ADVERTISEMENT

ಚುರುಮುರಿ: ಮಾಜಿ– ಹಾಲಿಗಳ ಬಿಗ್‌ಬಾಸ್

ಲಿಂಗರಾಜು ಡಿ.ಎಸ್
Published 5 ಜುಲೈ 2021, 19:31 IST
Last Updated 5 ಜುಲೈ 2021, 19:31 IST
   

ಕರ್ನಾಟಕದ ಮಾಜಿ-ಹಾಲಿ ಸಿ.ಎಂಗಳ ಬಿಗ್‍ಬಾಸ್ ಸೀಜನ್ ಶುರುವಾಗಿತ್ತು. ಡಿಕೆಶಿ ಹೋಸ್ಟ್ ಆಗಿದ್ದರು.

ದಿನ-1: ‘ಯಡೂರಪ್ಪ ಬ್ರದರ್, ನಿಮ್ಮ ಕುರ್ಚಿ ಕತೆ ಏನು?’ ಕುಮಾರಣ್ಣ ಕೆಣಕಿದ್ರು. ‘ನನ್ನ ಮಗ ಕಾವಲಿಗೆ ಇದ್ದಾನೆ, 17 ದೇವರು ಗಳಿದ್ದಾರೆ, ನಿಮಗ್ಯಾರಿದಾರೆ?’ ಅಂದ್ರು ಸಿಎಂ. ‘ನನ್ನತ್ರ ನಮ್ಮಪ್ಪಾರಿದ್ದಾರೆ!’ ಕುಮಾರಣ್ಣನ ಮಾತಿಗೆ ‘ನನಗೂ ಜಮೀರಿದ್ದಾರೆ’ ಅಂದ್ರು ಸಿದ್ದರಾಮಣ್ಣ. ‘ಅಪ್ಪ ಅಂಬಾರಿ ಹೊತ್ರೆ ಮಗನಿಗೂ ಹೊರೋ ಯೋಗ ಬರಲ್ಲ’ ಅಂದ್ರು ಡಿಕೆಶಿ.

ದಿನ-2: ‘ಶೆಟ್ಟರೆ, ಸದಾನಂದ ಗೌಡ್ರೆ ಎಷ್ಟು ದಿನ ಹಿಂಗೇ ಮಾಜಿ ಸಿಎಂ ಆಗಿ ಇರತೀರ? ಬನ್ರಿ, ನಾವೆಲ್ಲಾ ಸೇರಿ ಹುಲಿ-ಕುರಿ ಆಟ ಅಡನೆ!’ ಸಿದ್ದಣ್ಣನ ಮಾತಿಗೆ ಶೆಟ್ಟರ್ ಉತ್ತರ ಕೊಡದೇ ಎದ್ದೋದ್ರು. ‘ಯಂಕು ಸಿಎಂ ಬೋಡ್ಚಿ, ಬೊಕ್ಕ ಕೆಎಂಎಫ್‌ ಅಧ್ಯಕ್ಷ ಪೋಸ್ಟ್ ಇತ್ತೆ ಕೊರ್ಪೆರಾ?’ ಸದಾನಂದಣ್ಣ ನಗತಾ ಕೇಳಿದ್ರು.

ADVERTISEMENT

ದಿನ-3: ‘ಎಂಚಿನ ಕೃಷ್ಣಣ್ಣ, ಈರೆಗು ಸಿಎಂ ಪೋಸ್ಟ್ ಬೋಡ್ಚಾ?’ ಮೊಯ್ಲಿ ಮಾತು ಕೃಷ್ಣರಿಗೆ ಅರ್ಥವಾಗದೇ ತಲೆ ಬಾಚಿಕೊಂಡರು. ‘ದೇವೇಗೌಡ್ರೆಲ್ಲಿ?’ ಲೋಪಾಮುದ್ರೆ ಹಾಕಿದರು ಡಿಕೆಶಿ.

ದಿನ-4: ಕ್ಯಾಮೆರಾ ಕೆಟ್ಟೋಗಿತ್ತು. ಮೈಕುಗಳೆಲ್ಲಾ ಬಂದಾಗಿದ್ದವು! ಸ್ಪರ್ಧಿಗಳು ನಾಪತ್ತೆ! ಡಿಕೆಶಿ ಗಡ್ಡ ಕೆರಕೊಂಡರು.

ದಿನ-5: ದೇವೇಗೌಡರು ಕಾಣಿಸಿಕೊಂಡು ಘೋಷಣೆ ಮಾಡಿದರು. ‘ನೋಡ್ರೀ, ನಾವು 8 ಜನವೂ ಸಾಮೂಹಿಕ ನಿರ್ಧಾರ ಕೈಗೊಂಡಿದೇವೆ. ವಯಸ್ಸಿನ ಹಿರಿತನದ ಪ್ರಕಾರ ಪ್ರತಿಯೊಬ್ಬರೂ 3 ತಿಂಗಳು ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸುತ್ತೇವೆ. (ಡಿಕೆಶಿ ಏನೋ ಹೇಳಕ್ಕೋದಾಗ ಗೌಡ್ರು) ನೀವು ಸುಮ್ಮನಿರ‍್ರೀ ಅಗ್ರಿಮೆಂಟೆಲ್ಲಾ ರೆಡಿಯಾಗಿದೆ. ಸರ್ಕಾರ ರಚನೆಗೆ ನಾವು ಹೋಗ್ತಿದ್ದೀವಿ!’

‘ನಾವು ಇದನ್ನ ಒಪ್ಪಲ್ಲ!’ ಡಿಕೆಶಿ ಮಾತು ಮುಗಿಸೋ ಮೊದಲೇ ಜಮೀರಣ್ಣ ‘ಹಂಗಾಮಾ’ ಅಂತ ಕೂಗ್ತಾ ಬಿಗ್‍ಬಾಸ್ ಮನೆ ಬಾಗಿಲನ್ನು ಒದೆಯತೊಡಗಿದಾಗ, ಐದೇ ದಿನಕ್ಕೆ ಬಿಗ್‍ಬಾಸ್ ಮುಗಿದ್ಹೋಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.