ADVERTISEMENT

ಪ್ರಾಥಮಿಕ ಶಿಕ್ಷಣದಿಂದಲೇ ಸುಧಾರಣೆ ಆಗಬೇಕು

ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 20:00 IST
Last Updated 10 ಜನವರಿ 2020, 20:00 IST
ಪ್ರೊ.ಎಂ.ಆರ್.ದೊರೆಸ್ವಾಮಿ
ಪ್ರೊ.ಎಂ.ಆರ್.ದೊರೆಸ್ವಾಮಿ   

ಶಿಕ್ಷಣ ಸುಧಾರಣೆ ಎಲ್ಲಿಂದ ಆರಂಭಿಸಬೇಕು?

ಪ್ರಾಥಮಿಕ ಶಿಕ್ಷಣದ ಹಂತದಿಂದಲೇ ಸುಧಾರಣೆ ಆರಂಭವಾಗಬೇಕು. ಬಡವರು ಆಶ್ರಯಿಸಿರುವ ಸರ್ಕಾರಿ ಶಾಲೆಗಳಿಗೆ ಸಾಕಷ್ಟು ಕೊಠಡಿ, ನೀರಿನ ಸೌಲಭ್ಯ, ಕಾಂಪೌಂಡ್‌, ಗ್ರಂಥಾಲಯ ಇರುವಂತೆ ನೋಡಿಕೊಳ್ಳಬೇಕು. ಇದುವೇ ಸರ್ಕಾರದ ದೊಡ್ಡ ಜವಾಬ್ದಾರಿ.

ಗುಣಮಟ್ಟ ಸುಧಾರಣೆಯೂ ಬೇಕಲ್ಲವೇ?

ADVERTISEMENT

ಖಂಡಿತ, ಗುಣಮಟ್ಟವನ್ನು ಕಡೆಗಣಿಸುವಂತೆಯೇ ಇಲ್ಲ. ಶಿಕ್ಷಕರು, ಕಾಲೇಜು ಉಪನ್ಯಾಸಕರು, ವಿಶ್ವವಿದ್ಯಾಲಯಗಳ ಕುಲಪತಿಗಳು ಯಾರೇ ಇರಲಿ, ಅತ್ಯುತ್ತಮ ಶೈಕ್ಷಣಿಕ ಅರ್ಹತೆಯಷ್ಟೇ ಮಾನದಂಡವಾಗಬೇಕು. ಕುಲಪತಿಗಳಿಗಂತೂ ದೂರದೃಷ್ಟಿಯೂ ಇರಬೇಕು.

ಎಂಜಿನಿಯರಿಂಗ್ ಕಾಲೇಜುಗಳು ಉದ್ಯೋಗ ಸೃಷ್ಟಿಸುವ ಕಾರ್ಖಾನೆಗಳಾಗುತ್ತಿಲ್ಲವಲ್ಲ?

ಇಂದು ಎಂಜಿನಿಯರಿಂಗ್ ಕಾಲೇಜುಗಳಶೇ 18ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ. 7ನೇ ಸೆಮಿಸ್ಟರ್‌ನಿಂದಲೇ ಇಂಟರ್ನ್‌ಶಿಪ್ಆರಂಭಿಸಬೇಕು. ಇಂಟರ್ನ್‌ಶಿಪ್‌ ಪ್ರಮಾಣಪತ್ರ ಇಲ್ಲದಿದ್ದರೆ ಪದವಿಯನ್ನೇ ಕೊಡಬಾರದು. ಕೈಗಾರಿಕೆಗಳೊಂದಿಗೆ ಸಂಬಂಧ ಹೆಚ್ಚಬೇಕು, ಕೈಗಾರಿಕೆಗಳಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಪಠ್ಯದಲ್ಲಿ ಸೂಕ್ತ ಬದಲಾವಣೆ ಮಾಡಬೇಕು. ಇಂದು ಐಐಟಿಗಳಂತಹ ದೊಡ್ಡ ಸಂಸ್ಥೆಗಳ ಜತೆಗಷ್ಟೇ ಉದ್ಯಮಗಳ ಸಂಬಂಧ ಚೆನ್ನಾಗಿದೆ. ಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜು ಹಂತದಲ್ಲೂ ಇಂತಹ ಸಂಬಂಧ ಬೆಳೆಯಬೇಕು.

ವೈದ್ಯಕೀಯ ವ್ಯಾಸಂಗ ಮಾಡಿದವರಿಗೂ ಉದ್ಯೋಗದ ಭರವಸೆ ಇಲ್ಲವಲ್ಲ?

ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ತೆರೆಯುವ ವಿಚಾರ ಉತ್ತಮವಾದುದು.ಆದರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಉತ್ತಮ ಕ್ಲಿನಿಕಲ್‌ ತರಬೇತಿ. ಅದಕ್ಕಾಗಿ ಜಿಲ್ಲಾ ಆಸ್ಪತ್ರೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.

ಹೊಸ ಚಿಂತನೆ ಏನಾದರೂ ಇದೆಯೇ?

ಸರ್ಕಾರಿ, ಖಾಸಗಿ ಕಾಲೇಜುಗಳು ಸಮೀಪದಲ್ಲಿ ಇದ್ದರೆ, ಕ್ಲಸ್ಟರ್ ಪದ್ಧತಿಯನ್ನು ತರಬೇಕು. ಇದರಿಂದ ಪ್ರತಿಯೊಂದು ಸಂಸ್ಥೆಯಲ್ಲಿರುವ ಅತ್ಯುತ್ತಮ ಬೋಧಕರು, ಪ್ರಯೋಗಾಲಯ, ಇತರ ಸೌಲಭ್ಯಗಳು ಎಲ್ಲರಿಗೂ ಲಭಿಸುವಂತಾಗುತ್ತದೆ. ಅತ್ಯುತ್ತಮ ಕಾಲೇಜುಗಳಿಗೆ ಸ್ವಾಯತ್ತತೆ ಕೊಡಬೇಕು. ಇದರಿಂದ ವಿಶ್ವವಿದ್ಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ.

ನಿಮ್ಮ ದೂರದೃಷ್ಟಿಯನ್ನು ಸಂಕ್ಷಿಪ್ತವಾಗಿ ತಿಳಿಸಿ.

ವೃತ್ತಿಪರವಾಗಿ ಅತ್ಯುತ್ತಮ, ನೈತಿಕವಾಗಿ ಬಲಿಷ್ಠ, ಇದುವೇ ನನ್ನ ದೂರದೃಷ್ಟಿ.

–ಎಂ.ಜಿ.ಬಾಲಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.