ADVERTISEMENT

ಸಂಪಾದಕೀಯ | ಕಪ್ಪು ಶಿಲೀಂಧ್ರದ ಕಾಟ: ಔಷಧ ಕೊರತೆಯನ್ನು ತಕ್ಷಣ ನೀಗಿಸಿ

​ಪ್ರಜಾವಾಣಿ ವಾರ್ತೆ
Published 24 ಮೇ 2021, 19:28 IST
Last Updated 24 ಮೇ 2021, 19:28 IST
   

ಕೋವಿಡ್‌ ಎರಡನೇ ಅಲೆಯ ಹೊಡೆತಕ್ಕೆ ದೇಶದ ಜನ ತತ್ತರಿಸಿಹೋಗಿದ್ದಾರೆ. ಒಂದೆಡೆ ಸಾಲು ಸಾಲು ಸಾವುಗಳಾದರೆ, ಇನ್ನೊಂದೆಡೆ ಚಿಕಿತ್ಸೆ ಪಡೆದು ಗುಣಮುಖರಾದ ಕೆಲವರಲ್ಲಿ ಇದೀಗ ಕಪ್ಪು ಶಿಲೀಂಧ್ರದ ಕಾಟ ಕಾಣಿಸಿಕೊಂಡು ದುಗುಡವನ್ನು ಮತ್ತಷ್ಟು ಹೆಚ್ಚಿಸಿದೆ. ರಾಜ್ಯದಲ್ಲಿ ಈಗಾಗಲೇ 300ಕ್ಕೂ ಅಧಿಕ ಮಂದಿಯಲ್ಲಿ ಇದು ಕಾಯಿಲೆ ಸ್ವರೂಪ ಪಡೆದಿದ್ದು, 20ಕ್ಕೂ ಅಧಿಕ ಮಂದಿ ಇದರಿಂದ ಮೃತಪಟ್ಟಿದ್ದಾರೆ. ಇದಕ್ಕೆ ಚಿಕಿತ್ಸೆಯೂ ಬಲು ದುಬಾರಿ. ಬಡವರ ಕೈಗೆಟಕುವಂಥದ್ದಲ್ಲ. ಕಾಯಿಲೆಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿರುವುದು ಸ್ವಾಗತಾರ್ಹ.

ಕಪ್ಪು ಶಿಲೀಂಧ್ರ ಪತ್ತೆಯಾದವರ ಚಿಕಿತ್ಸೆಗೆ ವಿವಿಧ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿದ ಹಾಸಿಗೆ ಗಳು ಕೆಲವೇ ದಿನಗಳಲ್ಲಿ ಭರ್ತಿಯಾಗಿವೆ. ದಿನದಿಂದ ದಿನಕ್ಕೆ ಹೇಗೆ ಹೆಚ್ಚಿನ ಜನರನ್ನು ಇದು ಬಾಧಿಸು ತ್ತಿದೆ ಎನ್ನುವುದಕ್ಕೆ ಈ ಮಾಹಿತಿಯೇ ಸಾಕ್ಷ್ಯ ಒದಗಿಸುತ್ತದೆ. ಗ್ರಾಮೀಣ ಪ್ರದೇಶಗಳ ಜನರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಂಡರೆ ಚಿಕಿತ್ಸೆಗೆ ಸ್ಥಳೀಯ ಮಟ್ಟದಲ್ಲಿ ವ್ಯವಸ್ಥೆಯೇ ಇಲ್ಲ. ಚಿಕಿತ್ಸೆಗಾಗಿ ನೂರಾರು ಕಿ.ಮೀ. ದೂರದ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರವೇ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಕಪ್ಪು ಶಿಲೀಂಧ್ರದಿಂದ ಬರುವ ಕಾಯಿಲೆಯ ಚಿಕಿತ್ಸೆಗೆ ಬಳಸುವ ಆ್ಯಂಫೊಟೆರಿಸಿನ್‌–ಬಿ ಔಷಧದ ಕೊರತೆಯೂ ರೋಗಿಗಳನ್ನು ಕಂಗಾಲಾಗಿಸಿದೆ. ಈ ಔಷಧವನ್ನು ತರಿಸಿಕೊಟ್ಟರೆ ಮಾತ್ರ ಚಿಕಿತ್ಸೆ ಮುಂದುವರಿಸಬಹುದು ಎಂದು ಕೆಲವು ವೈದ್ಯರು ಅಸಹಾಯಕತೆ ವ್ಯಕ್ತಪಡಿಸಿದ ವರದಿಗಳಿವೆ.

ರಾಜ್ಯ ಸರ್ಕಾರ ಈ ಔಷಧದ 20 ಸಾವಿರ ವಯಲ್ಸ್‌ಗೆ ಬೇಡಿಕೆ ಸಲ್ಲಿಸಿದರೆ, ಕೇಂದ್ರ ಸರ್ಕಾರ ಇದುವರೆಗೆ ಹಂಚಿಕೆ ಮಾಡಿರುವುದು 3,960 ವಯಲ್ಸ್‌ ಮಾತ್ರ. ಹಾಗಾದರೆ ರಾಜ್ಯದ ಔಷಧ ಕೊರತೆಯನ್ನು ಹೇಗೆ ಸರಿದೂಗಿಸಬೇಕು? ಔಷಧ ಕೊರತೆಯು ರೋಗಿಗಳ ಸಂಬಂಧಿಕರಲ್ಲಿ ಹಾಹಾಕಾರ ಎಬ್ಬಿಸುವುದಲ್ಲದೆ ಕಾಳಸಂತೆಯಲ್ಲೂ ಔಷಧಿ ಮಾರಾಟವಾಗುವುದಕ್ಕೆ ದಾರಿ ಮಾಡಿ ಕೊಡುತ್ತದೆ. ಕೋವಿಡ್‌ ಚಿಕಿತ್ಸೆಗೆ ಬಳಸುವ ರೆಮ್‌ಡಿಸಿವಿರ್‌ ಔಷಧದ ಕೊರತೆಯೇ ಇದಕ್ಕೆ ಜ್ವಲಂತ ಸಾಕ್ಷಿ. ಆ ಔಷಧಿಯು ಕಾಳಸಂತೆಯಲ್ಲಿ ಮಾರಾಟವಾಗಿ ಜನರ ಸುಲಿಗೆಗೆ ಕಾರಣವಾಯಿತು. ನಕಲಿ ರೆಮ್‌ಡಿಸಿವಿರ್‌ ಮಾರಾಟದ ಕುರಿತೂ ವ್ಯಾಪಕವಾಗಿ ದೂರುಗಳು ಕೇಳಿಬಂದವು. ಹಳೆಯ ತಪ್ಪುಗಳು ನಮಗೆ ಪಾಠವಾಗಬೇಕು. ಅಗತ್ಯ ಪ್ರಮಾಣದ ಆ್ಯಂಫೊಟೆರಿಸಿನ್‌–ಬಿ ಪೂರೈಸುವಂತೆ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರ ಬೇಕು. ಈ ಔಷಧದ ಉತ್ಪಾದನೆ ಹೆಚ್ಚಿಸಲು ಇಲ್ಲವೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಜರುಗಿಸಬೇಕು. ಕೊರತೆಯನ್ನೂ ನೀಗಿಸಬೇಕು.

ADVERTISEMENT

ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಸ್ಟೆರಾಯ್ಡ್‌ ಬಳಕೆ, ಹ್ಯುಮಿಡಿಫೈಯರ್‌ಗಳಲ್ಲಿ ಶುದ್ಧ ನೀರು ಬಳಸದಿರುವುದು, ತೀವ್ರ ನಿಗಾ ಘಟಕದ ವೆಂಟಿ ಲೇಟರ್‌ಗಳಲ್ಲಿ ಸ್ವಚ್ಛತೆ ಕಾಪಾಡದಿರುವುದು, ಚಿಕಿತ್ಸೆಗೆ ಬಳಸುವ ಕೊಳವೆಗಳನ್ನು, ಆಸ್ಪತ್ರೆಗಳ ಹಾಸಿಗೆಗಳನ್ನು ಶುಭ್ರವಾಗಿ ಇಟ್ಟುಕೊಳ್ಳದೇ ಇರುವುದು– ಇಂತಹ ಸನ್ನಿವೇಶದಲ್ಲಿ ಕಪ್ಪು ಶಿಲೀಂಧ್ರ ತಗಲುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದೇ ಮಾಸ್ಕನ್ನು ದೀರ್ಘಕಾಲ ಬಳಸಿದರೂ ಇದು ಕಾಣಿಸಿಕೊಳ್ಳುವ ಅಪಾಯವಿದೆ ಎಂದೂ ಅವರು ಹೇಳಿದ್ದಾರೆ. ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನೀಡುವಾಗ ಸ್ವಚ್ಛತಾ ಮಾನದಂಡಗಳು ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಮಾಸ್ಕ್ ಬಳಕೆ ಕುರಿತು ಜನರಿಗೆ ಸರಿಯಾದ ತಿಳಿವಳಿಕೆಯೇ ಇಲ್ಲ.

ಮಾಸ್ಕ್ ಧರಿಸದವರಿಂದ ದಂಡ ವಸೂಲಿ ಮಾಡುವುದಕ್ಕೆ ಸರ್ಕಾರ ಆದ್ಯತೆ ನೀಡಿತೇ ವಿನಾ ಅದರ ಬಳಕೆ ಹಾಗೂ ವಿಲೇವಾರಿಯ ವೈಜ್ಞಾನಿಕ ವಿಧಾನದ ಬಗ್ಗೆ ಅರಿವು ಮೂಡಿಸುವಪ್ರಯತ್ನವನ್ನು ಸಮರ್ಪಕವಾಗಿ ಮಾಡಲೇ ಇಲ್ಲ. ಮಾಸ್ಕ್‌ಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆಎದುರಿಸಬಹುದಾದ ಅಪಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಕೊರೊನಾದಂತಹ ಸಾಂಕ್ರಾಮಿಕ ಕಾಣಿಸಿಕೊಂಡಾಗ ಮುಂದೆ ಒದಗಬಹುದಾದ ಪರಿಸ್ಥಿತಿಗಳನ್ನು ಮುಂಚಿತವಾಗಿ ಆಲೋಚಿಸಿ ಪೂರ್ವಸಿದ್ಧತೆ ಮಾಡಿಕೊಳ್ಳುವ ಹೊಣೆ ಸರ್ಕಾರದ್ದು. ಪ್ರತೀ ಪ್ರಜೆಯ ಜೀವವೂ ಬಲು ಮುಖ್ಯ ಎಂಬುದನ್ನು ಅದು ಅರಿಯಬೇಕು. ಕೋವಿಡ್‌ನಿಂದ ಅಮೂಲ್ಯ ಜೀವಗಳನ್ನು ದೇಶ ಕಳೆದು ಕೊಂಡಿದೆ. ಕಪ್ಪು ಶಿಲೀಂಧ್ರವು ಮತ್ತಷ್ಟು ವ್ಯಾಪಕವಾಗಿ ಕಾಡದಂತೆ ಸರ್ಕಾರ ಎಲ್ಲ ರೀತಿಯಲ್ಲೂ ಎಚ್ಚರಿಕೆ ವಹಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.