ADVERTISEMENT

ಬ್ರಿಟಿಷ್‌ ಕಾಲದ ಕಾನೂನು ಕೈಬಿಡಲು ಸಕಾಲ

ಅನಿಂದಿತಾ ಪಟ್ಟನಾಯಕ್‌ ಲಿಯಾ ವರ್ಗೀಸ್‌
Published 23 ಜುಲೈ 2021, 19:30 IST
Last Updated 23 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನಿವೃತ್ತ ಮೇಜರ್‌ ಜನರಲ್‌ ಎಸ್‌.ಜಿ. ಒಂಬತ್ತುಕೆರೆ ಅವರು ಭಾರತೀಯ ದಂಡ ಸಂಹಿತೆಯ (ಐಪಿಸಿ) 124 ಎ ಸೆಕ್ಷನ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಸಾಹತುಶಾಹಿ ಆಳ್ವಿಕೆಯ ಅವಧಿಯಲ್ಲಿ ಸ್ವಾತಂತ್ರ್ಯವನ್ನು ದಮನ ಮಾಡುವುದಕ್ಕಾಗಿ ಈ ಕಾನೂನು ಬಳಕೆ ಆಗುತ್ತಿತ್ತು ಮತ್ತು ಸ್ವಾತಂತ್ರ್ಯಾನಂತರದ ಈಗಿನ ದಿನಗಳಲ್ಲಿ ಈ ಕಾನೂನಿನ ಅಗತ್ಯ ಏನು ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಪ್ರಶ್ನಿಸಿದ್ದಾರೆ. ‘ಸರ್ಕಾರದ ಬಗ್ಗೆ ದ್ವೇಷ ಅಥವಾ ಅಸಹನೆ, ಅಥವಾ ಸರ್ಕಾರದ ವಿರುದ್ಧ ಅಸಮಾಧಾನ ಸೃಷ್ಟಿಸುವುದು ಅಥವಾ ಸೃಷ್ಟಿಸಲು ಯತ್ನಿಸುವುದು’ ದೇಶದ್ರೋಹ ಎಂದು ಐಪಿಸಿಯ 124 ಎ ಸೆಕ್ಷನ್‌ ವಿವರಿಸುತ್ತದೆ. ದೇಶದ್ರೋಹವು ವಿಚಾರಣಾಯೋಗ್ಯ ಮತ್ತು ಜಾಮೀನುರಹಿತ ಅಪರಾಧವಾಗಿದ್ದು, ಜೀವಾವಧಿವರೆಗೆ ಶಿಕ್ಷೆ ವಿಧಿಸಲು ಅವಕಾಶ ಇದೆ.

ಸರ್ಕಾರದ ಮೇಲಿನ ಅಸಮಾಧಾನವನ್ನು ದಮನ ಮಾಡಲು ದೇಶದ್ರೋಹ ಕಾನೂನು ದುರ್ಬಳಕೆ ಆಗುತ್ತಿರುವುದು ಹೆಚ್ಚುತ್ತಲೇ ಇದೆ. ಎಲ್ಲ ರೀತಿಯ ಟೀಕಾಕಾರರ ವಿರುದ್ಧವೂ ದೇಶದ್ರೋಹ ಕಾನೂನು ಬಳಕೆ ಆಗಿದೆ. ಪತ್ರಕರ್ತರು, ಕೂಡಂಕುಳಂನಲ್ಲಿ ಅಣುವಿದ್ಯುತ್‌ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ ಗ್ರಾಮೀಣ ಜನರು, ಮಣಿರತ್ನಂ ಅವರಂತಹ ಸಿನಿಮಾ ನಿರ್ದೇಶಕರು, ನಾಟಕ ಮಾಡಿದ ಶಾಲಾ ಮಕ್ಕಳು, ಅರಣ್ಯ ಹಕ್ಕು ಕಾರ್ಯಕರ್ತರು ಅಷ್ಟೇ ಅಲ್ಲದೆ, ಪಾಕಿಸ್ತಾನವೇನು ನರಕ ಅಲ್ಲ ಎಂದ ರಮ್ಯಾ ಅವರಂತಹ ನಟಿ ಮತ್ತು ರಾಜಕಾರಣಿಯ ವಿರುದ್ಧವೂ ದೇಶದ್ರೋಹ ಸೆಕ್ಷನ್‌ ಅಡಿಯಲ್ಲಿ ದೂರುಗಳು ದಾಖಲಾಗಿವೆ.

ಕಳೆದ ಒಂದು ದಶಕದಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊದ (ಎನ್‌ಸಿಆರ್‌ಬಿ) 2019ರ ವರದಿ ಹೇಳಿದೆ. 2019ರಲ್ಲಿ ದಾಖಲಾದ ಪ್ರಕರಣಗಳ ಒಟ್ಟು ಸಂಖ್ಯೆ 93, 2016ರಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 35. ಹೀಗಾಗಿ ಈ ಅವಧಿಯಲ್ಲಿ ಆಗಿರುವ ಏರಿಕೆ ಪ್ರಮಾಣವು ಶೇ 165ರಷ್ಟು. 2019ರಲ್ಲಿ ದೇಶದ್ರೋಹದ ಅತಿ ಹೆಚ್ಚು ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. 23 ವ್ಯಕ್ತಿಗಳ ವಿರುದ್ಧ 22 ಪ್ರಕರಣಗಳು ದಾಖಲಾಗಿದ್ದವು. ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಿಗೆ ಸಂಬಂಧಿಸಿ ಕೂಡ ಕರ್ನಾಟಕದಲ್ಲಿಯೇ ದೇಶದ್ರೋಹ ಪ್ರಕರಣಗಳು ಹೆಚ್ಚು ದಾಖಲಾಗಿವೆ ಎಂದು ‘ಆರ್ಟಿಕಲ್‌ 14’ ಹೇಳಿದೆ. ಇವರಲ್ಲಿ ಬಹಳ ಮಂದಿ ಗ್ರಾಮೀಣ ಪ್ರದೇಶದ ಅಂತರ್ಜಾಲ ಬಳಕೆದಾರರು ಮತ್ತು ಇದೇ ಮೊದಲಿಗೆ ಸ್ಮಾರ್ಟ್‌ ಫೋನ್‌ ಬಳಸುತ್ತಿರುವವರು.

ADVERTISEMENT

ಇತಿಹಾಸ

ಮಹಾತ್ಮ ಗಾಂಧಿಯೂ ಸೇರಿದಂತೆ ಸರ್ಕಾರದ ವಿರುದ್ಧ ಮಾತನಾಡಿದ ಭಾರತೀಯ ನಾಯಕರನ್ನು ಜೈಲಿಗೆ ಅಟ್ಟಲು 124 ಎ ಸೆಕ್ಷನ್‌ ಅನ್ನು ಬ್ರಿಟಿಷ್‌ ಸರ್ಕಾರವು ಬಳಸಿಕೊಂಡಿತ್ತು. ‘ಪೌರರ ಸ್ವಾತಂತ್ರ್ಯವನ್ನು ದಮನ ಮಾಡಲು ರೂಪಿಸಲಾದ ಐಪಿಸಿಯ ಸೆಕ್ಷನ್‌ಗಳಲ್ಲಿ ಇದು ಬಹಳ ಮುಖ್ಯವಾದುದು’ ಎಂದು ಗಾಂಧೀಜಿ ಹೇಳಿದ್ದರು. ಈ ಕಾನೂನು, ಸರ್ಕಾರದ ವಿರುದ್ಧ ಮಾತನಾಡಿದವರನ್ನು ಗುರಿ ಮಾಡಿಕೊಂಡಿದೆಯೇ ವಿನಾ ದೇಶದ ವಿರುದ್ಧ ಮಾತನಾಡಿದವರನ್ನು ಅಲ್ಲ ಎಂಬುದೇ ವಸಾಹತುಶಾಹಿ ಸರ್ಕಾರದ ಉದ್ದೇಶ ಏನಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ದೇಶದ್ರೋಹ ಕಾನೂನು ವಾಕ್‌ ಸ್ವಾತಂತ್ರ್ಯವನ್ನು ದಮನ ಮಾಡುತ್ತದೆ ಎಂಬ ವಿಚಾರವು ಸಂವಿಧಾನ ರಚನಾ ಸಭೆಯಲ್ಲಿ ಚರ್ಚೆಗೆ ಒಳಗಾಗಿದೆ.‘ದೇಶದ್ರೋಹ’ವು ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಬಹುದಾದ ಅಪರಾಧ ಎಂದು ಪರಿಗಣಿಸಬಹುದು ಎಂಬ ‍ಪ್ರಸ್ತಾವವನ್ನು ಸಂವಿಧಾನದ ಕರಡು ಹೊಂದಿತ್ತು. ಆದರೆ, ಕೆ.ಎಂ. ಮುನ್ಶಿ ಅವರು ಇದಕ್ಕೆ ತಿದ್ದುಪಡಿಯನ್ನು ಮಂಡಿಸಿದರು. ಈ ತಿದ್ದುಪಡಿಯನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿತು. ಹಾಗಾಗಿ, ‘ದೇಶದ್ರೋಹವು’ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ವಿಚಾರವಾಗಿ 1949ರಲ್ಲಿ ಅಳವಡಿಕೆಯಾದ ಸಂವಿಧಾನದಲ್ಲಿ ಸೇರ್ಪಡೆ ಆಗಲಿಲ್ಲ.

ದೇಶದ್ರೋಹದ ಕಾರಣಕ್ಕೆ ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು ಎಂಬ ಅಂಶವನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸುವುದು ತಿರಸ್ಕೃತಗೊಂಡರೂ, ಐಪಿಸಿಯ ಅಡಿಯಲ್ಲಿ ಅದು ಅಪರಾಧವಾಗಿಯೇ ಉಳಿಯಿತು. ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುವ ಸರ್ಕಾರದ ಅಧಿಕಾರವನ್ನು ಹಲವು ಮಹತ್ವದ ತೀರ್ಪುಗಳು ಮೊಟಕುಗೊಳಿಸಿದವು. ಅದಕ್ಕೆ ಪ್ರತಿಕ್ರಿಯೆಯಾಗಿ, ಅಗಿನ ಸರ್ಕಾರವು ‘ಸಾರ್ವಜನಿಕ ಸುವ್ಯವಸ್ಥೆ’ ಕಾರಣಕ್ಕೆವಾಕ್‌ ಸ್ವಾತಂತ್ರ್ಯಕ್ಕೆ‌ ನಿರ್ಬಂಧ ಹೇರಬಹುದು ಎಂದುಸಂವಿಧಾನಕ್ಕೆ ಮೊದಲ ತಿದ್ದುಪಡಿ ಮಾಡಿತು.ದೇಶದ್ರೋಹ ಕಾನೂನನ್ನು ಸಾರ್ವಜನಿಕ ಸುವ್ಯವಸ್ಥೆಯ ಕಾನೂನು ಎಂದು ಗುರುತಿಸಿ, ವಾಕ್‌ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲು ಸಾಧ್ಯವಾಗುವಂತೆ ಪರಿವರ್ತಿಸಲಾಯಿತು.

ಇದರ ಸಿಂಧುತ್ವವು ಕೇದಾರನಾಥ್‌ ಸಿಂಗ್‌ ಮತ್ತು ಬಿಹಾರ ಸರ್ಕಾರದ ನಡುವಣ ಪ್ರಕರಣದಲ್ಲಿ (ಎಐಆರ್‌ 1962 ಎಸ್‌ಸಿ 955) ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠದ ಮುಂದೆ ಬಂತು. ದೇಶದ್ರೋಹ ಕಾನೂನನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಆದರೆ, ಅದರ ವ್ಯಾಪ್ತಿಯನ್ನು ಕುಗ್ಗಿಸಿತು. ಸರ್ಕಾರದ ವಿರುದ್ಧದ ಟೀಕೆಯು ಹಿಂಸೆಗೆ ಕಾರಣವಾಗದಿದ್ದರೆ ಅಥವಾ ಹಿಂಸೆಗೆ ಕುಮ್ಮಕ್ಕು ನೀಡದೇ ಇದ್ದರೆ ಅದು ದೇಶದ್ರೋಹ ಅಲ್ಲ ಎಂದಿತು.

ಕಾನೂನು ಈಗ ಪ್ರಸ್ತುತವೇ?

ಕೇದಾರನಾಥ್‌ ಪ್ರಕರಣದಲ್ಲಿ ರೂ‌ಪಿಸಲಾದ ಮಾರ್ಗಸೂಚಿಗಳು ಕಾನೂನು ಜಾರಿ ಸಂಸ್ಥೆಗಳ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಸರ್ಕಾರವನ್ನು ಟೀಕಿಸಿದ ಭಿನ್ನಮತೀಯರಿಗೆ ಕಿರುಕುಳ ನೀಡಲು ಈ ಸಂಸ್ಥೆಗಳು ಈ ಕಾನೂನನ್ನು ಬಳಸಿಕೊಳ್ಳುತ್ತಿವೆ. ಬಂಧನದ ಸಂಖ್ಯೆಗೆ ಹೋಲಿಸಿದರೆ ಶಿಕ್ಷೆ ಆಗುವ ಸಂಖ್ಯೆಯು ಅತ್ಯಂತ ಕಡಿಮೆ ಇದೆ ಎಂಬ ಎನ್‌ಸಿಆರ್‌ಬಿ ದತ್ತಾಂಶದಿಂದಲೇ ಇದು ಸ್ಪಷ್ಟ. 2019ರಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ 70ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಪಟ್ಟಿಯೇ ದಾಖಲಾಗಿಲ್ಲ. 2019ರಲ್ಲಿ ವಿಚಾರಣೆಗೆ ಒಳಪಟ್ಟ 116 ಪ್ರಕರಣಗಳಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ಶಿಕ್ಷೆ ಆಗಿದೆ. ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡ ವ್ಯಕ್ತಿಗಳು ಭಾರಿ ಸಂಕಷ್ಟಕ್ಕೆ ಒಳಗಾಗುವುದರ ಜತೆಗೆ, ವಿಚಾರಣಾಪೂರ್ವ ಕಸ್ಟಡಿ ಮತ್ತು ಮಾಧ್ಯಮ ವಿಚಾರಣೆಯ ನೋವು ಅನುಭವಿಸಬೇಕಾಗುತ್ತದೆ. ಇತ್ತೀಚೆಗಂತೂ, ದೇಶದ್ರೋಹ ಪ್ರಕರಣದ ಆರೋಪ ಹೊತ್ತ ಜನರನ್ನು ದೇಶದ್ರೋಹಿಗಳು ಎಂದೇ ಬಿಂಬಿಸಲಾಗುತ್ತಿದೆ. ಹಾಗಾಗಿಯೇ, ಖುಲಾಸೆ ಆದರೂ ಇದರೊಂದಿಗೆ ಇರುವ ಕಳಂಕವೇ ದೊಡ್ಡ ಶಿಕ್ಷೆಯಾಗಿ ಬಿಡುತ್ತದೆ.

ಇಂತಹುದೊಂದು ಸಂಕಷ್ಟದ ಬೆದರಿಕೆಯೇ ವಾಕ್‌ ಸ್ವಾತಂತ್ರ್ಯದ ಮೇಲೆ ದಮನಕಾರಿ ಪರಿಣಾಮ ಬೀರುತ್ತದೆ. ಇಂತಹುದೊಂದು ಅವಕಾಶ ಇರುವುದೇ ಟೀಕಾಕಾರರ ಬಾಯಿ ಮುಚ್ಚಿಸಲು ಸಾಕಾಗುತ್ತದೆ. ನಿಜವಾಗಿಯೂ ಅದನ್ನು ಬಳಸುವ ಅಗತ್ಯವೇ ಇರುವುದಿಲ್ಲ. ಹಾಗಿದ್ದರೂ, ಈ ಕಾನೂನು ಉಪಯುಕ್ತವೇ ಆಗಿದ್ದು, ಕೆಲವು ಮಾರ್ಗಸೂಚಿ ಮೂಲಕ ದುರ್ಬಳಕೆ ತಡೆಯಬೇಕು ಎಂದು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ್‌ ಅಂಥವರು ವಾದಿಸುತ್ತಾರೆ. ಆದರೆ, ಕೇದಾರನಾಥ್‌ ಪ್ರಕರಣದಲ್ಲಿ ರೂಪಿಸಲಾದ ಮಾರ್ಗಸೂಚಿಯೇ ಈಗ ಪಾಲನೆ ಆಗುತ್ತಿಲ್ಲ; ಆಡಳಿತಾರೂಢ ಪಕ್ಷವು ತನ್ನ ರಾಜಕೀಯ ಕಾರ್ಯಸೂಚಿಗಾಗಿ ಅಧಿಕಾರಿಗಳ ಮೂಲಕ ಇದನ್ನು ಬಳಸಿಕೊಳ್ಳುತ್ತದೆ ಮತ್ತು ಇದನ್ನು ಬಳಸಿದವರು ಯಾವುದೇ ಪರಿಣಾಮಕ್ಕೆ ಒಳಗಾಗದೇ ತಪ್ಪಿಸಿಕೊಳ್ಳುತ್ತಾರೆ.

ಹಿಂಸೆಗೆ ಕಾರಣವಾಗುವ ಮಾತಿನ ವಿರುದ್ಧ ಪ್ರಯೋಗಿಸಲು ಐಪಿಸಿಯಲ್ಲಿ ಹಲವು ಅವಕಾಶಗಳು ಇವೆ. ಅವುಗಳೆಂದರೆ, ಗಲಭೆಯ ಉದ್ದೇಶದ ಪ್ರಚೋದನಕಾರಿ ಮಾತು (ಸೆಕ್ಷನ್‌ 153), ವರ್ಗಗಳ ನಡುವೆ ದ್ವೇಷ ಬಿತ್ತುವುದು (ಸೆಕ್ಷನ್‌ 153 ಎ), ಶಾಂತಿ ಕದಡುವ ಉದ್ದೇಶದ ಉದ್ದೇಶಪೂರ್ವಕ ಅವಮಾನ (ಸೆಕ್ಷನ್‌ 504), ಸಾರ್ವಜನಿಕ ಸಮಸ್ಯೆಗೆ ಕಾರಣವಾಗುವ ರೀತಿಯ ಹೇಳಿಕೆ (ಸೆಕ್ಷನ್‌ 505). ಹಾಗಾಗಿಯೇ ಐಪಿಸಿಯಲ್ಲಿ ದೇಶದ್ರೋಹವನ್ನು ಉಳಿಸಿಕೊಳ್ಳುವುದಕ್ಕೆ ಯಾವ ಸಮರ್ಥನೆಯೂ ಇಲ್ಲ.

ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಟೀಕೆಯು ಅಗತ್ಯವೇ ಹೊರತು ಅಪರಾಧ ಅಲ್ಲ. ಇಲ್ಲಿ ದೇಶದ್ರೋಹ ಕಾನೂನನ್ನು ಜಾರಿ ಮಾಡಿದ್ದ ಬ್ರಿಟನ್‌ನಲ್ಲಿ ಈ ಕಾನೂನು ಈಗಾಗಲೇ ರದ್ದಾಗಿದೆ. ಆಧುನಿಕ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇಂತಹ ಸೆಕ್ಷನ್‌ಗೆ ಜಾಗವೇ ಇಲ್ಲ. ಹಾಗಾಗಿ, ಈ ಕಾನೂನು ರದ್ದತಿಗೆ ಇದು ಸಕಾಲ.

ಲೇಖಕಿಯರು: ಅನಿಂದಿತಾ ಅವರು ವಕೀಲೆ, ಲಿಯಾ ಅವರು ‘ದಕ್ಷ್‌’ ಸಂಸ್ಥೆಯಲ್ಲಿ ಸಂಶೋಧನಾ ವ್ಯವಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.