ADVERTISEMENT

ಚರ್ಚೆ | ನೋವು ಮರೆಯಲು ಸ್ಫೂರ್ತಿ ಸಿಗಲಿದೆ

ದೇಶ ವಿಭಜನೆಯ ಕ್ರೌರ್ಯದ ನೆನಪಿನ ದಿನ ಆಚರಿಸುವ ಅಗತ್ಯ ಇದೆಯೇ?

ರಾಮ್‌ ಮಾಧವ್‌
Published 20 ಆಗಸ್ಟ್ 2021, 20:00 IST
Last Updated 20 ಆಗಸ್ಟ್ 2021, 20:00 IST
 ದೇಶ ವಿಭಜನೆಗೆ ಸಂಬಂಧಿಸಿದ ಚಿತ್ರಗಳಿರುವ ಅಮೃತಸರದ ಮ್ಯೂಸಿಯಂ.
ದೇಶ ವಿಭಜನೆಗೆ ಸಂಬಂಧಿಸಿದ ಚಿತ್ರಗಳಿರುವ ಅಮೃತಸರದ ಮ್ಯೂಸಿಯಂ.   

1940ನೇ ದಶಕದ ಕೊನೆಯ ಭಾಗದಲ್ಲಿ ಮೂರು ಪ್ರಮುಖ ವಿಭಜನೆಗಳು ಘಟಿಸಿದ್ದವು. 1945ರಲ್ಲಿ ಜರ್ಮನಿಯು ಪೂರ್ವ ಮತ್ತು ಪಶ್ಚಿಮ ಜರ್ಮನಿಯಾಗಿ ವಿಭಜನೆಯಾಯಿತು. 1947ರಲ್ಲಿ ಭಾರತವು ಹಿಂದುಸ್ಥಾನ ಮತ್ತು ಪಾಕಿಸ್ತಾನವಾಗಿ ಒಡೆಯಿತು. ಕೊನೆಯದಾಗಿ, 1948ರಲ್ಲಿ ಪ್ಯಾಲೆಸ್ಟೀನ್‌ನಿಂದ ಇಸ್ರೇಲ್‌ ಅನ್ನು ಸೃಷ್ಟಿಸಲಾಯಿತು.

ಜರ್ಮನಿಯ ವಿಭಜನೆಯು ತಾತ್ಕಾಲಿಕವಾಗಿತ್ತು. ಹಾಗಿದ್ದರೂ ಈ ವಿಭಜನೆಯನ್ನು ಶಾಶ್ವತವಾಗಿಸುವುದಕ್ಕಾಗಿ 1960ರ ದಶಕದ ಆರಂಭದಲ್ಲಿ ಬರ್ಲಿನ್‌ ಗೋಡೆಯನ್ನು ಕಟ್ಟಲಾಯಿತು. ಮೂರೇ ದಶಕಗಳಲ್ಲಿ ಜರ್ಮನ್ನರು ಈ ಗೋಡೆಯನ್ನು ಕೆಡವಿದರು. 1989ರಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಒಂದಾದವು. ಆದರೆ, ಭಾರತ ಮತ್ತು ಪ್ಯಾಲೆಸ್ಟೀನ್‌ನ ವಿಭಜನೆಯು ಘೋರವಾದುದು. ಪ್ಯಾಲೆಸ್ಟೀನ್‌ ವಿಭಜನೆಯು ಇಸ್ರೇಲ್‌ನಲ್ಲಿ ಯುದ್ಧಕ್ಕೆ ಕಾರಣವಾದರೆ, ಭಾರತದಲ್ಲಿ ವಿಭಜನೆಯು ಸಾಮೂಹಿಕ ವಲಸೆ ಮತ್ತು ಹೃದಯವನ್ನು ಕಲಕುವ ಹಿಂಸಾಚಾರಕ್ಕೆ ಕಾರಣವಾಯಿತು.

1947–49ರ ಅವಧಿಯಲ್ಲಿ ಅರಬ್‌–ಇಸ್ರೇಲ್‌ ಯುದ್ಧದ ಸಂದರ್ಭದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಭಾರತದ ವಿಭಜನೆಯ ಸಂದರ್ಭದಲ್ಲಿ ಆದ ಸಾವು–ನೋವು, ನಾಶ–ನಷ್ಟ ಆಘಾತಕರವಾದುದು. ಹತ್ತು ಲಕ್ಷಕ್ಕೂ ಹೆಚ್ಚು ಜನರ ಹತ್ಯೆ ಆಗಿದೆ. ತರಾತುರಿಯಲ್ಲಿ ಸೃಷ್ಟಿಸಲಾಗಿದ್ದ ಗಡಿಗಳನ್ನು ದಾಟಿ ನಡೆದೇ ವಲಸೆ ಹೋಗುವುದಕ್ಕಾಗಿ ಲಕ್ಷಾಂತರ ಜನರು ಪಟ್ಟ ಪಡಿಪಾಟಲು ವೇದನಾದಾಯಕವಾಗಿತ್ತು. ಸಾವಿರಾರು ಜನರು ತಮ್ಮ ಗಮ್ಯವನ್ನು ತಲುಪಲೇ ಇಲ್ಲ. ಅವರನ್ನು ದಾರಿಯಲ್ಲಿಯೇ ತಡೆದು ಕೊಂದು ಹಾಕಲಾಯಿತು.

ADVERTISEMENT

ಈ ಕ್ರೌರ್ಯವನ್ನು ಮರೆಯುವುದು ಕಷ್ಟ. ಇತಿಹಾಸಕಾರ ವಿಲಿಯಂ ಡಾಲ್‌ರಿಂಪ್ಲ್‌ ಅವರು ನ್ಯೂಯಾರ್ಕರ್‌ ನಿಯತಕಾಲಿಕಕ್ಕೆ ಬರೆದ ಲೇಖನದಲ್ಲಿ ನಿಸಿದ್‌ ಹಜಾರಿ ಅವರ ‘ಮಿಡ್‌ನೈಟ್ಸ್‌ ಫ್ಯೂರೀಸ್’ ಕೃತಿಯನ್ನು ಉಲ್ಲೇಖಿಸುತ್ತಾಈ ಕ್ರೌರ್ಯದ ಬಗ್ಗೆ ಹೀಗೆ ಬರೆಯುತ್ತಾರೆ: ‘ಹಂತಕರ ಗುಂಪುಗಳು ಇಡೀ ಗ್ರಾಮಗಳಿಗೆ ಬೆಂಕಿ ಇರಿಸಿವೆ, ಗಂಡಸರು ಮತ್ತು ಮಕ್ಕಳನ್ನು ಬಡಿದು ಕೊಂದಿವೆ ಮತ್ತು ಅತ್ಯಾಚಾರ ಎಸಗುವುದಕ್ಕಾಗಿ ಯುವತಿಯರನ್ನು ಹೊತ್ತೊಯ್ದಿವೆ. ನಾಜಿ ಮರಣ ಶಿಬಿರಗಳಿಗಿಂತ ವಿಭಜನೆಯ ಕ್ರೌರ್ಯವು ಭಯಾನಕ ಎಂದು ನಾಜಿ ಶಿಬಿರಗಳನ್ನು ಕಂಡಿದ್ದ ಬ್ರಿಟನ್‌ ಸೈನಿಕರು ಮತ್ತು ಪತ್ರಕರ್ತರು ಹೇಳಿದ್ದಾರೆ. ಗರ್ಭಿಣಿಯರ ಮೊಲೆಗಳನ್ನು ಕತ್ತರಿಸಲಾಯಿತು ಮತ್ತು ಗರ್ಭದಲ್ಲಿದ್ದ ಶಿಶುಗಳನ್ನು ಹೊರಕ್ಕೆ ಕೀಳಲಾಯಿತು. ಹಸುಳೆಗಳನ್ನು ಹುರಿದು ಹಾಕಲಾಯಿತು’.

ಭಾರತದ ವಿಭಜನೆಯು ಅರ್ಥಹೀನ ಮತ್ತು ಹೊಣೆಗೇಡಿ ಕೃತ್ಯ. ವಿಭಜನೆಯನ್ನು ವಿರೋಧಿಸಿದ್ದ ಗಾಂಧೀಜಿ ಹೀಗೆ ಹೇಳಿದ್ದರು: ‘ದೇಶವನ್ನು ಕತ್ತರಿಸುವ ಮೊದಲು ನನ್ನನ್ನು ಕತ್ತರಿಸಿ’. ವಿಭಜನೆಯನ್ನು ತಿರಸ್ಕರಿಸಲು ಕೊನೆಯ ತನಕ ಹೋರಾಡುವುದಾಗಿ ಪಟೇಲ್‌ ಹೇಳಿದ್ದರು. ‘ಇಂಡಿಯಾ ಡಿವೈಡೆಡ್‌’ ಎಂಬ ಪುಸ್ತಕದಲ್ಲಿ ವಿಭಜನೆಯು ಎಷ್ಟು ಅತಾರ್ಕಿಕ ಎಂಬುದನ್ನು ಸಮಗ್ರವಾಗಿ, ಮನದಟ್ಟಾಗುವ ರೀತಿಯಲ್ಲಿ ರಾಜೇಂದ್ರ ಪ್ರಸಾದ್‌ ವಿವರಿಸಿದ್ದರು.

ಇದು ಉನ್ಮಾದವಲ್ಲದೆ ಬೇರೇನೂ ಅಲ್ಲ ಎಂದು ಗಡಿಯಾಚೆಗಿನ ಪ್ರಸಿದ್ಧ ಕವಿ ಸಾದತ್‌ ಹಸನ್‌ ಮಂಟೋ ಹೇಳಿದ್ದರು. ಅತ್ಯಾಚಾರಕ್ಕೆ ಒಳಗಾಗಿ ಗರ್ಭ ಧರಿಸಿದ್ದ ಮಹಿಳೆಯರು ಆ ಕವಿಯ ಮನ ಕಲಕಿದ್ದರು.‘ಈ ಗರ್ಭಗಳು ಎಲ್ಲಿಗೆ ಸೇರಿದವು– ಹಿಂದುಸ್ಥಾನಕ್ಕೋ ಪಾಕಿಸ್ತಾನಕ್ಕೋ?’ ಎಂದು ವೇದನೆಯಲ್ಲಿ ಅವರು ಪ್ರಶ್ನಿಸಿದ್ದರು. ಮಂಟೊ ಅವರ ನಾಯಕ ತೋಬಾ ತೇಕ್‌ ಸಿಂಗ್‌ ಕೊನೆಯಲ್ಲಿ ಭಾರತಕ್ಕೂ ಪಾಕಿಸ್ತಾನಕ್ಕೂ ಸೇರದ ಯಾರದೂ ಅಲ್ಲದ ನೆಲದಲ್ಲಿ ಇರುವ ವ್ಯಂಗ್ಯವು ವಿಭಜನೆಯ ಹುಚ್ಚಾಟವನ್ನು ತೋರಿಸುತ್ತದೆ. ‘ಒಂದೆಡೆ ಮುಳ್ಳು ಬೇಲಿಯ ಆ ಕಡೆಗೆ ಭಾರತದ ಕಡೆಯ ಹುಚ್ಚರು ಇದ್ದಾರೆ ಮತ್ತು ಇನ್ನೊಂದು ಕಡೆ ಇನ್ನೂ ಹೆಚ್ಚು ಮುಳ್ಳು ಬೇಲಿಗಳ ಆಚೆಗೆ ಪಾಕಿಸ್ತಾನದ ಹುಚ್ಚರು ಇದ್ದಾರೆ. ಇದರ ನಡುವೆ, ಭೂಮಿಯ ಸಣ್ಣ ತುಂಡಿನಲ್ಲಿ ತೋಬಾ ತೇಕ್‌ ಸಿಂಗ್‌ ಮಲಗಿದ್ದಾನೆ’ ಎಂದು ಮಂಟೋ ಪ್ರಚೋದನಕಾರಿಯಾಗಿಯೇ ಬರೆದಿದ್ದರು.

1940ರ ದಶಕದ ಆರಂಭದ ವರೆಗೂ ವಿಭಜನೆಯು ಅನಿವಾರ್ಯವೇನೂ ಆಗಿರಲಿಲ್ಲ. ಆದರೆ, ಆ ಹೊತ್ತಿಗೆ ಬ್ರಿಟಿಷರು ದೇಶ ತೊರೆಯುವ ಆತುರದಲ್ಲಿದ್ದರು. 1948ರ ಜೂನ್‌ಗೆ ಮೊದಲು ದೇಶವನ್ನು ಮುಕ್ತಗೊಳಿಸಬೇಕು ಎಂಬ ಆದೇಶದೊಂದಿಗೆ ಮೌಂಟ್‌ ಬ್ಯಾಟನ್‌ ಅವರು 1947ರ ಮಾರ್ಚ್‌ನಲ್ಲಿ ಭಾರತಕ್ಕೆ ಬಂದರು. ‘ಮಾನಸಿಕ ಅಸ್ವಸ್ಥ’ ಜಿನ್ನಾರನ್ನು ಭೇಟಿಯಾದ ಬಳಿಕ ಅಷ್ಟು ಕಾಲ ಕಾಯಲು ಅವರು ಮನಸ್ಸು ಮಾಡಲಿಲ್ಲ. ಭಾರತವನ್ನು ಬ್ರಿಟನ್‌ ಎರಡಾಗಿ ವಿಭಜಿಸಲಿದೆ ಮತ್ತು ಮೂರು ತಿಂಗಳಿಗೂ ಮೊದಲೇ ದೇಶ ತೊರೆಯಲಿದೆ ಎಂದು ಮೌಂಟ್‌ಬ್ಯಾಟನ್‌ ಅವರು ಏಕಪಕ್ಷೀಯವಾಗಿ ಜೂನ್‌ನಲ್ಲಿ ಘೋಷಿಸಿದರು.

‘ಹುಚ್ಚ’ ಮತ್ತು ‘ಅತ್ಯಂತ ಕುಬುದ್ಧಿ’ಯ ಜಿನ್ನಾ ಬಯಕೆ ಅಷ್ಟು ಬೇಗನೆ ಈಡೇರಿದ್ದನ್ನು ಅರಗಿಸಿಕೊಳ್ಳುವುದು ಗಾಂಧೀಜಿಗೆ ಸಾಧ್ಯವಾಗಲಿಲ್ಲ. ಬಂಗಾಳದ ಕೋಮುವಾದಿ ಪ್ರಧಾನಿ ಹುಸೇನ್‌ ಸುಹ್ರವರ್ದಿಯ ಧರ್ಮಾಂಧತೆ ಮತ್ತು ಕ್ರೌರ್ಯಕ್ಕೆ ಒಳಗಾಗಿದ್ದ ಜನರಿಗೆ ಸಾಂತ್ವನ ಹೇಳಲು ಗಾಂಧೀಜಿ ಬಂಗಾಳಕ್ಕೆ ಹೋದರು. ವಿಭಜನೆ ಎಂಬುದು ‘ಅತ್ಯದ್ಭುತವಾದ ಅಸಂಬದ್ಧ’ ಎಂದು ಒಮ್ಮೆ ಹೇಳಿದ್ದ ಜವಾಹರಲಾಲ್‌ ನೆಹರೂ ಅವರು ವಿಭಜನೆಯ ಸಿದ್ಧಾಂತಕ್ಕೆ ತಕ್ಷಣವೇ ಹೊಂದಿಕೊಂಡರು. ‘ನಮ್ಮ ದಾರಿಗೆ ಅಡ್ಡಲಾಗಿ ಇರುವವರು ತಮ್ಮ ದಾರಿಯಲ್ಲಿ ಸಾಗಬಹುದು’ ಎಂದು 1947ರ ಏಪ್ರಿಲ್‌ನಲ್ಲಿ ಅವರು ಘೋಷಿಸಿದರು.

ವಿಭಜಿತ ಭಾರತದ ಮೊದಲ ರಾಷ್ಟ್ರಪತಿಯಾಗಿ ರಾಜೇಂದ್ರ ಬಾಬು ಮತ್ತು ಪ್ರಧಾನಿಯಾಗಿ ನೆಹರೂ ಅಧಿಕಾರಕ್ಕೆ ಬಂದರು. ಪಾಕಿಸ್ತಾನದಲ್ಲಿ ಮಂಟೋಗೆ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿ ಜೈಲಿಗೆ ಎಸೆಯಲಾಯಿತು. ಹೃದಯ ಒಡೆದು ಹೋಗಿದ್ದ ಆ ಮನುಷ್ಯ 1955ರಲ್ಲಿ ತಮ್ಮ 42ನೇ ವಯಸ್ಸಿಗೆ ಮೃತಪಟ್ಟರು.

ವಿಭಜನೆ ಎಂಬುದು ಹಿಂದೂಗಳಿಗೆ ಭೂಪ್ರದೇಶದ ನಷ್ಟ ಮಾತ್ರ ಅಲ್ಲ; ಅದು ಅವರ ಪವಿತ್ರ ತಾಯ್ನಾಡಿನ ಛೇದನ. ಕಳೆದುಹೋದ ಭೂ ಪ್ರದೇಶವನ್ನುದೇಶಗಳ ವಿಲೀನದ ಮೂಲಕ ಪಡೆದುಕೊಂಡು ಅಖಂಡ ಭಾರತವನ್ನು ರೂಪಿಸುವುದು ಭಾರತದ ಹಲವರಲ್ಲಿ ಈಗಲೂ ಇರುವ ಗಾಢವಾದ ಕನಸು. ಎರಡು ಶತಮಾನಗಳ ಕಾಲ ಯಹೂದ್ಯರಿಗೆ ಇಸ್ರೇಲ್‌ ಇದ್ದ ಹಾಗೆ.

ಜರ್ಮನಿಯ ವಿಭಜನೆಯನ್ನು ಗಡಿಯ ಎರಡೂ ಭಾಗಗಳಲ್ಲಿ ಇದ್ದವರು ವಿರೋಧಿಸಿದ್ದರು. ಗೋಡೆಯನ್ನು ಕೆಡವಿದ ಅವರು ವಸಾಹತುಶಾಹಿ ಆಟಕ್ಕೆ ಕೊನೆ ಹಾಡಿದರು. ಪೂರ್ವ ಜರ್ಮನಿಯ ಪ್ರಧಾನಿ ಲೋದರ್‌ ಡಿ ಮಸೀಯ ಮತ್ತು ವಿರೋಧ ಪಕ್ಷದ ನಾಯಕ ರಿಚರ್ಡ್‌ ಶ್ರೋಡರ್ ತಮ್ಮ ಜನರ ಜತೆಗೆ ನಿಂತರು. ಸೋವಿಯತ್‌ ಒಕ್ಕೂಟದ ಒಳಗೆ ವಿರೋಧ ವ್ಯಕ್ತವಾದರೂ ಗೋರ್ಬಚೆವ್‌ ಅವರು ಹಸ್ತಕ್ಷೇಪ ನಡೆಸದೆ ಮುತ್ಸದ್ದಿತನ ಪ್ರದರ್ಶಿಸಿದರು.

ದುರದೃಷ್ಟವೆಂದರೆ, ಭಾರತದ ವಿಭಜನೆ ಎಂಬುದು ನೆಲಕ್ಕೆ ಸಬಂಧಿಸಿದ ವಿಚಾರ ಮಾತ್ರ ಅಲ್ಲ ಅದು ಮನಸ್ಸಿಗೆ ಸಂಬಂಧಿಸಿದ್ದು ಕೂಡ. ಹಿಂದೂಗಳು ಮತ್ತು ಮುಸ್ಲಿಮರು ಜತೆಯಾಗಿ ಬದುಕುವುದು ಸಾಧ್ಯವಿಲ್ಲ ಎಂಬುದು ವಿಭಜನೆಯ ನೆಲೆಗಟ್ಟು. ಹಿಂದೂ–ಮುಸ್ಲಿಂ ಒಗ್ಗಟ್ಟಿನ ರಾಯಭಾರಿ ಎಂದು ಒಂದು ಕಾಲದಲ್ಲಿ ಜಿನ್ನಾ ಹೊಗಳಿಕೆಗೆ ಪಾತ್ರವಾಗಿದ್ದರು. ‘ಹಿಂದೂ ಪ್ರಾಬಲ್ಯ ಎಂಬುದು ನಿಮ್ಮನ್ನು (ಮುಸ್ಲಿಮರು) ಹೆದರಿಸಲು ನಿಮ್ಮ ಶತ್ರಗಳು ಸೃಷ್ಟಿಸಿರುವ ಕಟ್ಟುಕತೆ’ ಎಂದಿದ್ದರು. ಆದರೆ, 1940ರ ದಶಕದ ಹೊತ್ತಿಗೆ ಅವರ ಮನೋಭಾವವೇ ಬದಲಾಯಿತು. ಜತೆಯಾಗಿ ಬದುಕುವುದು ಸಾಧ್ಯವೇ ಇಲ್ಲ ಎಂದು ಅವರು ಹುಚ್ಚನಂತೆ ವಾದಿಸಿದರು ಮತ್ತು ಅದರಲ್ಲಿ ಗೆಲುವು ಪಡೆದರು.

ಜಿನ್ನಾ ಭೂತವನ್ನು ಮರಳಿ ಸೀಶೆಯೊಳಗೆ ಸೇರಿಸುವುದು ಅಖಂಡ ಭಾರತದ ಮೊದಲ ಹೆಜ್ಜೆ. ಮಾನಸಿಕ ಮತ್ತು ಭಾವನಾತ್ಮಕ ವಿಭಜನೆಯ ಗಾಯ ಮಾಯುವಂತೆ ಮಾಡಲುಸಮುದಾಯವು ಪೋಷಿಸಿಕೊಂಡು ಬಂದಿರುವ ವಿಭಜನೆಯ ಕಾಲದ ನೆನಪುಗಳು ಸಹಕರಿಸುತ್ತದೆಯೇ ಹೊರತು ಅವನ್ನು ಹೆಚ್ಚಿಸುವುದಿಲ್ಲ. ‘ತಾರತಮ್ಯ, ಶತ್ರುತ್ವ ಮತ್ತು ಕಹಿಯ ವಿಷವನ್ನು ನಿರ್ಮೂಲನೆಗೊಳಿಸಲು ಈ ದಿನವು ಸ್ಫೂರ್ತಿ ತುಂಬಬಹುದು. ಜತೆಗೆ, ಇದು ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವೀಯ ಸ್ಪಂದನಗಳನ್ನು ಬಲಪಡಿಸಬಹುದು’. ಪ್ರಧಾನಿ ನರೇಂದ್ರ ಮೋದಿ ಅವರು ಈ ಭರವಸೆಯಿಂದಲೇ ‘ವಿಭಜನೆಯ ಕ್ರೌರ್ಯದ ನೆನಪಿನ ದಿನ’ ಆಚರಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

ಲೇಖಕ: ಆರ್‌ಎಸ್‌ಎಸ್‌ ಅಖಿಲ ಭಾರತೀಯ ಕಾರ್ಯಕಾರಿಣಿಯ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.