ADVERTISEMENT

ಇಷ್ಟು ಸಂಕಷ್ಟ ಸೃಷ್ಟಿಯಾಗಲು ಪ್ರಧಾನಿ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ

ಕೋವಿಡ್‌–19ರ ಎರಡನೇ ಅಲೆಯನ್ನು ಸರ್ಕಾರ ಸರಿಯಾಗಿ ನಿರ್ವಹಿಸುತ್ತಿದೆಯೇ?

ಮಲ್ಲಿಕಾರ್ಜುನ ಖರ್ಗೆ
Published 14 ಮೇ 2021, 19:30 IST
Last Updated 14 ಮೇ 2021, 19:30 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಲಸಿಕೆ, ಚುಚ್ಚುಮದ್ದು ಹಾಗೂ ಆಮ್ಲಜನಕದ ಕೊರತೆಯಾಗಲಿದ್ದು ಅದಕ್ಕೆ ಸಿದ್ಧತೆ ಬೇಕು ಎಂದು ಸಂಸತ್ತಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿ ಸರ್ವಾನುಮತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ವ ಪಕ್ಷಗಳ ಸಂಸದರು ಸದಸ್ಯರಾಗಿರುವ ಈ ಸಮಿತಿ ವರದಿ ನೀಡಿ ಒಂಬತ್ತು ತಿಂಗಳಾದರೂ ಸರ್ಕಾರ ಅದನ್ನು ಕಣ್ಣೆತ್ತಿ ನೋಡಿಲ್ಲ. ನಿರ್ಲಕ್ಷ್ಯಕ್ಕೆ ಇದಕ್ಕಿಂತ ಉದಾಹರಣೆ ಬೇಕೆ?

ಕೋವಿಡ್‌ ಎರಡನೇ ಅಲೆ ಏಕಾಏಕಿ ಅಪ್ಪಳಿಸಿದ್ದಲ್ಲ. ಎರಡನೇ ಅಲೆ ಮತ್ತು ಅದು ಸೃಷ್ಟಿಸಲಿರುವ ಭೀಕರತೆಯ ಬಗ್ಗೆ ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ದರು. ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಸಲಹೆ ನೀಡಿದ್ದರು.ಆದರೆ, ಪ್ರಧಾನಿ ನರೇಂದ್ರ ಮೋದಿ ಅದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ನೋಟು ಅಮಾನ್ಯೀಕರಣದ ವೇಳೆ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞರು ನೀಡಿದ ಸಲಹೆಯನ್ನೂ ಅವರು ಕಡೆಗಣಿಸಿದ್ದರು. ಈಗಲೂ ಅಷ್ಟೇ, ಇಷ್ಟು ದೊಡ್ಡ ಸಂಕಷ್ಟ ಸೃಷ್ಟಿಯಾಗಲು ಪ್ರಧಾನಿಯ ನಿರ್ಲಕ್ಷ್ಯವೇ ಕಾರಣ.

ಸದ್ಯ ಕೊರೊನಾ ಸೋಂಕು ನಿರ್ಮೂಲನೆ ಸಾಧ್ಯವಿಲ್ಲ. ಆದರೆ, ತುರ್ತಾಗಿ ಬೇಕಿರುವ ಆರೋಗ್ಯ ಸೌಲಭ್ಯ ಕಲ್ಪಿಸಿದ್ದರೆಇಷ್ಟೊಂದು ಸಾವು ನೋವು ಆಗುತ್ತಿರಲಿಲ್ಲ.

ADVERTISEMENT

ಡಾ.ಮನಮೋಹನ್‌ ಸಿಂಗ್‌ ಹತ್ತು ವರ್ಷ ಪ್ರಧಾನಿಯಾಗಿದ್ದವರು. ಶ್ರೇಷ್ಠ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಕೋವಿಡ್‌ ನಿಯಂತ್ರಿಸಲು ‘ಪಂಚ ಸೂತ್ರ’ಗಳನ್ನು ನೀಡಿ ಪ್ರಧಾನಿಗೆ ಪತ್ರ ಬರೆದಿದ್ದರು. ಸಲಹೆ ಅನುಷ್ಠಾನದ ಬದಲು, ಅವರನ್ನೇ ಅವಮಾನಿಸುವ ಕೆಲಸವನ್ನು ಪ್ರಧಾನಿ ಮಾಡಿದರು.ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮತ್ತು ನಾನು ಪತ್ರ ಬರೆದು ಸಲಹೆ ನೀಡಿದರೂ ಅವುಗಳನ್ನು ಪುರಸ್ಕರಿಸುವ, ನೇರವಾಗಿ ಉತ್ತರಿಸುವ ಸೌಜನ್ಯವನ್ನೂ ಪ್ರಧಾನಿ ತೋರಲಿಲ್ಲ.

ಇದು ಸಂಕಷ್ಟದ ಸಮಯ. ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಭೆ ನಡೆಸಿ ಅವರ ಸಲಹೆ ಪಡೆದು ನಿರ್ಣಯ ಕೈಗೊಳ್ಳ ಬೇಕು.ಇಂತಹ ವರ್ಚುವಲ್‌ ಸಭೆ ನಡೆಸಿ ಎಂದರೂ ಪ್ರಧಾನಿ ಸ್ಪಂದಿಸುತ್ತಿಲ್ಲ.

ಲಸಿಕೆ, ಚುಚ್ಚುಮದ್ದು ಹಾಗೂ ಆಮ್ಲಜನಕದ ಕೊರತೆಯಾಗಲಿದ್ದು ಅದಕ್ಕೆ ಸಿದ್ಧತೆ ಬೇಕು ಎಂದುಸಂಸತ್ತಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸ್ಥಾಯಿ ಸಮಿತಿ ಸರ್ವಾನುಮತದಿಂದ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ವ ಪಕ್ಷಗಳ ಸಂಸದರು ಸದಸ್ಯರಾಗಿರುವ ಈ ಸಮಿತಿ ವರದಿ ನೀಡಿ ಒಂಬತ್ತು ತಿಂಗಳಾದರೂ ಸರ್ಕಾರ ಅದನ್ನು ಕಣ್ಣೆತ್ತಿ ನೋಡಿಲ್ಲ.ನಿರ್ಲಕ್ಷ್ಯಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ನಾನು ಸಹ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ಸರ್ಕಾರದ ಗಮನ ಸೆಳೆಯುವಂತೆ ಕೋರಿದ್ದೂ ಆಗಿದೆ.

ಲಸಿಕೆಮತ್ತು ಆರೋಗ್ಯ ಸೌಲಭ್ಯಕ್ಕಾಗಿ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ₹ 35 ಸಾವಿರ ಕೋಟಿ ಮೀಸಲಿಡಲಾಗಿದೆ. ಅದರಲ್ಲಿ ಸ್ವಲ್ಪವಾದರೂ ಹಣವನ್ನು ರಾಜ್ಯಗಳಿಗೆ ನೀಡಬೇಕಿತ್ತು.

70 ವರ್ಷಗಳಲ್ಲಿ ಅಧಿಕಾರ ನಡೆಸಿದ ಎಲ್ಲ ಪಕ್ಷಗಳೂ ಆರೋಗ್ಯ ಸೌಲಭ್ಯ ಸುಧಾರಣೆಗೆ ಕೆಲಸ ಮಾಡಿವೆ. ಏಮ್ಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರದೇಶಗಳಲ್ಲಿ ದೊಡ್ಡ ಆಸ್ಪತ್ರೆ, ಸರ್ಕಾರಿ ವೈದ್ಯಕೀಯ ಕಾಲೇಜುಗಳು ಸಾಕಷ್ಟಿವೆ. ಇವು ನಿನ್ನೆ–ಇಂದು ಮಾಡಿದ್ದಲ್ಲ.ಕೋವಿಡ್‌ ಎರಡನೇ ಅಲೆಯಿಂದ ಸಂಕಷ್ಟಕ್ಕೀಡಾಗುವ ದೊಡ್ಡ ಸಂಖ್ಯೆಯ ಜನರಿಗೆ ಚಿಕಿತ್ಸೆ ನೀಡಲು ಈ ಎಲ್ಲ ಆಸ್ಪತ್ರೆಗಳಿಗೆ ಏನೇನು ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡು ಸೌಲಭ್ಯ ಕಲ್ಪಿಸಬೇಕಿತ್ತು.

ಬೆಂಗಳೂರು, ಕಲಬುರ್ಗಿ, ಕೇರಳ, ತಮಿಳು ನಾಡು, ಪಶ್ಚಿಮ ಬಂಗಾಳ (ಎರಡು), ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಇಎಸ್‌ಐಸಿ ವೈದ್ಯಕೀಯ ಕಾಲೇಜನ್ನು ನಮ್ಮ ಅವಧಿಯಲ್ಲಿ ಕಟ್ಟಿಸಿದ್ದೇವೆ. ಅವುಗಳನ್ನು ಏಮ್ಸ್‌ಗಳನ್ನಾಗಿ ಪರಿವರ್ತಿಸಿ ಇನ್ನಷ್ಟು ಸೇವೆ ಪಡೆಯಬಹುದಿತ್ತು.

ರೆಮ್‌ಡಿಸಿವಿರ್‌ ಚುಚ್ಚುಮದ್ದು, ಔಷಧಿ, ಆಮ್ಲಜನಕ ಸೌಲಭ್ಯದ ಬೆಡ್‌, ಆಮ್ಲಜನಕ ಉತ್ಪಾದನೆ ಮತ್ತು ಪೂರೈಕೆ ವ್ಯವಸ್ಥೆ ಹೆಚ್ಚಿಸುವುದು,ವೆಂಟಿಲೇಟರ್‌ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕಿತ್ತು. ಸೋಜಿಗದ ಸಂಗತಿ ಎಂದರೆ ಇಂತಹ ಸಂಕಷ್ಟದ ಸಮಯದಲ್ಲೂ ಹೊಸ ಸಂಸತ್ ಕಟ್ಟಡ ‘ಸೆಂಟ್ರಲ್‌ ವಿಸ್ತಾ’ಕ್ಕೆ ₹ 25 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದಾರೆ. ಇದೇನಾ ಮೋದಿ ಅವರ ಆದ್ಯತೆ? ಈ ಕಾಮಗಾರಿ ಕೆಲದಿನ ನಿಲ್ಲಿಸಿದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಸಾಯುವ ಜನರನ್ನು ಮೊದಲು ರಕ್ಷಿಸಬೇಕು. ಈ ಕಟ್ಟಡವನ್ನೇ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಬೇಕಿದ್ದರೆ ‘ಮೋದಿ ಕೋವಿಡ್‌ ಆಸ್ಪತ್ರೆ’ ಎಂದು ಹೆಸರು ಇಟ್ಟುಕೊಳ್ಳಲಿ. ಮೊದಲು ನಮ್ಮ ಜನರಿಗೆ ಚಿಕಿತ್ಸೆ ಲಭ್ಯವಾಗುವಂತೆ ಮಾಡಲಿ.

ಸಂಸದರು, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಕೋವಿಡ್‌ ನಿಯಂತ್ರಣಕ್ಕೇ ವಿನಿಯೋಗಿಸಲು ಅವಕಾಶ ಕೊಡಬೇಕು.

ಇನ್ನು, ಕೋವಿಡ್‌ ಲಸಿಕೆ ನೀಡಿಕೆಯ ವಿಷಯ ದಲ್ಲೂ ಸರ್ಕಾರದ ವೈಫಲ್ಯ ದೊಡ್ಡಮಟ್ಟದಲ್ಲಿದೆ. ಆರಂಭದಲ್ಲಿ ನಮ್ಮಲ್ಲಿ ಉತ್ಪಾದನೆಯಾದ ಲಸಿಕೆಯನ್ನು 60 ದೇಶಗಳಿಗೆ ಕೊಟ್ಟಿದ್ದೇವೆ ಎಂದು ಹೇಳಿಕೊಂಡು ಮೋದಿ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಂಡರು. ಎರಡೇ ಸಂಸ್ಥೆಗಳ ಬದಲು ದೇಶದಲ್ಲಿರುವ ಇತರೆ ಔಷಧಿ ಉತ್ಪಾದನಾ ಕಂಪನಿಗಳಲ್ಲಿಯೂ ಈ ಲಸಿಕೆಯ ಉತ್ಪಾದನೆಗೆ ಅನುಮತಿ ನೀಡಲಿಲ್ಲ.ಅದರ ದುಷ್ಪರಿಣಾಮವನ್ನು ನಾವು ಎದುರಿಸುವಂತಾಗಿದೆ. ಭಾರತೀಯರಿಗೆ ಎಷ್ಟು ಲಸಿಕೆಯ ಅವಶ್ಯಕತೆ ಇದೆ ಎಂಬುದನ್ನು ತಿಳಿದು, ಅದರಂತೆ ಯೋಜನೆ ರೂಪಿಸಿದ್ದರೆ ಇಷ್ಟೊಂದು ಹಾಹಾಕಾರ ಉಂಟಾಗುತ್ತಿರಲಿಲ್ಲ.

18ರಿಂದ 44 ವರ್ಷ ವಯೋಮಾನದವರು ದೇಶದಲ್ಲಿ 59.46 ಕೋಟಿ ಜನರು ಇದ್ದಾರೆ. ಈ ವರೆಗೆ 1.84 ಕೋಟಿ ಜನರಿಗೆ ಮಾತ್ರ ಲಸಿಕೆ ಕೊಡಲಾಗಿದೆ (ಮೇ 1ರ ಅಂಕಿಅಂಶ). ಸರ್ಕಾರದ ಬಳಿ ಇರುವುದು 34 ಕೋಟಿ ಡೋಸ್‌ ಲಸಿಕೆ ಮಾತ್ರ.

ಆಂಬುಲೆನ್ಸ್‌, ಪಿಪಿಇ ಕಿಟ್‌, ವೆಂಟಿಲೇಟರ್‌, ಲಸಿಕೆ ಸೇರಿದಂತೆ ವೈದ್ಯಕೀಯ ಉಪಕರಣಗಳಿಗೆ ತೆರಿಗೆ ವಿನಾಯಿತಿ ನೀಡಬೇಕು. ಇವುಗಳನ್ನು ವಿದೇಶಗಳಿಂದ ತರಿಸಿಕೊಂಡರೆ ಆಮದು ಸುಂಕ ವಿಧಿಸಬಾರದು ಎಂಬ ನಮ್ಮ ಸಲಹೆ ಇನ್ನೂ ಕಾರ್ಯರೂಪಕ್ಕೆ ತಂದಿಲ್ಲ. ಅನಿವಾಸಿ ಭಾರತೀಯರು ತಾವಿರುವ ದೇಶಗಳಿಂದ ವೈದ್ಯಕೀಯ ಉಪಕರಣ ಕಳಿಸಲು ಸಿದ್ಧರಿದ್ದರೂ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ.

ರೆಮ್‌ಡಿಸಿವಿರ್‌ ಚುಚ್ಚುಮದ್ದು ಬಿಜೆಪಿ ನಾಯಕರ ಪ್ರಭಾವ ಇರುವ ಪ್ರದೇಶ, ಅವರು ಹೇಳಿದ ಆಸ್ಪತ್ರೆಗಳಿಗೆ ಮಾತ್ರ ಸಿಗುತ್ತಿದೆ. ತಮಗೆ ಬೇಕಾದವರಿಗೆ ಮಾತ್ರ ಬೆಡ್‌ ಕೊಡಿಸುತ್ತಿದ್ದಾರೆ. ಆಮ್ಲಜನಕದ ಕೊರತೆಯಾಗಿದೆ. ಖಾಸಗಿ ಆಸ್ಪತ್ರೆಗಳವರು ಇದೇ ಅವಕಾಶ ಎಂದು ಸುಲಿಗೆ ಮಾಡುತ್ತಿದ್ದಾರೆ.

ಲಾಕ್‌ಡೌನ್‌ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗಕ್ಕೆ ಬಿಡಿಗಾಸಿನ ನೆರವೂನೀಡಿಲ್ಲ. ನರೇಗಾ ಕೂಲಿ ದಿನ ಹೆಚ್ಚಿಸುತ್ತಿಲ್ಲ.

ಸಂಕಷ್ಟಕ್ಕೀಡಾದ ಜನರಿಗೆಯುವ ಕಾಂಗ್ರೆಸ್‌ ನವರು ನೆರವು ನೀಡುತ್ತಿದ್ದಾರೆ. ನಮ್ಮ ದೇಶದಲ್ಲಿ ಕೋಟಿ ಕೋಟಿ ರೂಪಾಯಿ ಆದಾಯ ಹೊಂದಿರುವ ಸಾಕಷ್ಟು ಮಠಗಳು, ತಿರುಪತಿ ಸೇರಿದಂತೆ ಇತರೆ ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳಿವೆ. ಭಕ್ತರಿಂದಲೇ ಬಂದ ಆಸ್ತಿ ಅದು. ಇಂತಹ ದೊಡ್ಡ ಧರ್ಮದತ್ತಿ ಸಂಸ್ಥೆಗಳು ತಮ್ಮ ಭಕ್ತರನ್ನು ಉಳಿಸಿ ಕೊಳ್ಳಲು ಮುಂದಾಗಬೇಕು. ಈಗ ನೆರವಿಗೆ ಬರದಿದ್ದರೆ ಇನ್ನು ಯಾವಾಗ ನೆರವಿಗೆ ಬರುತ್ತೀರಿ?

ಲೇಖಕರು:ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ

ನಿರೂಪಣೆ: ಗಣೇಶ ಚಂದನಶಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.