ADVERTISEMENT

ಸಂಪಾದಕೀಯ| ಪಡಿತರ ಧಾನ್ಯ ಕಳ್ಳಸಾಗಣೆ ತಡೆಗೆ ಬೇಕು ಇಚ್ಛಾಶಕ್ತಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 19:30 IST
Last Updated 18 ಜುಲೈ 2021, 19:30 IST
ಪ್ರಾತಿನಿಧಿಕ ಚಿತ್ರ 
ಪ್ರಾತಿನಿಧಿಕ ಚಿತ್ರ    

ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಹಾರ ಭದ್ರತಾ ಕಾಯ್ದೆಯಡಿ ಪಡಿತರವನ್ನು ಉಚಿತವಾಗಿ ಮತ್ತು ರಿಯಾಯಿತಿ ದರದಲ್ಲಿ ಒದಗಿಸುತ್ತಿವೆ. ರಾಜ್ಯದಲ್ಲಿ ಒಟ್ಟು 1.47 ಕೋಟಿ ಪಡಿತರ ಚೀಟಿಗಳಿವೆ. ಈ ಪೈಕಿ 1.15 ಕೋಟಿ ಕುಟುಂಬಗಳು ಆದ್ಯತಾ ವಲಯದ ಪಡಿತರ ಚೀಟಿ (ಬಿಪಿಎಲ್‌) ಹೊಂದಿವೆ. 10.90 ಲಕ್ಷ ಕುಟುಂಬಗಳು ಅಂತ್ಯೋದಯ ಅನ್ನ ಯೋಜನೆ (ಎಎವೈ) ಪಡಿತರ ಚೀಟಿ ಹೊಂದಿವೆ. 21.13 ಲಕ್ಷ ಕುಟುಂಬಗಳು ಆದ್ಯತೆಯೇತರ ವಲಯದ ಕುಟುಂಬದ (ಎನ್‌ಪಿಎಚ್‌ಎಚ್‌) ಪಡಿತರ ಚೀಟಿಗಳನ್ನು ಹೊಂದಿವೆ. ಈ ಎಲ್ಲ ಪಡಿತರ ಚೀಟಿದಾರರಿಗೆ ಕೇಂದ್ರ ಮತ್ತು ರಾಜ್ಯದ ವಿವಿಧ ಯೋಜನೆಗಳ ಅಡಿಯಲ್ಲಿ ವಿತರಿಸಬೇಕಿದ್ದ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಹಲವು ಪ್ರಕರಣಗಳು ವರದಿಯಾಗಿವೆ. ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಮೇ ಮತ್ತು ಜೂನ್‌ ತಿಂಗಳ ಅವಧಿಗೆ ಅಂತ್ಯೋದಯ ಮತ್ತು ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರಿಗೂ ತಲಾ 5 ಕೆ.ಜಿ. ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರ ಉಚಿತವಾಗಿ ಪೂರೈಸಿದೆ. ರಾಜ್ಯ ಸರ್ಕಾರವು ಸಾಮಾನ್ಯ ಸಂದರ್ಭಗಳಲ್ಲಿ ತಿಂಗಳಿಗೆ 2.32 ಲಕ್ಷ ಟನ್‌ ಅಕ್ಕಿಯನ್ನು ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಪಡೆಯುತ್ತಿದೆ. ಅದರಲ್ಲಿ 2.17 ಲಕ್ಷ ಟನ್‌ ಉಚಿತವಾಗಿ ಪೂರೈಕೆಯಾದರೆ, 25,000 ಟನ್‌ ಅಕ್ಕಿಯನ್ನು ಎಫ್‌ಸಿಐನ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಖರೀದಿ ಮಾಡುತ್ತಿದೆ. 40,000 ಟನ್‌ ಗೋಧಿಯನ್ನೂ ಇದೇ ಯೋಜನೆಯಡಿ ಖರೀದಿ ಮಾಡಲಾಗುತ್ತಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಉಚಿತ ಮತ್ತು ರಿಯಾಯಿತಿ ದರದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುವುದಕ್ಕಾಗಿಯೇ ರಾಜ್ಯ ಸರ್ಕಾರವು ವಾರ್ಷಿಕ ₹ 1,800 ಕೋಟಿ ವೆಚ್ಚ ಮಾಡುತ್ತಿದೆ.

ಇಷ್ಟೊಂದು ದೊಡ್ಡ ಪ್ರಮಾಣದ ಆಹಾರ ಧಾನ್ಯಗಳ ಸಾಗಣೆ, ಪೂರೈಕೆ ಮತ್ತು ವಿತರಣೆಯಲ್ಲಿ ಇರುವ ಲೋಪಗಳನ್ನೇ ಬಳಸಿಕೊಂಡು ಕಾಳಸಂತೆಕೋರರು ಮತ್ತು ಅಧಿಕಾರಿಗಳು ಷಾಮೀಲಾಗಿ ಬಡವರ ಅನ್ನಕ್ಕೆ ಕನ್ನ ಹಾಕುತ್ತಿದ್ದಾರೆ. ಉಚಿತವಾಗಿ ವಿತರಿಸಲು ಪೂರೈಕೆಯಾಗಿದ್ದ ಆಹಾರ ಧಾನ್ಯಗಳನ್ನು ಕಾಳಸಂತೆಗೆ ಕೊಂಡೊಯ್ದಿರುವ ಪ್ರಕರಣಗಳು ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಾಗಿವೆ. ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಏಕಕಾಲಕ್ಕೆ ಆಹಾರ ಧಾನ್ಯ ಹಂಚಿಕೆಯಾದ ಸಂದರ್ಭವನ್ನೇ ಬಳಸಿಕೊಂಡು ಪಡಿತರ ಚೀಟಿದಾರರಿಗೆ ವಂಚಿಸಿರುವ ಪ್ರಕರಣಗಳೂ ನಡೆದಿವೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕರ ನೇತೃತ್ವದ ರಾಜ್ಯ ಮಟ್ಟದ ತನಿಖಾ ದಳವು ಮೇ ತಿಂಗಳಲ್ಲಿ ಬಂಗಾರಪೇಟೆಯ ಒಂದೇ ಅಕ್ಕಿ ಗಿರಣಿಯಲ್ಲಿ 9,710 ಕ್ವಿಂಟಲ್‌ ಪಡಿತರ ಅಕ್ಕಿಯನ್ನು ಪತ್ತೆ ಮಾಡಿದೆ. ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಡಿತರ ಧಾನ್ಯಗಳ ಅಕ್ರಮ ಸಾಗಣೆ, ದಾಸ್ತಾನು ಪತ್ತೆಯಾಗಿವೆ. ಬೆಂಗಳೂರಿನ ಯಶವಂತಪುರದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಸಗಟು ವಿತರಣಾ ಉಗ್ರಾಣಗಳಿಂದಲೇ ಪಡಿತರ ಧಾನ್ಯವನ್ನು ಕಾಳಸಂತೆಗೆ ಕೊಂಡೊಯ್ಯುತ್ತಿದ್ದ ಪ್ರಕರಣವನ್ನೂ ತನಿಖಾ ತಂಡ ಇತ್ತೀಚೆಗೆ ಪತ್ತೆ ಮಾಡಿದೆ. ಇನ್ನೊಂದೆಡೆ, ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಖರೀದಿಸಿದ್ದ ಭತ್ತವನ್ನು ಮಂಡ್ಯ ಜಿಲ್ಲೆಯ ಅಕ್ಕಿ ಗಿರಣಿಗಳಲ್ಲಿ ‘ಹಲ್ಲಿಂಗ್‌’ ಮಾಡಿ ಪಡೆದಿದ್ದ 14,344 ಟನ್‌ ಅಕ್ಕಿಯನ್ನು ಜೂನ್‌ ತಿಂಗಳಿನಲ್ಲಿ ಹಲವು ಜಿಲ್ಲೆಗಳಲ್ಲಿ ಪಡಿತರ ವಿತರಣೆಗಾಗಿ ಹಂಚಿಕೆ ಮಾಡಲಾಗಿತ್ತು. ಈ ಅಕ್ಕಿಯನ್ನು ಕಂಪ್ಯೂಟರೀಕೃತ ತೂಕವಿಲ್ಲದೆ, ಗುಣಮಟ್ಟ ಪರಿಶೀಲನೆ ಮಾಡದೆ ಮತ್ತು ಕಣ್ಗಾವಲು ಇಲ್ಲದೇ ಸಾಗಣೆ ಮಾಡಿರುವುದು ಸಂಶಯಕ್ಕೆ ಎಡೆಮಾಡಿದೆ. ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಪೂರೈಕೆಯಾದ ಆಹಾರ ಧಾನ್ಯಗಳನ್ನು ಬಳಸಿಕೊಂಡು ಲೆಕ್ಕ ಹೊಂದಾಣಿಕೆ ಮಾಡಿ, ಬೃಹತ್‌ ಪ್ರಮಾಣದ ಅಕ್ಕಿಯನ್ನು ಕಾಳಸಂತೆಗೆ ಸಾಗಿಸಿರುವ ಮತ್ತು ಗಿರಣಿಗಳಲ್ಲೇ ಬಿಟ್ಟು ಬಂದಿರುವ ಶಂಕೆ ಇದೆ. ಈ ಕುರಿತೂ ತನಿಖಾ ದಳವು ತನಿಖೆ ಆರಂಭಿಸಿದೆ. ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಪೂರೈಕೆಯಾಗುತ್ತಿರುವ ಆಹಾರ ಧಾನ್ಯ ಮತ್ತು ಇತರ ಪಡಿತರ ವಸ್ತುಗಳನ್ನೂ ವ್ಯಾಪಕವಾಗಿ ಕಾಳಸಂತೆಗೆ ಸಾಗಿಸುತ್ತಿರುವ ಆರೋಪಗಳಿವೆ.

ರಾಜ್ಯದಲ್ಲಿ ಪಡಿತರ ಧಾನ್ಯವನ್ನು ಕಾಳಸಂತೆಗೆ ಕೊಂಡೊಯ್ದು ಮಾರಾಟ ಮಾಡುವ ಬೃಹತ್‌ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಹಲವು ಸಾಕ್ಷ್ಯಗಳು ಲಭಿಸಿವೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ಹಾಗೂ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಗಟು ಉಗ್ರಾಣಗಳ ವ್ಯವಸ್ಥಾಪಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರು, ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಕಾಳಸಂತೆಕೋರರ ಜತೆ ಕೈಜೋಡಿಸಿರುವುದರಿಂದಲೇ ಆಹಾರ ಧಾನ್ಯಗಳ ಕಳ್ಳಸಾಗಣೆ ನಿರಾತಂಕವಾಗಿ ನಡೆದಿದೆ. ಪಡಿತರ ಧಾನ್ಯಗಳ ಕಳ್ಳಸಾಗಣೆ ಮತ್ತು ಅಕ್ರಮ ಸಾಗಣೆ ಪತ್ತೆಯಾದಾಗ ಪೊಲೀಸರು ಸಾಗಣೆದಾರರು ಮತ್ತು ಖರೀದಿದಾರರನ್ನಷ್ಟೇ ಕೇಂದ್ರೀಕರಿಸಿ ತನಿಖೆ ನಡೆಸುತ್ತಿರುವುದೂ ಕಾಳಸಂತೆಕೋರರಿಗೆ ವರದಾನವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಆಹಾರ ಧಾನ್ಯವನ್ನು ಕಳ್ಳಸಾಗಣೆದಾರರಿಗೆ ನೀಡಿದವರು ಮತ್ತು ಕಾಳಸಂತೆಯನ್ನು ನಿಯಂತ್ರಿಸುವವರ ವಿರುದ್ಧ ಕಾನೂನು ಕ್ರಮ ಆಗುತ್ತಿಲ್ಲ. ಇದು ರಾಜ್ಯದ ಬಹುತೇಕ ಸಗಟು ಪಡಿತರ ವಿತರಣಾ ಉಗ್ರಾಣಗಳ ಮೇಲೆ ಕಾಳಸಂತೆಕೋರರು ನೇರ ಹಿಡಿತ ಸಾಧಿಸಲು ಕಾರಣವಾಗಿದೆ. ರಾಜ್ಯದ ಹೆಚ್ಚಿನ ಸಗಟು ಪಡಿತರ ವಿತರಣಾ ಉಗ್ರಾಣಗಳಲ್ಲಿ ಇನ್ನೂ ಸಿ.ಸಿ ಟಿ.ವಿ ಕ್ಯಾಮೆರಾ ಕಣ್ಗಾವಲು ಇಲ್ಲ. ಪಡಿತರ ಸಾಗಣೆ ವಾಹನಗಳಿಗೆ ಜಿಪಿಎಸ್‌ ಕಡ್ಡಾಯಗೊಳಿಸುವ ಪ್ರಸ್ತಾವ ದೂಳು ತಿನ್ನುತ್ತಿದೆ. ಎಫ್‌ಸಿಐ ಮತ್ತು ಅಕ್ಕಿ ಗಿರಣಿಗಳು, ಎಂಎಸ್‌ಪಿ ಖರೀದಿ ಕೇಂದ್ರಗಳಿಂದ ಆಹಾರ ಧಾನ್ಯ ಎತ್ತುವಳಿ ಹಾಗೂ ಸಾಗಣೆ ಮೇಲೆ ಸರಿಯಾದ ನಿಗಾ ಇಡುವ ವ್ಯವಸ್ಥೆಯೇ ಇಲ್ಲ. ಬಡವರ ಹೊಟ್ಟೆ ತುಂಬಿಸಬೇಕಾದ ಆಹಾರ ಧಾನ್ಯಗಳು ಕಾಳಸಂತೆಕೋರರ ಪಾಲಾಗುವಂತೆ ಮಾಡಿರುವುದು ಅಕ್ಷಮ್ಯ. ಕಾಳಸಂತೆಕೋರರು ಮತ್ತು ಅಧಿಕಾರಿಗಳ ನಡುವಿನ ನಂಟನ್ನು ತುಂಡರಿಸಬೇಕು. ಪಡಿತರ ಧಾನ್ಯಗಳು ಕಾಳಸಂತೆಕೋರರ ಕೈ ಸೇರದಂತೆ ತಡೆಯುವ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಲೇಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.