೇಷಿಸುತ್ತಾರೆ. ಅವರವರ ಪರಂಪರೆ ಅವರವರಿಗೆ ಶ್ರೇಷ್ಠ. ತಮ್ಮ ಧರ್ಮ ಅಥವಾ ಪರಂಪರೆಯನ್ನು ಅನುಸರಿಸಲಿ. ಸಾಮಾಜಿಕ ಸಾಮರಸ್ಯ ಸ್ಥಾಪಿಸುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತ. ಇಷ್ಟನ್ನು ಹೇಳಿದಾಕ್ಷಣ ಕೆಲವರು- ಇವರು ವೀರಶೈವರ ಕಡೆ ವಾಲುತ್ತಿದ್ದಾ
ರೆಂದು ಭಾವಿಸುತ್ತಾರೆ. ಬಸವಧರ್ಮ ಸ್ಥಾಪನೆ ಹಿನ್ನೆಲೆಯಲ್ಲಿ ಆರಂಭವಾದ ಕಾನೂನು ಸಂಘರ್ಷವು ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಬೆಂಬಲಿಸಿದಾಗಲೂ ಮುಂದುವರಿದಿತ್ತು.

ಐತಿಹಾಸಿಕ ಮುರುಘಾ ಮಠಕ್ಕೆ ರಾಜ್ಯದಾದ್ಯಂತ ಶಾಖಾ ಮಠಗಳು.ಉತ್ತರ ಕರ್ನಾಟಕದ ಲಿಂಗಾಯತ, ದಕ್ಷಿಣ ಕರ್ನಾಟಕದ ವೀರಶೈವ ಉಭಯತ್ರರೂ ನಡೆದುಕೊಳ್ಳುತ್ತಾರೆ. ಲಿಂಗಾಯತಕ್ಕೆ ಒತ್ತುಕೊಟ್ಟರೆ ವೀರಶೈವರು ದ್ವೇಷಿಸುತ್ತಾರೆ, ವೀರಶೈವರತ್ತ ಗಮನಹರಿಸಿದರೆ ಲಿಂಗಾಯತರು ದೂಷಿಸುತ್ತಾರೆ. ಕೇವಲ ವೇದಿಕೆ ಹಂಚಿಕೊಳ್ಳುವುದರಿಂದ ಅವರ ಸಿದ್ಧಾಂತವನ್ನು ಒಪ್ಪಿಕೊಳ್ಳಲಾಗುತ್ತದೆಂಬ ವಾದ ಸರಿಯಲ್ಲ. ಯಾವ ಧರ್ಮ, ಯಾವ ಸಂಘಟನೆ ಆಮಂತ್ರಿಸಿದಾಗಲೂ ಸಾಮಾಜಿಕ ಸಾಮರಸ್ಯ ಮುಖ್ಯವಾಗುತ್ತದೆಯೇ ಹೊರತು ಸೈದ್ಧಾಂತಿಕ ಬದ್ಧತೆ ಎಂದಿಗೂ ಬದಲಾಗದು.

ನಾನು ಬಸವಾಯತ, ನನ್ನ ಬಸವನಿಷ್ಠೆ ಅಚಲವಾದುದು, ಪ್ರಗತಿಪರವಾದುದು. ನನ್ನ ಹೆಜ್ಜೆಗಳು ದೃಢವಾಗಿವೆ. ಸೈದ್ಧಾಂತಿಕವಾಗಿ ಯಾವುದೇ ರಾಜಿ ಇರುವುದಿಲ್ಲ. ಎಲ್ಲರಿಗೂ ಆಶೀರ್ವಾದ ಬೇಕೆಂಬ ಒತ್ತಾಸೆಯಷ್ಟೆ. ಶೂದ್ರಾತಿಶೂದ್ರರಿಗೂ ನಾಯಕತ್ವ ನೀಡಿರುವಾಗ, ಅದರಿಂದ ದೂರ ಇರುವವರು ಅದನ್ನು ಕೇಳುವುದು ತಪ್ಪಲ್ಲವೆಂಬ ಭಾವನೆ. ಜಾತಿ, ಧರ್ಮದ ಜಗಳದಲ್ಲಿ ಬಸವತತ್ವಕ್ಕೆ ಪೆಟ್ಟು ಬೀಳದಂತೆ ಕಾಳಜಿ ವಹಿಸಬೇಕಾಗಿದೆ. ಬಸವತತ್ವವು ಒಳಗೊಳ್ಳುವ ತತ್ವ. ಇದನ್ನು ಸರ್ವರೂ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.

ಈ ನಡುವೆ ಒಳಮೀಸಲಾತಿಯ ಬೇಡಿಕೆ ಮುನ್ನೆಲೆಗೆ ಬಂದಿದೆ. ಸಮಕಾಲೀನ ಸಂದರ್ಭದಲ್ಲಿ ಒಳಮೀಸಲಾತಿ ಸಂಬಂಧದ ಹೋರಾಟವು ತೀವ್ರಗೊಂಡಿದ್ದು, ಸಮಗ್ರತೆಗೆ ಹಿನ್ನಡೆ ಆಗುವ ಸಂಭವವಿದೆ. ಯಾವುದೇ ಜನಾಂಗಕ್ಕೆ ತಮ್ಮ ಹಕ್ಕೊತ್ತಾಯ ಮಾಡಲು ಅವಕಾಶವಿದೆ. ಕೆಲವರನ್ನು ಪ್ರೋತ್ಸಾಹಿಸುವ, ಕೆಲವರನ್ನು ತುಳಿಯುವ ದಿಸೆಯಲ್ಲಿ ತಂತ್ರಗಳು ನಡೆಯಬಾರದಷ್ಟೆ.

ಮೂರನೆಯ ಪಂಚಮಸಾಲಿ ಪೀಠವನ್ನು ಅಸ್ತಿತ್ವಕ್ಕೆ ತರುವ ಪ್ರಯತ್ನಕ್ಕೆ ಕೆಲವರು ಮುಂದಾಗಿದ್ದಾರೆಂದು ಮಾಧ್ಯಮಗಳಿಂದ ಮಾಹಿತಿ. ಒಟ್ಟಾರೆ ಒಗ್ಗಟ್ಟಿಗಿಂತ ಬಿಕ್ಕಟ್ಟು ಸೃಷ್ಟಿಯಾಗುತ್ತ ನಡೆದಿದೆ. ಒಂದೊಂದು ಉಪಜಾತಿಯೂ ಮೀಸಲಾತಿ ಹೆಸರಲ್ಲಿ ಬೇರ್ಪಡುವುದರಿಂದ ಸಮಗ್ರತೆಗೆ ದೊಡ್ಡಪೆಟ್ಟು ಬೀಳುತ್ತಿದೆ. ಸಮಗ್ರತೆ
ಯತ್ತ ಗಮನವಿಲ್ಲ; ಒಡೆಯುವುದರತ್ತ ಹೆಚ್ಚು ತುಡಿತ ಕಂಡುಬರುತ್ತಿದೆ.

ಅನೇಕ ಜಾತಿ- ಉಪಜಾತಿಗಳ ಒಳಮೀಸಲಾತಿ ಹೋರಾಟ ನಡೆಯುತ್ತಿದೆ. ಹೋರಾಟ ಮಾಡುವವರು ಪ್ರಬಲರಾಗಿದ್ದರೆ ಮೌನ; ದುರ್ಬಲರಾಗಿದ್ದರೆ ಅವರ ಮೇಲೆ ಸವಾರಿ. ಇತ್ತೀಚೆಗೆ ವೀರಶೈವ ಲಿಂಗಾಯತ ನಿಗಮ ರಚನೆ ಆಗಿದೆ. ಕೆಲವರು ಕೂಡಿಕೊಂಡು ಲಿಂಗಾಯತ ಮಠಾಧೀಶರ ಒಕ್ಕೂಟ ರಚಿಸಿಕೊಂಡಿರುತ್ತಾರೆ. ಸಂಘಟನೆ ಎಷ್ಟೇ ಇದ್ದರೂ ತೊಂದರೆಯಿಲ್ಲ. ಕಾರ್ಯಸಾಧನೆ ಆಗಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.