ADVERTISEMENT

ವಿಶ್ಲೇಷಣೆ: ‘ಶಿಗ್ಗಾವಿ ಮಾದರಿ’ ಏಕಾಗಬಾರದು?

ಓಲೈಕೆಯ ರಾಜಿ ರಾಜಕಾರಣದಿಂದ ಮುಕ್ತರಾಗಿ ದಕ್ಷ, ದಿಟ್ಟ ಆಡಳಿತಕ್ಕೆ ಸಂಕಲ್ಪ ಮಾಡುವರೇ?

ಚಂದ್ರಕಾಂತ ವಡ್ಡು
Published 28 ಜುಲೈ 2021, 19:31 IST
Last Updated 28 ಜುಲೈ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕಳೆದ ಎರಡು ತಿಂಗಳಿನಿಂದ ನಿಗೂಢ ನಿರ್ದೇಶನದಲ್ಲಿ ನಡೆಯುತ್ತಿದ್ದ ತೀವ್ರ ಕಸರತ್ತು ಕೊನೆಗೂ ಅಂತ್ಯ ಕಂಡಿದೆ. ಅಂತಿಮ ಕ್ಷಣದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು, ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ರಾಜ್ಯ ರಾಜಕೀಯ ಒಂದು ಹಂತ ತಲುಪಿದಂತಾಯಿತು.

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ವ್ಯಂಗ್ಯೋಕ್ತಿಯಂತೆ ಬೊಮ್ಮಾಯಿ ಅವರು, ‘ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಆಪ್ತನಾದ ನಾನು...’ ಎಂದು ಪ್ರಮಾಣವಚನ ಸ್ವೀಕರಿಸದಿದ್ದರೂ ಈ ಮಾತು ಹಲವು ವಾಸ್ತವಾಂಶಗಳನ್ನು ಹೊಳೆಯಿಸುತ್ತದೆ. ಯಡಿಯೂರಪ್ಪ ಪದಚ್ಯುತಿಗಾಗಿ ಲಭ್ಯವಿರುವ ಎಲ್ಲಾ ಪಟ್ಟುಗಳನ್ನು ಪ್ರಯೋಗಿಸಿದ ಭಾರತೀಯ ಜನತಾ ಪಕ್ಷದೊಳಗಿನ ಯಡಿಯೂರಪ್ಪ ವಿರೋಧಿ ಬಣ ಈಗ ಬೊಮ್ಮಾಯಿಯವರ ಆಯ್ಕೆಯನ್ನು‘ಯಡಿಯೂರಪ್ಪನವರ ಹೊಸ ಆವೃತ್ತಿ’ ಎಂದು ಪರಿಭಾವಿಸುವುದು ಸಹಜ. ಹಾಗಾಗಿ ವಿರೋಧಿಗಳು ತಮ್ಮ ಗುರಿ ತಲುಪಲು ಹಿಂದಿನ ವರಸೆಯನ್ನೇ ಮುಂದುವರಿಸುವುದರಲ್ಲಿ ಅನುಮಾನವಿಲ್ಲ.

ಈವರೆಗೆ ಪರ ಮತ್ತು ವಿರೋಧಿ ಬಣಗಳಾಗಿ ಕ್ರಿಯಾ ಶೀಲವಾಗಿದ್ದ ಪಕ್ಷದೊಳಗಿನ ಗುಂಪುಗಳು ಸಂಪುಟ ರಚನೆಯ ನಂತರ ಹಲವು ಹೋಳುಗಳಲ್ಲಿ ಹಂಚಿಹೋಗಿ ಅಸ್ತಿತ್ವಕ್ಕಾಗಿ, ಅಧಿಕಾರಕ್ಕಾಗಿ ಹೊಂಚು ಹಾಕುವ ಸಾಧ್ಯತೆ ಹೆಚ್ಚು. ಇದು, ಹೊಸ ಮುಖ್ಯಮಂತ್ರಿ ಎದುರಿಸಬೇಕಾದ ತಕ್ಷಣದ ರಾಜಕೀಯ ಸವಾಲು.

ADVERTISEMENT

ಬಸವರಾಜ ಬೊಮ್ಮಾಯಿ ತಮ್ಮ ಜನತಾದಳದ ಹಿನ್ನೆಲೆಯಿಂದಾಗಿ ಎಚ್.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಒಡನಾಟ ಸದನದ ಒಳಗೆ ಮತ್ತು ಹೊರಗೆ ಸಂದಿಗ್ಧ ಸನ್ನಿವೇಶಗಳಲ್ಲಿ ಅವರ ನೆರವಿಗೆ ಬರಬಹುದು. ಹಾಗೆಯೇ ಇಂತಹ ರಾಜಕೀಯ ಸಖ್ಯದಿಂದ ಸಿ.ಪಿ.ಯೋಗೇಶ್ವರ ಈ ಹಿಂದೆ ವ್ಯಾಖ್ಯಾನಿಸಿದಂತೆ ‘ಮೂರು ಪಕ್ಷಗಳ ಸರ್ಕಾರ’ ಎಂಬ ಆರೋಪಕ್ಕೂ ತುತ್ತಾಗುವ ಸಂಭವವಿರುತ್ತದೆ. ಸರ್ಕಾರಕ್ಕೆಯಡಿಯೂರಪ್ಪನವರ ‘ಮಾರ್ಗದರ್ಶನ’ ಒಂದು ಶಕ್ತಿ ಮತ್ತು ದೌರ್ಬಲ್ಯ ಎರಡೂ ಹೌದು.

ಇನ್ನು, ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಕಳೆದ ಎರಡು ದಶಕಗಳಿಂದ ಹೆಚ್ಚುಕಡಿಮೆ ಸಿದ್ಧ ಮಾದರಿಯೊಂದುಪ್ರಚಲಿತದಲ್ಲಿದೆ. ಅಧಿಕಾರಿಗಳ ವರ್ಗಾವಣೆ, ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ, ಅಭಿವೃದ್ಧಿ ಯೋಜನೆಗಳ ಆಯ್ಕೆ, ಟೆಂಡರು ಪ್ರಕ್ರಿಯೆ, ತೆರಿಗೆ ಸಂಗ್ರಹ ಇತ್ಯಾದಿ ಆಡಳಿತದ ಎಲ್ಲ ಅವಯವಗಳೂ ಸ್ವಾರ್ಥ,ಭ್ರಷ್ಟಾಚಾರ, ಸ್ವಜನಪಕ್ಷಪಾತಗಳೆಂಬ ರೋಗಗಳಿಗೆ ಈಡಾಗಿವೆ. ಯಾರು ಬಂದರೂ ಈ ಅದಕ್ಷ, ಲೂಟಿಕೋರ ವ್ಯವಸ್ಥೆಯನ್ನೇ ಮುಂದುವರಿಸುವುದು, ಪಾಲು ಪಡೆಯುವುದು ಅನಿವಾರ್ಯವೆಂಬ ವಾತಾವರಣವನ್ನು ಬದಲಿಸುವ ತಾಕತ್ತನ್ನು ಹೊಸದಾಗಿ ಅಧಿಕಾರದ ಚುಕ್ಕಾಣಿ ಹಿಡಿದವರಿಂದ ಬಯಸಲಾಗುತ್ತದೆ.

ಪಕ್ಷದಲ್ಲಿ ಎದ್ದು ಕುಳಿತಿರುವ ಬಣ ರಾಜಕೀಯ ಮತ್ತು ಆಡಳಿತದಲ್ಲಿನ ಸಿದ್ಧ ಮಾದರಿಯನ್ನು ಮೀರುವ ತಂತಿ ಮೇಲಿನ ನಡಿಗೆಯಲ್ಲಿ ಬೊಮ್ಮಾಯಿಯವರು ಹೇಗೆ ಸಮ ತೋಲನ ಸಾಧಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಬಹುಸಂಖ್ಯಾತ ಲಿಂಗಾಯತರಿರುವ ಉತ್ತರ ಕರ್ನಾಟಕ ಭಾಗದಲ್ಲಿ ಮಿತಿಮೀರಿದ ಉಪಜಾತೀಯತೆ ಯನ್ನು ಕಾಣಬಹುದು. ಇಲ್ಲಿ ಹಾಸುಹೊಕ್ಕಾಗಿರುವ ಉಪಜಾತಿ ಪ್ರಜ್ಞೆ ಪುಟಿದೇಳಲು ಸಂದರ್ಭಕ್ಕಾಗಿ ಕಾಯುತ್ತಿರುತ್ತದೆ. ಬಸವರಾಜ ಬೊಮ್ಮಾಯಿಯವರು ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರವು ಲಿಂಗಾಯತರ ಪ್ರಬಲ ಉಪ ಪಂಗಡಗಳಾದ ಬಣಜಿಗ, ಪಂಚಮಸಾಲಿ ಸಮುದಾಯಗಳಿಂದ ಸುತ್ತುವರಿದಿದೆ. ಇಲ್ಲಿ ಮುಸಲ್ಮಾನ ಸಮುದಾಯದ ಮತದಾರರ ಸಂಖ್ಯೆಯೂ ಗಣನೀಯವಾಗಿದೆ. ಆದಾಗ್ಯೂ ಸಾದರ ಲಿಂಗಾಯತ ಪಂಗಡಕ್ಕೆ ಸೇರಿದ, ಸ್ವತಃ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ, ಸೋಷಿಯಲ್ ಎಂಜಿನಿಯರಿಂಗ್ ಕಲೆಯಲ್ಲಿ ಪರಿಣತರಾದ ಬೊಮ್ಮಾಯಿಯವರು ಎಲ್ಲ ಸಮುದಾಯಗಳನ್ನು ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿಯೇ ಅವರು ಇಲ್ಲಿಂದ ಸತತ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಲು ಅವಕಾಶ ಸಿಕ್ಕಿದೆ.

ಬಸವರಾಜ ಬೊಮ್ಮಾಯಿ ಅವರು ಒಬ್ಬ ಶಾಸಕನಾಗಿ ಹಾವೇರಿ ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ‘ಅನುಕರಣೀಯ ಮಾದರಿ’ ರೂಪಿಸಿದ್ದಾರೆ. ನಾನು ಹತ್ತಿರದಿಂದ ಗಮನಿಸಿದಂತೆ, ಎಲ್ಲೆಡೆ ಇರುವ ಕಮಿಷನ್ ವ್ಯವಹಾರ, ತಿಂಗಳ ಮಾಮೂಲು, ವರ್ಗಾವಣೆ ಮೊತ್ತ ಇತ್ಯಾದಿ ಇಲ್ಲಿ ಇಲ್ಲವೇ ಇಲ್ಲ; ಹಾಗಾಗಿ ಗುತ್ತಿಗೆದಾರರು, ಅಧಿಕಾರಿವರ್ಗ ಗುಣಮಟ್ಟದ ಕಾಮಗಾರಿಯತ್ತ ಗಮನ ಕೊಡಲು, ಉತ್ಸಾಹದಿಂದ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ. ಕ್ಷೇತ್ರದಲ್ಲಿ ಕೈಗೊಳ್ಳಬೇಕಾದಕೆಲಸಕಾರ್ಯಗಳ ಆಯ್ಕೆ ವಿಷಯದಲ್ಲಿ ಜನರ ಅಗತ್ಯ-ಆದ್ಯತೆಗೆ ಅನುಸಾರ ಸ್ವತಃ ಬೊಮ್ಮಾಯಿಯವರೇ ನಿರ್ಣಯ ಕೈಗೊಳ್ಳುವುದು ವಿಶೇಷ. ತಾತ್ಕಾಲಿಕ ನೆರವಿ ಗಿಂತ ಶಾಶ್ವತ ಯೋಜನೆಗಳ ಅನುಷ್ಠಾನದಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ.

ರೈತರಿಗೆ ವರವಾಗುವ ನೀರಾವರಿ ಯೋಜನೆಗಳ ಬಗ್ಗೆ ಬೊಮ್ಮಾಯಿಯವರಿಗೆ ವಿಶೇಷ ಒಲವು. ವರದಾ ನದಿಯಿಂದ ಸವಣೂರಿನ ಐತಿಹಾಸಿಕ ಮೋತಿತಲಾಬ್ ಕೆರೆಗೆ ನೀರು ತುಂಬಿಸಿದ್ದರ ಪರಿಣಾಮವಾಗಿ ಸುತ್ತಲಿನ ರೈತರ ಕೊಳವೆಬಾವಿಗಳು ಜೀವ ಪಡೆದಿವೆ. ತುಂತುರು ನೀರಾವರಿ ಸೌಲಭ್ಯಗಳಿಂದ ಹೊಲಗಳಲ್ಲಿ ಹಸಿರು ಉಸಿರಾಡುತ್ತಿದೆ. ನಾಗನೂರು ಕೆರೆ ಭರ್ತಿ ಮಾಡಿ ಶಿಗ್ಗಾವಿಗೆ ಕುಡಿಯುವ ನೀರು ಒದಗಿಸಲಾಗಿದೆ.

ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಬಂಕಾಪುರದಲ್ಲಿ ನವಿಲುಧಾಮ, ಪಾಲಿಟೆಕ್ನಿಕ್ ಕಾಲೇಜು, ಶಿಶುನಾಳ ಷರೀಫರ ಪುಣ್ಯಭೂಮಿ ಅಭಿವೃದ್ಧಿ, ಶಿಗ್ಗಾವಿಯಲ್ಲಿ ಜವಳಿ ಪಾರ್ಕು, ಬಾಡದಲ್ಲಿ ಕನಕದಾಸರ ಅರಮನೆ, ಸವಣೂರಿನಲ್ಲಿ ನವಾಬರ ಅರಮನೆ ಮರುಸೃಷ್ಟಿಯಾಗಿ ಪ್ರವಾಸಿಗರನ್ನು ಸೆಳೆಯುತ್ತಿವೆ.

ಒಂದು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ‘ಮಿನಿ’ ಚೌಕಟ್ಟಿನಲ್ಲಿ ತಾವು ರೂಪಿಸಿದ ಮಾದರಿ ಮತ್ತುಸಮಚಿತ್ತದ ದಕ್ಷ ನಿರ್ವಹಣಾ ಕ್ರಮವನ್ನು ಈಗ ರಾಜ್ಯ ಮಟ್ಟದ ‘ಮೆಗಾ’ ಗಾತ್ರಕ್ಕೆ ವಿಸ್ತರಿಸುವ ಅವಕಾಶ ಮತ್ತು ಸವಾಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಿವೆ. ಜನಪರ ಕಾಳಜಿಯ ಪ್ರಾಥಮಿಕ ನೀತಿ, ನಿಲುವು, ನಿಯಮ, ನಿಯಂತ್ರಣ, ಇಚ್ಛಾಶಕ್ತಿ ಮೂಲಭೂತವಾಗಿ ಒಂದೇ ಆಗಿರುವುದರಿಂದ ಕಾರ್ಯಕ್ಷೇತ್ರದ ಗಾತ್ರ ಬಹುವಾಗಿ ಕಾಡಬೇಕಿಲ್ಲ.

ನರೇಂದ್ರ ಮೋದಿಯವರು ಮೊದಲ ಬಾರಿ ಪ್ರಧಾನ ಮಂತ್ರಿಯಾದಾಗ ‘ಗುಜರಾತ್ ಮಾದರಿ’ ಎಂಬುದು ಚರ್ಚೆಯ ಮುನ್ನೆಲೆಗೆ ಬಂದಿತ್ತು; ಆ ಮಾದರಿಯಸರಿ–ತಪ್ಪು ಕುರಿತ ವಾದ–ವಿವಾದಗಳು ಇಂದಿಗೂ ಮುಂದುವರಿದಿವೆ. ಆದರೆ ಬಸವರಾಜ ಬೊಮ್ಮಾಯಿ ಅವರ ‘ಶಿಗ್ಗಾವಿ ಮಾದರಿ’ ಬಹುಶಃ ಇಂತಹ ವಿವಾದಕ್ಕೆ ಆಸ್ಪದ ಕೊಡಲಿಕ್ಕಿಲ್ಲ.

ಸಾಮಾನ್ಯವಾಗಿ ಅಧಿಕಾರಸ್ಥರ ಸುತ್ತ ನಾಯಕನ ಅರಿವಿಗೇ ಬರದಂತೆ ರಹಸ್ಯ ಕಾರುಬಾರು ನಡೆಸುವ ಹಿಂಬಾಲಕರ ಹಿಂಡು ಜಮಾಯಿಸುತ್ತದೆ. ಇಂತಹವರನ್ನು ಎಲ್ಲಿ, ಹೇಗೆ, ಎಷ್ಟು ದೂರ ಇಡಬೇಕೆಂಬ ಉಪಾಯ ಮತ್ತು ಸೂಕ್ಷ್ಮಗುಣ ಬೊಮ್ಮಾಯಿಯವರಿಗಿದೆ.
ಹಿಂಬಾಲಕರ ಆಟ ನಿಯಂತ್ರಿಸಿದರೆ ಆಡಳಿತ ಹಳ್ಳ ಹಿಡಿಯುವ ಬಹುಪಾಲು ಸಾಧ್ಯತೆಯನ್ನು ಇಲ್ಲವಾಗಿಸಿದಂತೆ.

ಬಹುಶಃ ಬಸವರಾಜ ಬೊಮ್ಮಾಯಿಯವರು ತಮ್ಮ ರಾಜಕೀಯ ಜೀವನದ ಮಹತ್ವದ ಘಟ್ಟ ತಲುಪಿದ್ದಾರೆ. ಅವರಿಗಾಗಿ ಇನ್ಯಾವುದೇ ಮಹತ್ವಾಕಾಂಕ್ಷೆಯ ಹುದ್ದೆ ಬಾಕಿ ಉಳಿದಿರಲಿಕ್ಕಿಲ್ಲ. ಹಾಗಾಗಿ ಅವರು ಓಲೈಕೆಯ ರಾಜಿ ರಾಜಕಾರಣ ಮತ್ತು ಬಯಕೆಗಳ ಬಂಧನದಿಂದ ಮುಕ್ತರಾಗಿ ದಕ್ಷ, ದಿಟ್ಟ ಆಡಳಿತ ನೀಡಲು ಸಂಕಲ್ಪ ಮಾಡಬೇಕಷ್ಟೇ. ಅದು ಸಾಧ್ಯವಾದರೆ ತಂದೆಯ ‘ಬೊಮ್ಮಾಯಿ ಪ್ರಕರಣ’ದಂತೆ ಮಗನ ‘ಬೊಮ್ಮಾಯಿ ಆಡಳಿತ’ ಇತಿಹಾಸದಲ್ಲಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.