* ಕರ್ನಾಟಕದ ಪರ ಮೊದಲ ಟೂರ್ನಿಯಲ್ಲಿ ಆಡುತ್ತಿರುವ ಅನುಭವ ಹೇಗಿದೆ?
ಕರ್ನಾಟಕ ಸೀನಿಯರ್ ತಂಡದಲ್ಲಿ ಸ್ಥಾನ ಸಿಗುವುದೇ ಕಷ್ಟ. ಒಮ್ಮೆ ಅವಕಾಶ ಪಡೆದ ಮೇಲೆ ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಠಿಣ. ತಂಡದೊಳಗೆ ಆರೋಗ್ಯಕರ ಪೈಪೋಟಿ ಇದೆ. ಸ್ಥಿರವಾದ ಪ್ರದರ್ಶನವೊಂದೇ ನಮ್ಮನ್ನು ನಿರಂತರವಾಗಿ ಉಳಿಸಬಲ್ಲದು.
* ಆರಂಭಿಕ ಬ್ಯಾಟ್ಸ್ಮನ್ ಸವಾಲನ್ನು ಹೇಗೆ ನಿಭಾಯಿಸುತ್ತಿದ್ದೀರಿ?
ತಂಡಕ್ಕೆ ಗೆಲುವಿನ ಕಾಣಿಕೆ ನೀಡುವ ಉತ್ತಮ ಅವಕಾಶ ಇಲ್ಲಿದೆ. ಹೋದ ಸಲ ರಣಜಿಗೆ ಪದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ಆಗಿರುವ ಅನುಭವದ ಆಧಾರದಲ್ಲಿ ಹಂತಹಂತವಾಗಿ ಉತ್ತಮವಾಗಿ ಬೆಳೆಯುತ್ತಿದ್ದೇನೆ.
* ಈ ಟೂರ್ನಿಯಲ್ಲಿ ಸತತ ಎರಡು ಶತಕ ದಾಖಲಿಸಿದ್ದೀರಿ. ಆದರೆ ನಿಮ್ಮ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ ಬದಲಾಗಿದೆಯೇ?
ಉನ್ನತ ದರ್ಜೆಯ ಟೂರ್ನಿಗಳಲ್ಲಿ ಆಡು ವಾಗ ಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಎದುರಾಳಿ ತಂಡದ ಬೌಲರ್ಗಳ ತಂತ್ರಗಳನ್ನು ಅರ್ಥ ಮಾಡಿ ಕೊಂಡು ಆಡಲು ಇದು ಅವಶ್ಯಕ. ಹೆಚ್ಚು ಸಮಯ ತೆಗೆದು ಕೊಂಡು ಸಂಯಮದಿಂದ ಆಡಿದರೆ ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯ.
* ಅರ್ಧಶತಕಗಳನ್ನು ಶತಕಗಳನ್ನಾಗಿ ಪರಿವರ್ತಿಸುವುದನ್ನು ಹೇಗೆ ರೂಢಿಸಿ ಕೊಂಡಿರಿ?
ದೈಹಿಕವಾಗಿ ನಾವು ಸಮರ್ಥರಾಗಿಯೇ ಇರುತ್ತೇವೆ. ಆದರೆ ಮನೋದಾರ್ಢ್ಯ ಇರಬೇಕಾಗು ತ್ತದೆ. ಆಗ ಗುರಿ ಮುಟ್ಟಲು ಸಾಧ್ಯ. ಮೊದಲ ಕೆಲವು ಪಂದ್ಯಗಳಲ್ಲಿ 70–80 ರನ್ ಹೊಡೆದೆ. ಆದರೆ ಶತಕದ ಹಾದಿಯಲ್ಲಿ ಎಡವುತ್ತಿದ್ದೆ. ಈಗ
ಆ ಹಂತವನ್ನು ನಿಭಾಯಿಸಲು ಬೇಕಾಗುವ ಏಕಾಗ್ರತೆ, ತಾಳ್ಮೆ ಮತ್ತು ಮಾನಸಿಕ ನಿರಾಳತೆಯನ್ನು ರೂಢಿಸಿಕೊಳ್ಳುತ್ತಿದ್ದೇನೆ. ಕೋಚ್ ಯರೇಗೌಡ ಮತ್ತು ಈ ಹಿಂದೆ ಡಬ್ಲ್ಯು.ವಿ. ರಾಮನ್ ಅವರ ಸಲಹೆಗಳು ನನಗೆ ಬಹಳ ಉಪಯುಕ್ತವಾಗಿವೆ.
* ಅನುಭವಿ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಅವರೊಂದಿಗೆ ಆಡುತ್ತಿರುವ ಅನುಭವ ಹೇಗಿದೆ?
ಅವರಿಬ್ಬರಿಂದ ನನಗೆ ಲಭಿಸಿರುವ ಸಲಹೆ ಗಳಿಂದಾಗಿ ಆಟದಲ್ಲಿ ಬಹಳಷ್ಟು ಸುಧಾರಣೆ ಆಗಿದೆ. ಅವರೊಂದಿಗೆ ಕ್ರೀಸ್ನಲ್ಲಿರುವಾಗ ದೊಡ್ಡ ಮೊತ್ತದ ಜೊತೆಯಾಟಗಳನ್ನು ರೂಪಿಸುವ ಪಾಠ ಕಲಿಸಿದ್ದಾರೆ. ಪಂದ್ಯದ ಯಾವ ಹಂತದಲ್ಲಿ ನನ್ನಿಂದ ಏನು ನಿರೀಕ್ಷೆ ಇರುತ್ತದೆ ಎಂಬುದರ ಅರಿವು ಮೂಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.