ADVERTISEMENT

ಚುರುಮರಿ: ಮಾರ್ಜಾಲ ಗುರು

ಸುಮಂಗಲಾ
Published 30 ಮೇ 2021, 19:45 IST
Last Updated 30 ಮೇ 2021, 19:45 IST
Churumuri-01-06-2021
Churumuri-01-06-2021   

ಬೆಕ್ಕಣ್ಣ ಬೆಳಬೆಳಗ್ಗೆಯೇ ನನ್ನ ಕಪಾಟಿನಲ್ಲಿ ಏನೋ ಹುಡುಕುತ್ತಿತ್ತು.

‘ಏನು ಕಿತ್ತುಕುಡುಗಾಕೆ ಹತ್ತೀಯಲೇ’ ಎಂದು ರೇಗಿದೆ.

‘ರುದ್ರಾಕ್ಷಿ ಸರ, ದೊಡ್ಡ ಬಂಗಾರದ ಗುಂಡುಗಳಿರೋ ಸರ ಅದಾವೇನಂತ ಹುಡುಕಾಕೆ ಹತ್ತೀನಿ’ ಎಂದಿತು.

ADVERTISEMENT

‘ಮಂಗ್ಯಾನಂಥವನೇ... ನನ್ ಹತ್ರ ಸಣ್ಣ ಚೈನೂ ಇಲ್ಲ, ನಿನಗೆ ಎದಕ್ಕೆ ಈಗ?’

‘ಒಂದು ನಾಕು ರುದ್ರಾಕ್ಷಿ ಸರ, ಒಂದೆರಡು ಬಂಗಾರದ ಗುಂಡಿನ ಸರ, ಕೈಗೆ ಕಡಗ ಎಲ್ಲಾ ಹಾಕ್ಕಂಡು ಟೀವಿವಳಗ ಕೊರೊನಾ ಭವಿಷ್ಯ ಹೇಳಾಕ ಹೋಗತೀನಿ. ನನಗ ಇವೆಲ್ಲಾನೂ ತರಿಸಿಕೊಡು’ ಎಂದು ವರಾತ ಶುರು ಮಾಡಿತು.

‘ರೊಕ್ಕ ಇಲ್ಲಲೇ. ರೈತ್ರು ಇನ್ನಾತನ ದೆಹಲಿ ಗಡಿವಳಗ ವಣಮಾರಿ ಮಾಡಿ ಕುಂತಾರ. ಕಪ್ಪು, ಕೆಂಪು, ಹಳದಿ ಫಂಗಸ್ ಕೊರೊನಾ ಜೋಡಿ ಸ್ಪರ್ಧೆಗಿಳಿದಾವು, ಕಾಮನಬಿಲ್ಲಿನ ಬಣ್ಣದಾಗೆ ನಾಕು ಬಣ್ಣದ ಫಂಗಸ್ ಅಟ್ಯಾಕ್ ಅಷ್ಟೇ ಉಳಿದೈತಿ. ನೀ ಏನ್ ಭವಿಷ್ಯ ಹೇಳೂದು ಬಾಕಿ ಐತಿ?’ ಸಮಾ ಬೈದೆ.

‘ಏನರ ಹೊಸಾದು ಮಾಡ್ತೀನಂದ್ರ ಎಲ್ಲಾದಕ್ಕೆ ಅಡ್ಡಬಾಯಿ ಹಾಕ್ತಿದಿ. ಹೋದವರ್ಷ ಬಾಬಾನ ಕೊರೊನಿಲ್ ಔಷಧ, ಕಷಾಯದ ಏಜೆನ್ಸಿ ತಗೋತೀನಿ ಅಂದ್ರ ಬ್ಯಾಡ ಅಂದಿ. ಬಣ್ಣದ ರುಮಾಲು ಸುತ್ತಿಕೆಂಡು, ಗಡ್ಡಬಿಟ್ಕಂಡು, ಆ ಗುರು ಹಂಗ ಉಪದೇಶ ಮಾಡ್ತೀನಂದ್ರ ಅದಕ್ಕೂ ಬಿಡಲಿಲ್ಲ. ಈ ಗುರೂಜಿ ಹಂಗ ಭವಿಷ್ಯ ಹೇಳಿದ್ರ, ಎಲ್ಲ ಟೀವಿಯವರು ಕರಿತಾರ, ರಗಡ್ ರೊಕ್ಕ ಬರತೈತಂದ್ರ ಬ್ಯಾಡ ಅಂತಿ’ ಮೂತಿ ಉಬ್ಬಿಸಿ ಲ್ಯಾಪ್‌ಟಾಪಿನಲ್ಲಿ ಮುಖ ಹುದುಗಿಸಿತು.

‘ವ್ಯಾಕ್ಸೀನಿಲ್ಲ, ಬೆಡ್ ಇಲ್ಲ, ಆಕ್ಸಿಜೆನ್ ಸಿಗಂಗಿಲ್ಲ, ದುಡಿದು ತಿನ್ನೂ ಮಂದಿಗೆ ಕೆಲಸನೂ ಇಲ್ಲ, ಹೊಟ್ಟಿಗೂ ಇಲ್ಲ, ನಮ್ಮ ದೇಶಕ್ಕೆ ಹಿಂತಾ ದುರ್ದೆಸೆ ತಂದಿಟ್ಟವರು ನಮ್ಮ ದೇವ್ರೇ ಆದ್ರೂ ನಾ ಪ್ರಶ್ನೆ ಮಾಡಾಂವ ಅಂತ ನಿರ್ಮಲಕ್ಕನ ಗಂಡ ಭಾಷಣ ಮಾಡ್ಯಾರ. ಭವಿಷ್ಯ ಹೇಳೂ ಗುರೂಜಿ ಬದಲಿಗೆ ಹಿಂಗ ಯುಟ್ಯೂಬ್ ಭಾಷಣ ಶುರು ಮಾಡತೀನಿ’ ಎಂದು ಕೊನೆಗೊಮ್ಮೆ ಬುದ್ಧಿವಂತಿಕೆಯ ಮಾತಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.