ADVERTISEMENT

ಉದ್ಯೋಗ ಕಡ್ಡಾಯ ಬೇಡ; ಆದ್ಯತೆಯಾಗಲಿ

ಕೆ.ಜೆ.ಮರಿಯಪ್ಪ
Published 27 ಸೆಪ್ಟೆಂಬರ್ 2019, 20:00 IST
Last Updated 27 ಸೆಪ್ಟೆಂಬರ್ 2019, 20:00 IST
ಕೆ.ಉಲ್ಲಾಸ್ ಕಾಮತ್, ಅಧ್ಯಕ್ಷ, ಎಫ್‌ಐಸಿಸಿಐ ಕರ್ನಾಟಕ ವಿಭಾಗ
ಕೆ.ಉಲ್ಲಾಸ್ ಕಾಮತ್, ಅಧ್ಯಕ್ಷ, ಎಫ್‌ಐಸಿಸಿಐ ಕರ್ನಾಟಕ ವಿಭಾಗ    

*ಹೊಸ ಕೈಗಾರಿಕಾ ನೀತಿಯಡಿ ಕೈಗಾರಿಕೋದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯ ಮಾಡುವುದಾಗಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರಲ್ಲ?
ಕಡ್ಡಾಯ ಮಾಡಿ ಷರತ್ತು ವಿಧಿಸಿದರೆ ಉದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಆದ್ಯತೆ ನೀಡಬೇಕು ಎಂದು ಹೇಳಿದರೆ ಸರಿಹೋಗುತ್ತದೆ. ಇದನ್ನು ಮೀಸಲಾತಿ ಮಾದರಿಯಲ್ಲಿನೋಡಿದರೆ ಕೈಗಾರಿಕೆ ನಡೆಸುವುದು ಕಷ್ಟವಾಗುತ್ತದೆ.ಕಡ್ಡಾಯ ನಿಯಮ ಜಾರಿಯಾಗಿ, ಕುಶಲ ಕೆಲಸಗಾರರು ಸಿಗದಿದ್ದರೆ ಏನು ಮಾಡಬೇಕು? ಆಗ ಹೊರಗಿನವರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಕೊಟ್ಟಿಲ್ಲ, ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದರೆ ಕಷ್ಟ.

*ಸೌಕರ್ಯ ಪಡೆದುಕೊಂಡ ಮೇಲೆ ಉದ್ಯೋಗ ಕೊಡಬೇಕಲ್ಲವೆ?
ರಾಜ್ಯದ ಉದ್ಯಮಿಗಳು ಆರಂಭಿಸಿದ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಬಹುಪಾಲು ಉದ್ಯೋಗ ಸಿಕ್ಕಿರುತ್ತದೆ. ಹೊರಗಿನಿಂದ ಬಂಡವಾಳ ಹರಿದು ಬರಬೇಕಾದರೆ ನಿರ್ಬಂಧ ವಿಧಿಸಬಾರದು. ಭೂಮಿ, ನೀರು, ವಿದ್ಯುತ್ ಕೊಡುತ್ತೇವೆ, ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಕೇಳುವುದು ತಪ್ಪಲ್ಲ. ಆದರೆ ಕಡ್ಡಾಯ ಮಾಡಿದರೆ ಉದ್ಯಮಿಗಳು ಬೇರೆ ರಾಜ್ಯಕ್ಕೆ ಹೋಗುತ್ತಾರೆ. ಆಗ ನಮಗೇ ನಷ್ಟ. ಬಂಡವಾಳವೂ ಇಲ್ಲ, ಉದ್ಯೋಗವೂ ಸಿಗದು.

*ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಇರುವ ಸಮಸ್ಯೆಗಳೇನು?
ಬಿಹಾರ, ಉತ್ತರ ಪ್ರದೇಶದಲ್ಲಿ ಇದೇ ರೀತಿ ಮಾಡಿದಾಗ, ಅಲ್ಲಿನ ಉದ್ಯಮ ಕ್ಷೇತ್ರ ಹಿನ್ನಡೆ ಅನುಭವಿಸಿತು.ಅರ್ಹತೆಗೆ ತಕ್ಕಂತೆ ಉದ್ಯೋಗ ಕೊಡಲಿ. ಉದ್ಯೋಗಕ್ಕೆ ಬೇಕಾದ ಅರ್ಹತೆ ಇಲ್ಲದಿದ್ದರೆ, ಹೊರಗಿನವರನ್ನು ನೇಮಿಸಿಕೊಳ್ಳಲು ಅವಕಾಶ ಇರಬೇಕು. ಇದು ಸಾಧ್ಯವಾಗದಿದ್ದರೆ ಅಲ್ಪಸ್ವಲ್ಪ ಅರ್ಹತೆ ಇದ್ದವರನ್ನು ನೇಮಿಸಿಕೊಂಡು, ಕೆಲ ಸಮಯ ತರಬೇತಿ ನೀಡಬೇಕಾಗುತ್ತದೆ. ಅಂತಹ ಸಮಯದಲ್ಲಿ ಸರ್ಕಾರ ಸಹ ಈ ಉದ್ಯೋಗಿಗಳಿಗೆ ಇಂತಿಷ್ಟು ಎಂದು ಸಹಾಯಧನ ನೀಡಲಿ. ಇದರಿಂದ ಉದ್ಯಮಗಳು ಅಷ್ಟು ಸಮಯ ನಷ್ಟ ಅನುಭವಿಸುವುದು ತಪ್ಪುತ್ತದೆ.

ADVERTISEMENT

*ಸ್ಥಳೀಯರಿಗೂ ಉದ್ಯೋಗ ಬೇಕಲ್ಲವೆ?

ಸ್ಥಳೀಯರಿಗಲ್ಲದೆ ಬೇರೆ ಯಾರಿಗೆ ಉದ್ಯೋಗ ಕೊಡಲು ಸಾಧ್ಯ? ಉದ್ಯಮ ಇರುವ ಸುತ್ತಮುತ್ತಲಿನ ಜನರಿಗೆ ಕೆಲಸ ಕೊಟ್ಟರೆ ನಮ್ಮ ಕೆಲಸವೂ ಹಗುರವಾಗುತ್ತದೆ. ಹೊರಗಿನಿಂದ ಕರೆತಂದರೆ ಹೆಚ್ಚು ಸಂಬಳ ಕೊಟ್ಟು, ಇತರ ಸೌಕರ್ಯ ಕಲ್ಪಿಸಬೇಕು. ಸ್ಥಳೀಯರಾದರೆ ಕಂಪನಿಗೆ ಹೊಂದಿಕೊಂಡು ಕೆಲಸ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.