ದುಬ್ಬೀರ ಟಿ.ವಿ.ಯಲ್ಲಿ ಮಂಡ್ಯದ ರೋಚಕ ಮಾತಿನ ಕದನವನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ. ಹೆಂಡತಿ ಸುಬ್ಬಮ್ಮ ರಿಮೋಟ್ ಕಿತ್ತುಕೊಂಡು ‘ದಿನ ಬೆಳಗಾದ್ರೆ ಬರೀ ಸುಡುಗಾಡು ನ್ಯೂಸ್ ಹಾಕ್ಕಂಡು ಕೂತ್ಕತೀರ, ನಾನು ಸೀರಿಯಲ್ ನೋಡ್ಬೇಕು... ಇವತ್ತು ಅತ್ತೆ ಸೊಸೆ ಜಗಳ ಕ್ಲೈಮ್ಯಾಕ್ಸ್ ಇದೆ’ ಎಂದಳು.
‘ಲೇ ರಿಮೋಟ್ ಕೊಡೇ ಇಲ್ಲಿ... ಸೀರಿಯಲ್ನಲ್ಲಿ ಅತ್ತೆ– ಸೊಸೆ ಜಗಳ ಏನ್ ನೋಡ್ತೀಯ, ಕುಮಾರಣ್ಣ ಅಂಡ್ ಮಂಡ್ಯ ಸೊಸೆ ಸುಮಲತಾ ಜಗಳ ನೋಡೇ ಇಲ್ಲಿ ಎಷ್ಟು ಸಖತ್ತಾಗಿದೆ’ ಎಂದ ದುಬ್ಬೀರ.
‘ಅದು ನೀವೇ ನೋಡ್ಕಳಿ, ಇವತ್ತು ಅತ್ತೆ– ಸೊಸೆ ಮಧ್ಯೆ ಪಕ್ಕದ ಮನೆಯವಳು ಕಡ್ಡಿ ಕೆರೆಯೋ ಸೀನ್ ಇದೆ ನಾನು ನೋಡ್ಬೇಕು...’ ಸುಬ್ಬಮ್ಮ ರಿಮೋಟ್ ಕೊಡಲಿಲ್ಲ.
‘ನಿನ್ತೆಲಿ, ಅವರಿಗಿಂತ ನಮ್ಮ ಟಿ.ವಿ. ರಿಪೋಟ್ರುಗಳು ಎಷ್ಟು ಚೆನ್ನಾಗಿ ಕಡ್ಡಿ ಕೆರೀತಾರೆ ನೋಡಿಲ್ಲಿ, ಕೆಆರ್ಎಸ್ ಡ್ಯಾಮಿನ ಕತೆ ಎಷ್ಟು ರೋಮಾಂಚಕ ಆಗ್ತಾ ಐತೆ. ನಮ್ಮ ರಿಪೋಟ್ರುಗಳು ಕುಮಾರಣ್ಣನತ್ರ ಹೋಗಿ
‘ಎಂ.ಪಿ. ಮೇಡಮ್ಮು ಹಿಂಗಂದ್ರು, ನೀವೇನಂತೀರಾ?’ ಅಂತ ಉಪ್ಪು ಕಾರ ಸೇರ್ಸಿ ಕೇಳ್ತಾರೆ. ಅದಕ್ಕೆ ಕುಮಾರಣ್ಣ ಟವೆಲ್ ಕೊಡವಿ ಏನಾದ್ರು ಅಂದ್ರೆ ಅದನ್ನು ಎಂ.ಪಿ. ಮೇಡಮ್ಮತ್ರ ಹೋಗಿ ‘ಕುಮಾರಣ್ಣ ಟವೆಲ್ ಕೊಡವಿ ಇಂಗಿಂಗೆ ಏನೇನೋ ಬೈದ್ರು, ನೀವೇನ್ ಬೈತೀರಾ?’ ಅಂತ ಕೇಳ್ತಾರೆ. ಇಂಗೆ ಇಬ್ಬರ ನಡುವೆ ಬೆಳಿಗ್ಗೆ ಹಚ್ಚಿದ ಬೆಂಕಿ ಸಾಯಂಕಾಲ ಆಗೋದ್ರೊಳಗೆ ಬಿರುಗಾಳಿ ಆಗೋತರ ಮಾಡಿಬಿಟ್ಟಿರ್ತಾರೆ....’ ದುಬ್ಬೀರ ನಕ್ಕ.
‘ಅಷ್ಟೇ ಅಲ್ಲರೀ, ಟಿ.ವಿ. ಸ್ಕ್ರೀನ್ ಮೇಲೂ ಭುಗು ಭುಗು ಬೆಂಕಿ ಹಚ್ಚಿರ್ತಾರೆ. ನಮ್ಮಲ್ಲೇ ಮೊದಲು, ಸೂಪರ್ ಎಕ್ಸ್ಕ್ಲೂಸಿವ್ವು, ಭಯಂಕರ ಬ್ರೇಕಿಂಗು ಅಂತ ತೋರಿಸ್ತಿರ್ತಾರೆ. ಈಗ ಅದೇನರೆ ಇರ್ಲಿ, ಇವರ ಜಗಳದಲ್ಲಿ ತಪ್ಪು ಯಾರದು ಅಂತೀರಾ?’
‘ತಪ್ಪು ಇಬ್ರುದೂ ಅಲ್ಲ’.
‘ಮತ್ತೆ?’
‘ಇವರ ಜಗಳಕ್ಕೆ ಕಾರಣವಾದ ಕೆಆರ್ಎಸ್ ಡ್ಯಾಂದೇ ತಪ್ಪು’ ದುಬ್ಬೀರ ತೀರ್ಪು ನೀಡಿದ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.