‘ಇದೇನ್ಸಾ ಮೈಸೂರಿಗೋಗಿದ್ರಂತೆ? ಏನು ಕಡಿದು ಕಟ್ಟೆ ಹಾಕಕ್ಕೋಗಿದ್ರಿ?’ ತುರೇಮಣೆಗೆ ಕಿಚಾಯಿಸಿದೆ.
‘ದೇಸದೇಲಿ ಜನಸಾಮಾನ್ಯರ ಬದುಕು ಮುಳ್ಳಸೆ ಮ್ಯಾಲೆ ಬಿದ್ದದೆ ಕನೋ. ವಸಾ ಗ್ರಹಸಚಿವರು ಮೈಸೂರು ಪೋಲೀಸ್ ಅಕಾಡೆಮೀಲಿ ಮುಂದೆ ಕಳಸಿಗೆ ಮಡಿಕ್ಯಂಡು ಎನ್ಕೌಂಟರ್ ಮಾಡೋ ಅಭ್ಯಾಸ ಮಾಡ್ತಿದ್ರು. ಅವರು ಹಾರಿಸಿದ ಗುಂಡು ಒಂದೂ ಗುರಿ ತಲುಪ್ತಾನೇ ಇರನಿಲ್ಲ. ಅದಿಕ್ಕೇ ನಾನು ಒಂದು ಐಡೀರಿಯಾ ಕೊಟ್ಟು ಬಂದೆ ಕಲಾ!’ ಅಂತ ಕೊಚ್ಚಿಗ್ಯಂಡರು.
‘ಅದೇನೋ ತಮ್ಮ ಘನಂದಾರಿ ಐಡಿಯಾ?’ ಅಂತ ಕೇಳಿದೆ.
‘ನೋಡ್ಲಾ, ಮೊದ್ಲು ಗುಂಡು ಹಾರಿಸ್ಬಕು. ಅದು ಎಕ್ಕಡಿಕೋ ಹೋಗಿ ತಗುಲ್ತದೆ. ಆಮೇಲೆ ಅದುರ ಸುತ್ತ ಚಾಕ್ಪೀಸಲ್ಲಿ ಒಂದು ಸೊನ್ನೆ ಬರೆಯದು. ಗುರಿ ತಲುಪಿದಂಗೇ ಅಲ್ಲುವ್ಲಾ?’ ಅಂದ್ರು.
‘ಅಧಿಕಾರಿಗಳೆಲ್ಲಾ ಹಿಂಗೇ ಟಾರ್ಗೆಟ್ ಮುಟ್ಟದು ಕನೇಳಿ!’ ಅಂತ ನಿಟ್ಟುಸಿರು ಬುಟ್ಟೆ.
‘ಮೈಸೂರು ಮಯೇಸಣ್ಣ ಅತ್ಯಾಚಾರಿಗಳ ಎನ್ಕೌಂಟರ್ ಆಗ್ಲಿ ಅಂದ್ರೆ, ಹೊಸಪೇಟೆ ಸಿಂಗಣ್ಣ ಎಲ್ಲಾನು ಕತ್ತರಿಸಿ ಅಂದುತ್ತಲ್ಲ ಅದುಕ್ಕೆ ಲಾರಿ ತುಂಬಾ ಅತ್ಯಾಚಾರಿಗಳ ಪಟ್ಟಿ ತುಂಬಿಕ್ಯಂಡೋಗಿದ್ದೆ. ಇನ್ನೂ ಸಿದ್ದೇಸಣ್ಣ, ಹುಲಿ ಸಿದ್ದರಾಮಣ್ಣ, ಈಸೂರಪ್ಪಾರಪ್ಪರ ತಕ್ಕೋಗ್ಬೇಕು!’ ಅಂದ್ರು.
‘ಅಲ್ಲಾ ಸಾ, ಅತ್ಯಾಚಾರಿಗಳ ಪಟ್ಟಿ ಲಾರಿ ತುಂಬೋವಷ್ಟದೆ ಅಂದ್ರೆ ಎಲ್ಲಾರೂ ಅತ್ಯಾಚಾರಿಗಳೇ ಅಂತೀರಾ?’ ನನ್ನ ಅನುಮಾನ ಹೇಳಿದೆ.
‘ಲೇ ಹೈವಾನ್, ಸಾಮಾನ್ಯ ಅತ್ಯಾಚಾರಿಗಳು, ಧಾರ್ಮಿಕ, ರಾಜಕೀಯ ಅತ್ಯಾಚಾರಿಗಳು, ಮಾತಲ್ಲೇ ಅತ್ಯಾಚಾರ ಮಾಡೋರು, ಕಣ್ಣಲ್ಲೇ ತಿವಿಯೋರು ಅಂತ ನಾನಾ ಟೈಪ್ ಅದೆ. ಸಾಮಾನ್ಯರು ಎನ್ಕೌಂಟರಾದ್ರೆ ಬ್ಯಾರೇವು ಸಾಕ್ಸಿಗಳಿಗೇ ಮಾಮಾಚಾರ ಮಾಡಿ ಬಚಾವಾಯ್ತವೆ!’ ಅಂತ ಸತ್ಯ ನುಡಿದ್ರು.
‘ಅದುಕ್ಕೇ ನಿಮಗೆ ಗ್ರಹ ಸಚೀವರಂಗೆ ರಾತ್ರಿವತ್ತು ನಿದ್ದೆ ಬತ್ತಿಲ್ಲ ಅನ್ನಿ?’ ಅಂದೆ.
‘ಥೂ ಏನು ಮಾಡದ್ಲಾ, ಇಂಪ್ಲೂಯನ್ಸ್ಡ್ ಅತ್ಯಾಚಾರಿಗಳಿಗೆ ಎಲ್ಲಾನೂ ಕತ್ತರಿಸಿ ಹಾಕಿದರೆ ಚಪಲಾಂಗದ ಭವಿಷ್ಯ ಹ್ಯಂಗೆ ಅಂತ ಚಿಂತಾಗ್ಯದೆ!’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.