-ಬ್ರಾಡ್ ಹಾಗ್, ಆಸ್ಟ್ರೇಲಿಯಾ ಹಿರಿಯ ಕ್ರಿಕೆಟಿಗ, ಕೆಪಿಎಲ್ ವೀಕ್ಷಕ ವಿವರಣೆಕಾರ
* ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಿಂದ ಪ್ರಯೋಜನವಿದೆಯೇ?
– ಖಂಡಿತವಾಗಿಯೂ ಇದೆ. ಎಷ್ಟೊಂದು ಯುವ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ. ಕರ್ನಾಟಕವು ಕ್ರಿಕೆಟ್ ಕಣಜವಾಗಿ ಬೆಳೆದಿದೆ. ಹೊಸ ಸ್ಪಿನ್ನರ್ಗಳು, ವೇಗಿಗಳು, ಬ್ಯಾಟ್ಸ್ಮನ್ಗಳಿಗೆ ತಮ್ಮ ಪ್ರತಿಭೆ ತೋರಿಸಲು ವೇದಿಕೆಯಾಗಿದೆ. ನಾನು ಎಡಗೈ ಸ್ಪಿನ್ನರ್ ಆಗಿದ್ದವ. ಇಲ್ಲಿ ಬಹಳಷ್ಟು ಒಳ್ಳೆಯ ಎಡಗೈ ಸ್ಪಿನ್ ಬೌಲರ್ಗಳನ್ನು ನೋಡಿ ಖುಷಿಯಾಗಿದೆ. ಅಟಗಾರರಲ್ಲದೇ ಅಂಪೈರಿಂಗ್ ಸೇರಿದಂತೆ ಬೇರೆ ಬೇರೆ ವಿಭಾಗಗಳಲ್ಲಿಯೂ ಅವಕಾಶಗಳು ಸಿಗುತ್ತಿವೆ.
* ಕೆಪಿಎಲ್ ಟೂರ್ನಿಯ ಭವಿಷ್ಯದ ಬಗ್ಗೆ ಏನು ಅನಿಸುತ್ತಿದೆ?
– ಉಜ್ವಲವಾಗಿದೆ. ಕಳೆದ ವರ್ಷಗಳಲ್ಲಿ ಬೆಳೆದ ರೀತಿ ನೋಡಿದರೆ ಭವಿಷ್ಯದ ಬಗ್ಗೆ ಅಗಾಧ ಭರವಸೆ ಮೂಡುತ್ತದೆ. ಇನ್ನಷ್ಟು ದೊಡ್ಡದಾಗಿ ಬೆಳೆಯುವ ಸಾಮರ್ಥ್ಯ ಟೂರ್ನಿಗೆ ಇದೆ. ಯುವ ಆಟಗಾರರನ್ನು ಉನ್ನತ ಹಂತಕ್ಕೆ ಸಿದ್ಧಗೊಳಿಸುತ್ತಿದೆ.
* ಈ ಟೂರ್ನಿಯನ್ನು ಮಳೆಗಾಲದಲ್ಲಿ ನಡೆಸುತ್ತಿರುವುದೇಕೆ?
– ಮಳೆ ನಮ್ಮ ನಿಯಂತ್ರಣದಲ್ಲಿ ಇಲ್ಲ. ಆಸ್ಟ್ರೇಲಿಯಾದಲ್ಲಿಯೂ ಮಳೆ ಬಂದಿದೆ. ಅಲ್ಲಿಯೂ ಕೆಲವು ಟೂರ್ನಿಗಳಲ್ಲಿ ಪಂದ್ಯಗಳು ನಡೆದಿಲ್ಲ. ಇದೆಲ್ಲದರ ನಡುವೆಯೂ ಉತ್ತಮ ಆಯೋಜನೆ ಇರುವುದು ಗಮನಾರ್ಹ.
* ಬೆಂಗಳೂರಿನಲ್ಲಿ ನಿಮ್ಮ ಸುತ್ತಾಟದ ಕುರಿತು ಹೇಳಿ.
– ಓಹ್... ಅದೊಂದು ಅದ್ಭುತ ಅನುಭವ. ನಾನು ಕ್ರಿಕೆಟ್ ಆಡುವಾಗ ಇಲ್ಲಿಗೆ ಬಂದು ಹೋಗಿದ್ದೇನೆ. ಆದರೆ ಈಗ ಇಲ್ಲಿರುವುದು ಒಳ್ಳೆಯ ಅವಕಾಶ. ನಮ್ಮ ವಾಹಿನಿಯ ತಂಡದೊಂದಿಗೆ, ಬೆಂಗಳೂರಿನ ನಿಜವಾದ ಶ್ರೀಮಂತಿಕೆ, ಸಂಸ್ಕೃತಿಯನ್ನು ನೋಡಿದೆ. ಯಕ್ಷಗಾನ ಅಕಾಡೆಮಿಯಲ್ಲಿ ಅವರ ಸಮರ್ಪಣಾ ಭಾವ ಮನತಟ್ಟಿತು. ದೋಸಾ, ಇಡ್ಲಿ, ಕೇಸರಿಬಾತ್ ಮತ್ತಿತರ ಖಾದ್ಯಗಳ ವೈವಿಧ್ಯ ಅಮೋಘವಾದದ್ದು. ಕರ್ನಾಟಕ ಬಹಳ ಇಷ್ಟವಾಯಿತು. ಮಳೆ ಇರದಿದ್ದರೆ ಹುಬ್ಬಳ್ಳಿಯಲ್ಲಿಯೂ ಓಡಾಡುವ ಅವಕಾಶ ಸಿಗುತ್ತಿತ್ತು. ಮುಂದಿನ ವಾರ ಮೈಸೂರಿನಲ್ಲಿರುತ್ತೇನೆ. ಆ ಊರಿನ ಬಗ್ಗೆ ಕೇಳಿದ್ದೆ. ಈಗ ನೋಡುವ ಅವಕಾಶ ಸಿಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.